i
ಸಿಎಂ ಹುದ್ದೆ ಮಾರಾಟಕ್ಕಿಟ್ಟಿದ್ದ ಬಿಜೆಪಿ ವಿರೋಧ ಪಕ್ಷದ ನಾಯಕನ ಹುದ್ದೆ ಮಾರಾಟಕ್ಕೆ ಇಟ್ಟಿದೆಯೇ?…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿಯ 66 ಶಾಸಕರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಇರುವ ಒಬ್ಬೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು. ಕರ್ನಾಟಕದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ ಎಂದು ಕೆಪಿಸಿಸಿ ಘಟಕ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದೆ.
ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ ಘಟಕ, ರಾಜ್ಯ ಬಿಜೆಪಿ ಪಕ್ಷವು ಅಧಿಕಾರದಲ್ಲಿದ್ದಾಗಲೂ ಪ್ರಜಾಪ್ರಭುತ್ವವನ್ನು ಗೌರವಿಸಲಿಲ್ಲ, ವಿಪಕ್ಷದಲ್ಲಿದ್ದಾಗಲೂ ಗೌರವಿಸುತ್ತಿಲ್ಲ. ವಿರೋಧ ಪಕ್ಷದ ನಾಯಕನ ಹುದ್ದೆಯನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಮುಖ್ಯಮಂತ್ರಿ ಹುದ್ದೆಗೆ ₹2,500 ಕೋಟಿ ಫಿಕ್ಸ್ ಮಾಡಲಾಗಿತ್ತು, ವಿರೋಧ ಪಕ್ಷದ ನಾಯಕನ ಹುದ್ದೆ ಎಷ್ಟಕ್ಕೆ ಬಿಕರಿಯಾಗುತ್ತಿದೆ? ಆ ಚೌಕಾಶಿ ವ್ಯವಹಾರಕ್ಕಾಗಿಯೇ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆಯೇ? ಎಂದು ತೀಕ್ಷ್ಣವಾಗಿ ಕಾಂಗ್ರೆಸ್ ಟೀಕಿಸಿ ಕರ್ನಾಟಕದ ಬಿಜೆಪಿ ಇದಕ್ಕೆ ಉತ್ತರಿಸಬೇಕು ಎಂದು ತಾಕೀತು ಮಾಡಿದೆ.
ಸದನ ಪ್ರಾರಂಭವಾಗುವ ಮೊದಲೇ ವಿಪಕ್ಷ ನಾಯಕನ ಆಯ್ಕೆಯಾಗುತ್ತದೆ ಎಂದಿದ್ದ ಹೇಳಿದ್ದ ಬಿಜೆಪಿ ಈಗ ಏಕೆ ಮೌನ ವಹಿಸಿದೆ. ಬಿಜೆಪಿಯ ಮಾತಿನ ಬಗ್ಗೆ ಬಿಜೆಪಿಗೇ ಗ್ಯಾರಂಟಿ ಇಲ್ಲ, ಅವರ ನಾಯಕರಿಗೇ ಅವರ ಪಕ್ಷದ ಮೇಲೆ ಭರವಸೆ ಇಲ್ಲ, ಬಿಜೆಪಿ ಹೈಕಮಾಂಡಿಗೆ ಆಪರೇಷನ್ ಕಮಲಕ್ಕಿರುವ ಆಸಕ್ತಿ ವಿಪಕ್ಷ ನಾಯಕನ ಆಯ್ಕೆಯಲ್ಲಿಲ್ಲ. ಅಮಿತ್ ಶಾ ಅವರು ಮಹರಾಷ್ಟ್ರದ ಆಪರೇಷನ್ ಕಮಲದಲ್ಲಿ ಬ್ಯುಸಿಯಾಗಿದ್ದರಿಂದ ಕರ್ನಾಟಕದ ನಾಯಕರ ಕಡೆ ತಿರುಗಿ ನೋಡಲಿಲ್ಲವೇ? ಸರ್ಕಾರ ರಚನೆ ಆಯ್ತು, ನಮ್ಮ ಸರ್ಕಾರ ಟೆಕಾಫ್ ಆಗಿ ಹಲವು ದಿನಗಳಾಯ್ತು, ನಮ್ಮ ಗ್ಯಾರಂಟಿ ಯೋಜನೆಗಳ ಜಾರಿಯೂ ಆಯ್ತು, ಡಿಯರ್ ಕರ್ನಾಟಕ ಬಿಜೆಪಿ ಸದನವೂ ಪ್ರಾರಂಭವಾಯ್ತು. ಎಲ್ಲಿ ನಿಮ್ಮ ವಿರೋಧ ಪಕ್ಷದ ನಾಯಕ?, ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಗ್ಯಾರಂಟಿಯನ್ನೂ ಕೊಡಲಾಗುತ್ತಿಲ್ಲ ಎಂದರೆ ಎಂತಹ ಹಿನಾಯ ಸ್ಥಿತಿಯಲ್ಲಿದೆ! ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಮನಬಂದಂತೆ ಪ್ರಶ್ನಿಸಿ ಟೀಕಿಸಿದೆ.