i
ನಗರಸಭೆಯಿಂದ ರಾತ್ರೋರಾತ್ರಿ ಕುವೆಂಪು-ಪುನೀತ್ ರಾಜ್ಕುಮಾರ್ ಪುತ್ಥಳಿ ತೆರವು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು: Kuvempu-Puneeth Rajkumar Putthali cleared overnight by Municipal Council..
ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಪ್ರಧಾನ ರಸ್ತೆಯಲ್ಲಿ ಸರ್ಕಾರಿ ಬಸ್ ನಿಲ್ದಾಣದ ಬಳಿ ಸ್ಥಾಪಿಸಲಾಗಿದ್ದ ಕರ್ನಾಟಕದ ರತ್ನ ಪುನೀತ್ ರಾಜ್ ಕುಮಾರ್ ರವರ ಪುತ್ಥಳಿ ಹಾಗೂ ರಂಜಿತ್ ಹೋಟೆಲ್ ಸರ್ಕಲ್ ನಲ್ಲಿ ಸ್ಥಾಪಿಸಲಾಗಿದ್ದ ರಾಷ್ಟ್ರಕವಿ ಕುವೆಂಪುರವರ ಪುತ್ಥಳಿಗಳನ್ನು ನಗರಸಭೆ ವತಿಯಿಂದ ಗುರುವಾರ ರಾತ್ರಿ ಸುಮಾರು ೧ ಗಂಟೆ ಸಮಯದಲ್ಲಿ ಸೂಕ್ತ ಪೋಲೀಸ್ ಬಂದೋಬಸ್ತ್ ನೊಂದಿಗೆ ಸ್ಥಳಾಂತರಿಸಲಾಗಿದೆ, ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕರವೇ ಕಾರ್ಯಕರ್ತರು ಈ ಪ್ರತಿಮೆಗಳು ಕನ್ನಡದ ಆಸ್ತಿ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಪುತ್ಥಳಿಗಳು ಆದ್ದರಿಂದ ಈ ಪ್ರತಿಮೆಗಳನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಎಂಬುದಾಗಿ ನಗರಸಭೆ ಆಯುಕ್ತರ ಜೊತೆ ಹಾಗೂ ಪೋಲೀಸರ ಜೊತೆ ವಾಗ್ವಾದಕ್ಕಿಳಿದರು.
ನಗರಸಭೆಯಿಂದ ಯಾವುದೇ ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸುವುದು ಕಾನೂನುಬಾಹಿರ ವರ್ತನೆಯಾಗಿದೆ ಎಂಬುದಾಗಿ ನಗರಸಭೆ ಆಯುಕ್ತರು ಹಾಗೂ ಪೋಲೀಸ್ ಅಧಿಕಾರಿಗಳು ಕರವೇ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಇದಾವುದಕ್ಕೂ ಜಗ್ಗದ ಕರವೇ ಕಾರ್ಯಕರ್ತರು ಮಧ್ಯರಾತ್ರಿಯಲ್ಲಿಯೇ ಪ್ರತಿಭಟಿಸಿದರು.
ಅಂತಿಮವಾಗಿ ಈ ಕರವೇ ಕಾರ್ಯಕರ್ತರ ಪ್ರತಿಭಟನೆಯನ್ನು ಲೆಕ್ಕಿಸದೇ ಪೋಲೀಸ್ ಇಲಾಖೆಯ ಸೂಕ್ತ ಬಂದೋಬಸ್ತ್ ನೊಂದಿಗೆ ನಗರಸಭೆ ವತಿಯಿಂದ ಪೌರಕಾರ್ಮಿಕರ ನೆರವಿನೊಂದಿಗೆ ರಾತ್ರೋರಾತ್ರಿ ಪೋಲೀಸ್ ಸಿಬ್ಬಂದಿಗಳ ಸಹಾಯ ಪಡೆದು ರಾಷ್ಟ್ರಕವಿ ಕುವೆಂಪು ಹಾಗೂ ಕರ್ನಾಟಕದ ರತ್ನ ಪುನೀತ್ ರಾಜ್ ಕುಮಾರ್ ರವರ ಪುತ್ಥಳಿಗಳನ್ನು ತೆರವುಗೊಳಿಸಲಾಯಿತು.
ನಗರಸಭೆ ಈ ಪುತ್ಥಳಿಗಳ ತೆರವುಗೊಳಿಸಿದ್ದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಇಂದು ಶುಕ್ರವಾರ ಬೆಳಗ್ಗೆ ಬೃಹತ್ ಹೋರಾಟ ನಡೆಸಬೇಕೆಂಬ ಉದ್ದೇಶದಿಂದ ಕರವೇ ಕಛೇರಿ ಮುಂಭಾಗದಲ್ಲಿ ಕರವೇ ಅಧ್ಯಕ್ಷ ರಾಮಕೃ?ಪ್ಪ, ಕಾರ್ಯದರ್ಶಿ ದಾದಾಪೀರ್, ಹೋರಾಟಗಾರ ಗೋ.ಬಸವರಾಜ್ ಒಂದು ಸಾವಿರಕ್ಕೂ ಹೆಚ್ಚು ಜನ ಸೇರಿ, ಹೋರಾಟ ನಡೆಸಲು ತೀರ್ಮಾನಿಸಿದ್ದರು,
ಆದರೆ ನಗರಸಭೆ ಪೌರಾಯುಕ್ತರ ತಾಯಿಯವರು ಶುಕ್ರವಾರ ಬೆಳಗ್ಗೆ ೮:೩೦ಕ್ಕೆ ಚಿತ್ರದುರ್ಗದ ಅವರ ಸ್ವಗೃಹದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಇಂದಿನ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂಬುದಾಗಿ ಕರವೇ ಕಾರ್ಯದರ್ಶಿ ದಾದಾಪೀರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಈ ಮೂಲಕ ಕನ್ನಡ ಹೋರಾಟಗಾರರು ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ.