i
ಕೆಪಿಟಿಸಿಎಲ್-ಬೆಸ್ಕಾಂ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಗೆ ಕೆಂಡಾಮಂಡಲವಾದ ಕೇಂದ್ರ ಸಚಿವರು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೆಪಿಟಿಸಿಎಲ್-ಬೆಸ್ಕಾಂ ಸಂಸ್ಥೆಗಳನ್ನು ಖಾಸಗಿ ಸಂಸ್ಥೆಯೇ, ಇವು ಸಾರ್ವಜನಿಕರ ಪರವಾಗಿರುವ ಸರ್ಕಾರದ ಸಂಸ್ಥೆಗಳು, ರೈತರಿಗೆ ನಿಗದಿತ ಸಮಯಕ್ಕೆ ವಿದ್ಯುತ್ ನೀಡುತ್ತಿಲ್ಲ, ದೊಡ್ಡ ಲೈನ್ ಎಳೆಯುವಾಗ ಸಂತ್ರಸ್ತ ರೈತರಿಗೆ ಸರಿಯಾದ ಪರಿಹಾರ ನೀಡುತ್ತಿಲ್ಲ, ಕೇಂದ್ರ ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ, ಇಂಜಿನಿಯರ್ ಗಳು ಉದಾಸೀನತೆ ಉದ್ದಟತನ ಬಿಡಬೇಕು, ಸರ್ವಾಧಿಕಾರಿಗಳಂತೆ ವರ್ತಿಸಬೇಡಿ ಇವು ಯಾರ ಅಪ್ಪನ ಆಸ್ತಿಗಳಲ್ಲ ಎಂದು ಕೆಪಿಟಿಸಿಎಲ್-ಬೆಸ್ಕಾಂ ಇಂಜಿನಿಯರ್ ಗಳ ವಿರುದ್ಧ
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು ಹಾಗೂ ಸಂಸದರಾದ ಎ. ನಾರಾಯಣಸ್ವಾಮಿ ಹರಿಹಾಯ್ದರು ಕೆಂಡಾಮಂಡಲವಾದ ಘಟನೆ ಜರುಗಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿದ್ಯುಚ್ಛಕ್ತಿ ಹಾಗೂ ಬಿಎಸ್ಎನ್ಎಲ್ ಯೋಜನೆಗಳ ಕುರಿತು ಏರ್ಪಡಿಸಲಾದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಸ್ಪಷ್ಟ ನಿರ್ದೇಶನ ಇದ್ದರೂ ಏಕೆ ಕಾಲಕಾಲಕ್ಕೆ ಸಭೆ ಮಾಡಿ ವಿದ್ಯುತ್ ಸಮಸ್ಯೆಗೆ ಪರಿಹಾರ ನೀಡಲಿಲ್ಲ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಮತ್ತು ಸಂಸದರ ಸಮ್ಮುಖದಲ್ಲಿ ನಡೆಯಬೇಕಿದ್ದ ಕಾಮಗಾರಿ ಉದ್ಘಾಟನೆಯನ್ನು ಏಕೆ ಏಕಾಏಕಿ ರದ್ದು ಮಾಡಲಾಯಿತು. ಎರಡು-ಮೂರು ವರ್ಷಗಳಾದರೂ ನಿರ್ವಹಣಾ ಸಮಿತಿ ಸಭೆಯನ್ನು ಏಕೆ ಕರೆದಿಲ್ಲ, ಇದರ ಹೊಣೆಯನ್ನು ಅಂದು ಇದ್ದ ಎಲ್ಲ ಅಧಿಕಾರಿಗಳು ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರು ನಡಾವಳಿ ಬರೆದಿಸಿದರು.
ಅವರು ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಪಿಟಿಸಿಎಲ್-ಬೆಸ್ಕಾಂ ಇಂಜಿನಿಯರ್ ಗಳ ವಿರುದ್ಧ ಸಮಗ್ರ ತನಿಖೆ ಆಗಬೇಕು, ನಾನು ಜನ ಸಾಮಾನ್ಯರ ಪರವಾಗಿ ಕೆಲಸ ಮಾಡುವವನು, ರಾಜಕಾರಣವನ್ನು ಕೇವಲ ಚುನಾವಣೆಯಲ್ಲಿ ಮಾಡುತ್ತೇನೆ, ಮಿಕ್ಕ ದಿನಗಳಲ್ಲಿ ಸಾರ್ವಜನಿಕರಿಗೆ ಸಾಮಾಜಿಕವಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇನೆ ಎಂದು ಕೆಪಿಟಿಸಿಎಲ್-ಬೆಸ್ಕಾಂ ಇಂಜಿನಿಯರ್ ಗಳ ವಿರುದ್ಧ ಗುಡುಗಿದರು.
ರೈತರ ವಿದ್ಯುತ್ ಬೇಡಿಕೆ ಎಷ್ಟಿದೆ, ಎಷ್ಟು ಗಂಟೆ ಪೂರೈಕೆಯಾಗುತ್ತಿದೆ, ಗುಣಮಟ್ಟದ ವಿದ್ಯುತ್ ನೀಡಲಾಗುತ್ತಿದೆಯೇ, ಕೈಗಾರಿಕೆಗಳಿಗೆ ನೀಡುತ್ತಿರುವ ವಿದ್ಯುತ್ ಎಷ್ಟು, ದೊಡ್ಡ ಲೈನ್ ಎಳೆಯುವಾಗ ರೈತರಿಗೆ ನೋಟಿಸ್ ನೀಡಿ ಮಾಹಿತಿ ನೀಡಲಾಗುತ್ತಿದೆ, ರೈತರ ಒಪ್ಪಿಗೆ ಪಡೆದು ವಿದ್ಯುತ್ ಲೈನ್ ಎಳೆಯಲಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಕೆಪಿಟಿಸಿಎಲ್-ಬೆಸ್ಕಾಂ ಇಂಜಿನಿಯರ್ ಗಳು ಯಾವುದೇ ಉತ್ತರ ನೀಡದೆ ಬೆಚ್ಚಿ ಸುಸ್ತಾದ ಪ್ರಸಂಗವೂ ಜರುಗಿತು.
ಬೃಹತ್ ವಿದ್ಯುತ್ ಲೈನ್ ಗಳನ್ನು ಎಳೆಯುವಾಗ ಒಂದಲ್ಲ, ಎರೆಡೆರಡು ಸಲ ರೈತರಿಗೆ ಮನವೊಲಿಕೆ ಮಾಡಬೇಕು. ರೈತರ ಮೇಲೆ ದೌರ್ಜನ್ಯ ಎಸಗಬಾರದು, ರೈತರ ವಿರೋಧ ಇದ್ದರೆ ಪರ್ಯಾಯ ಮಾರ್ಗದಲ್ಲಿ ವಿದ್ಯುತ್ ಲೈನ್ ಎಳೆಯಲು ಸಾಧ್ಯವೇ ಎಂದು ಅಧಿಕಾರಿಗಳು ಪರಿಶೀಲನೆ ಮಾಡಬೇಕು ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಹೊಳಲ್ಕೆರೆ ರೈತರೊಬ್ಬರು ಸಭೆಗೆ ಆಗಮಿಸಿ ಕೆಪಿಟಿಸಿಎಲ್ ನವರು ಕೇವಲ 2 ಲಕ್ಷ ರೂ. ಪರಿಹಾರ ನೀಡುತ್ತಾರೆ, ನಾವೇ 25 ಲಕ್ಷ ರೂ. ಕೊಡುತ್ತೇವೆ, ನಮಗೆ ಜಮೀನು ಕೊಡಿಸಿ ಎಂದು ದುಂಬಾಲು ಬಿದ್ದರು. ಅಲ್ಲದೆ ಈಗ ಮಾರ್ಕ್ ಮಾಡಿರುವ ಲೈನ್ ಬದಲಾಯಿಸಿ ಪರ್ಯಾಯ ಮಾರ್ಗವಾಗಿ ಕಡಿಮೆ ವೆಚ್ಚದಲ್ಲಿ ಲೈನ್ ಎಳೆಯಲು ಅವಕಾಶ ಇದೆ. ಆ ಮಾರ್ಗವನ್ನು ಜಿಲ್ಲಾಧಿಕಾರಿಗಳು, ಕೇಂದ್ರ ಸಚಿವರು ಸ್ಥಳ ಪರಿಶೀಲನೆ ಮಾಡಿ ತೀರ್ಮಾನ ಮಾಡಬೇಕು, ಒಂದು ವೇಳೆ ಅದೇ ಮಾರ್ಗದಲ್ಲಿ ಲೈನ್ ಎಳೆಯುವುದಾರರೆ ಮಾರುಕಟ್ಟೆ ಬೆಲೆಯಲ್ಲಿ ರೈತರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲೆಯ ಜನರು ಹಾಗೂ ರೈತರ ಅಗತ್ಯಕ್ಕೆ ಅನುಗುಣವಾಗಿ ಬೇಕಿರುವ ಸಾಮರ್ಥ್ಯದ ವಿದ್ಯುತ್ ಸ್ಥಾವರಗಳ ಮಂಜೂರಾತಿಗೆ ಕೇಂದ್ರ ಸರ್ಕಾರದಿಂದ ಎಲ್ಲ ಅಗತ್ಯ ಸಹಕಾರ ನೀಡಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲೆಗೆ ಪ್ರಸ್ತುತ 270 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯ ಅಗತ್ಯವಿದೆ, ಆದರೆ ಜಿಲ್ಲೆಯಲ್ಲಿ 180 ಮೆ.ವ್ಯಾ. ಮಾತ್ರ ಲಭ್ಯವಿದೆ, ಈ ಭಾಗದ ರೈತರಿಗೆ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ವಿದ್ಯುತ್ ಪೂರೈಸಲು 270 ಮೆ.ವ್ಯಾ. ವಿದ್ಯುತ್ ಅವಶ್ಯವಾಗಿ ಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು, ಕೆಪಿಟಿಸಿಎಲ್-ಬೆಸ್ಕಾಂ ಇಂಜಿನಿಯರ್ ಗಳು ಸಭೆಯಲ್ಲಿ ಹಾಜರಿದ್ದರು.