i
ರಾಜರಾಜೇಶ್ವರಿ ದೇವಸ್ಥಾನ ಮತ್ತೊಷ್ಟು ಅಭಿವೃದ್ಧಿ ಹೊಂದಲಿ-ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ಕಾರದಿಂದ ಅನುದಾನ ಪಡೆಯುವ ಮೂಲಕ ದೇವಸ್ಥಾನ ಮತ್ತಷ್ಟು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಆಡಳಿತ ಮಂಡಲಿ ಮಾಡಲಿ, ಅಲ್ಲದೆ ಈ ಕಾರ್ಯಕ್ಕಾಗಿ ಅಗತ್ಯವಾದ ಎಲ್ಲಾ ಸಹಕಾರ ನೀಡುತ್ತೇನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ಗೋನೂರು ಗ್ರಾಮದ ಬಳಿಯ ಶ್ರೀರಾಜರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರಾವಣ ಮಾಸ ಮತ್ತು ಚಂದ್ರಶಾಲಾ ಕಟ್ಟಡ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜರಾಜೇಶ್ವರಿ ದೇವಸ್ಥಾನ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಕ್ತರ ಸಹಕಾರದ ಜೊತೆ ಸರ್ಕಾರದ ಅನುದಾನ ಪಡೆದರೇ ಅಭಿವೃದ್ಧಿಗೆ ವೇಗ ಹೆಚ್ಚುತ್ತದೆ. ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆ ಆಗಿರುವ ರಾಜರಾಜೇಶ್ವರಿ ದೇವಸ್ಥಾನಕ್ಕೆ ತನ್ನದೇ ಆದ ಶಕ್ತಿ ಇದೆ. ದೇವಸ್ಥಾನ ಟ್ರಸ್ಟ್ ನವರು ಗೋ ಪೂಜೆ ಸಹ ನಡೆಸುತ್ತಿದ್ದಾರೆ. ನಮ್ಮ ಜಮೀನಿನಲ್ಲಿ ಸಹ ಮೊದಲು 25 ಗೋವುಗಳ ಸಾಕಾಣಿಕೆ ಪ್ರಾರಂಭಿಸಿದ್ದು ಈ 60 ಗೋವುಗಳ ಸಾಕಾಣಿಕೆಗೆ ತಲುಪಿದೆ ಎಂದರು.
ಧಾರ್ಮಿಕ ವ್ಯವಸ್ಥೆಯಲ್ಲಿ ನಾವು ನಂಬಿಕೆ ಇಟ್ಟು ನಡೆಯುತ್ತಿದ್ದೇವೆ. ನಂಬಿಕೆಯಿಂದ ಮಾತ್ರ ಏನಾದರೂ ಗಳಿಸಲು ಸಾಧ್ಯವಾಗುತ್ತದೆ. ಧಾರ್ಮಿಕ ನಂಬಿಕೆ ಇರುವವರು ದೈವಸೇವೆ ಮಾಡುತ್ತಾರೆ ಎಂದು ತಿಳಿಸಿದರು.
ರಾಜರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಭಟ್ ರಾಜರಾಜೇಶ್ವರಿ ದೇವಸ್ಥಾನ ಪ್ರಾರಂಭವಾಗಿ 3 ವರ್ಷಗಳು ತುಂಬಿವೆ. ನಾಲ್ಕು ಉದ್ದೇಶದಿಂದ ಈ ಟ್ರಸ್ಟ್ ಪ್ರಾರಂಭಿಸಲಾಗಿದೆ. ನಿತ್ಯ ಯಜ್ಞ , ಗೋ ಸೇವೆ, ವೇದ ಪಾಠಶಾಲೆ. ಅನ್ನದಾನ ಈ ನಾಲ್ಕು ಉದ್ದೇಶದಿಂದ ಟ್ರಸ್ಟ್ ಸ್ಥಾಪಿಸಲಾಯಿತು. ದೇವಸ್ಥಾನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಲಾಗಿದೆ. ಆಯಬದ್ದತೆಯಿಂದ ದೇವಸ್ಥಾನ ನಿರ್ಮಾಣದಿಂದ ಹೆಚ್ಚಿನ ಶಕ್ತಿ ಇರುತ್ತದೆ. ಶಾಸಕರಾದ ರಘುಮೂರ್ತಿ ಅವರು ಮತ್ತು ಶಿವಲಿಂಗಸ್ವಾಮೀಜಿ ಅವರು ನಮ್ಮ ದೇವಸ್ಥಾನಕ್ಕೆ ಸಾಕಷ್ಟು ಸಹಕಾರ ನೀಡಿದ್ದಾರೆ ಎಂದು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಕಬೀರನಾಂದ ಮಠದ ಶಿವಲಿಂಗಾನಂದ ಮಹಾಸ್ವಾಮಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪ್ರಕಾಶ್ ಮೂರ್ತಿ, ಮಾಜಿ ತಾ.ಪಂ.ಮಾಜಿ ಸದಸ್ಯೆ ಶಶಿಕಲಾ ಸುರೇಶ್, ಗೋನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಹೊನ್ನಮ್ಮ ಸುರೇಶ್ ಮುಖಂಡ ಬಾಬಣ್ಣ , ವೀಣಾ, ಕಾಶಿ ವಿಶ್ವನಾಥ ಶೆಟ್ಟರು, ಐಶ್ವರ್ಯ ಫೋರ್ಟ್ ಅರುಣ್ ಕುಮಾರ್ ಇದ್ದರು.