i
ಸುಧಾಕರ್ ಪಾತ್ರ ಏನು, ಮಾಜಿ ಶಾಸಕಿ ಪೂರ್ಣಿಮಾ, ಪತಿ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಪಕ್ಷದ ಮುಖಂಡರಾದ ಹಿರಿಯೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಅವರ ಪತಿ ಡಿ.ಟಿ.ಶ್ರೀನಿವಾಸ್ ಅವರು ಶೀಘ್ರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.
2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಪೂರ್ಣಿಮಾ ಶ್ರೀನಿವಾಸ್ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನುವ ಮಾಹಿತಿ ಸಾಕಷ್ಟು ಹರಿದಾಡಿತ್ತು. ಆದರೆ ಈಗ ಕಾಲ ಕೂಡಿ ಬಂದಿದ್ದು ಕಳೆದ ತಿಂಗಳು ನಡೆದ ಕೃಷ್ಣ ಜಯಂತಿ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪೂರ್ಣಿಮಾ ಶ್ರೀನಿವಾಸ್ ಮನೆಗೆ ಭೇಟಿ ನೀಡಿ ಕೆವ ಸಮಯ ರಾಜಕೀಯ ಚರ್ಚೆ ನಡೆಸಿದ್ದರು. ಅದಾದ ನಂತರ ಮತ್ತೊಂದು ದಿನ ಪೂರ್ಣಿಮಾ, ಶ್ರೀನಿವಾಸ್ ಮತ್ತು ಡಿ.ಕೆ.ಶಿವಕುಮಾರ್ ಅವರು ಗೌಪ್ಯವಾಗಿ ಚರ್ಚಿಸಿದ್ದರು ಎನ್ನಲಾಗಿದೆ.
ಇದೆಲ್ಲರ ಫಲವಾಗಿ ಇದೇ ಅಕ್ಟೋಬರ್ ತಿಂಗಳ 14 ಅಥವಾ 24ನೇ ತಾರೀಕು ಅಧಿಕೃತವಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬೃಹತ್ ಅಭಿಮಾನಿಗಳು ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಂದು ಆಪ್ತ ಮೂಲಗಳು ತಿಳಿಸಿವೆ.
ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಬಿಜೆಪಿ ಪಕ್ಷದಿಂದ ಉಚ್ಟಾಚನೆಗೊಂಡಿದ್ದ ಡಿ.ಟಿ.ಶ್ರೀನಿವಾಸ್ ಅವರ ಉಚ್ಟಾಟನೆಯನ್ನು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪೂರ್ಣಿಮಾ ಅವರ ಒತ್ತಾಸೆ ಮೇರೆಗೆ ಬಿಜೆಪಿ ವರಿಷ್ಠರು ಹಿಂಪಡೆದಿದ್ದರು.
ಆಗ ಪತಿ, ಪತ್ನಿ ಇಬ್ಬರು ಒಗ್ಗಟಾಗಿ ಬಿಜೆಪಿ ಪಕ್ಷದ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದರಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಈಗ ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಿದ್ದು ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಮುಂದಿನ ನಡೆ ಏನು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣಿಮಾ ಹಿರಿಯೂರು ಅಥವಾ ಕೆಆರ್ ಪುರಂ ಕ್ಷೇತ್ರದಿಂದ ಸ್ಪರ್ಧಿಸುತ್ತಾರೋ ಕಾದು ನೋಡಬೇಕಿದೆ.
ಆದರೆ ಡಿ.ಟಿ.ಶ್ರೀನಿವಾಸ್ ಅವರು ಮಾತ್ರ ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು ಕಾಂಗ್ರೆಸ್ ಟಿಕೆಟ್ ಕೂಡಾ ಫೈನಲ್ ಆಗಿದೆ ಎನ್ನಲಾಗುತ್ತಿದೆ. ಮುಂದೆ ಯಾವ ರೀತಿಯ ರಾಜಕೀಯ ಬೆಳವಣಿಗೆಗಳು ಸಂಭವಿಸಲಿವೆ ಎನ್ನುವುದನ್ನ ಈಗಲೇ ಹೇಳಲು ಸಾಧ್ಯವಿಲ್ಲ.