i
ಜೆಡಿಎಸ್ ಬಲವರ್ಧನೆಗೆ ಒತ್ತು, ತಾಲೂಕು, ಜಿಲ್ಲಾ, ರಾಜ್ಯ ಘಟಕಗಳ ಪುನಾರಚನೆ ಶೀಘ್ರ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಂಚರತ್ನ ರಥ ಯಾತ್ರೆಯೊಂದಿಗೆ ಹೆಚ್ಚಿನ ಗಮನ ಸೆಳೆದಿದ್ದ ಜೆಡಿಎಸ್ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಳಪೆ ಸಾಧನೆ ಮಾಡುವ ಮೂಲಕ ತೀರಾ ಮುಜುಗರ ಅನುಭವಿಸಿತು.
ಪಕ್ಷದ ಹೀನಾಯ ಸೋಲಿನೊಂದಿಗೆ ಇನ್ನೇನು ಜೆಡಿಎಸ್ ಪಕ್ಷದ ಕತೆ ಮುಗಿಯಿತು, ಇವರು ಯಾವುದಾದರೊಂದು ಪಕ್ಷದೊಂದಿಗೆ ವಿಲೀನ ಆಗುವುದೇ ಮೇಲೂ ಎನ್ನುವ ವಾತಾವರಣ ನಿರ್ಮಾಣವಾಗಿದೆ ಎಂದು ಇವರ ವಿರೋಧಿಗಳು ಟೀಕಿಸುತ್ತಿರುವ ಮಧ್ಯಯೇ ಜೆಡಿಎಸ್ ವರಿಷ್ಠರು ಸೋಲಿನ ಆತ್ಮಾವಲೋಕನ ಸಭೆಯನ್ನು ಬೆಂಗಳೂರಿನ ಜೆಪಿ ಭವನದಲ್ಲಿ ಆಯೋಜಿಸಿ ಪಕ್ಷ ಬಲವರ್ಧನೆಗೆ ಒತ್ತು ನೀಡಲಾಗುತ್ತದೆ ಎಂದು ಜೆಡಿಎಸ್ ವರಿಷ್ಠರು, ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ರಾಜ್ಯದ ಜನತೆಗೆ ಸಂದೇಶ ರವಾನೆ ಮಾಡಿದ್ದಾರೆ.
ವಿಧಾನಮಂಡಲ ಅಧಿವೇಶನ, ಪಕ್ಷದ ಬಲವರ್ಧನೆ, ತಾಲೂಕು, ಜಿಲ್ಲಾ, ರಾಜ್ಯ ಘಟಕಗಳ ಪುನಾರಚನೆ, ನೂತನ ಕೋರ್ ಕಮಿಟಿ ರಚನೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಮಾಜಿ ಪ್ರಧಾನಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರ ಸಮಕ್ಷಮದಲ್ಲಿ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಜೆಡಿಎಸ್ ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಈ ಸಭೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾನ್ಯ ಮಾಜಿ ಪ್ರಧಾನಿಗಳು ಎಲ್ಲರಿಗೂ ಸೂಕ್ತ ಮಾರ್ಗದರ್ಶನ ಮಾಡಿದರು ಹಾಗೂ ಸಂಘಟನೆ ದೃಷ್ಟಿಯಿಂದ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳಲಾಯಿತು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ ತಿಳಿಸಿದ್ದಾರೆ.