![](https://www.chandravallinews.com/wp-content/uploads/2023/06/Raitha-2.jpg)
i
ಮುಂಗಾರು ಮಳೆ ವಿಳಂಬ: ಬಿತ್ತನೆ ಕುಂಠಿತ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ವಾರ್ಷಿಕ ವಾಡಿಕೆ ಮಳೆ 549.9 ಮಿ.ಮೀ ಇದ್ದು, ಜೂನ್ 14ರ ವರಗೆ ವಾಡಿಕೆ ಮಳೆ 151.8 ಮಿ.ಮೀ ಇದ್ದು, ವಾಸ್ತವಿಕವಾಗಿ ಕೇವಲ 81.50 ಮಿ.ಮೀ ನಷ್ಟು ಮಳೆಯಾಗಿದೆ. ಇದರಿಂದಾಗಿ ಶೇಕಡಾ 46 ರಷ್ಟು ಮಳೆ ಕೊರತೆಯಾಗಿದ್ದು, ತಾಲೂಕಿನ ಮುಂಗಾರು ಹಂಗಾಮಿನ ಸಾಮಾನ್ಯ ಬಿತ್ತನೆ ಕ್ಷೇತ್ರ 40690 ಹೆಕ್ಟರ್ನಷ್ಟು ಇದ್ದು, ಇದುವರೆವಿಗೂ ಕೇವಲ 2606 ಹೆಕ್ಟರ್ನಷ್ಟು ಕೊಳವೆ ಬಾವಿ ಆಧಾರಿತ ಹತ್ತಿ ಬೆಲೆ ಮಾತ್ರ ಬಿತ್ತನೆಯಾಗಿರುತ್ತದೆ.
ಅಂದರೆ ಒಟ್ಟಾರೆ ಗುರಿಯಲ್ಲಿ ಕೇವಲ ಶೇಕಡಾ ೬ರಷ್ಟು ಮಾತ್ರ ಬಿತ್ತನೆಯಾಗಿದೆ. ಮುಂಗಾರು ಹಂಗಾಮಿನ ಬಿತ್ತನೆ ಕುಂಠಿತಗೊಂಡಿದ್ದು, ರಾಜ್ಯಕ್ಕೆ ಮುಂಗಾರು ಮಳೆಯ ಪ್ರವೇಶ ವಿಳಂಬವಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ರೈತರು ಭೂಮಿ ಸಿದ್ದತೆ ಮಾಡಿಕೊಂಡು ಮಳೆಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಈ ಸಮಯಕ್ಕೆ ಸಾಮಾನ್ಯವಾಗಿ ಶೇಂಗಾ, ಸೂರ್ಯಕಾಂತಿ, ಮೆಕ್ಕೇಜೋಳ, ತೊಗರಿ ಬೆಳೆಗಳು ಬಿತ್ತನೆಯಾಗಬೇಕಾಗಿತ್ತು. ಮಳೆಯ ಕೊರತೆಯಿಂದಾಗಿ ಬಿತ್ತನೆ ಕಾರ್ಯ ನಡೆಯುತ್ತಿಲ್ಲ. ಮೆಕ್ಕೇಜೋಳ ಬಿತ್ತನೆಗೆ ಜೂನ್ ಅಂತ್ಯದವರಗೆ ಹಾಗೂ ಶೇಂಗಾ ಬಿತ್ತನೆಗೆ ಜುಲೈ ಅಂತ್ಯದವರೆಗೂ ಕಾಲಾವಕಾಶ ಇದ್ದರೂ ನಿರೀಕ್ಷೆಯಷ್ಟು ಮಳೆಬಾರದಿರುವುದು ರೈತರಲ್ಲಿ ಅನಿಶ್ಚಿತ್ತತೆ ಭಾವನೆ ಮೂಡಿದೆ.
ಆದರೆ ಹಿರಿಯೂರು ತಾಲೂಕಿನಲ್ಲಿ ಯಾವುದೇ ರಸಗೊಬ್ಬರದ ಕೊರತೆ ಇರುವುದಿಲ್ಲ. ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಸಾಕಷ್ಟು ದಾಸ್ತಾನು ಮಾಡಿಕೊಳ್ಳಲಾಗುತ್ತಿದ್ದು, ಮುಂದಿನ ವಾರದಲ್ಲಿ ಉತ್ತಮ ಮಳೆಯ ನಿರೀಕ್ಷೆ ಮಾಡಲಾಗಿದೆ ಎಂದು ತಾಲೂಕು ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.