i
ಶಿಕ್ಷಣದ ಜೊತೆ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕಿದೆ-ಉಪ ಕುಲಪತಿ ಡಾ.ಎಂ.ವೆಂಕಟೇಶ್ವರುಲು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಿಕ್ಷಣದ ಜೊತೆ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಎಂ.ವೆಂಕಟೇಶ್ವರುಲು ಹೇಳಿದರು.
ಆರ್ಯವೈಶ್ಯ ಸಂಘ, ಆರ್ಯವೈಶ್ಯ ಸಹ ಸಂಸ್ಥೆಗಳ ಸಹಕಾರದೊಂದಿಗೆ ವಿಶ್ವ ವಾಸವಿ ಜಗದ್ಗುರು ಮಹಾಸಂಸ್ಥಾನಂ, ವಾಸವಿ ಪೀಠಂನ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರ ಪೀಠಾರೋಹಣದ ಎರಡನೆ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಎರಡು ದಿನಗಳ ಕಾಲ ನಗರದಲ್ಲಿ ನಡೆದ ಭಕ್ತಿ ಸಿಂಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಆರ್ಯವೈಶ್ಯ ಜನಾಂಗ ವಿಶ್ವಕ್ಕೆ ಮಾದರಿಯಾಗಿದ್ದೇವೆ. ಈಗ ಜನಾಂಗಕ್ಕೆ ಗುರು ಸಿಕ್ಕಿದ್ದಾರೆ. ಗುರಿಯೂ ಇದೆ. ಹಾಗಾಗಿ ಗುರುಗಳು ನಮ್ಮ ಯುವ ಪೀಳಿಗೆ. ಮಧ್ಯಮ ವಯಸ್ಕರು ಹಾಗೂ ವಯೋವೃದ್ದರಿಗೆ ಮಾರ್ಗದರ್ಶನ ನೀಡಬೇಕು. ಒಂದು ಕಾಲದಲ್ಲಿ ಆರ್ಯ ಜನಾಂಗವೆಂದರೆ ಕೇವಲ ವ್ಯಾಪರಕ್ಕಷ್ಟೆ ಸೀಮಿತವಾಗಿದ್ದರು. ಈಗ ಉದ್ಯೋಗದವನ್ನು ಪಡೆದಿದ್ದಾರೆ. ಲಕ್ಷ್ಮಿ-ಸರಸ್ವತಿ ಕಟಾಕ್ಷವಿದೆ. ಆರ್ಯ ವೈಶ್ಯ ಸಮಾಜದ ಮಕ್ಕಳು ಬೇರೆಯವರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿವೆ. ಆದರೆ ನಮ್ಮ ಜನಾಂಗದ ಯಾರು ಸೌಲತ್ತುಗಳನ್ನು ಪಡೆದುಕೊಳ್ಳುತ್ತಿಲ್ಲ. ಸರ್ಕಾರದ ಜೊತೆ ಜನ ಸೇವೆ ಮಾಡುತ್ತಿದ್ದಾರೆ. ಆರ್ಯವೈಶ್ಯ ಜನಾಂಗ ಯಾರ ಜೇಬಿಗೂ ಕತ್ತರಿ ಹಾಕುವವರಲ್ಲ. ಪೀಠದಿಂದ ಉಪದೇಶ ಸಿಗಬೇಕಿದೆ. ಹಿಂದಿನಿಂದಲೂ ದಾನ ಮಾಡುವುದು ಆರ್ಯವೈಶ್ಯರ ಹಿರಿಮೆ. ಶಿಕ್ಷಣ, ವ್ಯವಹಾರ, ಕೈಗಾರಿಕೆ ಎಲ್ಲಾ ಕ್ಷೇತ್ರದಲ್ಲಿಯೂ ನಮ್ಮ ಜನಾಂಗ ನಿಸ್ವಾರ್ಥ ಸೇವೆ ಮಾಡುತ್ತಿದೆ. ಶಿಸ್ತು, ಸಮಯ ಪಾಲನೆ ಮುಖ್ಯ. ಆಗ ಮಾತ್ರ ಅಭಿವೃದ್ದಿಯಾಗಲು ಸಾಧ್ಯ ಎಂದು ಕರೆ ನೀಡಿದ ಡಾ.ಎಂ.ವೆಂಕಟೇಶ್ವರುಲು ಹಿಂದೂ ಸನಾತನ ಧರ್ಮ ಪ್ರಚಾರಕ್ಕೆ ನಮ್ಮ ಗುರುಗಳಿಗೆ ಹಾರ್ಡ್ವರ್ಡ್ ವಿಶ್ವವಿದ್ಯಾನಿಲಯ ಆಹ್ವಾನಿಸಿರುವುದು ಇಡಿ ಆರ್ಯವೈಶ್ಯ ಜನಾಂಗಕ್ಕೆ ಹಿರಿಮೆ ಎಂದು ಪ್ರಶಂಶಿಸಿದರು.
ಭಕ್ತಿ ಸಿಂಚನ ಕಾರ್ಯಕ್ರಮದ ಸ್ವಾಗತ ಸಮಿತಿ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಭದ್ರಿನಾಥ್ ಮಾತನಾಡಿ ಜನಸಂಖ್ಯೆಯಲಿಕಡಿಮೆಯಿದ್ದರೂ ಆರ್ಯವೈಶ್ಯ ಜನಾಂಗ ಇಡಿ ವಿಶ್ವದಲ್ಲಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕೊಡುಗೈ ದಾನಿಗಳು ಎಂದೆನಿಸಿಕೊಂಡಿದ್ದಾರೆ. ಹತ್ತು ವರ್ಷದಿಂದ ನಮಗೆ ಕುಲಗುರುಗಳು ಇರಲಿಲ್ಲ. ಈಗ ಗುರುಗಳು ಸಿಕ್ಕಿದ್ದಾರೆ. ಸರಿಯಾದ ಮಾರ್ಗದರ್ಶನವಿಲ್ಲದಿದ್ದರೆ ನಮ್ಮ ಜನಾಂಗದ ಯುವ ಪೀಳಿಗೆ ದಿಕ್ಕುತಪ್ಪಬಹುದು. ಅದಕ್ಕಾಗಿ ಗುರುಗಳು ಮಾರ್ಗ ತೋರಬೇಕು ಎಂದು ವಿನಂತಿಸಿದರು.
ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಜಗತ್ತಿನ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಹಿಂದೂ ಧರ್ಮದ ಭಗವದ್ಗೀತೆ ಅಧ್ಯಯನವಾಗುತ್ತಿದೆ. ದುರಂತವೆಂದರೆ ನಮ್ಮ ದೇಶದ ಯಾವ ವಿಶ್ವವಿದ್ಯಾನಿಲಯಗಳಲ್ಲಿಯೂ ಭಗವದ್ಗೀತೆ ಅಧ್ಯಯನವಾಗುತ್ತಿಲ್ಲದಿರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು.
ಹಿಂದೂ ಧರ್ಮದ ತಳಹದಿ ಭಗವದ್ಗೀತೆ ಉಪನಿಷತ್ನ್ನು ಎಲ್ಲರೂ ಕಲಿಯಬೇಕು. ಹಾರ್ಡ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಹಿಂದೂ ಸನಾತನ ಧರ್ಮ ಪ್ರಚಾರಕ್ಕೆ ನನಗೆ ಆಹ್ವಾನ ಬಂದಿದೆ. ಎಂಟು ತಿಂಗಳ ಕಾಲ ಅಲ್ಲಿದ್ದು, ಉಪನ್ಯಾಸ ನೀಡುತ್ತೇನೆ. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಸಾಕಷ್ಟು ಅವಕಾಶವಿದೆ. ಶಿಕ್ಷಣದ ಜೊತೆ ಸಂಸ್ಕೃತಿ, ಆಚರಣೆ, ಧರ್ಮದ ಮಹತ್ವ ತಿಳಿಸಬೇಕಿದೆ. ನಮ್ಮ ದೇವಸ್ಥಾನಗಳನ್ನು ನಾವುಗಳು ಕಾಪಾಡಿಕೊಳ್ಳಬೇಕು. ಚರಿತ್ರೆಯಿರುವ ಆರ್ಯವೈಶ್ಯ ಸಮಾಜವನ್ನು ಗಟ್ಟಿಯಾಗಿಟ್ಟುಕೊಂಡು ಮುಂದೆ ತೆಗೆದುಕೊಂಡು ಹೋಗುವಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಸೂಚಿಸಿದರು.
ಉದುಬತ್ತಿ ಹಚ್ಚುವುದು, ಪ್ರೋಕ್ಷಣೆ, ಪಂಚಪಾತ್ರೆ ಎನ್ನುವುದು ಈಗಿನ ಯುವ ಪೀಳಿಗೆಗೆ ಗೊತ್ತಿಲ್ಲದಂತಾಗಿದೆ. ಆಚರಣೆಯಿಂದ ಮಾತ್ರ ಸಂಸ್ಕೃತಿ, ಸಂಪ್ರದಾಯ ಉಳಿಯಲು ಸಾಧ್ಯ. ಆರ್ಯವೈಶ್ಯ ಸಮುದಾಯ ತಲ ತಲಾಂತರಗಳಿಂದ ಕೊಡುಗೈ ದಾನಿಗಳು. ದಾನ ಮಾಡುವ ಹೃದಯ ಶ್ರೀಮಂತಿಕೆಯಿಟ್ಟುಕೊಳ್ಳಬೇಕು. ಎಲ್ಲಿಯಾದರೂ ದೇವಸ್ಥಾನ ಕಟ್ಟಿದರೆ ದಿನವೂ ಪೂಜೆ ನೈವೇದ್ಯವಾಗಬೇಕು. ಕಾಟಾಚಾರಕ್ಕೆ ದೇವಸ್ಥಾನ ಕಟ್ಟಿ ಸುಮ್ಮನಾಗಬಾರದು. ಪ್ರತಿಷ್ಠೆ ಬಿಟ್ಟು ಎಲ್ಲರೂ ಕೂಡಿ ಬಾಳುವುದನ್ನು ಕಲಿಯಿರಿ ಎಂದು ಆರ್ಯವೈಶ್ಯ ಜನಾಂಗಕ್ಕೆ ಉಪದೇಶ ಮಾಡಿದರು.
ಆಸ್ತಿಗಿಂತ ಹೃದಯ ಶ್ರೀಮಂತಿಕೆ ದೊಡ್ಡ ಮೌಲ್ಯ. ಅದನ್ನು ಜಾಗೃತಿಯಿಂದ ಕಾಪಾಡಿಕೊಳ್ಳಬೇಕು. ಪೀಠಕ್ಕೆ ತನ್ನದೆ ಆದ ಧಾರ್ಮಿಕ ನಿಯಮ, ಸಾಮಾಜಿಕ ದೃಷ್ಠಿಕೋನವಿದೆ. ಯುವ ಜನಾಂಗ ಸಂಸ್ಕಾರ, ಆಧ್ಯಾತ್ಮ, ಯೋಗ ಕಲಿಯಬೇಕು ಎಂದು ಸ್ವಾಮೀಜಿ ಆರ್ಯ ಜನಾಂಗಕ್ಕೆ ಹೇಳಿದರು.
ವಾಸವಿ ವಿದ್ಯಾನಿಕೇತನ ಟ್ರಸ್ಟ್ ಮತ್ತು ವಾಸವಿ ಹಾಸ್ಟೆಲ್ ಟ್ರಸ್ಟ್ ಅಧ್ಯಕ್ಷ ಬೆಂಗಳೂರಿನ ಮಾನಂದಿ ಸುರೇಶ್ ಮಾತನಾಡಿ ಸಂಸ್ಕೃತಿ, ಸಂಸ್ಕಾರ, ಗುರುಪೀಠ ಎಂದರೆ ಏನು ಎನ್ನುವುದನ್ನು ಮೊದಲು ವಾಸವಿ ಜನಾಂಗದ ಮಕ್ಕಳಿಗೆ ಕಲಿಸಬೇಕು. ರಾಜ್ಯದಲ್ಲಿ ನೂರರಿಂದ ನೂರ ಇಪ್ಪತ್ತು ಶಿಕ್ಷಣ ಸಂಸ್ಥೆಗಳಿವೆ. ಆರ್ಯವೈಶ್ಯ ಜನಾಂಗ ಶಿಕ್ಷಣಕ್ಕೆ ಒತ್ತು ಕೊಟ್ಟು ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸಿ ಎಂದು ಮನವಿ ಮಾಡಿದರು.
ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಇ.ಶ್ರೀನಿವಾಸ ಬಾಬು ಅಧ್ಯಕ್ಷತೆ ವಹಿಸಿದ್ದರು.
ಆಶ್ವಥ್ನಾರಾಯಣಶೆಟ್ಟಿ ಟಿ.ಆರ್. ಆರ್ಯವೈಶ್ಯ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಎನ್.ಕಾಶಿವಿಶ್ವನಾಥಶೆಟ್ಟಿ, ಮಾಜಿ ಅಧ್ಯಕ್ಷ ಹೆಚ್.ಕೊಟ್ರೇಶ್ಶೆಟ್ಟಿ, ಆರ್ಯವೈಶ್ಯ ಮಹಾಸಭೆ ನಿರ್ದೇಶಕ ಎಲ್.ಆರ್.ವೆಂಕಟೇಶ್ಕುಮಾರ್, ಆರ್ಯವೈಶ್ಯ ಮಹಾಸಭೆ ಜಿಲ್ಲಾಧ್ಯಕ್ಷ ಎ.ಎನ್.ಚಿದಾನಂದ್ ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜ್, ಡಿ.ಪಿ.ವಿನಯ್ ಪ್ರಸಾದ್ ವೇದಿಕೆಯಲ್ಲಿದ್ದರು.