i
ನ್ಯಾಯಮೂರ್ತಿ ಬಿ. ವೀರಪ್ಪ ಅವರಿಗೆ CM, DCM ಆತ್ಮೀಯ ಬೀಳ್ಕೋಡುಗೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನ್ಯಾಯಾಂಗ ಮತ್ತು ವಕೀಲರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನ್ಯಾಯಾಂಗದ ಘನತೆಯ ಜೊತೆಗೆ ವಕೀಲರೊಂದಿಗೆ ಉತ್ತಮ ಸಂಬಂಧ ಹೊಂದುವುದು ಬಹಳ ಮುಖ್ಯ. ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ಹೆಚ್.ಎಲ್ ತಿಳಿಸಿದರು.
ಕರ್ನಾಟಕ ಉಚ್ಚನ್ಯಾಯಾಲಯದ ಕೋರ್ಟ್ ಹಾಲ್ ಸಂಖ್ಯೆ 1 ರಲ್ಲಿ ಹಮ್ಮಿಕೊಳ್ಳಲಾಗಿದ್ದ ನ್ಯಾಯಯಮೂರ್ತಿ ವಿ. ವೀರಪ್ಪ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿ ಬಿ. ವೀರಪ್ಪರವರು ದಿನಾಂಕ: 01/06/1961 ರಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಾಗದೇವನಹಳ್ಳಿಯಲ್ಲಿ ಜನಿಸಿದ್ದು, ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸರ್ಕಾರಿ ಕಾಲೇಜು ಕೋಲಾರದಲ್ಲಿ ಮತ್ತು ಕಾನೂನು ಪದವಿಯನ್ನು ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಮಹಾವಿದ್ಯಾಲಯದಲ್ಲಿ ಪಡೆದಿರುತ್ತಾರೆ.
ಗೌರವಾನ್ವಿತ ನ್ಯಾಯಮೂರ್ತಿಗಳು ಕಾಲೇಜು ದಿನಗಳಲ್ಲಿ ಎನ್ಸಿಸಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ‘ಬಿ‘ ಮತ್ತು ‘ಸಿ‘ ಪ್ರಮಾಣಪತ್ರಗಳನ್ನು ಪಡೆದುಕೊಂಡಿರುತ್ತಾರೆ. 1979ನೇ ಇಸವಿಯಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಚಿವಾಲಯದಿಂದ ಜರುಗಿದ ರಾಷ್ಟ್ರೀಯ ದೈಹಿಕ ಅರ್ಹತಾ ಪರೀಕ್ಷೆಯಲ್ಲಿ “ಮೂರು ನಕ್ಷತ್ರಗಳ ಅರ್ಹತಾ ಪ್ರಮಾಣಪತ್ರವನ್ನು ಪಡೆದಿರುತ್ತಾರೆ ಎಂದು ತಿಳಿಸಿದರು.
1984-85ನೇ ಇಸವಿಯಲ್ಲಿ ರೆಸ್ಲಿಂಗ್ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಮಾರ್ಚ್ 2, 1988 ರಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೊಂದಾಯಿಸಿ, ತಮ್ಮ ವಕೀಲ ವೃತ್ತಿಯನ್ನು ಬೆಂಗಳೂರಿನ ಹಿರಿಯ ನ್ಯಾಯವಾದಿ ಎಮ್.ಎಸ್. ಗೋಪಾಲರವರ ಬಳಿ ಪ್ರಾರಂಭಿಸಿ, ಸರ್ಕಾರಿ ವಕೀಲರಾಗಿ ನೇಮಕಗೊಂಡು ಸುಮಾರು 15 ವರ್ಷಗಳ ಕಾಲ ಸರ್ಕಾರಿ ವಕೀಲರಾಗಿ ಸರ್ಕಾರದ ವಿವಿಧ ಇಲಾಖೆಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರತಿನಿಧಿಸಿರುತ್ತಾರೆ ಎಂದು ತಿಳಿಸಿದರು.
ಗ್ರಾಮೀಣ ಪ್ರತಿಭೆಯಾದ ಗೌರವಾನ್ವಿತರು, ತಮ್ಮ ಪ್ರತಿಭೆ ಹಾಗೂ ಸತತ ಪರಿಶ್ರಮದಿಂದ ಜನವರಿ 2, 2015ರಂದು ಕರ್ನಾಟಕದ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡು, ಡಿಸೆಂಬರ್ 30, 2016 ರಂದು ಖಾಯಂ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ನಂತರ ಸಾವಿರಾರು ಪ್ರಕರಣಗಳಲ್ಲಿ ಐತಿಹಾಸಿಕ ತೀರ್ಪಗಳನ್ನು ನೀಡಿದ್ದು, ಅತೀ ಹೆಚ್ಚಿನ ಪ್ರಕರಣಗಳನ್ನು ವಿಲೇವಾರಿಗೊಳಿಸುವಲ್ಲಿ ಅವರ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಗೌರವಾನ್ವಿತರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದು ಮತ್ತು ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನರಾಗಿದ್ದರು. ತಮ್ಮ ವಿಶೇಷ ತೀರ್ಪಿನ ಮೂಲಕ ಭ್ರಷ್ಟಾಚಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವುದಲ್ಲದೆ, “ಭ್ರಷ್ಟಾಚಾರವು ಕ್ಯಾನ್ಸರ್ ಗಿಂತಲೂ ಅಪಾಯಕಾರಿ” ಎಂದು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದು ಅತ್ಯಂತ ಗಮನಾರ್ಹವಾದುದು, ಕರ್ನಾಟಕ ಲೋಕಾಯುಕ್ತವನ್ನು ಬಲಪಡಿಸುವ ನಿಟ್ಟಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಪಡಿಸಲು ನೀಡಿರುವ ತೀರ್ಪು ಗೌರವಾನ್ವಿತರ ಕಾರ್ಯಕ್ಷಮತೆಯನ್ನು ಬಿಂಬಿಸುತ್ತದೆ ಮತ್ತು ಜನಸಾಮಾನ್ಯರಲ್ಲಿ ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಇನ್ನಷ್ಟು ಸಧೃಡಗೊಳಿಸಿ ನ್ಯಾಯಾಂಗದ ಘನತೆಗೆ ಕೀರ್ತಿಕಳಸ ಪ್ರಾಯವಾಗಿದೆಯೆಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದರು.
ಮಾನ್ಯರವರು ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಮಹಿಳೆಯ ಬಗ್ಗೆ ಉಲ್ಲೇಖಿಸುತ್ತಾ ಮಹಿಳೆಯನ್ನು ಪೂಜಿಸುವ ಮತ್ತು ಗೌರವಿಸುವ ಕರ್ತವ್ಯ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿರುತ್ತದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದೀರಿ. ಕ್ರಿಮಿಲ್ ಅಪೀಲ್ ಸಂಖ್ಯೆ 246/2014 21ನೇ ಅಕ್ಟೋಬರ್ 2020ರ ಅತ್ಯಾಚಾರ ಪ್ರಕರಣದ ತಮ್ಮ ತೀರ್ಪಿನಲ್ಲಿ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಬೇಕೆಂದು ಮತ್ತು ಈ ಬಗ್ಗೆ ಭಾರತೀಯ ದಂಡ ಸಂಹಿತೆಗೆ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ತಮ್ಮ ಐತಿಹಾಸಿಕ ತೀರ್ಪಿನಲ್ಲಿ ಒಂದಾಗಿರುತ್ತದೆಯೆಂದು ಅಭಿಮಾನದಿಂದ ಹೇಳಬಯಸುತ್ತೇನೆ ಎಂದು ತಿಳಿಸಿದರು.
ತಾವುಗಳು ಕರ್ನಾಟಕ ಉಚ್ಚನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ನಂತರ ತಾವುಗಳು ಸೇವಾ ಅವಧಿಯಲ್ಲಿ ಅನೇಕ ಕ್ಲಿಷ್ಟ ಸಮಸ್ಯೆಗಳನ್ನು ಸಮಪ್ಕವಾಗಿ ಇತ್ಯಾರ್ಥಗೊಳಿಸುವಲ್ಲಿ ಯಶಸ್ವಿಯಾಗಿದ್ದು ಪ್ರಶಂಸನೀಯವಾಗಿದೆ. ನ್ಯಾಯಮೂರ್ತಿಗಳಾದ ತಾವು ಯಾವಾಗಲೂ “ನ್ಯಾಯಾಂಗ ಮತ್ತು ವಕೀಲರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ” ಎಂಬುದನ್ನು ಪ್ರತಿಪಾದಿಸುತ್ತಾ ನ್ಯಾಯಂಗದ ಜೊತೆಗೆ ವಕೀಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದನ್ನು ನಾನು ಈ ಸಮಯದಲ್ಲಿ ಸ್ಮರಿಸುತ್ತೇನೆ.
ಗೌರವಾನ್ವಿತರು ಮಾನ್ಯ ನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕಾತಿ, ಜಿಲ್ಲಾ ನ್ಯಾಯಧೀಶರ ನೇಮಕಾತಿ, ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಮಿತಿಯ ಸದಸ್ಯರಾಗಿದ್ದು, ಉತ್ತಮ ಗುಣ ಮಟ್ಟದ ವಿಶೇಷ ಅನುಭವ ಹಾಗೂ ಜ್ಞಾನವುಳ್ಳ ನ್ಯಾಯಾಧೀಶರನ್ನು ನೇಮಿಸುವಲ್ಲಿ ಮಹತ್ವದ ಪಾತ್ರ ವಹಿಸಿರುತ್ತಾರೆ ಎಂದು ತಿಳಿಸಿದರು.
ತಮಗೆ ಬೀಳ್ಕೊಡುಗೆಯ ವಿದಾಯ ಹೇಳಲು ಹೃದಯ ಭಾರವಾಗಿದೆ ಮಾತುಗಳು ಮೌನದತ್ತ ಸಾಗಿವೆ. ನಿಮ್ಮ ಮೇಲಿನ ಪ್ರೀತಿ, ಅಭಿಮಾನ ನಮ್ಮನ್ನು ಮೂಕರನ್ನಾಗಿ ಮಾಡುತ್ತಿವೆ ಆದರೂ ವಿದಾಯ ಕೋರುವುದು ಸಂಪ್ರದಾಯ ಹಾಗೂ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷನಾಗಿ ಹಾಗೂ ಸಮಸ್ತ ರಾಜ್ಯದ ವಕೀಲರ ಪರವಾಗಿ ನಾನು ತುಂಬು ಹೃದಯಪೂರ್ವಕವಾಗಿ ವಿದಾಯವನ್ನು ಕೋರುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಿದರು.