i
ಸಾಧನೆ ಯಾರ ಸೊತ್ತು ಅಲ್ಲ, ಸಾಧನೆ ಮಾಡಿದವರು ಪ್ರತಿಭೆಗಳಾಲು ಸಾಧ್ಯ-ಸಚಿವ ಸುಧಾಕರ್…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವಿಶ್ವಕ್ಕೆ ಶಾಂತಿಮಂತ್ರ ಸಾರಿದ ಬಸವಣ್ಣನವರು ಅಜ್ಞಾನದ ಕತ್ತಲನ್ನು ದೂರವಾಗಿಸಲು ಜ್ಞಾನದ ಬೆಳಕನ್ನು ತಮ್ಮದೆ ತತ್ವ, ಸಂದೇಶಗಳ ಮೂಲಕ ನೀಡಿದ ಮಹಾನ್ ಶ್ರೇಷ್ಠ ಯೋಗಿಗಳು. ಬಸವ ತತ್ವದಲ್ಲಿ ಎಲ್ಲಾ ರೀತಿಯ ಅಭಿವೃದ್ದಿಪರ ಚಿಂತನೆ ಅಡಗಿದೆ. ಧಾರ್ಮಿಕ ಪರಿವರ್ತನೆಯ ಬಗ್ಗೆ ಸಾಕಷ್ಟು ವಿಚಾರಗಳಿವೆ. ಯಾವ ವ್ಯಕ್ತಿ ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳುತ್ತಾನೋ ಅವನೂ ಸಹ ಈ ಸಮಾಜಕ್ಕೆ ಬೆಳಕು ನೀಡುವ ಜ್ಞಾನಿಯಾಗುತ್ತಾನೆಂದು ಕಲ್ಲುಹೊಳೆ ಮಠದ ಚನ್ನವೀರಶಿವಾಚಾರ್ಯ ಮಹಾಸ್ವಾಮಿ ತಿಳಿಸಿದರು.ಅವರು, ಭಾನುವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘ, ವೀರಶೈವ ಸಮಾಜ ಸೇವಾ ಸಂಘ, ವೀರಶೈವ ಸಂಘಟನೆಗಳ ಒಕ್ಕೂಟ, ವೀರಶೈವ ಮಹಿಳಾ ಸಂಘ, ವಿದ್ಯಾರ್ಥಿನಿಲಯ, ಗ್ರಾಮಾಂತರ ವೀರಶೈವ ಸಂಘ, ವೀರಶೈವ ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು. ವಿದ್ಯಾರ್ಥಿದೆಸೆಯಲ್ಲೇ ಮೌಲ್ಯಗಳನ್ನು ರೂಪಿಸಿಕೊಂಡ ವಿದ್ಯಾರ್ಥಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇಂದು ವೀರಶೈವ ಸಮಾಜ ಎಲ್ಲಾ ಸಮುದಾಯಗಳಿಂದ ವಿಶ್ವಾಸ, ಗೌರವ ಗಳಿಸಿದೆ ಎಂದರೆ ಅದರ ಕೀರ್ತಿ ಜಗಜ್ಯೋತಿ ಬಸವೇಶ್ವರರಿಗೆ ಸಲ್ಲುತ್ತದೆ ಎಂದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಯೋಜನೆ ಮತ್ತು ಸಾಂಖಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ, ಪ್ರತಿಭೆ ಯಾರ ಸೊತ್ತು ಅಲ್ಲ, ಬದಲಾಗಿ ಸಾಧನೆ ಮಾಡಿದವರು ಮಾತ್ರ ಪ್ರತಿಭಾವಂತರಾಗಲು ಸಾಧ್ಯ. ಇಂದಿನ ಶಿಕ್ಷಣ ನೀತಿ, ನಿಯಮಗಳನ್ನು ನೋಡಿದರೆ ಪ್ರತಿಭೆಯೇ ಮೂಲ ಮಾನದಂಡವಾಗುತ್ತದೆ. ಆದ್ದರಿಂದ ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಬೇಕು ಎಂದರು. ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ವೀರಶೈವ ಸಮಾಜ ಕಳೆದ ಹಲವಾರು ದಶಕಗಳಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಸಮುದಾಯದ ಪ್ರಗತಿಯ ಜೊತೆಗೆ ಸಮಾಜದ ಪ್ರಗತಿಯನ್ನೂ ಸಹ ದೃಷ್ಠಿಯಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಯಾವುದೇ ಕಾರಣಕ್ಕೂ ಬೇರೆ ಸಮುದಾಯದವರನ್ನು ದೂಷಿಸದೆ ಎಲ್ಲರಲ್ಲೂ ಒಳಿತನ್ನು ಕಾಣುವ ಆತ್ಮವಿಶ್ವಾಸ ಹೊಂದಿದ ಸಮಾಜ ವೀರಶೈವ ಸಮಾಜ ಎಂದರು. ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ, ವೀರಶೈವ ಸಮಾಜ ಇಂದು ಬೇರೆ ಎಲ್ಲಾ ಸಮಾಜದಂತೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರದ ಮೂಲಕ ಅವರಿಗೆ ಆತ್ಮವಿಶ್ವಾಸ ತುಂಬಲಾಗುತ್ತಿದೆ. ಇಂದು ವೀರಶೈವ ಸಮಾಜಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಸರ್ಕಾರದಿಂದ ಪಡೆಯುವ ನಿಟ್ಟಿನಲ್ಲಿ ನಾನು ಸಹ ನಿಮ್ಮೊಂದಿಗೆ ಕೈಜೋಡಿಸುತ್ತೇನೆ. ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸುವೆ ಎಂದರು. ಸಮಾಜದ ಅಧ್ಯಕ್ಷ ಕೆ.ಸಿ.ನಾಗರಾಜು ಮಾತನಾಡಿ, ಎಲ್ಲಾ ಸಮುದಾಯಗಳಂತೆ ವೀರಶೈವ ಸಮುದಾಯವೂ ಸಹ ಸಂಘಟನೆ ವಿಚಾರದಲ್ಲಿ ಇಂದು ಹೆಜ್ಜೆ ಮುಂದಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವೀರಶೈವ ಸಮಾಜದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ವೀರಶೈವ ನೌಕರರ ಸಂಘದ ಅಧ್ಯಕ್ಷ ಸಿ.ಗುರುಸಿದ್ದಮೂರ್ತಿ ಮಾತನಾಡಿ, ಪ್ರತಿಭಾಪುರಸ್ಕಾರ ಹಾಗೂ ನಿವೃತ್ತ ನೌಕರರ ಸಂಘದ ಕಾರ್ಯಕ್ರಮ ನಮ್ಮ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತಿದೆ. ಸಮುದಾಯದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಗತಿಯ ವಿಶ್ವಾಸ ಹುಟ್ಟಿಸಲು ಪ್ರೇರಕ. ಎಸ್ಎಸ್ಎಲ್ಸಿ ಮತ್ತು ಪಿಯುಸಿಯ ೮೧ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ, ೧೮ ನಿವೃತ್ತ ನೌಕರರಿಗೆ ಸನ್ಮಾನವನ್ನು ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್.ತಾಳೀಕೆರಪ್ಪ, ವಾಣಿಜ್ಯೋದ್ಯಮಿ ರುದ್ರಮುನಿಯಪ್ಪ, ಕೆ.ಬಸವರಾಜು(ವಂದನಾ) ದಲ್ಲಾಲರ ಸಂಘದ ಅಧ್ಯಕ್ಷ ಅರವಿಂದ್, ಟಿ.ಆರ್.ಕಿರಣ್ಶಂಕರ್, ಸಿ.ಎಸ್.ಜಯಪ್ರಕಾಶ್, ಟಿ.ಪ್ರಭುದೇವ್, ಡಾ.ಕೆ.ಎಂ.ಜಯಕುಮಾರ್, ಪದ್ಮನಾಗರಾಜು, ವಿ.ಮಂಜುನಾಥ, ಪ್ರಸನ್ನಕುಮಾರ್, ಶಿವಪುತ್ರಪ್ಪ, ಕೆ.ಎಂ.ಕೋಟ್ರೇಶ್, ಡಿ.ಎಂ.ತಿಪ್ಪೇಸ್ವಾಮಿ, ರಾಜಣ್ಣ, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.