i
ಬಂಡವಾಳ ಶಾಹಿಗಳ ವಿರುದ್ಧ ಧ್ವನಿ ಎತ್ತಿದ ಕಾರ್ಮಿಕರು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ 134 ವರ್ಷಗಳಿಂದೆ ಬಂಡವಾಳ ಶಾಹಿಗಳ ವಿರುದ್ಧ ಧ್ವನಿ ಎತ್ತಿದ ಐತಿಹಾಸಿಕ ಹೋರಾಟದ ಸಾಂಕೇತಿಕ ದಿನವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಎಸ್.ಸಿ ಕುಮಾರ್ ಹೇಳಿದರು.
ನಗರದ ಲಕ್ಷ್ಮಮ್ಮ ತಿಮ್ಮಯ್ಯ ಕಲ್ಯಾಣ ಮಂಟಪದಲ್ಲಿ ಸೋಮವಾರ ಭಾರತ ಕಮ್ಯುನಿಸ್ಟ್ ಪಕ್ಷ ವತಿಯಿಂದ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ದೊಡ್ಡ ಮಟ್ಟದಲ್ಲಿ ಸಂಘಟಿತರಾಗಬೇಕು. ಅವರ ಕೂಗು ವಿಶ್ವದ ದುಡಿಯುವ ವರ್ಗವನ್ನು ಬಡಿದೆಬ್ಬಿಸಬೇಕು. ಅಂದು ವಿಶ್ವದ ಕಾರ್ಮಿಕರೇ. ಒಂದಾಗಿ ಎಂದು ಘೋಷಣೆಗೆ ನಾಂದಿ ಹಾಕಿದ ದಿನವೇ. ಕಾರ್ಮಿಕರ ದಿನಾಚರಣೆ ಎಂದರು.
ಕೇಂದ್ರದ ಬಿಜೆಪಿ ಸರ್ಕಾರದ ಕೆಟ್ಟ ನೀತಿಯಿಂದ ರೈತರು ಜಮೀನುಗಳನ್ನು ಕಳೆದುಕೊಳ್ಳುವ ಸ್ಥಿತಿ ಉದ್ಭವವಾಗಿದೆ. ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವುದರಿಂದ ಕೈಗಾರಿಕೆಗಳು ಮುಚ್ಚಿವೆ. ಕಾರ್ಮಿಕ ವಿರೋಧಿ ನೀತಿಗಳಿಂದ ಲಕ್ಷಾಂತರ ಸಣ್ಣ ಕೈಗಾರಿಕೆಗಳು ಮುಚ್ಚಿರುವುದರಿಂದ ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರೆಲ್ಲ ಕೆಲಸಗಳಿಲ್ಲದೆ ನಿರುದ್ಯೋಗಗಳಾಗಿ ಬೀದಿ ಪಾಲಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ದಿನನಿತ್ಯದ ಬಳಕೆ ವಸ್ತುಗಳ ಬೆಲೆ, ಆಹಾರ ಪದಾರ್ಥಗಳ ಬೆಲೆಗಳು ಗಗನಕೇರಿದ್ದು ರೈತರು ಉಪಯೋಗಿಸುವ ಬೀಜ ಗೊಬ್ಬರ ಕ್ರಿಮಿವಿನಾಶಕ ಔಷಧಿಗಳ ಬೆಲೆ ಏರಿಕೆ ಆಗಿದೆ. ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಭಾರತ ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಮರಿಸುವಂತಹ ಕೆಲಸ ಮಾಡಬೇಕು ಎಂದು ಕುಮಾರ್ ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲೆ ಬರಪಿಡಿತ ಜಿಲ್ಲೆ ಆಗಿರುವುದರಿಂದ ಕುಡಿಯುವ ನೀರು, ದನ ಕರಿಗಳಿಗೆ ಮೇವು ಸಿಗುತ್ತಿಲ್ಲ. ರೈತರಿಗೆ ಮೇವು ಒದಗಿಸುವ ಕೆಲಸ ಮಾಡಬೇಕು. ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ರೈತರ ಫಲವತ್ತಾದ ಭೂಮಿಯನ್ನು ಬಂಡವಾಳ ಶಾಹಿಗಳು ಕಬಳಿಸುವುದನ್ನು ನಿಲ್ಲಿಸಬೇಕು. ಚಿತ್ರದುರ್ಗ ಹಿರಿಯೂರು ಶಿರಾ ತುಮಕೂರು ಮಾರ್ಗದಲ್ಲಿ ರೈಲುಗಳು ಓಡಾಡುವಂತಾಗಲಿ ಎಂದು ಕುಮಾರ್ ಆಗ್ರಹ ಮಾಡಿದರು. ಸಂಘಟನೆಯ ಅಧ್ಯಕ್ಷೆ ಲಲಿತಮ್ಮ, ಸೀಬಾ, ಹಿರಿಯೂರು ಅಧ್ಯಕ್ಷೆ ನಿರ್ಮಲ ದೇವರಾಜ್, ಉಪಾಧ್ಯಕ್ಷೆ ಜಯಮ್ಮ, ಕೆಂಚಮ್ಮ, ಕಾರ್ಯದರ್ಶಿ ಚಿಂತಾಮಣಿ, ಖಜಾಂಚಿ ಕೆ ಕೆಂಚಮ್ಮ, ಚಲನಚಿತ್ರ ಕಾರ್ಮಿಕ ಸಂಘದ ರವಿಕುಮಾರ್, ರಾಮದಾಸ್, ಎ. ಐ. ಕೆ. ಎಸ್. ಅಧ್ಯಕ್ಷ ರಾಮಯ್ಯ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಲಲಿತಮ್ಮ, ಎ ಐ ಟಿ ಯು ಸಿ ಮಂಜುಳಾ, ಕಟ್ಟಡ ಕಾರ್ಮಿಕರ ಮುಖಂಡರಾದ ರಂಗಸ್ವಾಮಿ, ಪಿಜಿ ಮಂಜುಳಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.