i
ಸ್ವದೇಶಿ, ಅಸಹಕಾರ ಚಳವಳಿ ಮೂಲಕ ಸ್ವಾತಂತ್ರ್ಯಕ್ಕೆ ಶ್ರಮಿಸಿದ ಮಹಾನ್ ನಾಯಕ ಗಾಂಧಿಜಿ-ಕುಲಪತಿ ಗಂಗಾಧರ್…
ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಮಹಾತ್ಮ ಗಾಂಧಿಜೀ ಒಬ್ಬ ಉತ್ತಮ ಪರಿಸರವಾದಿಯಾಗಿದ್ದರು. ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಪರಿಸರ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಆ ಮೂಲಕ ದೇಶದ ಸ್ವಚ್ಛತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಕುಲಪತಿ ಪ್ರೊ. ಎಂ ಆರ್ ಗಂಗಾಧರ್ ಕರೆಕೊಟ್ಟರು.ಚಾಮರಾಜನಗರ ವಿಶ್ವವಿದ್ಯಾನಿಲಯ, ಸುವರ್ಣಗಂಗೋತ್ರಿ ಆವರಣದಲ್ಲಿ ಮಹಾತ್ಮ ಗಾಂಧಿಜೀ ಅವರ ಜಯಂತಿಯನ್ನು ವಿಶ್ವವಿದ್ಯಾಲಯದ ಸ್ವಚ್ಛತಾ ಸಿಬ್ಬಂದಿಗಳನ್ನು ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಮ್ಮ ದೇಶ ಶೇ. 80ರಷ್ಟು ಗ್ರಾಮೀಣ ಪ್ರದೇಶಗಳಿಂದ ಕೂಡಿದ್ದು ಗ್ರಾಮಗಳ ಉದ್ಧಾರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನಂಬಿ ಅದಕ್ಕಾಗಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಖಾದಿ ಹಾಗೂ ಇನ್ನಿತರ ಸ್ವದೇಶಿ ಉತ್ಪನ್ನಗಳನ್ನು ತಯಾರಿಸಿ ಬಳಸುವುದರ ಮೂಲಕ ನಮ್ಮ ದೇಶದ ಪ್ರಗತಿಯನ್ನು ಸಾಧಿಸಿಕೊಳ್ಳಬೇಕು ಎಂದು ಗಾಂಧಿಜೀ ಅವರು ತಿಳಿಸಿದ್ದರು ಎಂದರು.ಸ್ವದೇಶಿ ಚಳವಳಿ, ಅಸಹಕಾರ ಚಳವಳಿಯ ಮೂಲಕ ದೇಶದ ಸ್ವಾತಂತ್ರ್ಯಕ್ಕೆ ಶ್ರಮಿಸಿದ ಮಹಾನ್ ನಾಯಕ ಗಾಂಧಿಜೀಯವರ ಆದರ್ಶ ಮತ್ತು ತತ್ವಸಿದ್ಧಾಂತಗಳನ್ನು ಕೇವಲ ಅಕ್ಟೋಬರ್ ಎರಡಕ್ಕೆ ಸೀಮಿತಗೊಳಿಸದೆ ಅದಕ್ಕೆ ಬದ್ಧವಾಗಿ ಪ್ರತಿದಿನ ಪಾಲಿಸಬೇಕು ಎಂದು ಕುಲಪತಿ ಪ್ರೊ. ಎಂ ಆರ್ ಗಂಗಾಧರ್ ಅವರು ಅಭಿಪ್ರಾಯಪಟ್ಟರು.ಪರೀಕ್ಷಾಂಗ ಕುಲಸಚಿವ ಪ್ರೊ. ಪಿ ಮಾದೇಶ್ ಮಾತನಾಡಿ ಮಹಾತ್ಮ ಗಾಂಧಿಜೀಯವರದ್ದು ಇಡೀ ಜಗತ್ತೆ ಮೆಚ್ಚಿದ ಮೇರು ವ್ಯಕ್ತಿತ್ವ. ಅವರ ಸರಳತೆಯೇ ಸರ್ವರಿಗೂ ಮಾದರಿಯಾಗುವ ಗುಣವಾಗಿದೆ. ಅವರು ಅಹಿಂಸೆಯ ಮೂಲಕ ಸ್ವಾತಂತ್ರ್ಯವನ್ನು ಪಡೆಯುವಲ್ಲಿ ಯಶಸ್ವಿಯಾದ ನಾಯಕ. ಆಧುನಿಕತೆಯ ಈ ಯುಗದಲ್ಲಿ ಅವರ ಸರಳತೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಗಾಂಧಿಜೀಯವರ ಅಹಿಂಸಾವಾದ, ದಲಿತ್ತೋದ್ಧಾರ ಹಾಗೂ ಗ್ರಾಮೋದ್ಧಾರದ ಪರಿಕಲ್ಪನೆಗಳು ಇಡೀ ಜಗತ್ತಿಗೆ ಉತ್ತಮವಾದ ಪರಿಕಲ್ಪನೆಗಳಾಗಿವೆ. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿರುವುದು ಬಹಳ ಹೆಮ್ಮೆಯ ಸಂಗತಿ ಎಂದರು.ಪಿ.ಎಂ.ಇ.ಬಿ ನಿರ್ದೇಶಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಿ ಜಿ ಸಿದ್ದರಾಜು ಮಾತನಾಡಿ ಯಾವುದೇ ದೇಶದ ಪ್ರಗತಿಗೆ ಆ ದೇಶದ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಂಪರೆ ಕಾರಣವಾಗುತ್ತದೆ. ಗಾಂಧಿಜೀಯವರು ದೇಶದ ಪ್ರಗತಿಯ ಯೋಜನೆಗಳನ್ನು ರೂಪಿಸುವಾಗ ಈ ಭೌಗೋಳಿಕ ಹಾಗೂ ಸಾಂಸ್ಕೃತಿಕ ಹಿನ್ನಲೆಯನ್ನೇ ಪ್ರಮುಖವಾಗಿ ಬಳಸಿಕೊಳ್ಳಬೇಕು ಎಂಬುದನ್ನು ಸಾರುತ್ತಿದ್ದರು ಎಂದು ತಿಳಿಸಿದರು. ಹಳ್ಳಿಗಳಲ್ಲಿ ನಡೆಯುತ್ತಿದ್ದ ಕರಕುಶಲ ವಸ್ತುಗಳ ತಯಾರಿಕೆ, ಗುಡಿ ಕೈಗಾರಿಗಳ ಸ್ಥಾಪನೆ, ಖಾದಿ ಗ್ರಾಮೀಣ ಉದ್ಯೋಗ, ಗ್ರಾಮೀಣ ಆರೋಗ್ಯ ಇಂತಹ ಯೋಜನೆಗಳು ಹಳ್ಳಿಯ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆಗೆ ಸ್ವದೇಶಿ ಉತ್ಪನ್ನಗಳ ಬಳಕೆಯಿಂದಾಗಿದೆ ದೇಶದ ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ. ಹಾಗಾಗಿ ಗಾಂದೀಜಿಯವರ ಆರ್ಥಿಕ ಚಿಂತನೆಗಳನ್ನು ಪ್ರಸ್ತುತ ಸಂದರ್ಭದಲ್ಲಿ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಡಾ. ವಿ ಜಿ ಸಿದ್ದರಾಜು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಭಾಗ್ಯ, ಕನ್ನಡ ವಿಭಾದ ಮುಖ್ಯಸ್ಥ ಬಸವಣ್ಣ, ಗಣಿತಶಾಸ್ತ್ರ ವಿಭಾಗದ ಹಜೀರಾ ಭಾನು, ಉಪನ್ಯಾಸಕರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.