i
ರೈತರಿಗೆ ಹಸು ಕೊಳ್ಳಲು 40 ಸಾವಿರ ಸಬ್ಸಿಡಿ, ಪ್ರತ್ಯೇಕ ಹಾಲಿನ ಒಕ್ಕೂಟ ಸಚಿವರ ಭರವಸೆ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ಪ್ರತ್ಯೇಕ ಹಾಲಿನ ಒಕ್ಕೂಟವಾಗಬೇಕು ಎಂದು ಶಿವಮೊಗ್ಗದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧಾರವಾಗಿದೆ. ಈ ವಿಷಯ ತಿಳಿದ ಕೂಡಲೇ, ದಾವಣಗೆರೆ ಜಿಲ್ಲೆಯ ರೈತರು, ಹಾಲು ಉತ್ಪಾದಕರು ನಾನಾ ಕನಸುಗಳನ್ನು ಕಟ್ಟಲು ಚಿಂತಿಸತೊಡಗಿದ್ದಾರೆ. ಈ ಕಾರ್ಯಕ್ಕಾಗಿ ತೆರೆಮರೆಯಲ್ಲಿ ಒಕ್ಕೂಟ ಸ್ಥಾಪನೆಗೆ ಸಂಬಂಧಿಸಿದ ಕೆಲಸಗಳನ್ನು ಹಾಲು ಒಕ್ಕೂಟದ ನಿರ್ದೇಶಕರು, ರಾಜಕಾರಣಿಗಳು ಸಜ್ಜಾಗಿದ್ದಾರೆ.ಮಾಯಕೊಂಡ ಸಮೀಪದ ಕಲ್ಪನಹಳ್ಳಿಯಲ್ಲಿ 14 ಎಕರೆ ಜಮೀನು ಇದ್ದು ಈ ಜಾಗದಲ್ಲೇ ಪ್ರತ್ಯೇಕ ಹಾಲಿನ ಒಕ್ಕೂಟದ ಕಟ್ಟಡಕ್ಕೆ ಗುದ್ದಲಿ ಪೂಜೆಯಾಗಬೇಕಿದ್ದು, 200 ಕೋಟಿ ಹಣ ಬೇಕಾಗಿದೆ. ಇದಕ್ಕಾಗಿ ಮುಂದಿನ ಬಜೆಟ್ನಲ್ಲಿ ಹಣ ಇಡಲು ಸಚಿವ ಮಲ್ಲಿಕಾರ್ಜುನ ಮೇಲೆ ನಿರ್ದೇಶಕರು ಒತ್ತಡ ತರುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್, ಬಿಜೆಪಿ ಸರಕಾರವಿದ್ದಾಗಲೂ ಬಜೆಟ್ನಲ್ಲಿ ಪ್ರತ್ಯೇಕ ಹಾಲಿನ ಒಕ್ಕೂಟ ಸ್ಥಾಪನೆಗೆ ಮಂಡಿಸಲಾಗಿತ್ತು. ಆದರೆ ಹಣ ಇಡಲಾಗಿರಲಿಲ್ಲ. ಈಗ ಸರ್ಕಾರ ಎಷ್ಟು ಹಣ ಕೊಡುತ್ತದೆಯೋ ಅಷ್ಟೂ ಕೆಲಸ ಮಾಡಲು ನಿರ್ದೇಶಕರು ತೀರ್ಮಾನ ಮಾಡಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಸಹ ಶಿವಮೊಗ್ಗ ಹಾಲು ಒಕ್ಕೂಟದಿಂದ ದಾವಣಗೆರೆ ಮತ್ತು ಚಿತ್ರದುರ್ಗ ಸೇರಿ ಪ್ರತ್ಯಕ ಹಾಲು ಒಕ್ಕೂಟ ದಾವಣಗೆರೆಯಲ್ಲಿ ಶೀಘ್ರದಲ್ಲೇ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಹಸು ಖರೀದಿಗೆ ತಲಾ 40 ಸಾವಿರ ರೂ. ಸಬ್ಸಿಡಿಯೊಂದಿಗೆ 5 ರಿಂದ 10 ಸಾವಿರ ಹಸುಗಳನ್ನು ರೈತರಿಗೆ ಕೊಡಿಸುವ ಗುರಿ ಇಟ್ಟು ಕೊಂಡಿದ್ದಾರೆ.ಶಿಮುಲ್ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಈ ಮೂರು ಜಿಲ್ಲೆಗಳಲ್ಲಿ ಸುಮಾರು 1300 ಹಾಲು ಉತ್ಪಾದಕರ ಸಂಘಗಳಿದ್ದು 1.60 ಲಕ್ಷ ಹಾಲು ಉತ್ಪಾದಕ ಸದಸ್ಯರಿದ್ದಾರೆ.
ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಸುಮಾರು 700 ಹಾಲು ಉತ್ಪಾಕದ ಸಂಘಗಳಲ್ಲಿ ಸುಮಾರು 95 ಸಾವಿರ ಹಾಲು ಉತ್ಪಾದಕರಿಂದ 3.75 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಶಿವಮೊಗ್ಗದಲ್ಲಿ ಸುಮಾರು 600 ಸಂಘಗಳ 65 ಸಾವಿರ ಉತ್ಪಾದಕರಿಂದ 3.25 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮೂರೂ ಜಿಲ್ಲೆಗಳಿಂದ ಪ್ರತಿದಿನ ಸುಮಾರು 7 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ದಾವಣಗೆರೆಯ ದೊಡ್ಡಬಾತಿಯಲ್ಲಿ ಪ್ರತ್ಯೇಕ ಡೈರಿ, ಸಂಸ್ಕರಣಾ ಘಟಕ ಈಗಾಗಲೇ ಇದೆ. ಚಿತ್ರದುರ್ಗ-ದಾವಣಗೆರೆಯ ಎರಡೂ ಜಿಲ್ಲೆಯಲ್ಲಿ 40 ಬಲ್ಕ್ ಮಿಲ್ಕ್ ಕೂಲರ್, 7 ಶೀಥಲೀಕರಣ ಘಟಕಗಳಿವೆ. ದೊಡ್ಡಬಾತಿಯಲ್ಲಿ ಕಚೇರಿಗೂ ಬೇಕಾದ ಸೌಲಭ್ಯಗಳಿವೆ. ಹೊಸ ಒಕ್ಕೂಟ ಸ್ಥಾಪನೆಗೆ ಬೇಕಾದ ಎಲ್ಲ ಮೂಲ ಸೌಲಭ್ಯಗಳು ಈಗಾಗಲೇ ಇರುವುದರಿಂದ ದೊಡ್ಡ ಮೊತ್ತದ ಅನುದಾನ ಸಹ ಬೇಕಿಲ್ಲ.ದಾವಣಗೆರೆಯಲ್ಲಿ 31 ಸಾವಿರದ 218 ಸದಸ್ಯರು ಇದ್ದರೇ ಚಿತ್ರದುರ್ಗದಲ್ಲಿ 12884 ಸದಸ್ಯರು ಇದ್ದಾರೆ. ಎರಡು ಲಕ್ಷದ ನಲವತ್ತಾರು ಸಾವಿರದ ಇನ್ನೂರ ಎಪತ್ತು ಲೀಟರ್ ದಾವಣಗೆರೆ, 1 ಲಕ್ಷದ ನಲವತ್ತೊಂಭತ್ತು ಸಾವಿರದ ಒಂಭೈನೂರ ಎಂಭೈತ್ತೈದು ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ನಾಲ್ಕು ಲಕ್ಷದ ತನಕ ಹಾಲಿನ ಉತ್ಪಾದನೆಯಾಗುತ್ತಿರುವುದರಿಂದ ಮೆಗಾಡೈರಿ ಮಾಡಬಹುದಾಗಿದೆ. ಈ ಮೆಗಾ ಡೈರಿ ಯಾದರೆ ಸುಮಾರು ನಾಲ್ಕುಸಾವಿರಕ್ಕೂ ಹೆಚ್ಚು ಜನರಿಗೆ ಪ್ರತ್ಯೇಕ್ಷ, ಪರೋಕ್ಷವಾಗಿ ಉಪಯೋಗವಾಗಲಿದೆ. ಇನ್ನು ಉಪ ಉತ್ಪನ್ನಗಳ ಪ್ಲಾಂಟ್ಗಳನ್ನು ಹಾಕಿ, ರೈತರಿಗೆ ಅನುಕೂಲ ಮಾಡಿಕೊಡಬಹುದಾಗಿದೆ. ಇನ್ನೂ ಬಾತಿ ಡೈರಿಯಲ್ಲಿ ಪ್ಯಾಕಿಂಗ್ ಯೂನಿಟ್ನ್ನು ನವೀಕರಣ ಮಾಡಲಾಗುವುದು ಎಂದು ಶಿಮುಲ್ ಉಪಾಧ್ಯಕ್ಷ ಬಸಪ್ಪ ಹೇಳುತ್ತಾರೆ. ಸದ್ಯ ಇಲ್ಲಿ ಪ್ಯಾಕಿಂಗ್ ಯೂನಿಟ್ ಇದ್ದು, 1 ಲಕ್ಷ ಪ್ಯಾಕಿಂಗ್ ಮಾಡಲಾಗುತ್ತಿದೆ.ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಆಗಬೇಕೆಂಬುದು ದಾವಣಗೆರೆ ಜಿಲ್ಲೆ ಹೈನುಗಾರರ, ಸಹಕಾರಿಗಳ ಬಹಳ ವರ್ಷಗಳ ಕನಸಾಗಿದೆ, ಹಾಗೇ ಅದು ನಮ್ಮ ಕನಸು ಕೂಡ. ಈ ನಿಟ್ಟಿನಲ್ಲಿ ನಾವು ಸಚಿವರಾಗಿದ್ದಾಗಲೇ ಸಾಕಷ್ಟು ಪ್ರಯತ್ನ ನಡೆದಿದ್ದವು. ಆದರೆ, ಆ ವೇಳೆಗೆ ಸರ್ಕಾರ ಬದಲಾದ ಕಾರಣ ಕನಸು ನನಸಾಗಲಿಲ್ಲ. ಈ ಬಾರಿ ಶಿವಮೊಗ್ಗ ಹಾಲು ಒಕ್ಕೂಟದಿಂದ ದಾವಣಗೆರೆ-ಚಿತ್ರದುರ್ಗ ಬೇರ್ಪಡಿಸಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಸಚಿವ ಮಲ್ಲಿಕಾರ್ಜುನ್ ಭರವಸೆ ನೀಡಿದ್ದಾರೆ. ಹಾಲು ಉತ್ಪಾದನೆ ಹೆಚ್ಚಿಸಲು ಜಿಲ್ಲೆಯ ಪ್ರತಿಯೊಬ್ಬ ಹೈನುಗಾರರಿಗೆ ಹಸು ಖರೀದಿಸಲು ಸರ್ಕಾರದಿಂದ 40,000 ರೂ. ಸಬ್ಸಿಡಿ ಕೊಡಿಸುವ ಜವಾಬ್ದಾರಿ ನಮ್ಮದು. ಇದರಿಂದ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚುವ ಜತೆಗೆ, ರೈತರ ಆದಾಯ ಕೂಡ ಹೆಚ್ಚಾಗುತ್ತದೆ. ಈಗಾಗಲೆ ಈ ಸಂಬಂಧ ನಾವು ಯೋಜನೆ ಒಂದನ್ನು ಸಿದ್ಧಪಡಿಸಿದ್ದೇವೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ. ಅಲ್ಲದೆ ಶೀಘ್ರವೇ ದಾವಣಗೆರೆಯಲ್ಲಿ ಮೆಗಾ ಡೈರಿ ಸ್ಥಾಪನೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ದಾವಣಗೆರೆ- ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣ ಮಾಡಿ, ಪ್ರತಿ ಹಸು ಖರೀದಿಗೆ 40 ಸಾವಿರ ರೂ ಸಬ್ಸಿಡಿ ಕೊಡಲಾಗುವುದು. ಗ್ರಾಮೀಣ ಪ್ರದೇಶದ ಜನರು ಇದರಿಂದ ಅಭಿವೃದ್ಧಿಯಾಗುತ್ತಾರೆ. 5 ರಿಂದ 10 ಸಾವಿರ ಹಸು ಖರೀದಿಸಿದರೂ ಕೂಡ ಸಬ್ಸಿಡಿ ನೀಡಲಾಗುವುದು.ಹಾಲು ಒಕ್ಕೂಟದ ಸದಸ್ಯರು ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕರು ಜನರಿಗೆ ಒಳ್ಳೆಯ ಸೇವೆ ನೀಡಿದ್ದೇ ಆದಲ್ಲಿ ಜನರು ಆರ್ಥಿಕವಾಗಿ ಸ್ವಾವಲಂಭಿಗಳಾಗಲಿದ್ದಾರೆ. ಸರ್ಕಾರಕ್ಕೂ ತೆರಿಗೆ ಹೆಚ್ಚು ಬರಲಿದೆ.ಎಸ್.ಎಸ್.ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ.
ದಾವಣಗೆರೆ ಪ್ರತ್ಯೇಕ ಹಾಲಿನ ಒಕ್ಕೂಟಕ್ಕೆ ಹಣ ಹೊಂದಿಸಲು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬಳಿ ನಿಯೋಗ ಹೋಗಲಿದ್ದೇವೆ. ಶೀಘ್ರವೇ ಮೆಗಾಡೈರಿಗೆ ಸಚಿವರಿಂದಲೇ ಗುದ್ದಲಿ ಪೂಜೆ ಮಾಡಿಸುತ್ತೇವೆ.ಬಸಪ್ಪ, ಶಿಮುಲ್ಉಪಾಧ್ಯಕ್ಷ.ದಾವಣಗೆರೆ ಅಭಿವೃದ್ಧಿಗಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಾಕಷ್ಟು ಹಣ ತಂದಿದ್ದು, ಡಿಸಿಸಿ ಬ್ಯಾಂಕ್ನ್ನು ದಾವಣಗೆರೆಗೆ ತಂದಿದ್ದು ಅವರೇ, ಪ್ರತ್ಯೇಕ ಹಾಲಿನ ಒಕ್ಕೂಟ ಸ್ಥಾಪನೆ ಸಚಿವರ ಕನಸಾಗಿದ್ದು, ಹಸುಗಳಿಗೆ ಸಬ್ಸಿಡಿ ಕೊಡುವುದಾಗಿ ಹೇಳಿದ್ದಾರೆ. ಇದರಿಂದ ಸಾಕಷ್ಟು ರೈತರು ಹೈನುಗಾರಿಕೆಯಲ್ಲಿ ತೊಡಗಲಿದ್ದು, ಆರ್ಥಿಕವಾಗಿ ಸಬಲರಾಗುತ್ತಾರೆ. ಅಲ್ಲದೇ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಹೇಳಿರುವಂತೆ ಡಿಸಿಸಿ ಬ್ಯಾಂಕ್ನಿಂದ ಸಹಕಾರ ನೀಡಲಾಗುವುದು.–ಡಾ.ಜೆ.ಆರ್.ಷಣ್ಮುಖಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ.ಪ್ರತ್ಯೇಕ ಹಾಲಿನ ಒಕ್ಕೂಟ ಆಗಬೇಕೆಂಬ ಕನಸು ಸಾಕಷ್ಟು ರೈತರದಾಗಿತ್ತು. ಹಿಂದಿನಿದಲೂ ಹೋರಾಟ ಮಾಡುತ್ತಲೇ ಬಂದಿದ್ದೇವೆ. ದಾವಣಗೆರೆಯಲ್ಲಿ ಮೆಗಾಡೈರಿ ಸ್ಥಾಪನೆಯಾದರೆ ರೈತರು ಅಭಿವೃದ್ಧಿಗೊಳ್ಳುವುದಲ್ಲದೇ, ಹೈನೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ. ಜಗದೀಶಪ್ಪ ಬಣಕಾರ್, ಶಿಮುಲ್ನಿರ್ದೇಶಕ.