i
ಭದ್ರಾ ಬಲ ಹಾಗೂ ಎಡದಂಡೆ ನಾಲೆಗಳಿಗೆ ಇಂದಿನಿಂದ ನೀರು ಬಿಡುಗಡೆ, ಆದರೂ ರೈತರಿಂದ ವಿರೋಧ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
2023-24 ನೇ ಸಾಲಿನಲ್ಲಿ ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರನ್ನು ಸರದಿಯನ್ವಯ ಹರಿಸಲಾಗುವುದು ಎಂದು ಕ.ನೀ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತ ತಿಳಿಸಿದ್ದಾರೆ.ಭದ್ರಾ ಬಲದಂಡೆ ನಾಲೆಗಳಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 15 ರವರೆಗೆ ಒಟ್ಟು 20 ದಿನಗಳು ಹಾಗೂ ಅಕ್ಟೋಬರ್ 26 ರಿಂದ ನವೆಂಬರ್ 17 ರವರೆಗೆ ಒಟ್ಟು 23 ದಿನಗಳು ನೀರನ್ನು ಹರಿಸಲಾಗುವುದು.ಭದ್ರಾ ಎಡದಂಡೆ ನಾಲೆಗಳಿಗೆ ಈಗಾಗಲೇ ನೀರನ್ನು ಹರಿಸಲಾಗಿದ್ದು, ಅಕ್ಟೋಬರ್ 1 ರವರೆಗೆ ಒಟ್ಟು 15 ದಿನಗಳು ನೀರನ್ನು ಹರಿಸಲಾಗುತ್ತದೆ. ನಂತರ ಅಕ್ಟೋಬರ್ 12 ರಿಂದ 26 ರವರೆಗೆ ಒಟ್ಟು 15 ದಿನಗಳು ಹಾಗೂ ನವೆಂಬರ್ 6 ರಿಂದ 17 ರವರೆಗೆ ಒಟ್ಟು 12 ದಿನಗಳು ನೀರನ್ನು ಹರಿಸಲಾಗುದು ಎಂದು ಅವರು ತಿಳಿಸಿದ್ದಾರೆ.ಈ ಹಿಂದೆ ಭದ್ರಾ ಜಲಾಶಯದಿಂದ ಬೆಳೆಗಳಿಗೆ ಸತತವಾಗಿ ನೀರು ಬಿಡುವಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ದಾವಣಗೆರೆ ಬಂದ್ ಕೂಡ ಮಾಡಿದ್ದರು. ಈ ನಡುವೆ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರಿನಲ್ಲಿ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದರು. ಕೂಡಲೇ ಪೊಲೀಸರು ರೈತನ ಕೈಯಿಂದ ಕ್ರಿಮಿನಾಶಕದ ಬಾಟಲ್ ಕಸಿದುಕೊಂಡಿದ್ದರು. ಬಳಿಕ ರೈತರ ಪ್ರತಿಭಟನೆಯಿಂದ ಎಚ್ಚೆತ್ತ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರು ಭದ್ರಾ ನೀರಿನ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿ, ಇನ್ನೆರಡು ದಿನಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ದಾವಣಗೆರೆ ಜಿಲ್ಲೆಗೆ ಭದ್ರಾ ನೀರು ಬರುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದರು.ಇನ್ನು ಕಳೆದ ಆಗಸ್ಟ್ 10 ರಂದು ನೀರಾವರಿ ಸಲಹಾ ಸಮಿತಿಯವರು ನೀರು ಹರಿಸುವ ಸಂಬಂಧ ಸಭೆ ಆಯೋಜಿಸದೆಯೇ ಭದ್ರಾ ಬಲದಂಡೆ ಕಾಲುವೆಗೆ ನೀರು ಹರಿಸುವ ತೀರ್ಮಾನ ಕೈಗೊಂಡಿತ್ತು. ಅದರಂತೆ ಸತತ 100 ದಿನಗಳ ಕಾಲ ನೀರು ಹರಿಸುವ ಅಧಿಸೂಚನೆಯನ್ನೂ ಹೊರಡಿಸಲಾಗಿತ್ತು. ಭದ್ರ ಬಲ ಮತ್ತು ಎಡದಂಡೆ ಕಾಲುವೆಗಳಿಗೆ ನೀರು ಹರಿಸಿದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿತ್ತು. ಇದೀಗ ನೀರು ಬಿಟ್ಟಿರುವುದು ರೈತರಿಗೆ ಬಲ ಬಂದಂತಾಗಿದೆ. ಆದರೆ ಇದು ಆನ್ ಆ್ಯಂಡ್ ಆಫ್ ಪದ್ದತಿಯಾಗಿದ್ದು, ಕೊನೆ ಭಾಗಕ್ಕೆ ನೀರು ತಲುಪುವುದಿಲ್ಲ.ರೈತ ಮುಖಂಡ ಬಿ.ಎಂ.ಸತೀಶ್ ಮಾತನಾಡಿ, ಇಂದಿನಿಂದ ಭದ್ರಾ ನಾಲೆಗಳಲ್ಲಿ ನೀರು ಹರಿಸುವುದಾಗಿ ಭದ್ರಾ ನೀರಾವರಿ ಸಲಹಾ ಸಮಿತಿ ಕಾರ್ಯದರ್ಶಿ ಸುಜಾತಾ ಹೇಳಿದ್ದಾರೆ. ಇದು ಅಫ್ ಅಂಡ್ ಅನ್ ಪದ್ಧತಿಯಾಗಿದೆ. ಇದರಲ್ಲಿ ಯಾವ ಬದಲಾವಣೆ ಮಾಡಲಾಗಿಲ್ಲ. ರೈತರನ್ನು ಮೂರ್ಖರನ್ನಾಗಿಸುವ ಕುತಂತ್ರ . ನಮಗೆ ಅಫ್ ಅಂಡ್ ಅನ್ ಪದ್ಧತಿ ಬೇಡ ರಾಜ್ಯ ಕಾಂಗ್ರೆಸ್ ಸರ್ಕಾರ ತಾನು ನೀಡಿದ ಆದೇಶದಂತೆ ನಿರಂತರ 100 ದಿನ ನೀರು ಹರಿಸಬೇಕು. ರೈತರ ಒಕ್ಕೂಟ ಕಳೆದ 10 ದಿನಗಳಿಂದ ಹೋರಾಟ ಮಾಡುತ್ತಿದೆ. ರೈತರ ಹೋರಾಟಕ್ಕೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ಕಿಂಚಿತ್ತೂ ಮನ್ನಣೆ ನೀಡಿಲ್ಲ. ಇದು ಅವರ ರೈತ ವಿರೋಧಿ ಧೋರಣೆಯಾಗಿದೆ. 20 ದಿನ ನೀರು ಹರಿಸಿ 10 ದಿನ ನೀರು ಹರಿಸುವುದು ಅಫ್ ಅಂಡ್ ಅನ್ ಪದ್ಧತಿಯಾಗಿದೆ. ಇದರಿಂದ ಇಂಟರ್ನಲ್ ರೋಟೇಶನ್ ಸೇರಿ 20 ದಿನ ನೀರು ಸಿಗುವುದಿಲ್ಲ. ಆಗ ಭತ್ತದ ಬೆಳೆ ಒಣಗಿ ನಾಶವಾಗುತ್ತದೆ. ಪ್ರಸ್ತುತ ಈಗ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ 10 ದಿನ ನೀರು ನಿಲುಗಡೆ ಮಾಡಿದ್ರೂ ಬೆಳೆ ಒಣಗಿ ನಾಶವಾಗಿಲ್ಲ. ಆದ್ದರಿಂದ ನಿರಂತರ ನೀರು ಹರಿಸುವ ಪದ್ಧತಿ ಜಾರಿ ಮಾಡುವವರಿಗೂ ರೈತರ ಹೋರಾಟ ನಿಲ್ಲುವುದಿಲ್ಲ ಎಂದು ಬಿ ಎಂ.ಸತೀಶ್ ಮತ್ತು ನಾಗೇಶ್ವರರಾವ್ ತಿಳಿಸಿದ್ದಾರೆ. ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಸುಜಾತರವರು ಹೇಳಿರುವ ಪ್ರಕಾರ ಇಂದಿನಿಂದ ನೀರು ಹರಿಸಿ, ಅಕ್ಟೋಬರ್ 15 ರಂದು ನಿಲುಗಡೆ ಮಾಡಿ, ಪುನಃ ಅಕ್ಟೋಬರ್ 26 ರಿಂದ ನೀರು ಹರಿಸುವುದಾಗಿ ಹೇಳಿದ್ದಾರೆ. ಇದು ಅಫ್ ಅಂಡ್ ಅನ್ ಪದ್ಧತಿಯ ವೇಳಾಪಟ್ಟಿ. ಇದು ಬೇಡ ನಿರಂತರ ನೀರು ಹರಿಸುವ ಪದ್ಧತಿ ಜಾರಿ ಮಾಡಬೇಕು ಎಂಬುದು ದಾವಣಗೆರೆ ಜಿಲ್ಲೆಯ ರೈತರ ಬೇಡಿಕೆ. ಆದರೆ ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ಗಂಭೀರವಾಗಿ ಪರಿಗಣಿಸಿಲ್ಲ. ಕೇಳಿದ್ರೆ ಡಿ ಕೆ ಶಿವಕುಮಾರ್ ಕಡೆಗೆ ಬೊಟ್ಟು ಮಾಡಿ ತೋರಿಸಿ, ಅವರು ಕಾವೇರಿ ನೀರಿನ ಗದ್ದಲ್ಲದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ)ರಚಿಸಿದ ನಂತರ ಜಲಸಂಪನ್ಮೂಲ ಇಲಾಖೆಯ ಪಾತ್ರ ಇರುವುದಿಲ್ಲ. ನೀರು ಹರಿಸುವ ತೀರ್ಮಾನ ಐಸಿಸಿ ಸಭೆಯಲ್ಲಿ ಆಗಬೇಕು. ಈ ಐಸಿಸಿಯಲ್ಲಿ ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಸೇರಿದಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಎಂಜಿನಿಯರ್ ಗಳು ಇರುತ್ತಾರೆ. ಎಸ್ ಇ ಯವರು ಕಾರ್ಯದರ್ಶಿಯಾಗಿರುತ್ತಾರೆ. ಎಸ್ ಎಸ್ ಮಲ್ಲಿಕಾರ್ಜುನರವರು ವಾಸ್ತವ ವಿಷಯ ಬಿಟ್ಟು ರೈತರನ್ನು ಮೂರ್ಖರನ್ನಾಗಿಸುವ ಕುತಂತ್ರ ಮಾಡುತ್ತಿದ್ದಾರೆ ಎಂದು ಕೊಳೇನಹಳ್ಳಿ ಬಿ ಎಂ ಸತೀಶ್ ಮತ್ತು ಬೆಳವನೂರು ನಾಗೇಶ್ವರರಾವ್ ರವರು ತೀವ್ರವಾಗಿ ಟೀಕಿಸಿದ್ದಾರೆ.