i
ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಇಟ್ಟು ವಿಡಿಯೋ ಹೇಯ ಕೃತ್ಯ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಡುಪಿ ಕಾಲೇಜೊಂದರ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಇಟ್ಟು ಚಿತ್ರಗಳನ್ನು ತೆಗೆಯುವುದು ಹೇಯ ಕೃತ್ಯ ಖಂಡನೀಯ. ಇದರ ಬಗ್ಗೆ ಟ್ವೀಟ್ ಮಾಡಿರುವ ವಿದ್ಯಾರ್ಥಿನಿಯ ವಿರುದ್ದವೇ ತನಿಖೆ ಮಾಡುವ ರೀತಿ ಪೊಲೀಸರು ನಡೆದುಕೊಳ್ಳುತ್ತಿದ್ದು, ಅವರು ಯಾರ ಅಣತಿಯಂತೆ ನಡೆಯುತ್ತಿದ್ದಾರೆ. ಪೊಲಿಸರು ಅಧಿಕಾರಸ್ಥರ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ವಿದ್ಯಾರ್ಥಿಯರ ಚಿತ್ರಗಳನ್ನು ಸೆರೆ ಹಿಡಿದಿರುವ ಮೊಬೈಲ್ ವಿಡಿಯೋಗಳನ್ನು ಸೀಜ್ ಮಾಡಬೇಕು. ಅದೇನು ದೊಡ್ಡ ಪ್ರಕರಣ ಅಲ್ಲ ಅಂತ ಗೃಹ ಸಚಿವರು ಹೇಳುತ್ತಿದ್ದಾರೆ. ಕಾಲೇಜಿನಲ್ಲಿಯೇ ಮುಗಿದಿಲ್ಲ. ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ. ಸುಮ್ಮನೇ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಯಿತಾ ? ಸುಮ್ಮನೇ ವಿದ್ಯಾರ್ಥಿಗಳು ತಪ್ಪೊಪ್ಪಿಗೆ ನೀಡಿದ್ದಾರಾ ? ಏನೂ ಇಲ್ಲದೆ ಕಾಲೇಜಿನವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರಾ ? ಅವರ ಮೇಲೆ ಪ್ರಕರಣ ದಾಖಲಿಸಲು ತಪ್ಪೊಪ್ಪಿಗೆ ಒಂದೇ ಸಾಕು ಎಂದು ಹೇಳಿದರು.
ಈ ಪ್ರಕರಣದಲ್ಲಿ ಏನೂ ಇಲ್ಲ ಎಂದು ಹೇಳುವುದಾದರೆ, ಪೊಲೀಸರಿಂದ ರಕ್ಷಣೆ ಸಿಗುವುದಿಲ್ಲ ಎನ್ನುವ ಭಾವನೆ ಮೂಡಲಿದೆ. ಹಿರಿಯ ಅಧಿಕಾರಿಗಳು ಕಾನೂನು ಪ್ರಕಾರ ನಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು. ಕೆಳಗಿನ ಅಧಿಕಾರಿಗಳು ಒತ್ತಡಕ್ಕೆ ಮಣಿದು ಕೆಲಸ ಮಾಡಿದ್ದರೆ ಅಂತಹ ಅಧಿಕಾರಿಗಳ ವಿರುದ್ದ ಹಿರಿಯ ಪೊಲಿಸ್ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು. ತಗ್ಗಿ ಬಗ್ಗಿ ನಡೆದರೆ, ಪೊಲಿಸ್ ಇಲಾಖೆಯ ಮೇಲೆ ವಿಶ್ವಾಸ ಕಡಿಮೆಯಾಗಲಿದೆ ಎಂದರು.
ಗೃಹ ಸಚಿವರು ಇದು ಫೆಕ್ ನ್ಯೂಸ್ ಅಂತ ಹೇಳಿದ್ದಾರೆ. ಹಾಗಾದರೆ, ಕಾಲೇಜು ವಿದ್ಯಾರ್ಥಿಗಳು ತಪ್ಪೊಪ್ಪಿಗೆ ಯಾಕೆ ಕೊಟ್ಟಿದ್ದಾರೆ. ಅವರನ್ನು ಯಾಕೆ ಅಮಾನತು ಮಾಡಿದರು. ಈ ಬಗ್ಗೆ ಗೃಹ ಸಚಿವರ ಸ್ಪಷ್ಟೀಕರಣ ನೀಡಬೇಕು ಎಂದು ಅವರು ಆಗ್ರಹ ಮಾಡಿದರು.