i
ಬೆಂಗಳೂರಿನಲ್ಲಿ ಕೃಷಿ ಪರಿಕರಗಳ ಬೃಹತ್ ದೇಸಿ ಸಮ್ಮೇಳನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ದೇಸಿ, ಸಮೇತಿ (ದಕ್ಷಿಣ), ಮತ್ತು ರಾಷ್ಟ್ರೀಯ ಹೈದರಾಬಾದ್ ಕೃಷಿ ನಿರ್ವಹಣಾ ಸಂಸ್ಥೆ (ಮ್ಯಾನೇಜ್) ರವರ ಸಹಯೋಗದೊಂದಿಗೆ ಇದೇ ಪ್ರಪ್ರಥಮ ಬಾರಿಗೆ ಸೆಪ್ಟೆಂಬರ್ 2023ರ ನಾಲ್ಕನೇ ವಾರದಲ್ಲಿ ದೇಸಿ ಸಮ್ಮೇಳನ-2023ವನ್ನು ಡಾ: ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮಾವೇಶ ಭವನ, ಕೃವಿವಿ, ಜಿಕೆವಿಕೆ, ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಒಂದು ದಿನದ ಸಮ್ಮೇಳನದ ಮುಖ್ಯಉದ್ದೇಶವೆಂದರೆ, ದಕ್ಷಿಣ ಕರ್ನಾಟಕದ 16 ಜಿಲ್ಲೆಗಳ ಕೃಷಿ ಪರಿಕರ ಮಾರಾಟಗಾರರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದು. ಸ್ಮರಣ ಸಂಚಿಕೆ ಬಿಡುಗಡೆ, ವಸ್ತು ಪ್ರದರ್ಶನ, ವಿಚಾರ ವಿನಿಮಯ, ಯಶೋಗಾಥೆಗಳು, ಚಿಂತನ ಮತ್ತು ಮಂಥನ ಮುಂತಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲುವುದು.
ದೇಶದಲ್ಲಿ ಕೃಷಿ-ಪರಿಕರ ಮಾರಾಟಗಾರರು ಕೃಷಿ ಪರಿಕರಗಳನ್ನು ರೈತರಿಗೆ ಮಾರಾಟ ಮಾಡುವ ಜೊತೆಗೆ ನಿರಂತರವಾಗಿ ಕೃಷಿ ತಾಂತ್ರಿಕ ಸಲಹಾ ಸೇವೆಯನ್ನು ನೀಡುವ ಮಹತ್ತರವಾದ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಬಹುತೇಕ ಕೃಷಿ ಪರಿಕರ ಮಾರಾಟಗಾರರು ಔಪಚಾರಿಕ ಕೃಷಿ ಶಿಕ್ಷಣವನ್ನು ಪಡೆದಿರುವುದಿಲ್ಲ. ಇವರಿಗೆ ಕೃಷಿಯ ಬಗ್ಗೆ ವೈಜ್ಞಾನಿಕ ಜ್ಞಾನ ನೀಡುವ ಉದ್ದೇಶದಿಂದ ದೇಶಾದ್ಯಂತ ಕೇಂದ್ರ ಸರ್ಕಾರದ ಹೈದರಾಬಾದ್ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ (ಮ್ಯಾನೇಜ್)ರವರು ಕೃಷಿ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಸಹಯೋಗದೊಂದಿಗೆ ಒಂದು ವರ್ಷದ ಅವಧಿಯ “ಕೃಷಿ ವಿಸ್ತರಣಾ ಸೇವೆಯಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಡಿಪ್ಲೊಮಾ ಕೋರ್ಸ್” (ದೇಸಿ) ಅನ್ನು2003 ರಿಂದ ನೀಡುತ್ತಿದೆ. ದೇಸಿ ಪ್ರಮಾಣ ಪತ್ರ ಪಡೆದವರು ಮಾತ್ರ ಕೃಷಿ ಪರಿಕರ ಮಾರಾಟಮಾಡಲು ಲೈಸೆನ್ಸ್ ಪಡೆಯಬಹುದು. ಕೃಷಿ ಪರಿಕರ ಮಾರಾಟಗಾರರು ತಮ್ಮ ವ್ಯಾಪಾರವನ್ನು ವೃದ್ಧಿಗೊಳಿಸುವ ಜೊತೆಗೆ ಅರೆ – ವಿಸ್ತರಣಾ ಕಾರ್ಯಕರ್ತರಾಗಿಯೂ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯದ ದಕ್ಷಿಣ ಭಾಗದ 16 ಜಿಲ್ಲೆಗಳಲ್ಲಿರುವ 38 ನೋಡಲ್ ಕೇಂದ್ರಗಳ ಮುಖಾಂತರ 6756 ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣ ಪತ್ರಗಳನ್ನು ನೀಡಿದೆ ಮತ್ತು ಪ್ರಸ್ತುತ1880 ಶಿಕ್ಷಣಾರ್ಥಿಗಳು ದೇಸಿ ಕೋರ್ಸ್ ಪಡೆಯುತ್ತಿದ್ದಾರೆ.
ಕೃಷಿ ಪರಿಕರ ಉದ್ದಿಮೆದಾರರು ಪ್ರಾಯೋಜಿಕತ್ವ ಅಥವಾ ಸ್ಮರಣ ಸಂಚಿಕೆಯಲ್ಲಿ ಜಾಹೀರಾತನ್ನು ನೀಡಬಹುದು.
ಪ್ಲಾಟಿನಮ್, ಗೋಲ್ಡ್ ಮತ್ತು ಸಿಲ್ವರ್ನ ಪ್ರಾಯೋಜಕತ್ವ ಮೊತ್ತ ಅನುಕ್ರಮವಾಗಿ 3, 2 ಮತ್ತು 1 ಲಕ್ಷ ರೂಪಾಯಿಗಳು. 10 x 10 ಅಡಿ ಅಳತೆಯ ಒಂದು ಪ್ರದರ್ಶನ ಮಳಿಗೆಯ ಮೊತ್ತ ರೂ.20,000/-. ಸ್ಮರಣ ಸಂಚಿಕೆಯಲ್ಲಿ ಜಾಹೀರಾತಿನ ದರ ಅರ್ಧ ಪುಟಕ್ಕೆ ರೂ.15,000, ಪೂರ್ತಿ ಪುಟ ರೂ.25,000, ಹಿಂದಿನ ಪುಟ ರೂ.75,000, ಮುಂದಿನ ಒಳಪುಟ ರೂ.50,000 ಮತ್ತು ಹಿಂದಿನ ಒಳಪುಟ ರೂ.50,000 ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಡಾ:ಬಿ.ಕಲ್ಪನ, ರಾಜ್ಯ ನೋಡಲ್ ಅಧಿಕಾರಿಗಳು (ದೇಸಿ), ಮೊ. ಸಂ . 9448088958 ಮತ್ತು ಕು. ಮಂಜುಳ. ಜಿ, ಯೋಜನಾ ಸಹಾಯಕರು ಮೊ. ಸಂ . 73493 52271 ರವರನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.