i
ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ: ಶಿವಶಾಂತವೀರ ಸ್ವಾಮೀಜಿ…
ಚಂದ್ರವಳ್ಳಿ ನ್ಯೂಸ್, ಚನ್ನಗಿರಿ:
ರಾಷ್ಟ್ರಾದ್ಯಂತ ಹೆಣ್ಣು ಭ್ರೂಣಹತ್ಯೆಯನ್ನು ತಡೆಗಟ್ಟಲು ಸಿ.ಎಂ. ಜಕ್ಕಾಳೆಯವರು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದಾಯಾತ್ರೆಯನ್ನು ಹಮ್ಮಿಕೊಂಡಿರುವುದು ಅವರ ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಯನ್ನು ತೋರಿಸುತ್ತದೆ ಎಂದು ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಹೇಳಿದರು.ಪಟ್ಟಣದ ಬಸವೇಶ್ವರ ದೇಗುಲದಲ್ಲಿ ವೀರಶೈವ ಕುಂಬಾರ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೆಣ್ಣು ಬ್ರೂಣ ಹತ್ಯೆ ತಡೆಗಟ್ಟುವ ಕಾರ್ಯಕ್ರಮಕ್ಕೆ ಸಮಾಜದವರ ಜೊತೆಗೂಡಿ ಚಾಲನೆ ನೀಡಿ ಮಾತನಾಡಿ, ಇಂದಿನ ಸಮಾಜದಲ್ಲಿ ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ಬಂದಿದ್ದರೂ ಹೆಣ್ಣುಭ್ರೂಣ ಎಂದಾಕ್ಷಣ ತೆಗೆದುಹಾಕುವ ಕೆಲಸ ಮಾಡುತ್ತಿದ್ದಾರೆ.ಯಾವುದೇ ಒಂದು ಜೀವಿಯು ಭೂಮಿಗೆ ಬೇಕಾದರೆ ದೇವರ ಅನುಗ್ರಹ ಇರಬೇಕು. ಆದರೆ ಅಂತಹ ಶಿಶುಗಳನ್ನು ಕೊಲ್ಲುವುದು ಮಹಾಪರಾಧವಾಗಿದೆ ಎಂದರು. ಕಾರ್ಯಕ್ರಮದ ರುವಾರಿ ಹೊನ್ನಾಳಿ ಗ್ರಾಮದ ಸಿ.ಎಂ. ಜಕ್ಕಾಳೆಯವರು ಮಾತನಾಡಿ, ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಸುಮಾರು ೩೬೫೦ ಕಿ.ಮೀಗಳನ್ನು ಕ್ರಮಿಸಬೇಕಾಗುತ್ತದೆ. ನಮ್ಮ ಈ ಕಾರ್ಯಕ್ಕೆ ನಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರು ಸಹಕಾರ ನೀಡಿದ್ದು ದೆಹಲಿಯನ್ನು ತಲುಪಿ ಪ್ರಧಾನಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷೀದೇವಮ್ಮ , ಸದಸ್ಯೆ ಕಮಲ ಹರೀಶ, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಲತಾ ರಾಜೇಶ್, ಮಹಿಳಾ ರಕ್ಷಣಾ ವೇದಿಯ ಅಧ್ಯಕ್ಷೆ ಜ್ಯೋತಿ ಕೋರಿ, ಹೊನ್ನಾಳಿ ತಾಲ್ಲೂಕಿನ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಅಧ್ಯಕ್ಷೆ ಶ್ವೇತ ಬಸವರಾಜ್, ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಸಹ ಕಾರ್ಯದರ್ಶಿ ರೇಖಾ ಲೋಕೇಶ್, ಕುಂಬಾರ ಸಮಾಜದರು ಆಗಮಿಸಿ ಪಾದಯಾತ್ರೆಗೆ ಶುಭ ಕೋರಿದರು.