i
ಸಮಾಜಕ್ಕೆ ಪತ್ರಿಕೆಗಳು ಸದಾ ಮಾರ್ಗದರ್ಶನ ನೀಡುತ್ತಿವೆ: ಶಾಸಕ ಟಿ.ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿಗೊಳಿಸುವ ಕಾರ್ಯವನ್ನು ಪತ್ರಿಕೆಗಳು ಪ್ರತಿನಿತ್ಯ ಮಾಡುತ್ತಾ ಬಂದಿವೆ. ಇಂದು ಪತ್ರಿಕೆ ಜನಸಾಮಾನ್ಯರಿಗೆ ಹೆಚ್ಚು ಹತ್ತಿರವಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು. ಅವರು, ನಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದ ಮೂಲಕ ನೂರಾರು ವರ್ಷಗಳಿಂದ ಈ ಕ್ಷೇತ್ರ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಲೋಪದೋಷಗಳನ್ನು ಸಹ ಪತ್ತೆಹಚ್ಚಿ ಜನರಿಗೆ ತಿಳಿಸುವ ಕಾರ್ಯವನ್ನು ಪತ್ರಿಕೆ ಮಾಡುತ್ತಿರುವುದು ಸಂತಸ ವಿಷಯವೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಟಿ.ತಿಪ್ಪೇಸ್ವಾಮಿ ಸಂಪಿಗೆ ಮಾತನಾಡಿ, ಪತ್ರಿಕಾ ಕ್ಷೇತ್ರ ಜನಸಾಮಾನ್ಯರಿಗೆ ಹೆಚ್ಚು ಸ್ಪಂದಿಸುತ್ತಿದ್ದರೂ ಅನೇಕ ಜ್ವಲಂತ ಸಮಸ್ಯೆಗಳಿಂದ ಹಿನ್ನಡೆ ಅನುಭವಿಸುತ್ತಿದೆ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸರ್ಕಾರದಿಂದ ಯಾವುದೇ ಹೆಚ್ಚಿನ ಉತ್ತೇಜನವಿಲ್ಲ. ಸರ್ಕಾರ ಪತ್ರಕರ್ತರಿಗೆ ಪ್ರತ್ಯೇಕವಾಗಿ ಆರ್ಥಿಕ ನೆರವು ಹಾಗೂ ಸೌಲಭ್ಯ ನೀಡುವಲ್ಲಿ ಮುಂದೆ ಬರಬೇಕು ಎಂದರು. ಜಿಲ್ಲೆಯ ಹಿರಿಯ ಪತ್ರಕರ್ತ, ಸಂಪಾದಕ ಶ.ಮಂಜುನಾಥ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಾಣಿಜ್ಯೋದ್ಯಮ, ಕೈಗಾರಿಕೆ ಮುಂತಾದ ಕ್ಷೇತ್ರಗಳಿಗೆ ಆರ್ಥಿಕ ನೆರವುವನ್ನು ನೀಡುತ್ತಾ ಬಂದಿದೆ. ಆದರೆ, ಇಂದಿನ ಸ್ಥಿತಿಯಲ್ಲಿ ಪತ್ರಿಕೆಗಳ ಸುಧಾರಣೆ, ಸ್ಥಿತಿಗಳು ಸುಧಾರಣೆಯಾದರೆ ಮಾತ್ರ ಸಮಾಜದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕಾಣಲು ಸಾಧ್ಯವಾಗುತ್ತದೆ. ಪತ್ರಿಕೆಗಳು ನ್ಯಾಯನಿಷ್ಠೂರವಾಗಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಪ್ರಾಮಾಣಿಕತೆ ಮತ್ತು ದಕ್ಷತೆ ಇದ್ದರೆ ಮಾತ್ರ ಈ ಕ್ಷೇತ್ರದ ಮೌಲ್ಯ ಹೆಚ್ಚಿಸಲು ಸಾಧ್ಯವೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷ ಪಿ.ಗಂಗಾಧರ ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಗತಿಪರ ರೈತ ಡಾ.ದಯಾನಂದಮೂರ್ತಿ, ದಲಿತ ಚಿಂತಕ ಟಿ.ವಿಜಯಕುಮಾರ್, ಶ.ಮಂಜುನಾಥ, ಎಚ್.ರಾಜಣ್ಣ, ಎಸ್.ಬಿ.ತಿಪ್ಪೇಸ್ವಾಮಿ, ಸಂಪಿಗೆತಿಪ್ಪೇಸ್ವಾಮಿ ಮುಂತಾದವರನ್ನು ಸನ್ಮಾನಿಸಲಾಯಿತು. ಬಡ ವಿದ್ಯಾರ್ಥಿಗಳಿ ನೋಟ್ಪುಸ್ತಕ, ವೃದ್ದರಿಗೆ ಬೆಡ್ಸೀಟ್ಗಳನ್ನು ವಿತರಿಸಿದರು.