i
ಸಾಮಾಜಿಕ ಮೌಲ್ಯ ಮತ್ತು ನ್ಯಾಯಕ್ಕಾಗಿ ವಿಶ್ವವಿದ್ಯಾಲಯಗಳು ತುಡಿಯಬೇಕು-ಸಿಎಂ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ ಮೌಲ್ಯ, ಸಾಮಾಜಿಕ ನ್ಯಾಯಕ್ಕಾಗಿ ವಿಶ್ವವಿದ್ಯಾಲಯಗಳು ತುಡಿಯಬೇಕು. ದೇಶದ ಭವಿಷ್ಯವನ್ನು ಹೆಚ್ಚು ವೈಜ್ಞಾನಿಕವಾಗಿ ರೂಪಿಸುವ ಶಕ್ತಿ ವಿಶ್ವವಿದ್ಯಾಲಯಗಳಿಗೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿ ಅವರನ್ನು ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗವು ಭೇಟಿಮಾಡಿ, ಸಮಾಲೋಚನೆ ನಡೆಸಿದ ನಂತರ ಮಾತನಾಡಿದ ಅವರು, ಆದರೆ, ತಮ್ಮ ನಿಜವಾದ ಉದ್ದೇಶಗಳಿಂದ ವಿಶ್ವವಿದ್ಯಾಲಯಗಳು ವಿಮುಖವಾಗಿ ಪ್ರತಿಗಾಮಿ ಆದರೆ ವಿದ್ಯಾರ್ಥಿಗಳ ಮತ್ತು ದೇಶದ ಭವಿಷ್ಯವೂ ಕರಾಳ ಆಗುತ್ತದೆ. ನಮ್ಮ ಸರ್ಕಾರ ಉನ್ನತ ಶಿಕ್ಷಣವನ್ನು ವೈಜ್ಞಾನಿಕ ತಳಹದಿಯಲ್ಲಿ ಬಲಪಡಿಸಲು ಬದ್ಧವಾಗಿದೆ. ಇದಕ್ಕೆ ಹೊರತಾದದ್ದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸೂಚ್ಯವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಲ ಕುಲಪತಿಗಳು ಮುಖ್ಯಮಂತ್ರಿಗಳಿಗೆ ಆಧುನಿಕ ಶಿಕ್ಷಣ ಕುರಿತು ಕೆಲ ಅಭಿಪ್ರಾಯಗಳನ್ನು ಹಂಚಿಕೊಂಡು ಚರ್ಚಿಸಿದರು ಎನ್ನಲಾಗಿದೆ. ನಿಯೋಗದ ಪರವಾಗಿ ಮಡಿಕೇರಿ ವಿವಿಯ ಪ್ರೊ. ಅಶೋಕ್ ಆಲೂರು, ಕೊಪ್ಪಳ ವಿವಿಯ ಡಾ.ಬಿ.ಕೆ.ರವಿ, ಬಾಗಲಕೋಟೆ ವಿವಿಯ ಪ್ರೊ.ದೇಶಪಾಂಡೆ, ಹಾವೇರಿ ವಿವಿಯ ಡಾ.ಜಂಗಮಶೆಟ್ಟಿ, ಬೀದರ್ ವಿವಿಯ ಪ್ರೊ.ಬಿರಾದಾರ್, ಹಾಸನ ವಿವಿಯ ಪ್ರೊ.ತಾರಾನಾಥ್ , ಚಾಮರಾಜನಗರ ವಿವಿಯ ಕುಲಪತಿ ಪ್ರೊ.ಗಂಗಾಧರ್ ಹಾಜರಿದ್ದರು.