i
ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅವರ ಅಮೃತ ಭಾರತಕ್ಕೆ-ನುಡಿ ನಮನ ಪ್ರೊ.ಎಚ್.ಲಿಂಗಪ್ಪ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅವರ ಅಮೃತ ಭಾರತಕ್ಕೆ-ನುಡಿ ನಮನ ಪ್ರೊ.ಎಚ್.ಲಿಂಗಪ್ಪ ಆರ್ಥಿಕ ಚಿಂತಕರು, ಚಿತ್ರದುರ್ಗ
ನಾನು ಓರ್ವ ಕಲ್ಯಾಣ ಅರ್ಥಶಾಸ್ತ್ರ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರವನ್ನು ಕುರಿತು ಅಧ್ಯಯನ ಮತ್ತು ಅನುಭವದ ಹಿನ್ನಲೆಯಲ್ಲಿ ನಾನು ಈಗಾಗಲೇ ಲಿಖಿಸಿರುವ ಬುದ್ಧ-ಬಸವ-ಅಮಾರ್ಥ್ಯಸೇನ್ ಜನಕಲ್ಯಾಣ ಆರ್ಥಿಕ ಚಿಂತನೆ ಮತ್ತು ಲೋಕಹಿತ ಈ ಎರಡೂ ಕೃತಿಗಳಲ್ಲಿ ಜನಪರ, ಜೀವಪರ, ಅಭಿವೃದ್ಧಿಪರ ಹಾಗೂ ಮೂಲ ಸೌಕರ್ಯಗಳನ್ನು ದಕ್ಕಿಸಿಕೊಳ್ಳಲು ಸರ್ಕಾರಗಳು ಯಾವ ಕ್ರಮಗಳನ್ನು ಸ್ವಾತಂತ್ರ್ಯ ನಂತರದ ದಿನಮಾನಗಳಲ್ಲಿ ತೆಗೆದುಕೊಂಡ ನಿಲುವುಗಳ ಅರ್ಥಶಾಸ್ತ್ರವನ್ನು ಚರ್ಚಿಸಿದಂತಹ ವಿಚಾರಗಳನ್ನು ನನ್ನ ಎರಡೂ ಕೃತಿಗಳು ಧ್ವನಿಸುತ್ತವೆ. ಇಂತಹ ಒಂದೆರಡೂ ಸಾಲಿನ ಪ್ರಾಸ್ತವಿಕ ಮಾತುಗಳು ಈ ಸಂದರ್ಭದಲ್ಲಿ ಅಗತ್ಯವೆಂದು ಭಾವಿಸಿ ಅಮೃತ ಭಾರತಕ್ಕೆ ನನ್ನ ನುಡಿ ನಮನಗಳು.
ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರು ಲಿಖಿಸಿರುವ ಅಮೃತ ಭಾರತ – ಸ್ವಾತಂತ್ರ್ಯೋತ್ತರ ಭಾರತದ ಅಭಿವೃದ್ಧಿಯ ಕಥನ ಎಂಬ ಕೃತಿ ೨೦೨೩ರ ಜೂನ್ ತಿಂಗಳಲ್ಲಿ ಲೋಕಾರ್ಪಣೆಗೊಂಡಿದೆ. ಈ ಕೃತಿಯ ಒಟ್ಟು ಪುಟಗಳ ಸಂಖ್ಯೆ ೬೦೮. ಸುಮಾರು ೧೧ ಭಾಗಗಳಲ್ಲಿ ಅವರ ವಿಷಯ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಅಭಿವೃದ್ಧಿ ಅವಲೋಕನ, ಅಭಿವೃದ್ಧಿ ಮತ್ತು ಸಾಮಾಜಿಕ ಆರ್ಥಿಕ ನ್ಯಾಯ, ಅಭಿವೃದ್ಧಿ ಮತ್ತು ರಾಜಕೀಯ, ಅಭಿವೃದ್ಧಿ ಮತ್ತು ಸಹಕಾರಿ ಚಳುವಳಿ, ಅಭಿವೃದ್ಧಿ ಮತ್ತು ಪರಿಸರ, ಅಭಿವೃದ್ಧಿ ಮತ್ತು ಶಿಕ್ಷಣ, ಅಭಿವೃದ್ಧಿ ಮತ್ತು ಮುಂಗಡಪತ್ರ, ಅಭಿವೃದ್ಧಿ ಮತ್ತು ಕೋವಿಡ್, ಅಭಿವೃದ್ಧಿ ಮತ್ತು ಸಮೂಹ ಮಾಧ್ಯಮಗಳ, ಅಭಿವೃದ್ಧಿ ಮತ್ತು ಸೈಧ್ಯಾಂತಿಕ ಪ್ರೇರಣೆಗಳು, ಅಭಿವೃದ್ಧಿಯ ಮುಂದಿನ ಹಾದಿ ಈ ಎಲ್ಲಾ ವಿಷಯಗಳು ಈ ಕೃತಿಯ ಗರ್ಭದಲ್ಲಿ ಅಡಕವಾಗಿವೆ. ಜೊತೆಗೆ ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕ, ಸುದ್ದಿ ಗಿಡುಗ, ಚಂದ್ರವಳ್ಳಿ, ನಳಂದ, ಜನಾಶ್ರಯ, ನ್ಯಾಯಪಥ, ಸಂಕ್ರಮಣ, ಸಮಾಜಮುಖಿ, ಭೀಮವಾದ ಮತ್ತು ಹೊಸತು ಪತ್ರಿಕೆಗಳಲ್ಲಿ ಇಲ್ಲಿ ಬರುವ ಲೇಖನಗಳು ಪ್ರಕಟವಾಗಿದ್ದು, ಅವುಗಳ ಸಂಚೀಕರಣವನ್ನು ಅತ್ಯಂತ ವೈಜ್ಞಾನಿಕವಾಗಿ ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗಿಸುವಂತಹ ಜಾಗತೀಕರಣದ ಛಾಯೆಯಿಂದ ಅಮೂರ್ತಗೊಂಡಂತಹ ಅತ್ಯಂತ ವಿಶಿಷ್ಟವಾದ ನವನೀತವಾದಂತಹ ವಿಚಾರಗಳ ಪಥದ ಓಘದ ವಿಶ್ಲೇಷಣೆಗಳು ಅಪಾರವಾಗಿ ಸಂಗ್ರಹಗೊಂಡಿರುವ ಒಂದು ಅಪರೂಪದ ವಿಶೇಷ ಅಕರ ಗ್ರಂಥವಾಗಿ ಒಡಮೂಡಿರುವುದು ಎಲ್ಲರಿಗೂ ಅದರಲ್ಲಿಯೂ ವಿಶೇಷವಾಗಿ ಅರ್ಥಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ಹೋರಾಟಗಾರರಿಗೂ ಅತ್ಯಂತ ಪ್ರಿಯವಾದ ಪುಸ್ತಕವಾಗಿದೆ ಎಂಬುವುದರಲ್ಲಿ ಯಾವ ಅನುಮಾನವೂ ಬೇಡ.
ಈ ಕೃತಿಯಲ್ಲಿ ಋಣಾತ್ಮಕ ಅಂಶಗಳಿಗಿಂತ ಧನಾತ್ಮಕವಾದ ಅಂಶಗಳು ಈ ಹೊತ್ತಿನ ಸಂದರ್ಭದಲ್ಲಿ ಅಭಿವೃದ್ಧಿಯ ಕನಿಷ್ಠ ಪ್ರಜ್ಞೆಯನ್ನು ಮೈಗೂಡಿಸಿಕೊಂಡ ಆಡಳಿತಗಾರರು ಈ ಪುಸ್ತಕದ ಜೀವ ದ್ರವ್ಯವನ್ನು ಸ್ವೀಕರಿಸುವುದರಿಂದ ಸಮಾಜಕ್ಕೆ, ಸಮುದಾಯಕ್ಕೆ, ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಒಳಿತಾಗುತ್ತದೆ ಎಂಬ ಬಲವಾದ ಗ್ರಹಿಕೆ ನನ್ನದು. ಅದರಲ್ಲಿಯೂ ವಿಶೇಷವಾಗಿ ಸ್ನಾತಕ ಅರ್ಥಶಾಸ್ತ್ರವನ್ನು ಕಲಿಸುವ ಮತ್ತು ಕಲಿಯುವ ಹಾಗೂ ಸ್ನಾತಕೋತ್ತರ ಅರ್ಥಶಾಸ್ತ್ರವನ್ನು ಕಲಿಸುವ ಮತ್ತು ಕಲಿಯುವ ಒಂದು ಕಾಲದ ಭಾರತದ ಅರ್ಥ ವ್ಯವಸ್ಥೆಯ ಬದಲಾಗಿ ಅಮೃತ ಭಾರತವನ್ನು ನಮ್ಮ ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳಲ್ಲಿ ಈ ಕೃತಿಯನ್ನು ಅಳವಡಿಸಿಕೊಂಡರೇ ಅರ್ಥಶಾಸ್ತ್ರದ ಚಿಂತನೆಗೆ ಭಾರವಲ್ಲದೆ ಸರಿಯಾದುದ್ದನ್ನು ಕಲಿಸಿದೆವು ಮತ್ತು ಕಲಿತೆವು ಎಂಬ ಸಂತೋಷವು ಒಡಮೂಡುತ್ತದೆ. ಈ ಪುಸ್ತಕವನ್ನು ಪ್ರಚಾರಕ್ಕಾಗಲಿ ಹಾಗೂ ಜನಪ್ರೀತಿಗಾಗಲಿ ಮೆಚ್ಚಿಸುವಂತಹ ಕೃತಿಯಲ್ಲ. ಆದರೆ ಈ ಭಾರತೀಯ ಸಮಾಜದ ಒಡಲಲ್ಲಿ ಬದುಕುವ ನಾವೆಲ್ಲರೂ ಬದಲಾಗುವ ಅರ್ಥ ವ್ಯವಸ್ಥೆಗೆ ಬದಲಾಗುವುದು ಸೂಕ್ತವಲ್ಲವೇ ಈ ಕೃತಿಯಲ್ಲಿ ಕ್ರಿಸ್ತಪೂರ್ವ ೫ನೇ ಶತಮಾನದ ಬುದ್ಧನ ವಿಚಾರ ಪಥವುಂಟು. ೧೨ನೇ ಶತಮಾನದ ಬಸವನ ಆಲೋಚನೆಗಳುಂಟು. ೧೯ನೇ ಶತಮಾನದ ಗಾಂಧಿಯ ಸರಳ ಚಿಂತನೆಗಳುಂಟು. ಇತರ ಸಾಕಷ್ಟು ಆರ್ಥಿಕ ಚಿಂತಕರ ಜಿಜ್ಞಾಸೆಯನ್ನು ಕೂಡ ಪ್ರಸ್ತಾಪಿಸಲಾಗಿದೆ. ಆದರೆ ವಿಧಿಬದ್ಧವಾಗಿ, ಸಂವಿಧಾನ ಬದ್ಧವಾಗಿ, ಇಷ್ಟೊಂದು ಮಾಹಿತಿಗಳು ಹರಿದು ಬಂದಿರುವುದು ಭೀಮಭಾರತ ಅಂದರೆ, ಅಂಬೇಡ್ಕರ್ ಭಾರತದ ಸಂಪೂರ್ಣ ಛಾಯೆ ಈ ಅಮೃತ ಭಾರತದಲ್ಲಿ ಅಡಕವಾಗಿದೆ. ಈ ಕೃತಿಯಲ್ಲಿ ಹಸಿವು, ಬಡತನ, ಅಜ್ಞಾನ, ಅನಕ್ಷರತೆ, ನಿರುದ್ಯೋಗ, ಲಿಂಗ ತಾರತಮ್ಯ, ಧರ್ಮಭೇದ, ವರ್ಣಭೇದ, ಪ್ರಾದೇಶಿಕಭೇದ, ಸಂಪನ್ಮೂಲಗಳ ಸಬಲೀಕರಣ ಒಟ್ಟಾರೆ ಅಭಿವೃದ್ಧಿಯ ನೋಟದ ದಿಕ್ಸೂಚಿಯೂ ಜಲರಾಶಿಯಂತೆ ಅಂಕಿ-ಅಂಶಗಳ ಸಂಗ್ರಹ ಕೋಷ್ಟಕ ಅಥವ ಅನುಸೂಚಿ ಪಟ್ಟಿ, ರೇಖ ವಿನ್ಯಾಸ, ವಿಶೇಷವಾಗಿ ಸಂಖ್ಯಾ ಶಾಸ್ತ್ರ ಮತ್ತು ಗಣಿತ ಶಾಸ್ತ್ರದ ಮಾದರಿಯಲ್ಲಿ ಸಂಶೋಧನಾ ಪ್ರಬಂಧದ ರೂಪದಲ್ಲಿ ತುಂಬಿ-ತುಳುಕುತ್ತಿದೆ.
ಇಂತಹ ಕೃತಿಗಳನ್ನು ಅಗತ್ಯವಾಗಿ ರೈತ ಹೋರಾಟಗಾರರು, ಕೂಲಿ-ಕಾರ್ಮಿಕ ಹೋರಾಟಗಾರರು, ತುಳಿತಕ್ಕೊಳಗಾದ ಸಂಘಟಕರು, ಪ್ರಗತಿಪರರು, ವೈಚಾರಿಕ ನೆಲೆಯಲ್ಲಿ ಚಿಂತಿಸುವಂತಹ ತಾಯಿಯ ಎದೆಹಾಲಿನಂತೆ ಸವಿಯುವಂತಹ ಮನೋಭಾವ ಈ ಕೃತಿಯನ್ನು ಗ್ರಹಿಸುವುದರ ಮೂಲಕ ವಿಚಾರಗಳು ದಕ್ಕುತ್ತವೆ ಎಂಬುವುದು, ಜೊತೆಗೆ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಈ ಕೃತಿಯನ್ನು ಪರೀಕ್ಷಾ ದೃಷ್ಟಿಯಿಂದ ಬಳಸಿಕೊಳ್ಳಲು ಸಂಬಂಧಪಟ್ಟ ಆಡಳಿತ ಮತ್ತು ಸರ್ಕಾರ ಪರಿಗ್ರಹಿಸಿದರೆ ಈ ಕೃತಿಯ ಕರ್ತೃವಿಗೆ ಗೌರವ ದಕ್ಕುತ್ತದೆ. ಮೂಲತಃ ಅರ್ಥಶಾಸ್ತ್ರಜ್ಞರಾಗಿ ವಾಣಿಜ್ಯ ವಿಷಯದ ಬೋಧಕರಾಗಿ ಕಾಲೇಜು ಆಡಳಿತ ಮಂಡಳಿಯ ಪ್ರಾಂಶುಪಾಲರಾಗಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಮಾಹಿತಿಕೋಶದ ಸದಸ್ಯರಾಗಿ, ನಾಟಕಕಾರರಾಗಿ, ಕವಿಯಾಗಿ, ಜನಪ್ರಿಯ ಲೇಖಕರಾಗಿ, ಹಸಿದವರ ಸಹಪಾಟಿಯಾಗಿ ಹಾಗೂ ಎಲ್ಲದ್ದಕ್ಕಿಂತ ಮಿಗಿಲಾಗಿ ಶಿಕ್ಷಣತಜ್ಞ ಮಾನವಪರ ಜೀವಿಯಾದ ಇವರ ಸಾಧನೆಗೆ ನ್ಯಾಯಸಿಗುತ್ತದೆ. ಆ ಕಾರಣದಿಂದ ಅವರ ಕೃತಿಗೆ ಒಂದೆರಡು ಸತ್ಯ ದರ್ಶನದ ನುಡಿ ನಮನಗಳನ್ನು ಸಲ್ಲಿಸುತ್ತೇನೆ.