i
ಮತ ಮಾರಿಕೊಂಡು ಭ್ರಷ್ಟರ ಆಯ್ಕೆ ಮಾಡಿದರೆ ಪ್ರಜಾಪ್ರಭುತ್ವ ನಾಶ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮತಗಳನ್ನು ಮೌಲ್ಯ ಮಾಡಿಕೊಂಡು ಚುನಾವಣೆಯಲ್ಲಿ ಯೋಗ್ಯರನ್ನು ಆಯ್ಕೆ ಮಾಡಿಕೊಳ್ಳುವ ಬದಲು ಮತಗಳನ್ನು ಮಾರಾಟ ಮಾಡಿಕೊಂಡು ಭ್ರಷ್ಟರನ್ನು ಆಯ್ಕೆ ಮಾಡಿದರೆ ಪ್ರಜಾಪ್ರಭುತ್ವ ನಾಶವಾಗುವುದರಲ್ಲಿ ಸಂದೇಹವಿಲ್ಲ ಎಂದು ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಹೇಳಿದರು. ಇಲ್ಲಿನ ಪತ್ರಕರ್ತರ ಭವನದಲ್ಲಿ ಜಿಲ್ಲಾ ಮಾದಿಗ ಯುವ ಸೇನೆ, ಕಣಿವೆ ಮಾರಮ್ಮ ಸಂಘ, ಸ್ಲಂ ಜನಾಂದೋಲನ-ಕರ್ನಾಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಡಾ.ಬಾಬು ಜಗಜೀವನರಾಂರವರ ಪುಣ್ಯತಿಥಿ ಅಂಗವಾಗಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ಆಶಯಗಳನ್ನಿಟ್ಟುಕೊಂಡು ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಕೊಟ್ಟಾಗ ಮಾತ್ರ ಸಮಾಜಮುಖಿಯಾಗಿ ಹೊರಹೊಮ್ಮಬಹುದು. ಉದ್ಯಮಿಗಳು ಚುನಾವಣೆಗೆ ನಿಂತು ಗೆಲ್ಲುತ್ತಾರೆಂದರೆ ವಿಧಾನಸಭೆಯಲ್ಲಿ ಬಡವರ ಅಭ್ಯುದಯದ ಬಗ್ಗೆ ಧ್ವನಿ ಎತ್ತುವವರ್ಯಾರು ಎಂದು ಪ್ರಶ್ನಿಸಿದ ಪ್ರೊ.ಸಿ.ಕೆ.ಮಹೇಶ್ ಶೇ. ೯೬ ಭಾಗದಷ್ಟು ಕೋಟ್ಯಾಧಿಪತಿಗಳೆ ಚುನಾವಣೆಯಲ್ಲಿ ಗೆಲ್ಲುವಂತಾಗಿದೆ ಎಂದು ವಿಷಾದಿಸಿದರು.ಕಟ್ಟ ಕಡೆಯ ಮನುಷ್ಯನಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬದಲು ಕಾಂಗ್ರೆಸ್ನವರು ಚುನಾವಣಾ ಪೂರ್ವದಲ್ಲಿಯೇ ಐದು ಗ್ಯಾರೆಂಟಿಗಳನ್ನು ಘೋಷಿಸಿದ್ದರಿಂದ ಆಧಿಕಾರಕ್ಕೆ ಬರಲು ಸಾಧ್ಯವಾಯಿತು. ಆರ್.ಎಸ್.ಎಸ್. ಬಿಜೆಪಿ.ಯನ್ನು ಹೊರತುಪಡಿಸಿದರೆ ಇದು ಕೂಡ ಒಂದು ರೀತಿಯ ನಯವಂಚಕತನ ಎನ್ನುವುದರಲ್ಲಿ ಅನುಮಾನವಿಲ್ಲ. ಈಗಲಾದರೂ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಇಂತಹ ನಯವಂಚಕತನದ ವಿರುದ್ದ ಎಚ್ಚೆತ್ತುಕೊಂಡು ಬ್ರಾಹ್ಮಣ್ಯರ ವಿರುದ್ದ ರಾಜಕೀಯ ತೆರೆ ಎಳೆಯಬೇಕಾಗಿದೆ ಎಂದು ಜಾಗೃತಿಗೊಳಿಸಿದರು.
ಅಂಬೇಡ್ಕರ್ ಸಿದ್ದಾಂತವನ್ನು ಕೈಗೆತ್ತಿಕೊಂಡು ಬುದ್ದನ ಕಡೆ ಹೋದಾಗ ಮಾತ್ರ ಅಮೂಲ್ಯವಾದ ಮತಗಳನ್ನು ಮೌಲ್ಯ ಮಾಡಿಕೊಳ್ಳಬಹುದು. ಇದು ಅಂಬೇಡ್ಕರ್ರವರ ಆಶಯವೂ ಕೂಡ ಆಗಿತ್ತು ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಕೊಟ್ಟಿರುವುದರಿಂದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಶಕ್ತಿ ಬಂದಿದೆ. ಹಿಂದಿನ ಕಾಲದಲ್ಲಿ ಬೀದಿ ದೀಪದ ಕೆಳಗೆ ಕುಳಿತು ಓದಿದವರು ದೊಡ್ಡ ಮಹನೀಯರಾಗಿದ್ದಾರೆ. ಇಂದು ಸಾಕಷ್ಟು ಸೌಲಭ್ಯಗಳಿವೆ. ಎಲ್ಲವನ್ನು ಬಳಸಿಕೊಂಡು ನೀವುಗಳು ಶಿಕ್ಷಣವಂತರಾದ ಮೇಲೆ ಕೊಳಗೇರಿ ಇನ್ನಿತರೆ ಕಡೆ ವಾಸಿಸುತ್ತಿರುವ ಬಡವರಿಗೆ ನೆರವಾಗಿ ಎಂದು ಮನವಿ ಮಾಡಿದರು.೧೯೧೧, ೧೯೨೧, ೧೯೩೧ ರಲ್ಲಿ ಬ್ರಿಟೀಷ್ ಸರ್ಕಾರ ದಲಿತರನ್ನು ಅಸ್ಪೃಶ್ಯರು ಎಂದು ಗುರುತಿಸಿತು. ೧೯೪೭ ರಿಂದ ೫೧ ರವರೆಗೆ ಕಾನೂನು ಸಚಿವರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮಹಿಳೆಗೆ ಮೀಸಲಾತಿ ಬಿಲ್ ಪಾಸ್ ಮಾಡಲಿಲ್ಲ ಎಂದು ಅಧಿಕಾರವನ್ನು ತ್ಯಜಿಸಿ ಹೊರ ಬಂದರು. ಅದಕ್ಕಾಗಿ ಅವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.ಸರ್ಕಾರಿ ಕಲಾ ಕಾಲೇಜು ಉಪನ್ಯಾಸಕ ಪ್ರೊ.ಎಲ್.ನಾಗರಾಜಪ್ಪ, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಬಿ.ಟಿ. ತಿಪ್ಪೇರುದ್ರಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಡಾ.ಎಲ್.ಮಲ್ಲಣ್ಣ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ದಲಿತ ಮುಖಂಡ ನಾಗರಾಜ್, ಎನ್.ಶಿವಕುಮಾರ್, ಸಿ.ಎ.ತಿಪ್ಪೇಸ್ವಾಮಿ, ನೇಹ ಮಲ್ಲೇಶ್, ಮಹಲಿಂಗಪ್ಪ, ಸುರೇಶ್, ಜೆ.ಪ್ರಸನ್ನಕುಮಾರ್, ಬಿ.ಟಿ.ಸಂಪತ್ಕುಮಾರ್, ಎಂ.ವೆಂಕಟೇಶ್, ಓ.ಸೋಮಣ್ಣ, ನಾಗೇಂದ್ರಬಾಬು, ಪಿ.ದೇವರಾಜ್, ಪ್ರಕಾಶ್, ಮಲ್ಲಿಕಾರ್ಜುನ, ಮಹೇಶ, ಜಿ.ಚೌಡಪ್ಪ, ಹನುಮಂತಪ್ಪ, ಹೊನ್ನೂರಪ್ಪ, ಪುರುಷೋತ್ತಮ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.