i
ಹಳ್ಳಿಯಲ್ಲಿ ಕೈ ಬಲಗೊಂಡರೆ ಡೆಲ್ಲಿ ಅಧಿಕಾರ ಹಿಡಿಯುವುದು ಸುಲಭ:ಡಿಸಿಎಂ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರತಿ ಹಳ್ಳಿ, ಹಳ್ಳಿಗೂ ತಲುಪಿಸಬೇಕಿದೆ. ಹಳ್ಳಿಯಿಂದ ಕಾಂಗ್ರೆಸ್ನ ಕೈ ಬಲಗೊಂಡಲ್ಲಿ ಡೆಲ್ಲಿ (ಸಂಸತ್) ಅಧಿಕಾರ ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರ ಪಾತ್ರ ಮಹತ್ವದ್ದಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ತಾಲೂಕಿನ ಹಸೂಡಿ ಗ್ರಾಪಂನ ಕಾಂಗ್ರೆಸ್ ಬೆಂಬಲಿತ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚೈತ್ರಾ ಆರ್. ಮೋಹನ್ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರಮುಖರೊಂದಿಗೆ ಭೇಟಿ ಮಾಡಿ ಪಕ್ಷದ ಸಂಘಟನೆ, ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಟಾನ, ಹಸೂಡಿ ಗ್ರಾಪಂನಲ್ಲಿ ನೂತನ ಗ್ರಾಮ ಸೌಧ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡಿಕೆ ಸೇರಿದಂತೆ ಮತ್ತಿತರೆ ವಿಷಯಗಳ ಚರ್ಚೆ ಸಂದರ್ಭದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ನ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದಲ್ಲಿ ಬಹು ದೊಡ್ಡ ಸಾಮಾಜಿಕ ಬದಲಾವಣೆ ಉಂಟಾಗಲಿದೆ. ಬಡ ಜನರ ಕೊಳ್ಳುವ ಶಕ್ತಿ ಹೆಚ್ಚಲಿದೆ. ಇದು ಅಭಿವೃದ್ಧಿಗೆ ಪೂರಕವಾಗಲಿದೆ. ಜನರೋದ್ಧಾರವೇ ದೇಶದ ನಿಜವಾದ ಉದ್ಧಾರ ಎಂದರು. ತಳ ಮಟ್ಟದ ಹಳ್ಳಿಯಿಂದ ಸರ್ವರಿಗೂ ಸಮಾನ ಅವಕಾಶಗಳು ದೊರೆತಲ್ಲಿ ದೇಶದ ಪ್ರಗತಿ ಸಾಧ್ಯ. ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯದ ಸಂಪತ್ತನ್ನು ಹಂಚಿ, ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಪ್ರಯತ್ನವಾಗಿದೆ. ನಿಜವಾದ ಸರ್ಕಾರ ಜನಕಲ್ಯಾಣದ ಬಗ್ಗೆ ಚಿಂತಿಸುತ್ತದೆ. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನದ ಮೂಲಕ ಚಿಂತಿಸುವುದು ಸೂಕ್ತ ಎಂದರು. ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹಲಕ್ಷಿ ಯೋಜನೆಯನ್ನು ಆಗಸ್ಟ್ 27ರಂದು ಉದ್ಘಾಟಿಸಲಾಗುತ್ತಿದ್ದು, ಪ್ರತಿ ಗ್ರಾಪಂ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಬೇಕೆಂದು ಸೂಚಿಸಿದರು.ಸಂಕೀರ್ಣ ಕಾಲಘಟ್ಟದಲ್ಲಿ ರಾಹುಲ್ ಗಾಂಧೀಜಿಯವರು ಕೈಗೊಂಡ ಭಾರತ್ ಜೋಡೋ ಪಾದಯಾತ್ರೆ ಹಳ್ಳಿಯಿಂದ ಡೆಲ್ಲಿಯತನಕ ಕಾಂಗ್ರೆಸ್ ಧ್ವನಿಗಳನ್ನು ಒಟ್ಟುಗೂಡಿಸಿ ಕೈಗಳನ್ನು ಬಲಪಡಿಸಿ ದೇಶ ರಾಜಕಾರಣದಲ್ಲಿ ಸಂಚಲನ ಮೂಡಿಸಿತು. ಇದು ಕಾಂಗ್ರೆಸ್ ಮಾತ್ರವಲ್ಲ ರಾಷ್ಟ್ರ ರಾಜಕಾರಣದಲ್ಲಿ ಆಶಾದಾಯಕ ಬೆಳಕು ಚೆಲ್ಲಿ ದೇಶದ ಭವಿಷ್ಯ ಬದಲಿಸಲಿದೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಓ. ಶಿವಕುಮಾರ್, ರಾಜ್ಯ ಸಂಯೋಜಕ ಹಾಗೂ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್, ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶೆಟ್ಟಿ ಶಂಕರಘಟ್ಟ, ಜಿಲ್ಲಾ ಉಪಾಧ್ಯಕ್ಷ ರಂಗಸ್ವಾಮಿ ಉಪಸ್ಥಿತರಿದ್ದರು.
ಹಸೂಡಿ ನಂ.1 ಗ್ರಾಪಂ: ಚೈತ್ರಾ ಬಗ್ಗೆ ಡಿಕೆಶಿ ಮೆಚ್ಚುಗೆ-ಹಸೂಡಿ ಗ್ರಾಮ ಪಂಚಾಯತಿಯನ್ನು ಜಿಲ್ಲೆಯಲ್ಲಿಯೇ ನಂಬರ್ ಒನ್ ಪಂಚಾಯತಿಯನ್ನಾಗಿ ಮಾಡಲು ಸಂಕಲ್ಪಿಸಿರುವ ಚೈತ್ರಾ ಆರ್. ಮೋಹನ್ ಅವರ ನಿರ್ಧಾರಕ್ಕೆ ಡಿ.ಕೆ. ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಈ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದೆಂದರು. ಹಸೂಡಿ ಗ್ರಾಪಂನಲ್ಲಿ ನೂತನ ಗ್ರಾಮ ಸೌಧ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡಬೇಕೆಂಬ ಚೈತ್ರಾ ಅವರ ಕೋರಿಕೆಯನ್ನು ಪರಿಗಣಿಸಲಾಗುವುದೆಂದು ಶಿವಕುಮಾರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.