i
125 ವರ್ಷಗಳ ಇತಿಹಾಸದ ಕಾಂಗ್ರೆಸ್ ಪಕ್ಷಕ್ಕೆ ಅಧೋಗತಿ ಪರಿಸ್ಥಿತಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ನಾನು ಯಾವುದೇ ಐಎಎಸ್ ಅಧಿಕಾರಿಯನ್ನು ನಿಯೋಜನೆ ಮಾಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಹೊರ ರಾಜ್ಯದ ನಾಯಕರುಗಳು ರಾಜ್ಯಕ್ಕೆ ಬಂದಾಗ ಸರ್ಕಾರದ ಕಾರನ್ನು ನೀಡಿಲ್ಲ. ಆದರೂ ನನ್ನ ಮೇಲೆ ಕಪ್ಪು ಚುಕ್ಕೆ ಇಡಲು ಹೊರಟಿದ್ದೀರಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಕನಿಷ್ಠ ನಾಚಿಕೆ, ಮಾನಮರ್ಯಾದೆ ಇದ್ದರೆ ನನ್ನ ಕಾಲದಲ್ಲಿ ಏನಾಗಿದೆ ಎಂಬ ಸತ್ಯವನ್ನು ರಾಜ್ಯದ ಜನತೆ ಮುಂದೆ ಬಹಿರಂಗಪಡಿಸಲಿ ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸವಾಲು ಹಾಕಿದರು.
ಆದರೆ ನನ್ನ ಕೆಲಸಕ್ಕೆ ಅಂದು ಅಧಿಕಾರಿಯನ್ನು ನಿಯೋಜನೆ ಮಾಡಿದ್ದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಜ್ಞಾನದಿಂದ ಸರ್ಕಾರ ನಡೆಸುತ್ತೀರ, ನಾವು ಗೌರವಯುತವಾಗಿ ನಡೆಸಿಕೊಂಡಿದ್ದೇವೆ ಎಂದು ಕುಮಾರಸ್ವಾಮಿ ಕುಟುಕಿದರು.
ಹಠಮಾರಿ ಧೋರಣೆಯಿಂದ ಸದನ ನಡೆಸುವುದು ಸರಿಯೇ? 125 ವರ್ಷಗಳ ಇತಿಹಾಸವಿರುವ ಪಕ್ಷಕ್ಕೆ ಅಧೋಗತಿ ಹೋಗುವ ಪರಿಸ್ಥಿತಿ ಬರಬಹುದು ಎಂದು ಕುಮಾರಸ್ವಾಮಿ ಎಚ್ಚರಿಸಿ, ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸಿ ಎಂದು ಹಾಲಿ ಕಾಂಗ್ರೆಸ್ ಸರ್ಕಾರಕ್ಕೆ ಅವರು ಸಲಹೆ ನೀಡಿದರು.
ವಿಧಾನಸಭೆಯಲ್ಲಿ ಬುಧವಾರ ನಡೆದಿರುವ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ. ದೇಶದ ಹಲವು ಪಕ್ಷಗಳನ್ನು ಸೇರಿಸಿ ಮಹಾಘಟ್ಬಂದನ್ ಮಾಡಿದ್ದರು. ಆ ಸಭೆಗೆ ಗಣ್ಯರನ್ನು ಸ್ವಾಗತಿಸಲು ಹಿರಿಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಭಾಧ್ಯಕ್ಷರ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ನಾವೇನು ತಪ್ಪೇ ಮಾಡಿಲ್ಲ ಎಂಬ ರೀತಿ ಕಾಂಗ್ರೆಸ್ ನಾಯಕರು ಪ್ರತಿಷ್ಠೆ ಮಾಡಿದರು. ಎರಡು ನಿಮಿಷದಲ್ಲಿ ಆ ಸಮಸ್ಯೆ ಬಗೆ ಹರಿಸಬಹುದಿತ್ತು. ಇನ್ನು ಮುಂದೆ ಈ ರೀತಿ ಆಗುವುದಿಲ್ಲ ಎಂದು ಭರವಸೆ ನೀಡಿದ್ದರೆ ಸಾಕಿತ್ತು. ವಿಷಾದ ವ್ಯಕ್ತಪಡಿಸುವ ಅವಶ್ಯಕತೆಯೂ ಇರಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಹೇಳಿದರು.ಭೋಜನ ವಿರಾಮಕ್ಕೂ ಬಿಡುವುದಿಲ್ಲ ಎಂದು ಸಭಾಧ್ಯಕ್ಷರು ಸದನ ನಡೆಸಲು ಮುಂದಾದರು. ಶಾಸಕ ಪುಟ್ಟರಂಗ ಶೆಟ್ಟಿ ಅವರು ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನ ಬೇಡ ಅಂದಿದ್ದಕ್ಕೆ ರುದ್ರಪ್ಪ ಲಮಾಣಿ ಅವರನ್ನು ಉಪಸಭಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.