i
ಮಳೆಗಾಗಿ ದುರ್ಗಾಂಬಿಕಾ ದೇವಿ ಪ್ರಾರ್ಥನೆ ಮಾಡಿದ ಶಾಮನೂರು ಶಿವಶಂಕರಪ್ಪ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಜಿಲ್ಲೆಯ ವಿವಿಧೆಡೆ ನವರಾತ್ರಿ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.ನಗರದೇವತೆ ದುರ್ಗಾಂಬಿಕಾ ದೇವಸ್ಥಾನ, ನಿಜಲಿಂಗಪ್ಪ ಬಡಾವಣೆಯ ಶಾರದಾಂಬ ದೇವಾಲಯ, ಎಸ್ಕೆಪಿ ರಸ್ತೆಯ ಕನ್ಯಕಾಪರಮೇಶ್ವರಿ ದೇವಸ್ಥಾನ ಹಾಗೂ ದಾವಲ್ಪೇಟೆಯ ಚೌಡೇಶ್ವರಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು.ನಗರದೇವತೆ ದುರ್ಗಾಂಬಿಕಾ ದೇವಾಲಯದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಡಾ.ಪ್ರಭಾ ಮಲ್ಲಿಕಾರ್ಜುನ್, ಉದ್ಯಮಿ ಎಸ್.ಎಸ್.ಗಣೇಶ್, ಬಕ್ಕೇಶ್ ಹಾಗೂ ಕುಟುಂಬದವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.ಗಣೇಶ, ಈಶ್ವರ, ಕಲ್ಲೇಶ್ವರ ದೇವರುಗಳಿಗೂ ಪೂಜೆ ಅಭಿಷೇಕ, ಅಲಂಕಾರ ಮಾಡಲಾಗಿತ್ತು. ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ನ ಗೌಡ್ರ ಚನ್ನಬಸಪ್ಪ, ಎಚ್.ಬಿ. ಗೋಣೆಪ್ಪ, ಉಮೇಶ್ ಸಾಳಂಕಿ, ಶಂಕರರಾವ್ ಶಿಂಧೆ, ಗುರುರಾಜ್ ಸೊಪ್ಪಿನ್ ಮುಂತಾದವರು ಇದ್ದರು.ಸಂಜೆ ದುರ್ಗಾಂಬಿಕಾ ದೇವಿಗೆ ಘಟಸ್ಥಾಪನೆ ಹಂಸವಾಹನ ಅಲಂಕಾರ ಮಾಡಲಾಗಿತ್ತು.
ಹಂಸವಾಹನ ಅಲಂಕಾರ: ಇಲ್ಲಿನ ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯಲ್ಲಿನ ಗಣಪತಿ, ಶಾರದಾಂಬ, ಚಂದ್ರಮೌಳೀಶ್ವರ ಮತ್ತು ಶಂಕರರಾಚಾರ್ಯರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮೊದಲನೇ ದಿವಸ ಬೆಳಿಗ್ಗೆ ಗಂಗೆ ಪೂಜೆ, ಗಣಪತಿ ಪೂಜೆ, ಋತ್ವಿಕ್ ವರ್ಣ, ನವಗ್ರಹ, ಮೃತ್ಯುಂಜಯ, ದುರ್ಗಾ ಜಪಗಳು ಮತ್ತು ಸಪ್ತಶತಿ ಪಾರಾಯಣ ನಡೆಯಿತು.ಸಂಜೆ ಏಕರಾಗದಲ್ಲಿ ಸೌಂದರ್ಯ ಲಹರಿ ಹಾಡುಗಾರಿಕೆ, ಹರಿಹರದ ದತ್ತಾತ್ರೇಯ ಭಟ್ ಅವರಿಂದ ‘ದುರ್ಗಾಪೂಜೆ‘ ವಿಧಾನ ಕುರಿತು ಉಪನ್ಯಾಸ ನಡೆಯಿತು. ಸಂಜೆ ದೇವಿಗೆ ಹಂಸವಾಹನ ಅಲಂಕಾರ ಮಾಡಲಾಗಿತ್ತು.