i
ಮಳೆಗಾಗಿ ವರುಣ ಮುದ್ರೆ ಮೂಲಕ ಪ್ರಾರ್ಥನೆ, ಪರಿಸರಕ್ಕೆ ಪೂರಕವಾಗಿ ಬದುಕದಿದ್ದರೆ ಕಂಟಕ:ಶ್ರೀಧರ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಪ್ರಕೃತಿ ಜೀವ ಸಂಕುಲದ ಅಗತ್ಯತೆಗಳನ್ನು ಪೂರೈಸಿದೆ. ಆದರೆ ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರವಾಗಿ ದಾಳಿ ನಡೆಸಿದ್ದಾನೆ. ಇದರಿಂದಾಗಿ ಜೀವಜಲದ ಮೂಲವಾದ ಮಳೆ ಮೇಲೆ ಪರಿಣಾಮ ಬೀರಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮನುಕುಲದೊಂದಿಗೆ ಸಕಲ ಜೀವ ಸಂಕುಲಕ್ಕೂ ಕಂಟಕ ನಿಶ್ಚಿತ ಎಂದು ಪರೋಪಕಾರಂನ ಕಟ್ಟಾಳು ಶ್ರೀಧರ್ ಎನ್.ಎಂ. ಕಳವಳ ವ್ಯಕ್ತಪಡಿಸಿದರು.
ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆಯಾಗದ ಕಾರಣ ಪರೋಪಕಾರಂ ಕುಟುಂಬದ ವತಿಯಿಂದ ಮಳೆರಾಯನ ಕೃಪೆಗಾಗಿ ಮಣ್ಣೆತ್ತಿನ ಅಮಾವಾಸ್ಯೆಯಾದ ೧೮-೦೬-೨೦೨೩ರ ಭಾನುವಾರ ಇಲ್ಲಿನ ವಿನೋಬನಗರದ ನರಸಿಂಹ ಬಡಾವಣೆಯಲ್ಲಿರುವ ನಾಗರಕಟ್ಟೆ ಉದ್ಯಾನವನದ ಆವರಣದಲ್ಲಿ ಹಮ್ಮಿಕೊಂಡಿದ್ದ ನಾಗರಕಟ್ಟೆ ಆವರಣ ಸ್ವಚ್ಛಗೊಳಿಸುವ ಮೂಲಕ ಮತ್ತು ವರುಣ ಮದ್ರೆ ಮೂಲಕ ಮಳೆಗಾಗಿ ಪ್ರಾರ್ಥನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
ಪರಿಸರದ ಸಂರಕ್ಷಣೆಗಾಗಿ ನಮ್ಮ ಕೆಲಸ, ಕಾರ್ಯಗಳನ್ನು ಬದಿಗೊತ್ತುವ ಅವಶ್ಯಕತೆ ಇಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರದ ಉಳಿವಿಗೆ ಸಹಾಯಕವಾಗುತ್ತದೆ. ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಹಾಗೂ ಪರಿಸರದ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ ಎಂದರು.
ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆವಿಷ್ಕಾರದಿಂದ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಮನುಷ್ಯನ ಉದಾಸೀನತೆ, ತಿಳಿಗೇಡಿತನ, ಸ್ವಾರ್ಥತೆಯಿಂದಾಗಿ ಪರಿಸರ ಕಲುಷಿತಗೊಳ್ಳುತ್ತಿದೆ. ಪ್ರಕೃತಿಗೆ ಮನುಷ್ಯ ಅನಿವಾರ್ಯ ಅಲ್ಲ. ನಮ್ಮ ಉಳಿವಿಗಾಗಿ ಪರಿಸರವನ್ನು ಸಂರಕ್ಷಿಸಬೇಕೆಂದು ಕಳಕಳಿಯ ಮನವಿ ಮಾಡಿದರು.
ಯೋಗಾಚಾರ್ಯ ಅನಿಲ್ ಕುಮಾರ್ ಹೆಚ್. ಶೆಟ್ಟರ್ ಮಾತನಾಡಿ ವರುಣ ಮುದ್ರೆಯು ಜಲತತ್ವವನ್ನು ಆಧರಿಸಿದೆ. ಈ ಮುದ್ರೆಯಿಂದ ಒಣ ಚರ್ಮ ಬಾಧೆ ಕಡಿಮೆಯಾಗಿ, ಶರೀರದಲ್ಲಿ ತೇವಾಂಶದ ರಕ್ಷಣೆಯಾಗುತ್ತದೆ. ದೇಹದಲ್ಲಿ ಕಂಡು ಬರುವ ನೀರಿನ ಕೊರತೆಯನ್ನು ನಿವಾರಿಸುವ ಈ ಮುದ್ರೆಯಲ್ಲಿ ಹೆಬ್ಬೆರಳು ಹಾಗೂ ಕಿರುಬೆರಳು ಮುಖ್ಯ ಪಾತ್ರ ವಹಿಸುತ್ತದೆ. ಹೆಬ್ಬೆರಳು ಅಗ್ನಿತತ್ವವನ್ನು ಕಿರುಬೆರಳು ಜಲತತ್ವವನ್ನು ಹೊಂದಿದೆ. ಅಂತೆಯೇ ಪ್ರಕೃತಿಯಲ್ಲಿಯೂ ನೀರಿನ ಸಮತೋಲನವು ಮಳೆಯ ಮೂಲಕ ನಿಯಂತ್ರಿತವಾಗುತ್ತಿದೆ. ಪ್ರಕೃತಿ ಮತ್ತು ನಮ್ಮ ದೇಹದಲ್ಲಿನ ನೀರಿನ ಸಮತೋಲನೆಗಾಗಿ ವರುಣ ಮುದ್ರೆಯ ಮೂಲಕ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪರೋಪಕಾರಂ ಕುಟುಂಬದ ಸದಸ್ಯ, ನರಸಿಂಹ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ.ಎನ್. ಮತ್ತು ಮಮತಾ ಟಿ.ಎಸ್. ದಂಪತಿ ತಮ್ಮ ೨೪ನೇ ವಾರ್ಷಿಕೋತ್ಸವದ ಆಚರಣೆ ಸಂದರ್ಭದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.
ಸರ್ಜಿ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ, ನರಸಿಂಹ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಾಪೂಜಿ ಎಂ., ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ.ಎನ್., ಶಂಕರರಾವ್, ಸತ್ಯನಾರಾಯಣ ಹೆಚ್.ಆರ್. ಸೇರಿದಂತೆ ಮತ್ತಿತರೆ ಪದಾಧಿಕಾರಿಗಳು ಹಾಗೂ ಪರೋಪಕಾರಂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.