i
ಹಳ್ಳಿಕಾರ್, ಕುಂಚಿಟಿಗ, ಕುರುಬ, ಮ್ಯಾಸ ಬೇಡ, ಕಾಡು ಗೊಲ್ಲ ಇವು ಪ್ರಧಾನ ಪಶುಪಾಲಕ ಸಮುದಾಯಗಳು…
‘ಕುಂಚಿಟಿಗರು‘ ಕರ್ನಾಟಕದ ಒಂದು ಮೂಲ ನಿವಾಸಿ ದ್ರಾವಿಡ ಸಮುದಾಯ. ಇದು ಒಕ್ಕಲಿಗರ ಉಪಜಾತಿ ಹೇಗೆ?…
ಚಂದ್ರವಳ್ಳಿ ನ್ಯೂಸ್. ತುಮಕೂರು:
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಶ್ರೀ ಸ್ಪಟಿಕಪುರಿ ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನ ಮಠವು ಈಗ್ಗೆ ಅರ್ಧ ಶತಮಾನದಷ್ಟು ಹಿಂದೆ ಅವಧೂತ ಗುರುಪಂಥದ ಒಂದು ಆಶ್ರಮವಾಗಿತ್ತೇ ಹೊರತು ಮಠವಾಗಿರಲಿಲ್ಲ.
ಇಲ್ಲಿಗೆ ಏಳು ತಲೆಮಾರುಗಳ ಹಿಂದೆ ಅಂದರೆ ಹತ್ತೊಂಬತ್ತನೇ ಶತಮಾನದ ಆದಿಭಾಗದಲ್ಲಿ ಕುಂಬಾರ ಸಮುದಾಯದ ಶ್ರೀ ಗುರು ಗುಂಡಬ್ರಹ್ಮೇಶ್ವರ ಎಂಬ ಅವಧೂತರು ಆಶ್ರಮವನ್ನು ಸ್ಥಾಪಿಸಿ ಹಲವಾರು ಜಾತಿ ಮೂಲಗಳ ಸಿಸುಮಕ್ಕಳನ್ನು ಪಡೆದು ಅವಧೂತ ಗುರುಪಂಥದ ದೀಕ್ಷೆ ನೀಡಿ ಆಶ್ರಮವನ್ನು ಮುಂದುವರೆಸಿದರು. ಗುಂಡ ಬ್ರಹ್ಮೇಶ್ವರರು ಈಗ ಸವಿತಾ ಸಮಾಜ ಎಂದು ನಾವು ಕರೆಯುತ್ತಿರುವ ಆಗಿನ ಹಜಾಮರು ಸಮುದಾಯದ ಶ್ರೀ ನಂಜಾವಧೂತ ಎಂಬ ಹೆಸರಿನ ಸಿಸುಮಗನಿಗೆ ಗುರುಪಟ್ಟದ ಅಧಿಕಾರ ವಹಿಸಿಕೊಟ್ಟರು. ಗುರು ಗುಂಡಬ್ರಹ್ಮೇಶ್ವರ ಸ್ಥಾಪಿಸಿದ ಅವಧೂತಾಶ್ರಮವನ್ನು ಗುರು ನಂಜಾವಧೂತರು ಯಶಸ್ವಿಯಾಗಿ ನಡೆಸತೊಡಗಿದರು. ಮುಂದೆ ಗುರು ಗುಂಡಬ್ರಹ್ಮೇಶ್ವರ ಸ್ವಾಮೀಜಿ ಇಲ್ಲಿಯೇ ಜೀವಸಮಾಧಿಯಾದ ಬಳಿಕ ಆತನ ಕುಲೇಳು ಹದಿನೆಂಟು ಜಾತಿ ಮೂಲದ ಸಿಸುಮಕ್ಕಳು ಜೀವಗದ್ದಿಗೆಗೆ ಶ್ರದ್ಧೆ ತೋರಿಸುತ್ತಾ ನಂಜಾವಧೂತ ಗುರುಗಳ ಸಾರಥ್ಯದಲ್ಲಿ ಗುರು ಗುಂಡಬ್ರಹ್ಮೇಶ್ವರ ಗುಡಿಯನ್ನು ಕಟ್ಟಿದರೆಂದು ಇಲ್ಲಿನ ಸ್ಥಳಪುರಾಣದಿಂದ ತಿಳಿದುಬರುತ್ತದೆ. ಕಾಲಾನಂತರದಲ್ಲಿ ಗುರು ಗುಂಡಬ್ರಹ್ಮೇಶ್ವರ ಗುರುವಿನ ಸಮಾಧಿ ಗುಡಿಯು ಶಿಥಿಲಗೊಂಡು ಆತನ ಗುರುಪಂಥದ ಕುರುಬ ಜನಾಂಗಕ್ಕೆ ಸೇರಿದ ಸಿಡಿಯಜ್ಜನಪಾಳ್ಯದ ಸಿಡಿಯಪ್ಪ ಎಂಬುವವರ ಮಕ್ಕಳಾದ ಸೋಮೇಲಿಂಗಪ್ಪ, ಚೌಡಪ್ಪ ಮತ್ತು ಮರಿಯಪ್ಪ ಎಂಬ ಮೂವರು ಧನಿಕ ಅಣ್ಣತಮ್ಮಂದಿರು ಕ್ರಿಶ.1886 ರಲ್ಲಿ ಆಶ್ರಮ ಮತ್ತು ಗುಡಿಯ ಅಂಗಭೋಗ- ರಂಗಭೋಗ, ದೀಪಾರಾಧನೆ, ಪೂಜೆ ಪುನಸ್ಕಾರ, ತತ್ವಪದಗಳ ಗುರುಗೋಷ್ಠಿ, ಅನ್ನ ದಾಸೋಹ, ಜ್ಞಾನ ದಾಸೋಹ ಮುಂತಾದ ಚಟುವಟಿಕೆಗಳ ನಿರ್ವಹಣೆಗೆಂದು ಸುಮಾರು 231 ಎಕರೆ ಭೂಮಿಯನ್ನು ದಾನ ನೀಡಿದರು. ಭೂದಾನದ ದಾಸ್ತಾವೇಜುಗಳನ್ನು ಆಗಿನ ಮೈಸೂರು ಸಂಸ್ಥಾನದ ಅರಸರಿಂದ ಅನುಮೋದನೆ ಪಡೆದು ಗೆಜೆಟ್ ಫರ್ಮಾನು ಹೊರಡಿಸಿದರು. ಸಂತಾನ ಭಾಗ್ಯವಿರದ ಸೋಮೇಲಿಂಗಪ್ಪನು ತನ್ನ ಕಿರಿಯ ತಮ್ಮನಾದ ಮರಿಯಪ್ಪನ ಕುಟುಂಬದೊಂದಿಗೆ ಪಟ್ಟನಾಯಕನಹಳ್ಳಿಗೆ ಬಂದು ನೆಲೆಸಿದನು. ಸಿಡಿಯಪ್ಪನ ನಡುಮಗನಾದ ಚೌಡಪ್ಪನ ಕುಟುಂಬದವರು ಸಿಡಿಯಜ್ಜನ ಪಾಳ್ಯದಲ್ಲಿಯೇ ನೆಲೆಸಿದರು.
ಸೋಮೇಲಿಂಗಪ್ಪ ಮತ್ತು ಮರಿಯಪ್ಪ ಎಂಬುವವರು ಕಾಮಗೊಂಡನಹಳ್ಳಿ ಮತ್ತು ಯಾದಲಡಕು ಗ್ರಾಮದ ಕುರುಬರ ನೆರವಿನೊಂದಿಗೆ ಕುರುಬರೇ ಮುಂದೆ ನಿಂತು ಮುತುವರ್ಜಿಯಿಂದ ಗುರು ಗುಂಡಬ್ರಹ್ಮೇಶ್ವರನ ಗುಡಿ, ದತ್ತಾತ್ರೇಯ ಸ್ವಾಮಿಯ ಗುಡಿ, ಅಮ್ಮನವರ ಗುಡಿ ಮತ್ತು ಆಶ್ರಮವನ್ನು ಜೀರ್ಣೋದ್ದಾರ ಮಾಡಿಸಿದರು. ಮುಂದೆ ಈ ಆಶ್ರಮವು ಅವಧೂತ ಗುರುಪಂಥಕ್ಕೆ ಸೇರಿದ ಸಮಸ್ತ ಒಕ್ಕಲುವಾಡಿ ಜಾತಿಗಳ ಶ್ರದ್ಧಾ ಕೇಂದ್ರವಾಗಿ ಬೆಳೆದು ಜಾತ್ರೆ ರಥೋತ್ಸವ, ಸಂತೆ, ಕಂತೆ ಭಿಕ್ಷೆ ಅನ್ನ ದಾಸೋಹ ಮತ್ತು ಅಕ್ಷರ ಕಲಿಕೆಯ ಕೂಲಿಮಠ, ಅರವಂಟಿಗೆ, ಅಂಗಡಿ ಮುಂಗಟ್ಟುಗಳಿಂದ ಪ್ರಸಿದ್ಧಿ ಪಡೆಯಿತು. ಪಶುಪಾಲಕ ಸಮುದಾಯಗಳಾದ ಕುರುಬರು, ಕುಂಚಿಟಿಗರು, ಬೇಡನಾಯಕರು, ಹಳ್ಳಿಕಾರ್ ಒಕ್ಕಲಿಗರು, ಅಕ್ಕಸಾಲಿಗರು, ಹಜಾಮರು, ಕುಂಬಾರರು, ಈಡಿಗರು, ಮಾದಿಗರು, ಹೊಲೆಯರು ಮುಂತಾದ ಅನೇಕ ಸಮುದಾಯಗಳು ಹಾಗೂ ವಿಶೇಷವಾಗಿ ಹನ್ನೆರಡು ಕೈವಾಡದವರು ಆಶ್ರಮ, ಗುಡಿ, ಪರಿಶೆ ಪಾಢ್ಯಗಳ ಉಸ್ತುವಾರಿ ವಹಿಸಿಕೊಂಡರು.
ಹಳ್ಳಿಕಾರ್ ಒಕ್ಕಲಿಗ, ಕುಂಚಿಟಿಗರು, ಕುರುಬರು, ಮ್ಯಾಸ ಬೇಡರು ಹಾಗೂ ಕಾಡು ಗೊಲ್ಲರು ಇವು ಪ್ರಧಾನ ಪಶುಪಾಲಕ ಸಮುದಾಯಗಳು. ಮೂಲದಲ್ಲಿ ಕುಂಚಿಟಿಗರು ಕುರುಬ ಸಮುದಾಯದವರಾಗಿದ್ದರು. ಕುರುಬರ ಜಲಧಿಬೊಪ್ಪರಾಯ ಎಂಬ ಸಾಂಸ್ಕೃತಿಕ ವೀರನ ಒಂದು ಬಣ ಕುಂಚಿಟಿಗರಾಗಿ ಉನ್ನಯನಗೊಂಡಿತು. ಹೀಗಾಗಿಯೇ “ಕುರುಬರು ಕೆಟ್ಟು ಕುಂಚಿಟಿಗರಾದರು” ಎಂಬ ಜನಪ್ರಿಯ ಮಾತು ಕುಂಚಿಟಿಗರಲ್ಲಿ ರೂಢಿಗೆ ಬಂದಿದೆ.
ಪ್ರಸ್ತುತ ಪಟ್ಟನಾಯಕನಹಳ್ಳಿ ಮಠವು ನಿರ್ದಿಷ್ಟವಾಗಿ ಯಾವುದೇ ಜಾತಿಗೆ ಸೇರದಿರುವ ಪೂರ್ವದ ಅವಧೂತಾಶ್ರಮ. ಆಶ್ರಮವು ಮಠವಾಗಿ ಪರಿವರ್ತನೆಯಾಯಿತು. ಜಾತ್ಯತೀತ ನಡೆಯ ಕುರುಬರ ಸಿಡಿಯಜ್ಜನಪಾಳ್ಯದ ಸೋಮೇಲಿಂಗಪ್ಪ, ಚೌಡಪ್ಪ ಮತ್ತು ಮರಿಯಪ್ಪ ಎಂಬ ಮೂವರು ಸಿರಿವಂತ ಅಣ್ಣತಮ್ಮಂದಿರು 231 ಎಕರೆ ಭೂಮಿಯನ್ನು ಭೂದಾನ ನೀಡುವ ಮೂಲಕ ಈ ಮಠವನ್ನು ಕಟ್ಟಿ ಅಭಿವೃದ್ಧಿಪಡಿಸಿದ್ದಾರೆ. ಈ ಮನೆತನದ ಯಜಮಾನಿಕೆಯಲ್ಲಿ ಕೈವಾಡದ ಹನ್ನೆರಡು ಜಾತಿಗಳ ಯಜಮಾನರು ಆಯ್ಕೆ ಮಾಡಿದ ಯಾವುದೇ ಜಾತಿಯ ವ್ಯಕ್ತಿಯು ಈ ಮಠದ ಪಟ್ಟಾಧಿಕಾರ ಹೊಂದಬೇಕೆಂಬುದು ನಿಯಮ. ಅವಧೂತದ ಮುಖ್ಯ ಲಕ್ಷಣವೇ ಹುಟ್ಟಿದ ಜಾತಿಯ ಪಾಲನೆಯ ನಿರಾಕರಣೆ. ಹೀಗಾಗಿ ಈಗಿನ ಪಟ್ಟನಾಯಕನಹಳ್ಳಿಯ ಶ್ರೀ ಗುರು ಗುಂಡಬ್ರಹ್ಮೇಶ್ವರ ಮಠದ ಸ್ಥಿರ ಮತ್ತು ಚರ ಸ್ವತ್ತುಗಳು ಈಗಿನ ಪೀಠಾಧ್ಯಕ್ಷನಾಗಿರುವ ಶ್ರೀ ನಂಜಾವಧೂತ ಸ್ವಾಮೀಜಿಗೆ ಮಾತ್ರ ಸೇರದೆ ಪ್ರಧಾನವಾಗಿ ಭೂದಾನ ಕೊಟ್ಟಿರುವ ಕುರುಬ ಮನೆತನಕ್ಕೆ ಸೇರಿದವಾಗಿರುತ್ತವೆ ಎಂಬುದು ಸುತ್ತಮುತ್ತಲಿನ ಜನರ ಅಭಿಪ್ರಾಯವಾಗಿರುತ್ತದೆ. ಭೂದಾನ ಕೊಟ್ಟ ಕುರುಬರು ತಮ್ಮ ಪೂರ್ವಿಕರು ಮಾಡಿಕೊಂಡ ಕರಾರಿನ ಪ್ರಕಾರವಾಗಿ ತಮ್ಮ ಮನೆಗಳ ಸತ್ತವರ ಶವಗಳನ್ನು ಅದೇ ಭೂಮಿಯಲ್ಲಿ ಸಮಾಧಿ ಮಾಡುತ್ತಾ ಬಂದರು. ಕುರುಬ ವಂಶಸ್ಥರ ಮೂವತ್ತಕ್ಕೂ ಹೆಚ್ಚು ಸಮಾಧಿಗಳು ಇಲ್ಲಿವೆ. ಈ ಸಮಾಧಿಗಳಿಗೆ ಸಿಡಿಯಜ್ಜನ ವಂಶದ ಕುರುಬರು ಪ್ರತಿ ವರ್ಷ ನಿರ್ದಿಷ್ಟ ದಿನಗಳಂದು ನೇಮದ ಪೂಜೆ ಸಲ್ಲಿಸುತ್ತಾ ಪೂರ್ವಜರಿಗೆ ನಮಿಸುವ ಸಂಪ್ರದಾಯ ಅನುಸರಿಸಿಕೊಂಡು ಬರುತ್ತಿದ್ದಾರೆ. ಈಗ ಮಠದ ಆವರಣದಲ್ಲಿರುವ ಈ ಸಮಾಧಿಗಳನ್ನು ಶ್ರೀ ನಂಜಾವಧೂತ ಸ್ವಾಮೀಜಿ ನಾಶಪಡಿಸಲು ಮುಂದಾಗಿದ್ದಾರೆ. ಹತ್ತಕ್ಕೂ ಹೆಚ್ಚು ಸಮಾಧಿಗಳನ್ನು ನಾಶ ಮಾಡಲಾಗಿದೆ. ಭೂದಾನ ನೀಡಿದ್ದ 231 ಎಕರೆ ಜಮೀನಿನ ವಿವಾದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಕೋರ್ಟಿನ ತೀರ್ಪು ಹೊರಬರುವ ಮುನ್ನವೇ ಸದರಿ ಆಸ್ತಿಯನ್ನು ತನ್ನ ಸ್ವಂತ ಆಸ್ತಿಯನ್ನಾಗಿಸಿಕೊಳ್ಳಲು ನಂಜಾವಧೂತ ಸ್ವಾಮೀಜಿ ಸಂಚು ನಡೆಸುತ್ತಿದ್ದಾರೆಂದು ಸ್ಥಳೀಯ ಹಾಲುಮತದವರು ದೂರುತ್ತಿದ್ದಾರೆ. ಸಕಲೆಂಟು ಜಾತಿ ಧರ್ಮಗಳ ಎಲ್ಲರಿಗೂ ಸಾರ್ವಜನಿಕ ಉಪಯೋಗಕ್ಕಿರಬೇಕೆಂಬ ಸದಾಶಯದಿಂದ ಭೂದಾನ ನೀಡಿದ್ದ ಕುರುಬರ ಆಸ್ತಿಯನ್ನು ಕೇವಲ ಕುಂಚಿಟಿಗ ಒಕ್ಕಲಿಗರ ಆಸ್ತಿಯನ್ನಾಗಿ ಮಾಡುತ್ತಿದ್ದಾರೆಂದು ಆಕ್ಷೇಪಿಸುತ್ತಿದ್ದಾರೆ. ಶ್ರೀ ನಂಜಾವಧೂತ ಸ್ವಾಮೀಜಿಯ ಇಂತಹ ಹವಣಿಕೆಯ ವಿರುದ್ಧ ಎಚ್ಚೆತ್ತುಕೊಂಡ ಹಾಲುಮತಸ್ಥರು ಶಿರಾದ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದರು. ( ಪ್ರಕರಣ ಸಂಖ್ಯೆ: OS 98/88) ಸದರಿ ಪ್ರಕರಣವು 14-07-1995 ರಲ್ಲಿ ಇತ್ಯರ್ಥಗೊಂಡು ನಂಜಾವಧೂತ ಸ್ವಾಮೀಜಿಗೂ ಮತ್ತು ಶ್ರೀ ಗುರು ಗುಂಡಬ್ರಹ್ಮೇಶ್ವರ ಮಠದ ಆಸ್ತಿಗೂ ಸಂಬಂಧ ಇರುವುದಿಲ್ಲವೆಂದು ನ್ಯಾಯಾಲಯ ತೀರ್ಪು ನೀಡಿದೆ. ಈ ತೀರ್ಪನ್ನು ಪ್ರಶ್ನಿಸಿ CRPC 2871/1995-96 ಪ್ರಕಾರ ನಂಜಾವಧೂತ ಸ್ವಾಮೀಜಿ ಮೇಲ್ಮನವಿ ಸಲ್ಲಿಸಿ ಮಠದ ಆಸ್ತಿಪಾಸ್ತಿ ಅಧಿಕಾರ ವಗೈರೆ ತನಗೇ ಸೇರತಕ್ಕದ್ದೆಂದು ಗುರು ಕುಮರಾವಧೂತರು ಬರೆದಿದ್ದ ಉಯಿಲು ಪತ್ರವನ್ನು ಹಾಜರು ಪಡಿಸಿದರು. ಇದನ್ನು ಕೂಡಾ ನ್ಯಾಯಾಲಯ 29/1995 ರ ರೀತ್ಯಾ ವಜಾ ಮಾಡಿತು. ಈಗ ಮತ್ತೊಮ್ಮೆ ಈ ಪ್ರಕರಣ ಉಚ್ಛ ನ್ಯಾಯಾಲಯದ ಮುಂದೆ ವಿಚಾರಣೆಯ ಹಂತದಲ್ಲಿದೆ.
ಮೊದಲಿನಿಂದಲೂ ಜಾತ್ಯತೀತವಾಗಿ ಶ್ರೀ ಗುರು ಗುಂಡಬ್ರಹ್ಮೇಶ್ವರ ಅವಧೂತಾಶ್ರಮದ ಪಟ್ಟದ ಗುರುಗಳಾಗಿ ಕುರುಬರು, ಹಜಾಮರು, ಕುಂಚಿಟಿಗರು, ವಿಶ್ವಕರ್ಮ ಅಕ್ಕಸಾಲಿಗರು (ಕಮ್ಮಾರ) ಮುಂತಾದ ಜಾತಿಗಳಿಗೆ ಸೇರಿದ ಗುರುಗಳು ಗುರುಪಟ್ಟ ಅಲಂಕರಿಸಿದ್ದಾರೆ. ಇವರೆಲ್ಲರೂ ಆಶ್ರಮಕ್ಕೆ ಭೂದಾನ ನೀಡಿದ ಕುರುಬರಾದಿಯಾಗಿ ಕೈವಾಡದ ಹನ್ನೆರಡೂ ಜಾತಿಗಳ ಮುಖಂಡರ ಸಮ್ಮತದಿಂದ ಆಯ್ಕೆಯಾಗಿ ನೇಮಕವಾಗಿರುತ್ತಾರೆ. ಹೀಗೆ ಇದೇ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಆಯ್ಕೆಯಿಂದ ಅವಧೂತ ಗುರುವನ್ನು ಪಟ್ಟಕ್ಕೇರಿಸುವ ಪರಿಪಾಠವು ಅಬಾಧಿತವಾಗಿ ಮುಂದುವರೆಯುತ್ತಿರುವಾಗ ಯಾದಲಡಕು ಗ್ರಾಮದ ಕುಂಚಿಟಿಗರ ಸಮುದಾಯಕ್ಕೆ ಸೇರಿದ ಕೆಂಗೇಗೌಡ ಮತ್ತು ತಮ್ಮೇಗೌಡ ಎಂಬ ಅಣ್ಣತಮ್ಮಂದಿರ ಮನೆತನದ ತಮ್ಮೇಗೌಡರ ಮಗನಾದ ಪರಮಹಂಸ ಅವಧೂತರು ಪಟ್ಟ ವಹಿಸಿಕೊಂಡರು. ಪರಮಹಂಸ ಅವಧೂತರು ಕುರುಬರಿಂದ ದಾನವಾಗಿ ಬಂದಿದ್ದ ಮಠದ ಜಮೀನಿನಲ್ಲಿ ಬೇಸಾಯ ಮಾಡುತ್ತಾ ಹಾಲು ಕರೆಯುವ ಹಸುಗಳು ಮತ್ತು ಎಮ್ಮೆಗಳು ಹಾಗೂ ಬೇಸಾಯದ ಎತ್ತುಗಳನ್ನು ಸಾಕಾಣಿಕೆ ಮಾಡಿಕೊಂಡು ಅನ್ನ ದಾಸೋಹ, ಜಾತ್ರೆ, ಅರವಂಟಿಗೆ, ಅಕ್ಷರಾಭ್ಯಾಸದ ಕೂಲಿಮಠ ನಡೆಸುತ್ತಾ ಮಠವನ್ನು ಸುಭದ್ರವಾಗಿ ಕಟ್ಟಿದರು. ಪರಮಹಂಸ ಅವಧೂತರು ಕಾಲವಾದ ಬಳಿಕ ಇದೇ ಯಾದಲಡಕು ಗ್ರಾಮದ ಕೆಂಗೇಗೌಡರ ಮಗನಾದ ರಂಗಸ್ವಾಮಿ ಎಂಬುವವರು ಶ್ರೀ ಗುರು ಕುಮಾರಾವಧೂತ ಸ್ವಾಮೀಜಿ ಎಂಬ ಹೆಸರಿನಲ್ಲಿ ಮಠದ ಗುರುಪಟ್ಟ ಅಲಂಕರಿಸಿದರು. ಪರಮಹಂಸ ಅವಧೂತರು ಮತ್ತು ಗುರು ಕುಮಾರವಧೂತ ಸ್ವಾಮೀಜಿ ಈ ಇಬ್ಬರೂ ಕುಂಚಿಟಿಗರ ಜಾತಿಗೆ ಸೇರಿದವರಾದ್ದರಿಂದ ಸಹಜವಾಗಿ ಮಠದ ಆಡಳಿತ ವ್ಯವಹಾರಗಳಲ್ಲಿ ಕುಂಚಿಟಿಗರ ಪಾರುಪತ್ಯ ಹೆಚ್ಚಾಯಿತು. ಅಷ್ಟೊತ್ತಿಗೆ ಕೆಲವು ಕುಂಚಿಟಿಗರು ಮೈಸೂರು ಸೀಮೆಯ ಗಂಗಟಗಾರ ಒಕ್ಕಲಿಗರ ಸಹವಾಸದಿಂದ ತಮ್ಮನ್ನು ಒಕ್ಕಲಿಗರು ಎಂದು ಗುರುತಿಸಿಕೊಳ್ಳಲು ಪ್ರಾರಂಭಿಸಿದ್ದರು. ಶ್ರೀ ಗುರು ಗುಂಡಬ್ರಹ್ಮೇಶ್ವರ ಆಶ್ರಮವನ್ನು ಇದೇ ಜನ ಮಠ ಎಂದು ಕರೆಯತೊಡಗಿದರು. ಗುರುವಿನ ಪಟ್ಟಕ್ಕೆ ಬಂದ ಕುಂಚಿಟಿಗರ ಗುರು ಕುಮಾರಾವಧೂತ ಸ್ವಾಮೀಜಿ (ರಂಗಸ್ವಾಮಿ) ತನ್ನನ್ನು ತಾನು ಮಠಾಧಿಪತಿ ಎಂದು ಕರೆದುಕೊಂಡು ಬೀಗುತ್ತಾ ಬೇರೆ ಸಮುದಾಯಗಳ ಅಧಿಕಾರ ಒಳಗೊಳ್ಳುವಿಕೆಯನ್ನು ಪ್ರತಿಬಂಧಿಸಿದನು. ಗುರು ಕುಮಾರಾವಧೂತ ಎಂದು ತನ್ನ ಹೆಸರಿನೊಂದಿಗಿದ್ದ ‘ಅವಧೂತ‘ ಲಕ್ಷಣಗಳನ್ನು ಆತನು ಪಾಲಿಸದೆ ಕೇವಲ ಶ್ರೀ ಗುರು ಕುಮಾರ ಅವಧೂತ ಸ್ವಾಮೀಜಿ ಎಂದು ತನ್ನನ್ನು ಕರೆದುಕೊಂಡರು. ತಾನೊಬ್ಬ ಅವಧೂತ ಪಟ್ಟದ ಗುರು ಎಂಬ ವಿಶೇಷಣದ ಬದಲು ಸ್ವಾಮೀಜಿ ಎಂಬ ವಿಶೇಷಣ ಲಗತ್ತುಗೊಂಡಿತು. ಮುಂದೆ ಇದೇ ಗುರು ಕುಮಾರಾವಧೂತ ಸ್ವಾಮೀಜಿ ತನ್ನ ಒಡಹುಟ್ಟಿದ ತಮ್ಮನಾದ ಕೃಷ್ಣಪ್ಪನ ಮಗ ಗಿರೀಶ್ ಕುಮಾರ್ ಎಂಬ ಹುಡುಗನ ಹೆಸರಿಗೆ ಮಠದ ಆಸ್ತಿಪಾಸ್ತಿ ಅಧಿಕಾರಗಳ ಉಯಿಲು ಪತ್ರ ಬರೆದರು. ವಿದ್ಯಾರ್ಥಿಯಾಗಿದ್ದ ಗಿರೀಶ್ ಕುಮಾರನನ್ನು ಕರೆತಂದು ಶ್ರೀ ನಂಜಾವಧೂತ ಸ್ವಾಮೀಜಿ ಎಂಬ ಹೆಸರಿನಿಂದ ಕರೆದು ಸ್ವಾಮೀಜಿಯ ಪಟ್ಟ ಕಟ್ಟಿದರು. ಚಳ್ಳಕೆರೆ ಪಟ್ಟಣದಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿದ್ದ ಯಾದಲಡಕು ಗ್ರಾಮದ ಕೃಷ್ಣಪ್ಪನವರ ಮಗ ಗಿರೀಶ ಕುಮಾರ್ ಪಟ್ಟನಾಯಕನಹಳ್ಳಿ ಮಠದ ಸ್ವಾಮೀಜಿಯಾದ ಕಥೆ ಇದು.
ಶ್ರೀ ಗುರು ಕುಮಾರಾವಧೂತ ಸ್ವಾಮೀಜಿ, ಯಾರ ವಿರೋಧವನ್ನೂ ಲೆಕ್ಕಿಸದೆ ಅಕ್ರಮವಾಗಿ ಉಯಿಲು ಬರೆಸಿ ಗಿರೀಶ ಕುಮಾರನನ್ನು ಶ್ರೀ ನಂಜಾವಧೂತ ಸ್ವಾಮೀಜಿಯನ್ನಾಗಿಸಿ ಪೀಠದ ಮೇಲೆ ಕೂರಿಸಿದರು. ಅಲ್ಲಿಂದ ಮಠದ ಮೇಲೆ ಕುಂಚಿಟಿಗರ ತೀವ್ರ ಬಿಗಿಹಿಡಿತ ಪ್ರಾರಂಭವಾಯಿತು.
ಪೀಠಕ್ಕೆ ಗುರುಗಳನ್ನು ಆಯ್ಕೆ ಮಾಡುತ್ತಿದ್ದ ಅಧಿಕಾರದಿಂದ ಕುರುಬರು ಮತ್ತು ಕೈವಾಡದ ಹನ್ನೆರಡು ಜಾತಿಗಳು ವಂಚಿತರಾದರು.
‘ಕುಂಚಿಟಿಗರು‘ ಕರ್ನಾಟಕದ ಒಂದು ಮೂಲನಿವಾಸಿ ದ್ರಾವಿಡ ಸಮುದಾಯ. ಕುಂಚಿಟಿಗರನ್ನು ಒಕ್ಕಲಿಗರ ಉಪಜಾತಿ ಎಂದು ಜಾತಿ ಗುರುತಿಸುವ ಗೊಂದಲ ಸೃಷ್ಟಿಸಲಾಗಿದೆ. ಈ ಗೊಂದಲ ಇವತ್ತಿನದ್ದಲ್ಲ. ಕುಂಚಿಟಿಗರು ನಲವತ್ತೆಂಟು ಬೆಡಗು(ಗೋತ್ರ)ಗಳಿರುವ ಒಂದು ಪ್ರತ್ಯೇಕ ಜಾತಿಯಾಗಿದ್ದರೂ ಒಂದಷ್ಟು ಜನ ಗಂಗಟಗಾರ ಒಕ್ಕಲಿಗರ ಜೊತೆಯಲ್ಲಿ ಗುರುತಿಸಿಕೊಂಡಿದ್ದರೆ, ಇನ್ನೊಂದಷ್ಟು ಜನ ಲಿಂಗದಾರಣೆ ಮಾಡಿಕೊಂಡು ‘ಕುಂಚಿಟಿಗ ಲಿಂಗಾಯತರು‘ ಎಂದು ಕರೆದುಕೊಂಡಿದ್ದಾರೆ. ಇನ್ನೂ ಕೆಲವರು ಉತ್ತರ ಕರ್ನಾಟಕದಲ್ಲಿ ಕಾಮಾಟಿಗಳು ಎಂದು ಗುರುತಿಸಿಕೊಂಡಿದ್ದಾರೆ ಕುಂಚಿಟಿಗರು ಎಂದೇ ಪ್ರತ್ಯೇಕ ಮೂಲ ಹೆಸರನ್ನು ಒಪ್ಪಿಕೊಂಡು ನಡೆಯುತ್ತಿರುವವರ ಸಂಖ್ಯೆ ತೀರಾ ಕಡಿಮೆ. ‘ಕುಂಚಿಟಿಗ ಒಕ್ಕಲಿಗರು‘ ಎಂದು ಜಾತಿಪತ್ರ ಪಡೆದುಕೊಂಡವರೂ ಇದ್ದಾರೆ. ಜಾತಿ ಗುರುತಿನ ಈ ಗೊಂದಲ ಹೆಚ್ಚಿಸಲು ಪ್ರಮುಖ ಕೊಡುಗೆ ನೀಡಿದವರೆಂದರೆ ಇದೇ ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮೀಜಿ ಮತ್ತು ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ. ಶ್ರೀ ನಂಜಾವಧೂತ ಸ್ವಾಮೀಜಿಯವರು ಸಂಸ್ಕೃತ, ವ್ಯಾಕರಣ, ವೇದೋಪನಿಷತ್ತು, ಮಠದ ಅಧಿಕಾರ ನಿರ್ವಹಣೆ ಮುಂತಾದ ವಿಷಯಗಳಲ್ಲಿ ತರಬೇತಿ ಪಡೆಯಲು ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಬಂದು ಸೇರಿಕೊಂಡರು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ನಿಕಟವರ್ತಿಯಾದರು. ಹೀಗಿರುವಾಗ ಆದಿಚುಂಚನಗಿರಿ ಪೀಠದ ಪಟ್ಟ ತನಗೇ ಸಿಗುತ್ತದೆಂದು ದುರಾಸೆಗೆ ಬಿದ್ದ ನಂಜಾವಧೂತ ಸ್ವಾಮೀಜಿ, ಅಪಾರ ಕುಂಚಿಟಿಗರನ್ನು ಗಂಗಟಗಾರ ಒಕ್ಕಲಿಗರೊಂದಿಗೆ ವಿಲೀನಗೊಳಿಸಿ ಒಕ್ಕಲಿಗರು ಎಂಬ ಜಾತಿಪತ್ರಗಳನ್ನು ಕೊಡಿಸುವುದರಲ್ಲಿ ಯಶಸ್ವಿಯಾದರು. ನಂಜಾವಧೂತರ ಈ ನಡೆ ಸರಿಯಲ್ಲವೆಂದು ಬಾಲಗಂಗಾಧರನಾಥ ಸ್ವಾಮೀಜಿ ಕೂಡಾ ತಿಳಿವಳಿಕೆ ನೀಡಲಿಲ್ಲ. ಕುಂಚಿಟಿಗರ ಭೀಷ್ಮ ಎಂದೇ ಕರೆಯಲಾಗುವ ‘ರಾವ್ ಬಹದ್ದೂರ್- ಧರ್ಮಪ್ರಕಾಶ‘ ಡಿ. ಬನುಮಯ್ಯನವರು, ಕರ್ನಾಟಕ ಒಕ್ಕಲಿಗರ ಸಂಘದ ಪ್ರಥಮ ಸದಸ್ಯತ್ವ ತೆಗೆದುಕೊಂಡಿದ್ದ ಕುಂಚಿಟಿಗ ಜನಾಂಗದ ವ್ಯಕ್ತಿಯಾಗಿದ್ದರು. ಒಕ್ಕಲಿಗರ ಸಂಘವನ್ನು ಸುಭದ್ರವಾಗಿ ಕಟ್ಟಿ ನಿಲ್ಲಿಸಲು ಗಂಗಟಗಾರ ಒಕ್ಕಲಿಗರಿಗೆ ಮೈಸೂರಿನ ಕುಂಚಿಟಿಗರ ಡಿ.ಬನುಮಯ್ಯನವರ ನೆರವು ಅತ್ಯಗತ್ಯವಾಗಿತ್ತು. ಹಾಗಾಗಿಯೇ ಬನುಮಯ್ಯನವರಿಗೆ ಒಕ್ಕಲಿಗರ ಸಂಘದಲ್ಲಿ ಗೌರವ ಸದಸ್ಯತ್ವ ನೀಡಲಾಗಿತ್ತು. ಬನುಮಯ್ಯನವರು ಎಂದಿಗೂ ತನ್ನ ಜಾತಿಯನ್ನು ಒಕ್ಕಲಿಗ ಎಂದು ದಾಖಲಿಸಲಿಲ್ಲ. ಬದಲಾಗಿ ಮೈಸೂರು ರಾಜ್ಯ ಕುಂಚಿಟಿಗರ ಸಮ್ಮೇಳನವನ್ನು ಆಯೋಜಿಸಿದರು.
ಇವತ್ತಿಗೂ ಕುಂಚಿಟಿಗರ ಜಾತಿ ಅಸ್ಮಿತೆಗಳಲ್ಲಿ ಯಾವುದೇ ಗೊಂದಲವಿದ್ದರೂ ಮದುವೆ ವಿಚಾರದಲ್ಲಿ ಕುಂಚಿಟಿಗರಲ್ಲಿಯೇ ತುಂಬಾ ಕಟ್ಟುನಿಟ್ಟಾಗಿ ಬೆಡಗು ಹೊಂದಾಣಿಕೆ ಮಾಡಿಕೊಂಡು ಮದುವೆ ಮಾಡುತ್ತಾರೆ. ಕುಂಚಿಟಿಗ ಲಿಂಗಾಯತ, ಕಾಮಾಟಿ, ಕುಂಚಿಟಿಗ ಒಕ್ಕಲಿಗ ಗುಂಪುಗಳ ನಡುವೆಯೂ ಬೆಡಗು(ಗೋತ್ರ) ಪಾಲಿಸುವ ಕುಂಚಿಟಿಗರು, ಗಂಗಟಗಾರ ಒಕ್ಕಲಿಗರಿಗೆ ಹೆಣ್ಣು ಕೊಡುವುದಿಲ್ಲ ಅಥವಾ ಗಂಗಟಗಾರ ಒಕ್ಕಲಿಗರಿಂದ ಹೆಣ್ಣು ತರುವುದಿಲ್ಲ. ಕೆಲವು ಮದುವೆಗಳು ಪ್ರೇಮ ಅಥವಾ ಖಾಸಗಿ ಕಾರಣಗಳಿಂದಾಗಿ ಈ ಎರಡೂ ಜಾತಿಗಳ ನಡುವೆ ನಡೆದಿವೆಯಷ್ಟೇ. ಮದುವೆ ವಿಷಯದಲ್ಲಿ ಬೆಡಗುಗಳನ್ನು ಹಾಗೂ ಸಾಂಸ್ಕೃತಿಕ ಸಂಗತಿಗಳಲ್ಲಿ ತಮ್ಮದೇ ಪ್ರತ್ಯೇಕ ಅಮಾಸೆಮನೆ ಮತ್ತು ಕುಲದೇವತೆಗಳನ್ನು ಹೊಂದಿರುವ ಕುಂಚಿಟಿಗರು ಹಲವಾರು ಜಾತಿಗಳಲ್ಲಿ ಕರಗಿ ಹೋಗಿರುವುದರಿಂದ ಮೂಲ ಕುಂಚಿಟಿಗ ಜನಾಂಗದ ಹೆಸರಿನಲ್ಲಿ ಜಾತಿಪತ್ರ ಪಡೆಯುವ ಕುಟುಂಬಗಳು ಮಾತ್ರ ಕುಂಚಿಟಿಗರಾಗಿ ಅಲ್ಪ ಸಂಖ್ಯಾತರಾಗಿ ಉಳಿಯುತ್ತಾರೆ. ಇನ್ನುಳಿದ ಕುಟುಂಬಗಳು ಮುಂದಿನ ತಲೆಮಾರುಗಳಲ್ಲಿ ತಾವು ಕುಂಚಿಟಿಗರೆಂಬ ಸಾಂಸ್ಕೃತಿಕ ಬೇರುಗಳನ್ನು ಮರೆತುಬಿಡುತ್ತಾರೆ.
ಪಟ್ಟನಾಯಕನಹಳ್ಳಿಯ ಶ್ರೀ ಗುರು ಗುಂಡಬ್ರಹ್ಮೇಶ್ವರ ಮಠದ ಹೆಸರನ್ನು ಶ್ರೀ ಸ್ಪಟಿಕಪುರಿ ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನ ಮಠ ಎಂದು ಬದಲಾಯಿಸಿರುವ ಶ್ರೀ ನಂಜಾವಧೂತ ಸ್ವಾಮೀಜಿಯನ್ನು ಗಂಗಟಗಾರ ಒಕ್ಕಲಿಗರು ಯಾವತ್ತಿಗೂ ತಮ್ಮ ಒಕ್ಕಲಿಗ ಜನಾಂಗದ ಸ್ವಾಮೀಜಿ ಎಂದು ನಿರಾಳವಾಗಿ ಒಪ್ಪಿಕೊಂಡಿಲ್ಲ. ಒಕ್ಕಲಿಗರ ಹೆಸರಿನಲ್ಲಿ ಗುರುತಿಸಿಕೊಂಡಿರುವ ಕುಂಚಿಟಿಗರು ಮಾತ್ರ, “ಕುಂಚಿಟಿಗರು ಎಂಬುದು ಒಕ್ಕಲಿಗರ ಉಪಜಾತಿ ಕಣ್ರೀ. ನಂಜಾವಧೂತ ಸ್ವಾಮೀಜಿಯೂ ಒಕ್ಕಲಿಗರ ಸ್ವಾಮೀಜಿ ಕಣ್ರೀ” ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ.
ಸ್ಪಟಿಕಪುರಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನ ಮಠ ಎಂದು ಈಗ ಗುರುತಿಸಿಕೊಂಡಿರುವ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಮಠವು ಮೂಲದಲ್ಲಿ ಅವಧೂತ ಆಶ್ರಮವಾಗಿತ್ತು. ಪೂರ್ವದ ಆಶ್ರಮ ಇಂದು ಮಠವಾಗಿ ಗುರುತಿಸಿಕೊಂಡಿದೆ. ನಂಜಾವಧೂತ ಸ್ವಾಮೀಜಿ ಹೆಸರಿಗೆ ಮಾತ್ರ ಅವಧೂತ. ಮೂಲದಲ್ಲಿ ಅವಧೂತದ ಆಶ್ರಮವೆಂದು ಗುರುತಿಸಿಕೊಂಡಿದ್ದ ಈಗಿನ ಮಠದ ಮಠಾಧಿಪತಿಯಾಗಿರುವ ಶ್ರೀ ನಂಜಾವಧೂತ ಸ್ವಾಮೀಜಿಗೆ ಇತ್ತ ಅವಧೂತದ ಲಕ್ಷಣಗಳೇನೆಂಬುದು ತಿಳಿದಿಲ್ಲ. ಅತ್ತ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಬಳಿ ತರಬೇತಿ ಪಡೆದಿದ್ದರೂ ಸಹ ಕಾಪಾಲಿಕ ನಾಥ ಪಂಥದ ಲಕ್ಷಣಗಳಾಗಲೀ ನಂಜಾವಧೂತ ಸ್ವಾಮೀಜಿಗೆ ತಿಳಿದಂತಿಲ್ಲ. ಅವಧೂತದ ಮತ್ತು ಕಾಪಾಲಿಕ ನಾಥ ಪಂಥದ ಯೋಗಧಾರೆಗಳ ಸಾಂಸ್ಕೃತಿಕ ಇತಿಹಾಸವೂ ಇವರಿಗೆ ತಿಳಿದಂತಿಲ್ಲ. ಕೃಷಿ ಕಾಯಕ ಸಂಸ್ಕೃತಿಯನ್ನು ಮತ್ತು ಅವಧೂತ ತತ್ವವನ್ನು ಗಾಳಿಗೆ ತೂರಿರುವ ಶ್ರೀ ನಂಜಾವಧೂತ ಸ್ವಾಮೀಜಿಯವರು ಈಗ ಮಠದ ಜಮೀನಿನಲ್ಲಿ ಸಮಾಧಿಯಾಗಿರುವ ಕುರುಬರ ಮೂವತ್ತಕ್ಕೂ ಹೆಚ್ಚು ಸಮಾಧಿಗಳನ್ನು ಬುಲ್ಡೋಜ್ ಮಾಡಲು ಮುಂದಾಗಿದ್ದಾರೆ. ಇದು ಭೂದಾನ ಕೊಟ್ಟಿರುವ ಕುರುಬ ಮನೆತನದವರ ವಿರುದ್ಧ ಎಸಗುತ್ತಿರುವ ದ್ರೋಹವಲ್ಲವೇ ? ಪಟ್ಟನಾಯಕನಹಳ್ಳಿಯ ಅವಧೂತಾಶ್ರಮಕ್ಕೆ ಕುರುಬ ಜನಾಂಗ ಮೂಲದವರು ಭೂಮಿಕಾಣಿ ದಾನ ನೀಡಿದ್ದರು. ಆಗಿನ ಕಾಲದಲ್ಲಿ ಆಶ್ರಮದ ಪ್ರಮುಖರು ಮತ್ತು ಭೂದಾನ ನೀಡಿದ್ದ ಮನೆತನದವರು ಅವಧೂತದ ಮುಖ್ಯ ಲಕ್ಷಣದಂತೆ ಜಾತ್ಯತೀತತೆಯನ್ನು ಪಾಲಿಸುವವರಾಗಿದ್ದರು. ಭೂದಾನ ಕೊಟ್ಟ ಮನೆತನದವರು ಸತ್ತಾಗ ಹೂಳುತ್ತಿದ್ದದ್ಧು ಇದೇ ಜಮೀನಿನಲ್ಲಿ. ಈಗ ಆಶ್ರಮವು ಮಠವಾದ ಬಳಿಕ ಭೂದಾನ ನೀಡಿದ್ದ ಕುರುಬ ಮೂಲದ ಕುಟುಂಬದವರು ಸತ್ತಾಗ ಈ ಜಮೀನಿನಲ್ಲಿ ಹೂಳಗೊಡಲಿಲ್ಲ. ಕುಂಚಿಟಿಗರ ಜನಾಂಗದ ನಂಜಾವಧೂತ ಸ್ವಾಮೀಜಿ ಒಕ್ಕಲಿಗ ಮೂಲದ ಬಾಲಗಂಗಾಧರ ನಾಥ ಸ್ವಾಮೀಜಿಯವರ ನಿಕಟವರ್ತಿಯಾಗಿದ್ದರು. ಇವರು ನಾಥ ದೀಕ್ಷೆ ಪಡೆದಿರುವರೋ ಅಥವಾ ಅವಧೂತ ದೀಕ್ಷೆ ಪಡೆದಿರುವರೋ ಎಂಬುದು ಯಾರಿಗೂ ತಿಳಿಯದು. ನಾಥ ದೀಕ್ಷೆ ಪಡೆದಿದ್ದರೆ ನಂಜನಾಥ ಸ್ವಾಮೀಜಿ ಎಂದು ನಾಥದ ಹೆಸರನ್ನು ಕಟ್ಟಿಕೊಳ್ಳಬೇಕಿತ್ತು. ಬದಲಾಗಿ ಅವಧೂತ ಹೆಸರನ್ನೇ ಮುಂದುವರೆಸಿದ್ದಾರೆ. ಅವಧೂತ ಸ್ವಾಮೀಜಿಗಳು ನಾಥ ಕೇಂದ್ರವಾದ ಆದಿಚುಂಚನಗಿರಿ ಮಠಕ್ಕೆ ಸ್ವಾಮಿಯಾಗುವಂತಿಲ್ಲ. ನಂಜಾವಧೂತ ಸ್ವಾಮೀಜಿಯು ಮೂಲತಃ ಕುಂಚಿಟಿಗರ ಜನಾಂಗದ ಸ್ವಾಮೀಜಿ. ಒಕ್ಕಲಿಗ ಸ್ವಾಮೀಜಿ ಎಂದು ತನ್ನನ್ನು ಗುರುತಿಸಿಕೊಂಡರು. ಅವಧೂತದ ಆಶ್ರಮವು ಒಕ್ಕಲಿಗ ಮಠವಾಗಿ ರೂಪಾಂತರವಾಯಿತು. ಅನೇಕ ಕುಂಚಿಟಿಗರು ತಮ್ಮನ್ನು ಒಕ್ಕಲಿಗ ಜಾತಿಯಾಗಿ ಬದಲಿಸಿಕೊಂಡರು. ಅವಧೂತ ಮತ್ತು ನಾಥ ಎರಡೂ ಯೋಗಧಾರೆಗಳು ಜಾತಿಯ ಗುರುತನ್ನು ನಿರಾಕರಿಸುವ ಪ್ರಧಾನ ಲಕ್ಷಣವನ್ನು ಅಳವಡಿಸಿಕೊಂಡವುಗಳಾಗಿವೆ. ಈಗ ಈ ಯೋಗಧಾರೆಯ ಮಠಗಳು ಜಾತಿಯ ಗೂಟಕ್ಕೆ ಬಿಗಿದುಕೊಂಡಿವೆ. ಕಾಪಾಲಿಕ ನಾಥ ಜೋಗಿಗಳು ಆದಿಚುಂಚನಗಿರಿಯನ್ನು ಒಕ್ಕಲಿಗರ ಕೈವಶಕ್ಕೊಪ್ಪಿಸಿ ಆಚೆಗೆ ನಡೆದಂತೆಯೇ ಕುರುಬರು ಗುರು ಗುಂಡಬ್ರಹ್ಮೇಶ್ವರ ಮಠದ ತಮ್ಮ ಪೂರ್ವಿಕರ ಜಮೀನನ್ನು ಕುಂಚಿಟಿಗ ಒಕ್ಕಲಿಗರ ವಶಕ್ಕೆ ಕೊಟ್ಟು ಆಚೆ ನಡೆಯುವರೋ ಅಥವಾ ನ್ಯಾಯಯುಕ್ತವಾಗಿ ಹೋರಾಡಿ ಗೆಲ್ಲುವರೋ … ಕಾಯ್ದು ನೋಡೋಣ. ಲೇಖನ:ಡಾ.ವಡ್ಡಗೆರೆ ನಾಗರಾಜಯ್ಯ 872272474