i
ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರನ್ನು ಬಂಧಿಸಲಿ- ಜಿಲ್ಲಾಧ್ಯಕ್ಷ ಆರ್. ಮೋಹನ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶ್ರೀ ಕ್ಷೇತ್ರ ಧರ್ಮಸ್ಥಳ ಪವಿತ್ರ ಧಾರ್ಮಿಕ ಯಾತ್ರಾ ಸ್ಥಳವಾಗಿದ್ದು, ಧಾರ್ಮಿಕ ಚೌಕಟ್ಟಿನ ಪರಧಿ ಮೀರಿ ಧಾರ್ಮಿಕ ಧರ್ಮದ ಪರಿಕಲ್ಪನೆಯನ್ನು ಮಾನವ ಧರ್ಮಕ್ಕೆ ವಿಸ್ತರಿಸುವ ಮೂಲಕ ಅನನ್ಯ ಸೇವಾ ದೀಕ್ಷೆಗಳಿಂದ ಜಗದ್ವಿಖ್ಯಾತವಾಗಿ ಬೆಳೆದಿದೆ. ಇದಕ್ಕೆ ಪೂಜ್ಯ ವೀರೇಂದ್ರ ಹೆಗ್ಗಡೆಯವರೇ ಕಾರಣ. ಪೂಜ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಧರ್ಮ ದ್ರೋಹಿಗಳನ್ನು ಕೂಡಲೇ ಬಂಧಿಸಬೇಕೆಂದು ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್ ಆಗ್ರಹಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ ಈ ಸಂಬಂಧ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು, ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು ಧಾರ್ಮಿಕ ಕ್ಷೇತ್ರವೊಂದು ಭಕ್ತಿ ಆಲಯವಾಗಿ ಮಾತ್ರ ಬೆಳಗದೆ, ಸಕಲ ಕೋಟಿ ಜೀವರಾಶಿಗಳ ಆಶಯಕ್ಕೆ ಬದ್ಧವಾಗಿ, ಅಣು ಅಣುವಿನಲ್ಲೂ ದಾನ, ಧರ್ಮದ ಚಿಂತನೆ ಮೊಳಗಿ ಸರ್ವೆ ಜನಾಃ ಸುಖಿನೋ ಭವಂತು ಎಂಬ ಜಗದೋದ್ಧಾರಕನ ಪಟ್ಟವನ್ನು ಅರ್ಥಾರೂಢವಾಗಿ ಸಾಕಾರಗೊಳಿಸಿದವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಎಂಬ ಧರ್ಮ ಸಾಮ್ರಾಟರು.
ಹೆಗ್ಗಡೆ ಅವರ ಯೋಜನಾ ಕೌಶಲ್ಯ ಅತ್ಯದ್ಧುತವಾದದ್ದು. ಧರ್ಮಸ್ಥಳದ ಚಾರಿತ್ರಿಕ ಮಹತ್ವ, ಪರಂಪರೆ ಮತ್ತು ತಮ್ಮ ವ್ಯಕ್ತಿತ್ವಕ್ಕೆ ಸರಿದೂಗುವ ರೀತಿಯಲ್ಲಿ ಅವರು ಯೋಜನೆ ರೂಪಿಸುತ್ತಾ ಬರುತ್ತಿದ್ದಾರೆ. ಅವರು ಗ್ರಾಮಾಭಿವೃದ್ಧಿ ಮೂಲಕ ೪೦ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ೧.೫ ಕೋಟಿ ಜನರಿಗೆ ವಿಮೆ, ೮೭ ಲಕ್ಷ ಮಂದಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿ ವಿತರಿಸಲಾಗಿದೆ. ಧರ್ಮಾಧಿಕಾರಿ ಹೆಗ್ಗಡೆಯವರನ್ನು ಕೇಂದ್ರ ಸರ್ಕಾರ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಿದ್ದರೂ ಸಹ ಅವರು ಪಕ್ಷಾತೀತ, ಧರ್ಮಾತೀತ ವ್ಯಕ್ತಿಯಾಗಿದ್ದಾರೆ. ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಸರ್ಕಾರದ ಸಾಧನೆ, ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದೇ ಇದಕ್ಕೆ ಸಾಕ್ಷಿ. ಅಲ್ಲದೆ ಪೂಜ್ಯರು ವಿಶೇಷವಾಗಿ ಶಕ್ತಿ ಯೋಜನೆ ಜಾರಿ,ಇತ್ತೀಚೆಗೆ ಮಂಡಿಸಿದ ಬಜೆಟ್ ಬಗ್ಗೆಯೂ ಮುಕ್ತ ಮನಸ್ಸಿನಿಂದ ಶ್ಲಾಘಸಿದ್ದಾರೆ.
ಧರ್ಮಸ್ಥಳದ ಆತ್ಮ, ನಡೆ, ನುಡಿ ಪರಿಶುದ್ಧವಾಗಿರುವ ಕಾರಣ ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ಜುಲೈ-19 ರಂದು ಬುಧವಾರ ಶ್ರೀ ಕ್ಷೇತ್ರದಲ್ಲಿ ವಿಭಾಗೀಯ ಮುಖ್ಯಸ್ಥರ ಸಭೆ ನಡೆಸಿದ್ದಾರೆ. ಸೌಜನ್ಯಳ ಹೆಸರನ್ನು ಉಲ್ಲೇಖಿಸದೆ ಅಮಾಯಕ ಹುಡುಗಿಯ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅಂದಿನ ಮುಖ್ಯಮಂತ್ರಿಯವರಿಗೆ ಕೋರಿದ್ದೆ. ಸಿಬಿಐ ತನಿಖೆಗೂ ಒತ್ತಾಯಿಸಿದ್ದೆ ಎಂದು ತಿಳಿಸಿದ್ದಾರೆ.
ಕೆಲವು ಧರ್ಮದ್ರೋಹಿಗಳು ದುರುದ್ದೇಶಪೂರ್ವಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಕೆಡೆಸಲು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ನೋವು ತಂದಿದೆ ಎಂದು ತಿಳಿಸಿ ಪೂಜ್ಯರಿಗೆ ನೋವುಂಟು ಮಾಡುವವರು ಸರ್ವನಾಶವಾಗುವುದು ನಿಶ್ಚಿತ. ಇಂತಹವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಮೋಹನ್ ತಮ್ಮ ಪತ್ರದಲ್ಲಿ ಕೋರಿದ್ದಾರೆ.