i
5 ಗ್ಯಾರಂಟಿಗಳ ಜಾರಿಗಾಗಿ ಉನ್ನತಾಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ವಿಧಾನಸಭಾ ಚುನಾಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದಂತಹ 5 ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ಮೀನಾಮೇಷ ಎಣಿಸುತ್ತಿರುವ ಕಾಂಗ್ರೆಸ್ ಪಕ್ಷದ ಸಿಎಂ, ಡಿಸಿಎಂ ಹಾಗೂ ಇತರೆ ಸಚಿವರುಗಳ ವಿರುದ್ಧ ಬಿಜೆಪಿ, ಜೆಡಿಎಸ್ ವಾಗ್ದಾಳಿ ಮಾಡುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ 135 ಸ್ಥಾನಗಳನ್ನು ಪಡೆಯಲು ಮಹತ್ತರ ಪಾತ್ರ ವಹಿಸಿದ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಸಿದ್ಧತೆ ನಡೆಸಿದೆ.
ಆದರೆ ರಾಜ್ಯ ಸರ್ಕಾರ ವಿಳಂಬ ಧೋರಣೆ ವಿರುದ್ಧ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಈ ವಿಷಯ ಸರ್ಕಾರಕ್ಕೆ ತಲುಪಿದ್ದು ಕಾಂಗ್ರೆಸ್ ಪಕ್ಷ ನೀಡಿದ ಐದು ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಪ್ರಯತ್ನ ಮಾಡುತ್ತಿದೆ. ಆದೇಶಕ್ಕೂ ಮುನ್ನವೆ ಹಲವೆಡೆ ವಿದ್ಯುತ್ ಬಿಲ್ ಕಟ್ಟಲ್ಲ, ಬಸ್ ನಲ್ಲಿ ಟಿಕೆಟ್ ತಗೊಳ್ಳುವುದಿಲ್ಲ ಎಂಬುದಾಗಿ ಕಿರಿಕ್ ಕೂಡಾ ಸಾರ್ವಜನಿಕರು ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಸೋಮವಾರ ಶಕ್ತಿ ಭವನದಲ್ಲಿ 5 ಇಲಾಖೆಗಳ ಉನ್ನತಾಧಿಕಾರಿಗಳ ಸಭೆ ಕರೆದು ಸಾಧಕ ಬಾಧಕಗಳ ಕುರಿತು ಚರ್ಚಿಸಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಸಂಬಂಧ ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.
ಆರ್ಥಿಕ, ಇಂಧನ, ಆಹಾರ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಹಿರಿಯ ಅಧಿಕಾರಿಗಳು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಭೆಯನ್ನು ನಡೆಸಿ ಚರ್ಚಿಸುತ್ತಿದ್ದಾರೆ. ಸಂಪನ್ಮೂಲ ಕ್ರೂಢೀಕರಣಕ್ಕೆ ಒತ್ತು ನೀಡುವಂತೆ, ತೆರಿಗೆಯನ್ನು ಎಲ್ಲಿ ಎಲ್ಲಿ ಹೆಚ್ಚಳ ಮಾಡಬಹುದು ಎನ್ನುವ ಬಗ್ಗೆಯೂ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಗ್ಯಾರಂಟಿ ಯೋಜನೆ ಜಾರಿಗೆ ಯಾರ ರೀತಿಯಲ್ಲಿ ಹಣಕಾಸು ಕ್ರೂಢೀಕರಿಸಿ ಜಾರಿಗೊಳಿಸಬಹುದು ಎನ್ನುವ ಬಗ್ಗೆ ಅಧಿಕಾರಿಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ನೀಡಿದಂತಹ 5 ಗ್ಯಾರಂಟಿ ಯೋಜನೆಗಳನ್ನು ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಜಾರಿಗೊಳಿಸಬೇಕಾ ಅಥವಾ ಯಾವೆಲ್ಲಾ ವರ್ಗದವರಿಗೆ ಜಾರಿಗೊಳಿಸಬೇಕು. ಅದರಿಂದ ಆಗುವಂತೆ ಖರ್ಚು ಎಷ್ಟು ಎನ್ನುವ ಬಗ್ಗೆಯೂ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಂಭೀರ ಚರ್ಚೆ ಮಾಡಿದರು ಎನ್ನಲಾಗಿದೆ.
ಶತಗತಾಯ ಜೂನ್.1ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿಗಳಿಗೆ ರೂಪು ರೇಷೆ ನೀಡಿ ಅಧಿಕೃತವಾಗಿ ಆದೇಶ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.
ಗ್ಯಾರಂಟಿಗಳ ಅನುಷ್ಠಾನ ಮತ್ತೊಷ್ಟು ವಿಳಂಬವಾದರೆ ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಸರ್ಕಾರ ಗುರಿಯಾಗಬೇಕಾಗುತ್ತದೆ ಎನ್ನುವ ಆತಂಕ ಸರ್ಕಾರ ಇದ್ದು ಸರ್ಕಾರ ತೀರ್ಮಾನ ಮಾಡಿಯೇ ತೀರುತ್ತದೆ ಎನ್ನಲಾಗಿದೆ.