i
ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರ ಕೃತಿ “ಅಮೃತ ಭಾರತ” ಜೂನ್ 17ರಂದು ಲೋಕಾರ್ಪಣೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಡಾ ಜಿ ಎನ್ ಮಲ್ಲಿಕಾರ್ಜುನಪ್ಪ ಅವರು ಚಿತ್ರದುರ್ಗ ಜಿಲ್ಲೆಯ ಮಣ್ಣಿನ ಮಗ. ಬಡ ಕುಟುಂಬದಿಂದ ಬಂದು, ಅದನ್ನ ಮೆಟ್ಟಿ, ಮಠಗಳಲ್ಲಿದ್ದು, ವಿವಿಧ ಗಣ್ಯರ ನೆರವಿನಿಂದ ಛಲಬಿಡದ ಓದಿನಿಂದ ಉನ್ನತ ವ್ಯಾಸಂಗ ಮಾಡಿ ಒಳ್ಳೆಯ ಅಧ್ಯಾಪಕ, ಪ್ರಾಂಶುಪಾಲರಾಗಿ, ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಒಳ್ಳೆಯ ಹೆಸರು ಪಡೆದಿರುವ ನಮ್ಮ ನಡುವಿನ ಜವಾರಿ ಪ್ರತಿಭೆ ಎಂದರೆ ತಪ್ಪಿಲ್ಲ.
ಸದಾ ಒಂದಿಲ್ಲೊಂದು ಕೆಲಸದಲ್ಲಿ ಸಕ್ರಿಯವಾಗಿ ನಿರತರಾಗಿದ್ದಾರೆ. ಅವರ ಹವ್ಯಾಸಗಳಲ್ಲಿ ಬರವಣಿಗೆಯೂ ಒಂದು.
ಭಾರತ ಸ್ವಾತಂತ್ರ್ಯ ಪಡೆದು, ದೇಶ ಸುವರ್ಣ ಮಹೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ 1997ರಲ್ಲಿ ಬೋಧಿವೃಕ್ಷದ ಕೆಳಗೆ ಎನ್ನುವ ಕೃತಿಯನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮನ್ನು ತೊಡಗಿಸಿಕೊಂಡರು. ಆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು ಅವರು ಈ ಕ್ಷೇತ್ರದಲ್ಲಿ ದೀರ್ಘವಾಗಿ ಪಯಣಿಸಲು ಅನುವಾಯಿತು ಎಂದರೆ ಅತಿಶಯೋಕ್ತಿಯೇನಲ್ಲ. ಅಂದಿನಿಂದ ಈವರೆಗೆ ಅವರಿಂದ ಹತ್ತಾರು ಶ್ರೇಷ್ಠ ಕೃತಿಗಳು ಹೊರಬಂದಿವೆ. ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಆರಂಭಗೊಂಡ ಅವರ ಸಾಹಿತ್ಯ ಅಭಿರುಚಿ ಮತ್ತು ಬರವಣಿಗೆ ಪ್ರಸ್ತುತ ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಶ್ರೀಯುತರು ತಮ್ಮ ಲೇಖನಗಳ ಗುಚ್ಛ “ಅಮೃತ ಭಾರತ “(ಸ್ವಾತಂತ್ರೋತ್ತರ ಭಾರತದ ಅಭಿವೃದ್ಧಿ ಕಥನ) ಎನ್ನುವ ಬೃಹತ್ ಗ್ರಂಥವನ್ನು ಲೋಕಾರ್ಪಣೆಗೊಳಿಸಲು ತಯಾರಿ ನಡೆಸಿದ್ದಾರೆ.
ಅಮೃತ ಭಾರತ ಕೃತಿ ಬಿಡುಗಡೆ ಸಮಾರಂಭ ಇದೇ ಜೂನ್ ತಿಂಗಳ 17-6 -2023 ರ ಶನಿವಾರ ಸಂಜೆ 5 ಗಂಟೆಗೆ ಚಿತ್ರದುರ್ಗದ ಒನಕೆ ಓಬವ್ವ ವೃತ್ತ ಸಮೀಪದ ಎಸ್ ಆರ್ ಬಿ ಎಂ ಎಸ್ ರೋಟರಿ ಭವನದಲ್ಲಿ ನಡೆಯಲಿದೆ.
ಈ ಸಮಾರಂಭವು ಹೊಸದುರ್ಗದ ಶ್ರೀ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿತ್ರದುರ್ಗದ ಚಿನ್ಮೂಲಾದ್ರಿ ರೋಟರಿ ಕ್ಲಬ್, ಬೆಂಗಳೂರು ಅಕ್ಷರ ಮಂಟಪ ಪ್ರಕಾಶನ ಹಾಗೂ ಚಿತ್ರದುರ್ಗದ ಮುಕ್ತ ವೇದಿಕೆಯ ಸಹಯೋಗದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು, ಸಾಹಿತಿಗಳು, ವಿಮರ್ಶಕರು, ಅನುವಾದಕರು, ವ್ಯಾಪಾರಸ್ಥರು ಸೇರಿದಂತೆ ಜಿಎನ್ಎಂ ಅವರ ಆಪ್ತ ಬಳಗ, ಸ್ನೇಹ ವಲಯದ ಮಿತ್ರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.