i
ರೈತರ ಭೂಮಿ ಹುಣ್ಣಿಮೆ ಪೂಜಾ ಸಂಭ್ರಮ…
ಚಂದ್ರವಳ್ಳಿ ನ್ಯೂಸ್, ಚನ್ನಗಿರಿ:
ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು ತಾವು ಮಾಡುವ ಕೃಷಿ ಭೂಮಿಗೆ ವರ್ಷಕ್ಕೊಮ್ಮೆ ಪೂಜೆಯನ್ನು ಇಡೀ ಕುಟುಂಬದ ಜೊತೆಗೂಡಿ ಸಲ್ಲಿಸುತ್ತಾರೆ. ಇಂತಹ ಪೂಜೆಗಳಲ್ಲಿ ಹುಣ್ಣಿಮೆ ದಿನದಂದು ಆಚರಣೆ ಮಾಡುವ ಭೂಮಿ ಪೂಜೆಯೂ ಒಂದು.ಹೆಚ್ಚಾಗಿ ತೋಟಗಳಲ್ಲಿ ಅಚರಿಸುವ ಈ ಭೂಮಿ ಹುಣ್ಣಿಮೆ ಪೂಜೆಯುನ್ನು ಹಿಂದಿನ ಕಾಲದಿಂದಲೂ ಆಚರಣೆ ಮಾಡಿಕೊಂಡು ಬಂದಿದ್ದು ಹೆಚ್ಚಾಗಿ ಮಲೆನಾಡಿನ ಪ್ರದೇಶಗಳಲ್ಲಿ ಆಚರಿಸುತ್ತಾ ಬಂದಿದ್ದು ಇತ್ತೀಚಿನ ದಿನಗಳಲ್ಲಿ ಅರೆಮಲೆನಾಡಾದ ಚನ್ನಗಿರಿಯ ತಾಲೂಕಿನ ವಿವಿಧ ಬಾಗಗಳಲ್ಲಿಯೂ ವಿಶೇಷವಾಗಿ ಆಚರಿಸುತ್ತಾರೆ. ಮಳೆಗಾಲ ಬಂದ ನಂತರ ಹಚ್ಚ ಹಸಿರಾದ ಅಡಿಕೆ ತೋಟಗಳು ಅಡಿಕೆ ಗರ್ಭವನ್ನು ಧರಿಸುತ್ತವೆ. ಈ ಪೂಜೆಯನ್ನು ಸಹ ಗರ್ಭಧರಿಸಿದ ಹೆಣ್ಣುಮಕ್ಕಳಿಗೆ ತಾಯಿ ಮನೆಯಲ್ಲಿ ಮಾಡುವ ಸೀಮಂತ ಕಾರ್ಯದಂತೆ ಮಾಡಲಾಗುತ್ತದೆ. ಈ ಹಬ್ಬದಲ್ಲಿ ಭೂಮಿ ಪೂಜೆ ಮಾಡಲು ಕೆಮ್ಮಣ್ಣು, ಸಗಣಿ ಹಚ್ಚಿ ಒಣಗಿಸಿದ ಬುಟ್ಟಿಯನ್ನು ತಯಾರಿಸಿಕೊಂಡು ಹೊಲದಲ್ಲಿ ಬೆಳೆದಂತಹ ತರಕಾರಿಗಳನ್ನು ಮತ್ತು ವಿಶೇಷ ತಿನಿಸುಗಳನ್ನು ತಯಾರಿಸಿಕೊಂಡ ಮಹಿಳೆಯರು ತೋಟಕ್ಕೆ ತೆರಳಿ ಮುತ್ತೈದೆಯರು ಪೂಜೆ ಸಲ್ಲಿಸುತ್ತಾರೆ. ಪೂಜೆ ಮಾಡುವ ಸಂದರ್ಭದಲ್ಲಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ಹೋಳಿಗೆ ಸಜ್ಜೆರೊಟ್ಟಿ, ಶೇಂಗಾ ಉಂಡೆಗಳನ್ನು ತಯಾರಿಸಿ ನೈವೇದ್ಯವನ್ನು ಸಲ್ಲಿಸಿ ನಂತರ ಆಹಾರದ ಎಡೆಯನ್ನು ಕಾಗೆಗೆ ನೀಡುತ್ತಾರೆ. ಇದರಿಂದ ಸ್ವಗಸ್ಥರಾದ ಹಿರಿಯರು ಅಹಾರವನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಮತ್ತು ಹೊಲದಲ್ಲಿ ಇರುವಂತಹ ಇಲಿಗಳಿಗೆ ಅಹಾರವನ್ನು ಇಟ್ಟು ತಮ್ಮ ಬೆಳೆಗಳು ನಾಶ ಮಾಡದಂತೆ ಬೇಡಿಕೊಳ್ಳುವುದು ವಾಡಿಕೆ. ನಂತರ ಕುಟುಂಬದವರು ಎಲ್ಲರೂ ಸೇರಿ ತಮ್ಮ ತೋಟಗಳಲ್ಲಿ ಊಟವನ್ನು ಮಾಡುವ ಮೂಲಕ ಸಂಭ್ರಮದ ಭೂಮಿ ಪೂಜೆಯನ್ನು ಆಚರಿಸುತ್ತಾರೆ. ಈ ಹಬ್ಬವು ನಿಸರ್ಗಕ್ಕೆ ಒಂದು ಹತ್ತಿರವಾದ ಮತ್ತು ಕುಟುಂಬದ ಜೊತೆ ಬಾವನಾತ್ಮಕ ಸಂಬಂಧಗಳನ್ನು ಬೆಸೆಯುವಂತಹ ಹಬ್ಬವಾಗಿದೆ ಎಂದು ಅಬ್ಬಿಗೆರೆ ಗ್ರಾಮದ ಪ್ರಕಾಶ್ ಹೇಳುತ್ತಾರೆ.