i
ಸರ್ಕಾರಿ ಮೆಡಿಕಲ್ ಕಾಲೇಜ್ ಇಂಗಳದಾಳ್ ಗ್ರಾಮದ ಸರ್ಕಾರಿ ಜಾಗದಲ್ಲೇ ಆರಂಭಿಸಲಿ-ಲಿಂಗಣ್ಣ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಕ್ಕೆ ಜಾಗದ ವಿಘ್ನ ಆಗಬಾರದು, ಕೂಡಲೇ ಜಿಲ್ಲಾಡಳಿತ, ಲೋಕಸಭಾ ಸದಸ್ಯರು, ಜಿಲ್ಲೆಯ ಆರು ಜನ ಶಾಸಕರು ಒಟ್ಟಿಗೆ ಕೂತು ಚಿತ್ರದುರ್ಗ ಸಮೀಪದ ಇಂಗಳದಾಳ್ ಗ್ರಾಮದ ಸರ್ಕಾರಿ ಜಾಗದಲ್ಲೇ ಮೆಡಿಕಲ್ ಕಾಲೇಜ್ ಆರಂಭಿಸಬೇಕು ಎಂದು ಶ್ರೀ ಕೆಂಚಾಂಬಾದೇವಿ ಸೇವಾ ಸಮಿತಿ ಟ್ರಸ್ಟ್ ಕಾರ್ಯದರ್ಶಿ ಟಿ.ಲಿಂಗಣ್ಣ ಅವರು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಹಿಂದುಳಿದ ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರಾಗಿ 150 ಸೀಟುಗಳನ್ನು ಪ್ರಸ್ತುತ ವರ್ಷದಲ್ಲೇ ಪ್ರವೇಶಾತಿ ಕಲ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ವೈದ್ಯಕೀಯ ಸಮಿತಿ ಸೂಚನೆ ನೀಡಿರುವುದು ಸಂತೋಷದ ವಿಷಯ. ಆದರೆ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆ ಸಮೀಪ ಅಥವಾ ಚಿಕ್ಕಪ್ಪನಹಳ್ಳಿ ಸಮೀಪ ಹಾಗೂ ಇಂಗಳದಾಳ್ ಸಮೀಪದ 80 ಎಕರೆ ಜಾಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಿಸಲು ಪರಿಶೀಲನೆ ಮಾಡಲಾಗುತ್ತಿದೆ ಎನ್ನುವ ವಿಷಯ ಮಾಧ್ಯಮಗಳಲ್ಲಿ ಬಂದಿದೆ. ಆದರೆ ಜಾಲಿಕಟ್ಟೆ ಅಥವಾ ಚಿಕ್ಕಪ್ಪನಹಳ್ಳಿ ಸಮೀಪ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಿಸಿದರೆ ಅಷ್ಟೊಂದು ಪ್ರಯೋಜನವಾಗುವುದಿಲ್ಲ. ಬದಲಿಗೆ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿಕೊಂಡಂತೆ ಇಂಗಳದಾಳ್ ಗ್ರಾಮದ ಸರ್ಕಾರಿ ಜಮೀನಿನಲ್ಲೇ ಮೆಡಿಕಲ್ ಕಾಲೇಜ್ ಆರಂಭಿಸಿದರೆ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಏಕೆಂದರೆ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗ ತಾಲೂಕುಗಳಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳು ಆಗುತ್ತಿವೆ. ಎಲ್ಲದೆ ಈ ತಾಲೂಕುಗಳಲ್ಲಿ ಸಾಕಷ್ಟು ಅಪಘಾತ ವಲಯಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಜೊತೆಗೆ ಈಗಾಗಲೇ ಕುಂಚಿಗನಾಳ್ ಗ್ರಾಮದ ಸರ್ಕಾರಿ ಜಾಗದಲ್ಲಿ ಜಿಲ್ಲಾಡಳಿತದ ಕಚೇರಿ ಆಗುತ್ತಿದೆ. ಕೇಂದ್ರೀಯ ವಿದ್ಯಾಲಯ ಆರಂಭಿಸಲು ಇಂಗಳದಾಳ್ ಗ್ರಾಮದ ಸರ್ಕಾರಿ ಜಾಗ ಗುರುತಿಸಲಾಗಿದ್ದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಹಾಗಾಗಿ ಸರ್ಕಾರಿ ಮೆಡಿಕಲ್ ಕಾಲೇಜ್ ಅನ್ನು ಇಂಗಳದಾಳ್ ಗ್ರಾಮದ ಸರ್ಕಾರಿ ಜಾಗದಲ್ಲೇ ಆರಂಭಿಸಬೇಕೆಂದು ಶ್ರೀ ಕೆಂಚಾಂಬಾದೇವಿ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಎಸ್.ಎ.ಜಯಣ್ಣ, ಕಾರ್ಯದರ್ಶಿ ಟಿ.ಲಿಂಗಣ್ಣ, ಕೆ.ಎಲ್.ಜಯಣ್ಣ, ಅಂಜಿನಪ್ಪ, ಕೆ.ಗಿರಿಯಪ್ಪ, ಆರ್.ಸಿದ್ದೇಶ್, ಮಹಾಲಿಂಗಪ್ಪ, ನಿಂಗೇಶ್, ಲಕ್ಷ್ಮ್ಮಮ್ಮ, ತಿಪ್ಪೇಸ್ವಾಮಿ, ಎಸ್.ಎಲ್.ಉಮೇಶ್, ರಾಘವೇಂದ್ರ ಸೇರಿದಂತೆ ಮತ್ತಿತರರು ಒತ್ತಾಯಿಸಿದ್ದಾರೆ.