i
ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚಾಗುತ್ತಿದೆ : ಆರ್. ವಿ. ದೇಶಪಾಂಡೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈಗಿನ ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸುವ ಕೆಲಸ ಮಾಡಬೇಕಿದೆ. ನಾವು ದಾರಿ ತಪ್ಪುತ್ತಿದ್ದೇವೆ. ಅದಕ್ಕೆ ನಿಯಂತ್ರಣ ಹಾಕಬೇಕಿದೆ ಎಂದು ಮಾಜಿ ಸಚಿವ ಆರ್. ವಿ. ದೇಶಪಾಂಡೆ ಹೇಳಿದರು.
ಬೆಂಗಳೂರಿನ ಗಾಂಧಿಭವನದಲ್ಲಿ ಶ್ರೀಮತಿ ಗಂಗಮ್ಮಾ ಸೋಮಪ್ಪ ಬೊಮ್ಮಾಯಿ ಎಜುಕೇಶನಲ್ ಮತ್ತು ವೆಲ್ ಪೇರ್ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ಹಿರಿಯ ಮುತ್ಸದ್ದಿ ದಿ. ಎಸ್.ಆರ್. ಬೊಮ್ಮಾಯಿಯವರ ಜನ್ಮ ಶತಮಾನೋತ್ಸವ ಆಚರಣೆ, ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ರಾಜಕೀಯ ವಾಗಿ ಬೆಳೆದಿದ್ದರೆ ರಾಮಕೃಷ್ಣ ಹೆಗಡೆ, ದೇವೇಗೌಡರು ಮತ್ತು ಬೊಮ್ಮಾಯಿಯವರು ಕಾರಣ. ನಾನು, ಸಿಂದ್ಯಾ, ಜೀವರಾಜ ಎಲ್ಲರೂ ಯುವಕರು. ಎಸ್. ಆರ್. ಬೊಮ್ಮಾಯಿಯವರಲ್ಲಿ ಶಿಸ್ತು ಇತ್ತು. ನಾವು ಈ ಮಟ್ಟಕ್ಕೆ ಬರಲು ಇವರೆಲ್ಲರೂ ಕಾರಣರು ಎಂದರು.
ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ 16 ಜನ ಸಚಿವರನ್ನು ಕೈ ಬಿಟ್ಟರು. ಬೊಮ್ಮಾಯಿಯವರಿಗೆ ನನ್ನ ಮೇಲೆ ಬಹಳ ಪ್ರೀತಿ ಅವರ ಬಳಿ ಹೋಗಿ ಕೇಳಿದೆ. ಅವರು ರಾಮಕೃಷ್ಣ ಹೆಗಡೆ ಅವರ ಬಳಿ ಕಳಿಸಿದರು. ಅವರ ಬಳಿ ಹೋಗಿ ಕೇಳಿದಾಗ ಜಿಲ್ಲಾ ಪಂಚಾಯತಿ ಚುನಾವಣೆ ಗೆದ್ದು ಬನ್ನಿ ಆಗ ಪ್ರಶ್ನೆ ಕೇಳಿ ಅಂದರು, ನಾವು ಚುನಾವಣೆ ಗೆದ್ದು ಬಂದೆವು ನಮಗೆ ಸಂಪುಟ ಸಚಿವರನ್ನಾಗಿ ಮಾಡಿದರು. ಆಗ ಸಂಪುಟದಲ್ಲಿ ಸಚಿವರಾಗುವುದು ಬಹಳ ಕಷ್ಟ ಇತ್ತು ಎಂದು ಹಳೆಯ ದಿನಗಳನ್ನು ನೆನೆದರು.
ಎಸ್. ಆರ್. ಬೊಮ್ಮಾಯಿಯವರು ಒಳ್ಳೆಯ ಆಡಳಿತಗಾರರಾಗಿದ್ದರು. ಅವರ ಸರ್ಕಾರ ಪ್ರತಿಪಕ್ಷದಿಂದ ಹೋಗಿರಲಿಲ್ಲ. ಯಡಿಯೂರಪ್ಪ ಅವರ ಸಹಕಾರದಿಂದ ರಾಮಕೃಷ್ಣ ಹೆಗಡೆ ಅವರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅದನ್ನು ನೆನೆಯಬೇಕು ಎಂದರು.
ನಾವು ಜನತಾ ಪಾರ್ಟಿ 1983 ರಲ್ಲಿ ಅಧಿಕಾರಕ್ಕೆ ಬರುತ್ತದೆ ಅಂತ ಭಾವಿಸಿರಲಿಲ್ಲ. ಬೊಮ್ಮಾಯಿಯವರು, ದೇವೇಗೌಡರು, ರಾಮಕೃಷ್ಣ ಹೆಗಡೆ ಅವರು ಸೇರಿ ಜನತಾ ಪಕ್ಷ ಸರ್ಕಾರ ಅಧಿಕಾರಕ್ಕೆ ತಂದರು. ಜನತಾ ಪರಿವಾರದ ನಾಯಕರ ಜಗಳ ಆಡದಿದ್ದರೆ ಈಗಲೂ ಜನತಾ ಪಕ್ಷ ಅಧಿಕಾರದಲ್ಲಿ ಇರುತ್ತಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಗದ್ಗುರು ಶ್ರೀ ಸುತ್ತೂರು ಮಹಾ ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಂ.ಕೃಷ್ಣ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಆರ್. ವಿ.ದೇಶಪಾಂಡೆ, ಪಿಜಿಆರ್ ಸಿಂಧ್ಯಾ, ಬಿ.ಎಲ್. ಶಂಕರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಹೇಶ ಬೊಮ್ಮಾಯಿ, ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ.ಸೋಮಶೇಖರ ಹಾಜರಿದ್ದರು.