i
ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸುವಂತೆ ಮನವಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: Request for cooperation in revision of voter list…
ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರು ಹಾಗೂ ಮತಗಟ್ಟೆ ಮಟ್ಟದ ಪಕ್ಷದ ಏಜೆಂಟರುಗಳ ಮುಖಾಂತರ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು.
ಇಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಡೆದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ರಾಜಕೀಯ ಪಕ್ಷಗಳ ಪ್ರತಿನಿದಿಗಳ ಸಭೆಯಲ್ಲಿ ಮಾತನಾಡಿದ ಅವರು ರಾಜಕೀಯ ಪಕ್ಷಗಳು ಹೆಚ್ಚಿನ ಕಾರ್ಯಕರ್ತರನ್ನು ಹೊಂದಿರುತ್ತಾರೆ, ನಿಮ್ಮ ಸಹಕಾರದಿಂದ ಅತ್ಯುತ್ತಮ ಪಟ್ಟಿಯನ್ನು ತಯಾರಿಸಲು ಸಹಕಾರವಾಗುತ್ತದೆ ಎಂದರು.
ಮುಂಬರುವ ಲೋಕಸಭೆ ಚುನಾವಣೆ-2024 ರ ಪೂರ್ವಭಾವಿ ತಯಾರಿ ಆರಂಭವಾಗಿದ್ದು, ಇಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮತದಾರರು ತಮ್ಮ ಗುರುತಿನ ಚೀಟಿಯಲ್ಲಿ ತಪ್ಪುಗಳಿದ್ದಲ್ಲಿ ಇಂದಿನಿಂದ ಡಿಸೆಂಬರ್ 9 ರ ವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು 05 ಜನವರಿ 2024 ರಂದು ಪ್ರಕಟಿಸಲಾಗುವುದು.
ಕರಡು ಮತದಾರರ ಪಟ್ಟಿಯನ್ನು ಪಿಡಿಎಫ್ ಮಾದರಿಯಲ್ಲಿ https://ceo.karnataka.gov.in/en ರಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಹೆಸರುಗಳನ್ನು ಪರಿಶೀಲಿಸಕೊಳ್ಳಬಹುದಾಗಿದೆ, ತಪ್ಪುಗಳಿದ್ದಲ್ಲಿ ಅಥವಾ ಹೆಸರು ಬಿಟ್ಟು ಹೋಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಬಹುದಾಗಿದೆ.
ಈ ಹಿಂದೆ ವರ್ಷಕ್ಕೊಮ್ಮೆ ಮಾತ್ರ 18 ವರ್ಷ ತುಂಬಿದ ಯುವ ಮತದಾರರಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಕಳೆದ ವರ್ಷದಿಂದ ವರ್ಷದಲ್ಲಿ ನಾಲ್ಕು ಅವಕಾಶಗಳನ್ನು ನೀಡಲಾಗಿದೆ. ಯುವ ಹಾಗೂ ಹೊಸ ಮತದಾರರ ನೋಂದಣಿಗಾಗಿ ನವೆಂಬರ್ 18 ಮತ್ತು 19 ಹಾಗೂ ಡಿಸೆಂಬರ್ 02 ಮತ್ತು 03 ರಂದು ಶನಿವಾರ ಹಾಗೂ ಭಾನುವಾರಗಳಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಳಮಟ್ಟದಲ್ಲಿ ಮತದಾರರ ಮಾಹಿತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿದಿಗಳು ಚೆನ್ನಾಗಿ ಅರಿತಿರುತ್ತಾರೆ, ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಮತದಾರರ ಗುರುತಿನ ಚೀಟಿಗಳಲ್ಲಿ ಸಮಸ್ಯೆಗಳಿದ್ದಲ್ಲಿ, ವಿಳಾಸ ಬದಲಾದಲ್ಲಿ ಅಥವಾ ಹೊಸದಾಗಿ ಸೇರಿಸುವುದು ಸೇರಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಈಗ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಲ್ಲಿ ಚುನಾವಣಾ ಸಮಯದಲ್ಲಿ ಸಮಸ್ಯೆಗಳು ಉದ್ಭವಿಸುವುದಿಲ್ಲ, ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಪ್ರತಿ ವಿಧಾನಸಭಾ ಕ್ಷೇತ್ರದ ಅಧಿಸೂಚಿತ ನೋಂದಣಾಧಿಕಾರಿ/ಸಹಾಯಕ ನೋಂದಣಾಧಿಕಾರಿಗೆ ನಿಗದಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.
1. ನಮೂನೆ 6: ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ.
2. ನಮೂನೆ 6ಎ: ಸಾಗರೋತ್ತರ ಭಾರತೀಯ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಅರ್ಜಿ.
3. ನಮೂನೆ 6ಬಿ: ಮತದಾರರ ಪಟ್ಟಿಯಲ್ಲಿನ ವಿವರಗಳ ದೃಢೀಕರಣದ ಉದ್ದೇಶಕ್ಕಾಗಿ ಆಧಾರ್ ಸಂಖ್ಯೆಯ ಅಥವಾ ಇತರೆ 11 ದಾಖಲೆಗಳ ಮಾಹಿತಿ ಪತ್ರ.
4. ನಮೂನೆ 7: ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಪ್ರಸ್ತಾಪಿತ ಸೇರ್ಪಡೆಗೆ ಆಕ್ಷೇಪಣೆಗಾಗಿ ಹೆಸರು ಅಳಿಸುವಿಕೆಗೆ ಅರ್ಜಿ ನಮೂನೆ
5. ನಮೂನೆ 8: ವಿಳಾಸವನ್ನು ಬದಲಾಯಿಸಲು/ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿ/ಬದಲಿ ಮತದಾರರ ಗುರುತಿನ ಚೀಟಿಗಾಗಿ/ವಿಕಲ ಚೇತನ ಮತದಾರರನ್ನುಗುರುತು ಮಾಡಲು ಅರ್ಜಿ ನಮೂನೆ.
ಮೇಲಿನ ಅರ್ಜಿಗಳನ್ನು ಮತದಾರರ ಸೇವಾ ಪೆÇೀರ್ಟಲ್ (https://voters.eci.gov.in/) ಅಥವಾ ವೋಟರ್ ಹೆಲ್ಪ್ ಲೈನ್ ಮೊಬೈಲ್ ಅಪ್ಲಿಕೇಶನ್ ಬಳಸಿ ಆನ್ಲೈnನ್ ಮೂಲಕ ಸಲ್ಲಿಸಬಹುದು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪತ್ರಿಕಾ ಪ್ರಕಟಣೆಗಳ ಮೂಲಕ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯವರು ರಾಜ್ಯ ಮಟ್ಟದಲ್ಲಿ ವ್ಯಾಪಕ ಪ್ರಚಾರವನ್ನು ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಉಪ ವಿಭಾಗ/ತಾಲ್ಲೂಕು ಮಟ್ಟದಲ್ಲಿ ಮತದಾರರ ನೋಂದಣಾಧಿಕಾರಿಗಳು / ಸಹಾಯಕ ಮತದಾರರ ನೋಂದಣಾಧಿಕಾರಿಗಳು ವಿವಿಧ ಮಾಧ್ಯಮಗಳ ಮೂಲಕ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಬಗ್ಗೆ ಪ್ರಚಾರವನ್ನು ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ರಾಜಕೀಯ ಪಕ್ಷಗಳ ಪ್ರತಿನಿದಿಗಳು ತಮ್ಮಅಭಿಪ್ರಾಯ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ವೆಂಕಟೇಶ್ ಕುಮಾರ್ ಹಾಗೂ ಕೂರ್ಮಾ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.