i
ಪ್ರವಾಸ(ಹಾರಲು) ಮಾಡಲು ವಿಮಾನ ಎಷ್ಟು ಸುರಕ್ಷಿತ?:ವಿಜ್ಞಾನಿ ಡಾ.ಸಿ.ಎಂ. ಮಂಜುನಾಥ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಾಗರಿಕ ವಾಯು ಸಾರಿಗೆಯ ಕ್ರಮಬದ್ಧ ಬೆಳವಣಿಗೆ ಮತ್ತು ವಿಸ್ತರಣೆಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಇದರಿಂದಾಗಿ ಶಿವಮೊಗ್ಗದಂತಹ ಟೂ ಟೈರ್ ಸಿಟಿಗಳಲ್ಲೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಉತ್ತಮ ವಿಮಾನಯಾನ ನೀತಿಯಿಂದ ದೇಶ ಹಾಗೂ ರಾಜ್ಯದ ಆರ್ಥಿಕತೆಗೆ ಉತ್ತೇಜನ ದೊರೆಯುತ್ತದೆ ಎಂದು ಎಂದು ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್ಎಎಲ್)ನ ಮುಖ್ಯ ವಿಜ್ಞಾನಿ ಡಾ.ಸಿ.ಎಂ. ಮಂಜುನಾಥ್ ಹೇಳಿದರು.
ನಗರದ ಡಿವಿಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಭೌತಶಾಸ್ತ್ರ ವಿಭಾಗವು ಐಕ್ಯೂಎಸಿ ಸಹಯೋಗದೊಂದಿಗೆ ಇಂದು (೩೦-೦೬-೨೦೨೩ರ ಶುಕ್ರವಾರ) ಬೆಳಿಗ್ಗೆ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಾರಲು ನನ್ನ ವಿಮಾನ ಎಷ್ಟು ಸುರಕ್ಷಿತ? ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ವಿಮಾನಗಳ ಹಾರಾಟದಿಂದ ವಿವಿಧ ಉದ್ಯಮಗಳು, ಕೃಷಿ ಉತ್ಪನ್ನಗಳ ರಫ್ತು, ಪ್ರವಾಸೋದ್ಯಮ, ತುರ್ತು ಚಿಕಿತ್ಸಾ ಸೌಲಭ್ಯ, ಶಿಕ್ಷಣ ಮತ್ತು ತಂತ್ರಜ್ಞಾನದಲ್ಲೂ ಸಾಕಷ್ಟು ಅಭಿವೃದ್ಧಿ ಕಾಣಬಹುದು. ವಿಮಾನ ಯಾನ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ದೂರ ಕ್ರಮಿಸಬಹುದಾದ ವಾಯು ಸಾರಿಗೆಯ ಕ್ಷೇತ್ರವಾಗಿದೆ. ಜಗತ್ತಿನಾದ್ಯಂತ ೨೫೦ಕ್ಕೂ ಹೆಚ್ಚು ವಿಮಾನ ಸಂಸ್ಥೆಗಳಿದ್ದು, ದಿನ ನಿತ್ಯ ಸಾವಿರಾರು ವಿಮಾನಗಳು ಹಾರಾಟ ನಡೆಸುತ್ತಿವೆ. ವಿಮಾನ ಯಾನ ಸುರಕ್ಷಿತ ಸಾರಿಗೆ ಸಂಚಾರ ಮಾರ್ಗವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿವಿಎಸ್ ಕಾರ್ಯದರ್ಶಿ ಎಸ್. ರಾಜಶೇಖರ್, ಒಂದೆಡೆ ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರಕ್ಕೆ ಅನುಮತಿ ದೊರೆತಿದ್ದು, ಆಗಸ್ಟ್ ೧೧ರಂದು ವಿಮಾನ ಹಾರಾಟ ಆರಂಭವಾಗುವ ಸುದ್ದಿ ಪ್ರಕಟಗೊಂಡಿದೆ. ಮತ್ತೊಂದೆಡೆ ವಿಮಾನದಲ್ಲಿ ಅದರಲ್ಲೂ ಮೊದಲ ಬಾರಿಗೆ ಪ್ರಯಾಣಿಸಲು ಉತ್ಸುಕರಾಗಿರುವವರಿಗೆ ಹಾರಲು ನನ್ನ ವಿಮಾನ ಎಷ್ಟು ಸುರಕ್ಷಿತ? ಎಂಬ ಆತಂಕ, ಗೊಂದಲ, ಕುತೂಹಲ, ರೋಮಾಂಚನ ಸಹಜ ಎಂದರು.
ವಿಮಾನದ ಸುರಕ್ಷತೆ, ಪ್ರಯಾಣದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ, ವಿಮಾನದಲ್ಲಿ ನಮ್ಮ ಪ್ರಯಾಣ ಎಷ್ಟು ಸುರಕ್ಷಿತವಾಗಿದೆ ಎಂಬುದರ ಒಳನೋಟ, ವಿಮಾನ ಹಾರಾಟದ ಹಿಂದಿರುವ ವಿಜ್ಞಾನಿಗಳ ಪರಿಶ್ರಮ ಮತ್ತು ಮುಂದಿನ ಅಗತ್ಯತೆಗಳು ಹಾಗೂ ವಿದ್ಯಾರ್ಥಿಗಳಿಗಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಡಿವಿಎಸ್ನ ಜಂಟಿ ಕಾರ್ಯದರ್ಶಿ ಡಾ.ಎ. ಸತೀಶ್ ಕುಮಾರ್ ಶೆಟ್ಟಿ, ಕೋಶಾಧ್ಯಕ್ಷ ಬಿ. ಗೋಪಿನಾಥ್ ಆಗಮಿಸಿದ್ದರು. ಪ್ರಾಂಶುಪಾಲ ಡಾ.ಎಂ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಎನ್. ಕುಮಾರಸ್ವಾಮಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಗದೀಶ್ ಎ.ಎಸ್. ಉಪಸ್ಥಿತರಿದ್ದರು.
ಅನನ್ಯ ಭಟ್ ಎಸ್. ಪ್ರಾರ್ಥಿಸಿ, ಡಾ. ಜಗದೀಶ್ ಎ.ಎಸ್. ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಚಿತಾ ಜೋಯ್ಸ್ ನಿರೂಪಿಸಿ, ಡಾ. ಅವಿನಾಶ್ ಎ.ಬಿ. ವಂದಿಸಿದರು.
ವಿಜ್ಞಾನಿ ಮಂಜುನಾಥ್ ವಿದ್ಯಾರ್ಥಿಗಳಿಗೆ ಪ್ರೇರಣೆ–
ಮೂಲತಹಃ ಶಿವಮೊಗ್ಗದವರಾದ ಎನ್ಎಎಲ್ನ ಮುಖ್ಯ ವಿಜ್ಞಾನಿ ಡಾ.ಸಿ.ಎಂ. ಮಂಜುನಾಥ್ ಚನ್ನಗಿರಿಯಂತಹ ಸಾಮಾನ್ಯ ಶಾಲೆಯಿಂದ ವಿದ್ಯಾಭ್ಯಾಸ ಆರಂಭಿಸಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಪಡೆದು, ಅತ್ಯಂತ ಪ್ರತಿಷ್ಠಿತ ಲಂಡನ್ನ ಇಂಪೀರಿಯಲ್ ಫೆಲೋಶಿಪ್ ಪಡೆದಿದ್ದಾರೆ. ೫೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಜಗತ್ತಿನ ವಿವಿಧ ನಿಯತಕಾಲಿಕಗಳಲ್ಲಿ ಇವರ ೨೦೦ಕ್ಕೂ ಅಧಿಕ ಲೇಖನಗಳು ಪ್ರಕಟಗೊಂಡಿವೆ. ೧೫ ಪುಸ್ತಕಗಳನ್ನು ಬರೆದಿದ್ದಾರೆ. ಅತ್ಯುತ್ತಮ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದರೂ ಸಹ ಸರಳತೆಯ ಜೀವನ ಇವರದ್ದು. ಇಂತಹ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದು ಡಿವಿಎಸ್ನ ಜಂಟಿ ಕಾರ್ಯದರ್ಶಿ ಡಾ.ಎ. ಸತೀಶ್ ಕುಮಾರ್ ಶೆಟ್ಟಿ ಹೇಳಿದರು.