i
ಕುಂಚಿಟಿಗರಿಗೆ ಸಿಗದ ಸಚಿವ ಸ್ಥಾನ, ದಿಗ್ಭ್ರಮೆ ವ್ಯಕ್ತಪಡಿಸಿದ ಶಾಸಕ ಜಯಚಂದ್ರ, ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದ ಕುಂಚಿಟಿಗರು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯದ 18 ಜಿಲ್ಲೆಯ ಸುಮಾರು 40 ಕ್ಷೇತ್ರಗಳ ಬಹುತೇಕ ಕುಂಚಿಟಿಗರು ಕಾಂಗ್ರೆಸ್ ಪಕ್ಷದ ಬೆನ್ನಿಗಿದ್ದು ಮತ ಹಾಕಿದ್ದು ಕುಂಚಿಟಿಗ ಕೋಟಾದಡಿ ಸಚಿವ ಸ್ಥಾನ ಕೈ ತಪ್ಪಿದ್ದು ಅತ್ಯಂತ ಬೇಸರ ತಂದಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಟಿ.ಬಿ.ಜಯಚಂದ್ರ ದಿಗ್ಭ್ರಮೆ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಘಟನೆ ಇಲ್ಲದ ಸಮಾಜ ನಮ್ಮದು, ಕುಂಚಿಟಿಗ ಸಮಾಜದ ವತಿಯಿಂದ ಆಯ್ಕೆಯಾಗಿರುವ ಏಕೈಕ ಶಾಸಕ ನಾನು. ಸಚಿವ ಸ್ಥಾನ ತಪ್ಪಲು ನಾನು ಏನ್ ತಪ್ಪು ಮಾಡಿದ್ದೇ ಎನ್ನುವುದು ತಿಳಿಯುತ್ತಿಲ್ಲ. ವಿಧಿಯಾಟವೋ ಏನೋ ರಾಜಕೀಯದ ಸಚದುರಂಗದಾಟವೋ ತಿಳಿಯುತ್ತಿಲ್ಲ, ರಾಜಕೀಯ ಎಂದರೆ ಮೋಸ ಇದ್ದೇ ಇರುತ್ತೆ. ನಾನು ಯಾವತ್ತೂ ಇದನ್ನು ಬಯಸಿದವನಲ್ಲ, ಈ ರೀತಿ ಆಗುತ್ತೆ ಅಂತಾ ನಿರೀಕ್ಷೆ ಕೂಡ ಮಾಡಿದವನಲ್ಲ. ನೂರಕ್ಕೆ ನೂರರಷ್ಟು ನನಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಬಯಸಿದ್ದೆ, ಅದರಲ್ಲಿ ಯಾವ ಅನುಮಾನವೂ ನನಗೆ ಇರಲಿಲ್ಲ, ಆದರೆ ಸಚಿವ ಸ್ಥಾನ ಕೈತಪ್ಪಿರುವುದು ಆಘಾತ ತಂದಿದೆ ಎಂದು ಜಯಚಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಯಾರಿಂದ ಕುಂಚಿಟಿಗ ಸಮಾಜಕ್ಕೆ ಅನ್ಯಾಯ ಆಯ್ತಾ, ಯಾಕೆ ಹಿಂಗಾಯ್ತು ಎನ್ನುವುದನ್ನು ಸಮಾಜ ಮತ್ತು ಕ್ಷೇತ್ರದ ಜನರೊಂದಿಗೆ ಯೋಚನೆ ಮಾಡಬೇಕಿದೆ. ನನಗೆ ಟಿಕೆಟ್ ಕೊಡುವ ಸಂದರ್ಭದಲ್ಲಿ ಯಾವ ಅಪಸ್ವರ ಕೂಡ ಕೇಳಿಬಂದಿರಲಿಲ್ಲ. ಕುಂಚಿಟಿಗರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.
ನನಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನನ್ನ ಕ್ಷೇತ್ರದ ಮತದಾರರು, ನನ್ನ ಹಿತೈಷಿಗಳು, ಅದರಲ್ಲೂ ಕುಂಚಿಟಿಗ ಸಮಾಜದವರು ಅತ್ಯಂತ ನಿರಾಶರಾಗಿದ್ದಾರೆ. ದೆಹಲಿಗೆ ಹೋಗಿ ವರಿಷ್ಠರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ ಎಂದರು.
ಸಚಿವ ಸ್ಥಾನ ಕೈ ತಪ್ಪಿದ ನಂತರ ನನ್ನ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಮಾತನಾಡಿಲ್ಲ. ನನಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಯಾರೂ ಕಾರಣ ಕೊಟ್ಟಿಲ್ಲ. ಕುಂಚಿಟಿಗ ಸಮುದಾಯದಿಂದ ಆಯ್ಕೆಯಾಗಿರುವ ಒಬ್ಬನೇ ಶಾಸಕ ನಾನು, ಹಾಗಾಗಿ ನನಗೆ ಸಚಿವ ಸ್ಥಾನ ನೀಡಲು ಯಾವ ಅಡ್ಡಿ ಇರಲಿಲ್ಲ, ಆದರೆ ಯಾವ ಕಾರಣಕ್ಕೆ ನಿರಾಕರಿಸಿದ್ದಾರೆ ನನಗೆ ಗೊತ್ತಿಲ್ಲ. ಕುಂಚಿಟಿಗ ಸಮುದಾಯ ಇರುವ ಕಡೆ ಕಾಂಗ್ರೆಸ್ಗೆ ಹೆಚ್ಚಿನ ಬೆಂಬಲ ಸಿಕ್ಕಿದೆ. ಸಮುದಾಯದವರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಬಯಸುವುದು ಸಹಜ ಎಂದು ತಿಳಿಸಿದರು.
ಕುಂಚಿಟಿಗರು ಇರುವ ಜಿಲ್ಲೆಗಳಿಂದ ಕಾಂಗ್ರೆಸ್ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಬೀದಿ ಜಗಳ ಮಾಡುವುದು ಬೇಡ ಎಂದು ನಾನೇ ಅವರನ್ನ ಸಮಾಧಾನ ಮಾಡುತ್ತಿದ್ದೇನೆ ಎಂದು ಹೇಳಿದರು.