i
ರೈತರ ನೋವಿಗೆ ಸ್ಪಂದಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಎಸ್ಪಿ…
6 ಮಂದಿ ಅಂತರ್ ರಾಜ್ಯ ಶ್ರೀಗಂಧ ಕಳ್ಳರ ಗ್ಯಾಂಗ್ ಬಂಧನ…
ಅ.30 ರಂದೇ ವಿಸ್ತೃತ ವರದಿ ಪ್ರಕಟಿಸಿದ್ದ ಚಂದ್ರವಳ್ಳಿ ಪತ್ರಿಕೆ…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಳ್ಳ ಮಾರ್ಗದಲ್ಲಿ ಅಕ್ರಮವಾಗಿ ಗಂಧದ ಮರಗಳನ್ನು ಕಡಿದು ರೈತರಿಗೆ ಲಕ್ಷಾಂತರ ರೂ.ಗಳನ್ನು ವಂಚಿಸಿ ಶ್ರೀಗಂಧ, ರಕ್ತಚಂದನ ಮರಗಳನ್ನು ಕಡಿಯುತ್ತಿದ್ದ 6 ಮಂದಿ ಅಂತರ್ ರಾಜ್ಯ ಶ್ರೀಗಂಧ ಕಳ್ಳರ ಗ್ಯಾಂಗ್ ಬಂಧಿಸುವಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಹತ್ತಾರು ವರ್ಷಗಳ ಕಾಲ ರೈತರು ಕಷ್ಟಪಟ್ಟು ಬೆಳೆಸಿದ್ದ ಶ್ರೀಗಂಧ ಮತ್ತು ರಕ್ತ ಚಂದನ ಮರಗಳನ್ನು ರಾತ್ರೋ ರಾತ್ರಿ ಕಳ್ಳಕರು ಕಡಿದು ಕದ್ದೊಯ್ಯುತ್ತಿದ್ದ ಬಗ್ಗೆ
ಹೊಳಲ್ಕೆರೆ ತಾಲೂಕಿನ ಕೆರೆಯಾಗಳಹಳ್ಳಿ ಗ್ರಾಮದ ಶ್ರೀಗಂಧ ಬೆಳೆಗಾರ ದಿನೇಶ.ಕೆ.ಸಿ. ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ನವಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷರು ಹಾಗೂ ವಿಶ್ರಾಂತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರನ್ನು ಅಕ್ಟೋಬರ್-28ರಂದು ಶನಿವಾರ ಭೇಟಿ ಮಾಡಿ ಜಿಲ್ಲೆಯಾದ್ಯಂತ 12 ಶ್ರೀಗಂಧ ಮರಗಳ ಕಳವು ಪ್ರಕರಣಗಳು ನಡೆದಿವೆ. ರೈತರಿಗೆ ರಕ್ಷಣೆ ಇಲ್ಲವಾಗಿದೆ. ರಾತ್ರೋ ರಾತ್ರಿ ಶ್ರೀಗಂಧ ಮತ್ತು ರಕ್ತಚಂದನ ಮರಗಳನ್ನು ಕಳ್ಳರು ಕಡಿದು ಕದ್ದೊಯ್ಯುತ್ತಿರುವದಿಂದ ರೈತರಿಗೆ ಲಕ್ಷಾಂತರ ರೂ.ಆರ್ಥಿಕ ನಷ್ಟವಾಗುತ್ತಿದ್ದು ರೈತರು ಮತ್ತು ರೈತರು ಬೆಳೆದಿರುವ ಶ್ರೀಗಂಧ ಮತ್ತು ರಕ್ತ ಚಂದನ ಮರಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡಿದ್ದರು. ಶ್ರೀಗಂಧ ಮತ್ತು ರಕ್ತ ಚಂದನ ಬೆಳೆಯುತ್ತಿರುವ ಜಿಲ್ಲೆಯ ಹತ್ತಾರು ರೈತರು ಅಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಕಳವು ಪ್ರಕರಣಗಳ ಕುರಿತು ನೋವು ತೋಡಿಕೊಂಡಿದ್ದರು. ಅಲ್ಲದೆ ಶ್ರೀಗಂಧ ಮತ್ತು ರಕ್ತ ಚಂದನ ಮರಗಳು ಕಳವು ಆಗಿರುವ ಕುರಿತು ಪೊಲೀಸರಿಗೆ ದೂರು ನೀಡುತ್ತಿದ್ದರೂ ಸಕಾಲದಲ್ಲಿ ದೂರು ದಾಖಲು ಮಾಡಿಕೊಳ್ಳದೇ ವಿಳಂಬ ಮಾಡಲಾಗುತ್ತಿದೆ, ಇನ್ನೂ ಕೆಲವು ಪ್ರಕರಣಗಳಲ್ಲಿ ದೂರುಗಳನ್ನೇ ಪಡೆಯುವುದಿಲ್ಲ ಎಂದು ಪೊಲೀಸ್ ಠಾಣೆ ಸಿಬ್ಬಂದಿಗಳ ವಿರುದ್ಧ ರೈತರು ದೂರುಗಳ ಸುರಿಮಳೆಗೈದಿದ್ದರು. ಪೊಲೀಸರು ಎಂದರೆ ಭಯ ಅಲ್ಲ, ಭರವಸೆಯ ಬೆಳಕು, ಪೊಲೀಸರು ದೂರು ದಾಖಲು ಮಾಡಿಕೊಳ್ಳದಿದ್ದರೆ ನನ್ನ ಮೊಬೈಲ್ ಸಂಖ್ಯೆಗೆ ವಾಟ್ಸ್ಅಪ್ ಮಾಡಿ ಎಂದು ರೈತರಿಗೆ ಮತ್ತು ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸಂದೇಶ ರವಾನೆ ಮಾಡಿದ್ದರು.
ಈ ವಿಷಯ ಕುರಿತು ಚಂದ್ರವಳ್ಳಿ ಕನ್ನಡ ದಿನ ಪತ್ರಿಕೆ ವಿಶೇಷ ಆಸಕ್ತಿ ವಹಿಸಿ ರೈತರ ನೋವುಗಳಿಗೆ ಸ್ಪಂದಿಸಿ ಶ್ರೀಗಂಧ ಮತ್ತು ರಕ್ತ ಚಂದನ ಕಳವು ಪ್ರಕರಣದ ವಿಸ್ತೃತ ವರದಿ ಮಾಡುವ ಮೂಲಕ ರೈತರಿಗೆ ಅಳಿಲು ಸೇವೆ ಸಲ್ಲಿಸಿತ್ತು. ಈ ಕುರಿತು ರಾಜ್ಯ ಮಟ್ಟದ ಯಾವುದೇ ಪತ್ರಿಕೆ ಕೂಡಾ ಒಂದು ಸಣ್ಣ ವರದಿಯನ್ನು ಮಾಡಲಿಲ್ಲ ಎನ್ನುವುದು ಅತ್ಯಂತ ನೋವಿನ ಸಂಗತಿ.
ಆದರೆ ಚಂದ್ರವಳ್ಳಿ ಪತ್ರಿಕೆಯು ಪೊಲೀಸ್ ಎಂದರೆ ಭಯ ಅಲ್ಲ, ಭರವಸೆಯ ಬೆಳಕು ಎನ್ನುವ ತಲೆ ಬರಹ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿರುವ ಶ್ರೀಗಂಧ ಕಳವು ಪ್ರಕರಣಗಳು ಎನ್ನುವ ಉಪ ತಲೆ ಬರಹದೊಂದಿಗೆ 2023 ಅಕ್ಟೋಬರ್-30ರ ಸೋಮವಾರದ ಸಂಚಿಕೆಯಲ್ಲಿ ಮೂಕ್ಕಾಲು ಪುಟದಷ್ಟು ವಿಸ್ತೃತ ವರದಿ ಮಾಡುವ ಮೂಲಕ ಗಮನ ಸೆಳೆಯಲಾಗಿತ್ತು.
ಈ ವರದಿ ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು, ಅರಣ್ಯ ಸಚಿವರು, ರಾಜ್ಯದ ಹಲವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಲುಪಿತ್ತು ಎನ್ನುವುದು ವಿಶೇಷವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಅ.28 ರಂದು ನಡೆದ ಸಭೆಯಲ್ಲಿ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ಶ್ರೀಗಂಧ ಮತ್ತು ರಕ್ತ ಚಂದನ ಬೆಳೆಯುವ ರೈತರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದರು. ಇದಕ್ಕೆ ಶೀಘ್ರ ಪರಿಹಾರ ನೀಡುವ ಭರವಸೆಯನ್ನು ಅಂದೇ ಅವರು ರೈತರ ನಿಯೋಗಕ್ಕೆ ನೀಡಿದ್ದರು. ಅದರಂತೆ ಶ್ರೀಗಂಧ ಮತ್ತು ರಕ್ತ ಚಂದನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ಪೊಲೀಸ್ ತನಿಖಾ ತಂಡ ರಚಿಸಿ ಶ್ರೀಗಂಧ ಮತ್ತು ರಕ್ತ ಚಂದನ ಮರಗಳ ಕಳ್ಳರನ್ನು ಪತ್ತೆ ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರಲ್ಲದೆ, ರಾತ್ರಿ ಗಸ್ತು ಹೆಚ್ಚಿಸಿದ್ದರು. ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಿದರು. ಶ್ರೀಗಂಧ ಕಳ್ಳತನದ ಎಂ.ಓ.ಬಿಗಳು ಹಾಗೂ ಕಳ್ಳತನ ಮಾಡಿದ ಶ್ರೀಗಂಧ ಮರಗಳನ್ನು ಪಡೆಯುವ ಹಳೆಯ ಆರೋಪಿಗಳ ಬಗ್ಗೆ ನಿಗಾವಹಿಸುವಂತೆ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಂತಹ ತುರ್ತು ಕ್ರಮಗಳನ್ನು ಕೈಗೊಂಡಿದ್ದರ ಫಲವಾಗಿ ಶ್ರೀಗಂಧ ಮರಗಳ ಕಳ್ಳರನ್ನು ಹಿಡಿಯಲು ತುರ್ತು ಕ್ರಮ ವಹಿಸುವ ಮೂಲಕ 2021ರಿಂದ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆದಿದ್ದ ಶ್ರೀಗಂಧ ಮತ್ತು ರಕ್ತ ಚಂದನ ಮರಗಳ 12 ಕಳ್ಳತನ ಪ್ರಕರಣಗಳ ಪೈಕಿ 7 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ರೈತರ ನೋವಿಗೆ ಸ್ಪಂದಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸುವ ಕಾರ್ಯವನ್ನು ಎಸ್ಪಿ ಮೀನಾ ಅವರು ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಧರ್ಮೇಂದ್ರ ಕುಮಾರ್ ಮೀನಾ ಅವರು ನವೆಂಬರ್-11 ರಂದು ಶ್ರೀಗಂಧ ಮತ್ತು ರಕ್ತ ಚಂದನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಶ್ರೀಗಂಧ ಮತ್ತು ರಕ್ತ ಚಂದನ ಕಳ್ಳತನ ಮಾಡುತ್ತಿದ್ದ 6 ಮಂದಿ ಅಂತರ ರಾಜ್ಯ ಕಳ್ಳರನ್ನು ಬಂಧಿಸಲಾಗಿದೆ. ಈ ಪೈಕಿ ಪ್ರಕರಣದ ಪ್ರಮುಖ ಆರೋಪಿ ಅಂದರೆ ಶ್ರೀಗಂಧ ಮತ್ತು ರಕ್ತ ಚಂದನ ಮರಗಳನ್ನು ಖರೀದಿ ಮಾಡುತ್ತಿದ್ದ ಮೂಲ ರಿಸೀವರ್ ತರೀಕೆರೆಯ ಚಂದ್ರಶೇಖರ್ ಅಲಿಯಾಸ್ ಬೋಟಿ ಚಂದ್ರ ತಂದೆ ವೀರಣ್ಣ ಸೇರಿದಂತೆ ಇವರೊಟ್ಟಿಗೆ ಕಳ್ಳ ಮಾರ್ಗದಲ್ಲಿ ಶ್ರೀಗಂಧ ಮತ್ತು ರಕ್ತ ಚಂದನ ಮರಗಳನ್ನು ಕಟಾವು ಮಾಡಿ ಮಾರಾಟ ಮಾಡುತ್ತಿದ್ದ ಆಂದ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕೊಪ್ಪಂ ನಗರದ ಖಲೀಲ್ ತಂದೆ ಖಾಸೀಂಸಾಬ್(45), ಯಾವ್ಯಾವ ರೈತರ ಜಮೀನು ಮತ್ತು ಮನೆಗಳ ಮುಂದೆ ಶ್ರೀಗಂಧ ಮತ್ತು ರಕ್ತ ಚಂದನ ಮರಗಳಿವೆ ಎನ್ನುವ ಮಾಹಿತಿ ನೀಡುತ್ತಿದ್ದ ಮಾಹಿತಿದಾರರಾದ ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಸಮೀಪದ ಭೋವಿಹಟ್ಟಿಯ ಆರೋಪಿ ಟಿ.ಪ್ರಶಾಂತ್(31) ತಂದೆ ತಿಮ್ಮಪ್ಪ, ಮತ್ತೊಬ್ಬ ಆರೋಪಿ ರಂಗಸ್ವಾಮಿ(27) ತಂದೆ ತಿಪ್ಪೇಶಪ್ಪ, ಕಟಾವು ಮಾಡುವ ಮತ್ತು ಮಾಹಿತಿದಾರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆಲದಹಳ್ಳಿ ನಿವಾಸಿ ಪುನೀತ್ ನಾಯ್ಕ್(39) ತಂದೆ ರೂಪ್ಲನಾಯ್ಕ್, ರಾಮಾನಾಯ್ಕ್(45) ತಂದೆ ಬದ್ಯಾನಾಯ್ಕ್ ಇವರುಗಳನ್ನು ಪೊಲೀಸರು ಹೊಳಲ್ಕೆರೆ ತಾಲೂಕಿನ ಕೊಳಾಳು ಗ್ರಾಮದ ಸಮೀಪ ಬಂಧಿಸಿದ್ದಾರೆ ಎಂದು ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.
ಕದ್ದ ಮಾಲುಗಳ ವಶ-
ಬಂಧಿತ ಆರೋಪಿಗಳಿಂದ 91 ಕೆ.ಜಿ 3೦೦ ಗ್ರಾಂ ಶ್ರೀಗಂಧ, 15 ಕೆ.ಜಿ 5೦೦ ಗ್ರಾಂ ರಕ್ತ ಚಂದನ, 25 ಕೆ.ಜಿ 4೦೦ ಗ್ರಾಂ ತೂಕದ 2 ಆನೆ ದಂತಗಳು, 34 ಕೆ.ಜಿ 1೦೦ ಗ್ರಾಂ ತೂಕದ ಪೆಂಗೋಲಿನ್ ಚಿಪ್ಪುಗಳು, 1.10 ಲಕ್ಷ ರೂ ನಗದು ಹಾಗೂ ಕೃತ್ಯಕ್ಕೆ ಬಳಸಿದ 2 ಕಾರುಗಳು, 9 ಮೊಬೈಲ್ ಗಳು ಮತ್ತು ಒಂದು ಕಣಿಗೆ, ಎರಡು ಮಚ್ಚು, ಒಂದು ಕಬ್ಬಿಣದ ರಾಡು, ಹಗ್ಗ ಹಾಗೂ ಇತ್ಯಾದಿ ಆಪಾಯಕಾರಿ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹಾಲಿ ನ್ಯಾಯಾಂಗ ಬಂಧನದಲ್ಲಿದ್ದು ತನಿಖೆ ಮುಂದುವರೆದಿದೆ ಎಂದು ಎಸ್ಪಿ ಅವರು ತಿಳಿಸಿದರು.
ಚೆಕ್ ಪೋಸ್ಟ್-
ಶ್ರೀಗಂಧ ಮತ್ತು ರಕ್ತ ಚಂದನ ಮರಗಳ ಪತ್ತೆ ಕಾರ್ಯ ಸೇರಿದಂತೆ ಇತರೆ ಸಮಾಜಘಾತುಕ ಕೃತ್ಯಗಳನ್ನು ತಡೆಯಲು ಜಿಲ್ಲೆಯಾದ್ಯಂತ 8 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಈ ಕಾರ್ಯಕ್ಕಾಗಿ ಶ್ರೀಗಂಧ ಕಳ್ಳತನದ ಆರೋಪಿತರು ಮತ್ತು ಮಾಲು ಪತ್ತೆ ಮಾಡುವ ಸಲುವಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಸ್ವಾಮಿ, ಚಿತ್ರದುರ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅನಿಲ್ಕುಮಾರ್ ಹಾಗೂ ಹೊಳಲ್ಕೆರೆ ವೃತ್ತ ನಿರೀಕ್ಷಕರಾದ ಎಂ.ಬಿ ಚಿಕ್ಕಣ್ಣನವರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು, ಇಂತಹ ಕೃತ್ಯಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸಲಿದೆ ಎಂದು ಎಸ್ಪಿ ಮೀನಾ ತಿಳಿಸಿದರು.
ಆರೋಪಿಗಳ ಪತ್ತೆ-
ನವೆಂಬರ್-10 ರಂದು ಬೆಳಗಿನ ಜಾವ ಕೊಳಾಳ್ ಗ್ರಾಮದ ಕ್ರಾಸ್ ಸಮೀಪ ಚಿತ್ರಹಳ್ಳಿ ಗೇಟ್ ಠಾಣೆಯ ಪಿ.ಎಸ್.ಐ ಕಾಂತರಾಜು ಅವರು ತಮ್ಮ ಸಿಬ್ಬಂದಿಗಳೊಂದಿಗೆ ಗಸ್ತಿನಲ್ಲಿರುವಾಗ ಅನುಮಾನಾಸ್ಪದವಾಗಿ ನಿಂತಿದ್ದ ಮಾರುತಿ ಇಕೋ ವಾಹನವನ್ನು ಪರಿಶೀಲಿಸಿ ಕಾರಿನಲ್ಲಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರ ಮಾಡಿದಾಗಿ ಶ್ರೀಗಂಧ ಕಳ್ಳತನ ಮತ್ತು ದರೋಡೆ ಮಾಡುವ ಉದ್ದೇಶ ಹೊಂದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆಂದು 6 ಮಂದಿ ಆರೋಪಿಗಳ ವಿರುದ್ಧ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಸ್ಪಿ ಅವರು ತಿಳಿಸಿದರು. ಕಳ್ಳತನ ಪತ್ತೆ ಪ್ರಕರಣಗಳು-
ಆರೋಪಿತರು ಗ್ಯಾಂಗ್ ಕಟ್ಟಿಕೊಂಡು ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮದ ದಿನೇಶ್ ಎಂಬುವವರ ತೋಟ, ಸಾಸಲು ಗ್ರಾಮದ ಪ್ರಶಾಂತ್ಕುಮಾರ, ಚಿಕ್ಕಂದವಾಡಿ ಗ್ರಾಮದ ಸುರೇಶ, ಹೊಳಲ್ಕೆರೆ ಟೌನ್ಆನಂದಪ್ಪ, ಎನ್.ಜಿ.ಹಳ್ಳಿ ಗ್ರಾಮದ ದ್ಯಾಮಪ್ಪ, ಶ್ರೀರಾಂಪುರ ವ್ಯಾಪ್ತಿಯ ವಿನಯ್, ಐಮಂಗಲ ಠಾಣಾ ವ್ಯಾಪ್ತಿಯ ಗೋಗುದ್ದು ನಾಗರಾಜ ಎಂಬುವವರ ತೋಟಗಳಲ್ಲಿ ಗಂಧದ ಮರಗಳನ್ನು ಕಡಿದು ಕಳ್ಳತನ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹಾಗೂ ರಕ್ತಚಂದನ, ಆನೆದಂತ, ಪೆಂಗೋಲಿನ್ ಚಿಪ್ಪುಗಳು ಹಾಗೂ ಮುಂತಾದವುಗಳನ್ನು ಕಳವು ಮಾಡಿ ಹಿರಿಯೂರು ನಗರದ ಬಾಡಿಗೆ ಮನೆಯಲ್ಲಿಟ್ಟಿರುವುದಾಗಿ ಪ್ರಮುಖ(ಎ1) ಆರೋಪಿ ಚಂದ್ರಶೇಖರ್ ಅಲಿಯಾಸ್ ಬೋಟಿ ಚಂದ್ರ ತಿಳಿಸಿದ್ದಾನೆಂದು ಎಸ್ಪಿ ಅವರು ತಿಳಿಸಿದ್ದಾರೆ.
ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿತರು-
ಚಿತ್ರದುರ್ಗ ಜಿಲ್ಲೆ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣಗಳು, ಹೊಳಲ್ಕೆರೆ ಠಾಣೆಯ 2 ಪ್ರಕರಣಗಳು, ರಾಂಪುರ ಪೊಲೀಸ್ ಠಾಣೆಯ 1 ಪ್ರಕರಣ ಮತ್ತು ಐಮಂಗಲ ಠಾಣೆಯ 2 ಪ್ರಕರಣಗಳು ಸೇರಿ ಒಟ್ಟು 7 ಪ್ರಕರಣಗಳಲ್ಲಿ ಆರೋಪಿತರು ಭಾಗಿಯಾಗಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ.
ಹಲವು ಗ್ಯಾಂಗ್ ಗಳು-
ಶ್ರೀಗಂಧ ಮತ್ತು ರಕ್ತ ಚಂದನ ಸೇರಿದಂತೆ ವನ್ಯ ಜೀವಿಗಳಿಗೆ ಸಂಬಂಧಿಸಿದ 2 ಆನೆ ದಂತಗಳು, ಪೆಂಗೋಲಿನ್ ಚಿಪ್ಪುಗಳು ಮತ್ತಿತರ ಕಳ್ಳತನ ಪ್ರಕರಣಗಳಲ್ಲಿ ಈಗಾಗಲೇ ಬಂಧಿಸಿರುವ 6 ಮಂದಿಯ ಗ್ಯಾಂಗ್ ಅಲ್ಲದೆ ಇನ್ನೂ ಹಲವು ಉಪ ಗ್ಯಾಂಗ್ ಗಳು ಇರುವ ಸಾಧ್ಯತೆ ಇದ್ದು ಆಂದ್ರ ಪ್ರದೇಶ, ತಮಿಳುನಾಡು ಮತ್ತಿತರ ಹೊರ ರಾಜ್ಯಗಳಲ್ಲಿ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದರು.
ಮೊದಲ ಪೊಲೀಸ್ ಕೇಸ್-ಶ್ರೀಗಂಧ, ರಕ್ತ ಚಂದನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಹತ್ತಾರು ವರ್ಷಗಳಿಂದ ಶ್ರೀಗಂಧ ಕಳ್ಳತನ ಆಗುತ್ತಿದ್ದರೂ ಕೇವಲ ಅರಣ್ಯ ಇಲಾಖೆ ಒಂದು ಕೌಂಟರ್ ಕೇಸ್ ದಾಖಲಿಸಿ ಹಾಗೇ ಬಿಟ್ಟು ಕಳುಹಿಸುತ್ತಿದ್ದರು. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಜಿಲ್ಲೆಗೆ ಆಗಮಿಸಿದ ನಂತರ ಇಡೀ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಶ್ರೀಗಂಧ, ರಕ್ತ ಚಂದನ ಕಳವು ಪ್ರಕರಣವನ್ನು ಮೊದಲ ಸಲ ದಾಖಲು ಮಾಡಿದ್ದಾರೆ. ಮುಂದೆ ಈ ಪ್ರಕರಣ ಶ್ರೀಗಂಧ, ರಕ್ತ ಚಂದನ ಕಳವು ಪತ್ತೆಗೆ ಮತ್ತು ನಿಯಂತ್ರಣಕ್ಕೆ ಸಹಕಾರಿ ಆಗುವ ಸಾಧ್ಯತೆ ಇದೆ.ಅರಣ್ಯಾಧಿಕಾರಿಗಳು ಭಾಗಿ ಸಾಧ್ಯತೆ-
ಚಿತ್ರದುರ್ಗ ಜಿಲ್ಲಾ ಪೊಲೀಸರು ಕಾರ್ಯಾಚರಣೆ ಮಾಡಿ ಅರಣ್ಯ ಮತ್ತು ವನ್ಯ ಜೀವಿಗಳಿಗೆ ಸಂಬಂಧಿಸಿದ 91 ಕೆ.ಜಿ 3೦೦ ಗ್ರಾಂ ಶ್ರೀಗಂಧ, 15 ಕೆ.ಜಿ 5೦೦ ಗ್ರಾಂ ರಕ್ತ ಚಂದನ, 25 ಕೆ.ಜಿ 4೦೦ ಗ್ರಾಂ ತೂಕದ 2 ಆನೆ ದಂತಗಳು, 34 ಕೆ.ಜಿ 1೦೦ ಗ್ರಾಂ ತೂಕದ ಪೆಂಗೋಲಿನ್ ಚಿಪ್ಪುಗಳನ್ನು ವಶ ಪಡಿಸಿಕೊಂಡ ಪ್ರಕರಣದ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳು ಭಾಗಿ ಆಗಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಆನೆ ದಂತಗಳು, ಪೆಂಗೋಲಿಯನ್ ಚಿಪ್ಪುಗಳು ಆರೋಪಿತರ ಬಳಿ ಇರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುತ್ತದೆ. ಆಕಸ್ಮಿಕವೋ ಉದ್ದೇಶ ಪೂರಕದಿಂದಲೋ ಆನೆಗಳು ಸತ್ತ ನಂತರ ಪೋಸ್ಟ್ ಮಾರ್ಟನ್ ಮಾಡುವ ಸಂದರ್ಭದಲ್ಲಿ ಪಶು ವೈದ್ಯರು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಮಾತ್ರ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಅಮೂಲ್ಯವಾದ ಮತ್ತು ಅಧಿಕ ಬೆಲೆ ಬಾಳುವ ವನ್ಯ ಜೀವಿಗಳ ವಸ್ತುಗಳನ್ನು ಸಂಗ್ರಹ ಮಾಡುವ ಸಾಧ್ಯತೆ ಇರುತ್ತದೆ. ಈ ವಿಷಯ ಆರ್ಎಫ್ಒ, ಎಸಿಎಫ್, ಡಿಎಫ್, ಡಿಸಿಸಿಎಫ್ ಇತರೆ ಮೇಲಾಧಿಕಾರಿಗಳ ಗಮನಕ್ಕೆ ಇರುವ ಸಾಧ್ಯತೆ ಇದ್ದು ಇಂತಹ ಎಲ್ಲ ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮಾಡಿದರೆ ಮತ್ತೊಷ್ಟು ರೋಚಕ ವಿಷಯಗಳು ಬಯಲಿಗೆ ಬರುವ ಸಾಧ್ಯತೆ ಇರುತ್ತದೆ.
ಇಲ್ಲದಿದ್ದರೆ ಆನೆ ದಂತಗಳು, ಪೆಂಗೋಲಿಯನ್ ಚಿಪ್ಪುಗಳು, ಹುಲಿ ಉಗುರುಗಳು ಅರಣ್ಯ ಪ್ರದೇಶದಿಂದ ಹೊರಗೆ ಬಂದು ಜನ ಸಾಮಾನ್ಯರಿಗೆ ಸಿಗುವುದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ. ಆನೆ, ಹುಲಿ ಸೇರಿದಂತೆ ಯಾವುದೇ ವನ್ಯ ಜೀವಿಗಳು ಸತ್ತರೆ ಆಳವಾದ ಗುಣಿ ತೋಡಿ ಭೂಮಿ ಒಳಗೆ ಹೂತು ಹಾಕಬೇಕು ಇಲ್ಲ ಸುಡಬೇಕು. ಇಂತಹ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳೇ ಬೆಲೆ ಬಾಳುವಂತ ಆನೆ ದಂತ, ಹುಲಿ ಉಗುರು ಮತ್ತಿತರ ವನ್ಯ ಜೀವಿಗಳ ವಸ್ತುಗಳನ್ನು ಸಂಗ್ರಹಿಸಿ ಮಾವ ಮಾರ್ಗದಲ್ಲಿ ಮಾರಾಟ ಮಾಡುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಬೇಕಾಗಿದೆ ಎನ್ನುವುದು ಚಂದ್ರವಳ್ಳಿ ಪತ್ರಿಕೆಯ ಕಳಕಳಿಯಾಗಿದೆ.
ಶ್ಲಾಘನೀಯ-
“ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರ ಮಾರ್ಗದರ್ಶನದಲ್ಲಿ ಮಿಂಚಿನ ಕಾರ್ಯಾಚರಣೆ ಮಾಡಿ 6 ಅಂತರ್ ರಾಜ್ಯ ಶ್ರೀಗಂಧ ಕಳ್ಳರನ್ನು ಬಂಧಿಸಿದ ಕಾರ್ಯಕ್ಕೂ ಮತ್ತು ಪತ್ರಿಕೆಗಳು ಇಂಚಿಂಚೂ ಜಾಗವನ್ನು ಹಣದಲ್ಲಿ ಅಳೆಯುವಂತ ಸಂದರ್ಭದಲ್ಲಿ ಚಂದ್ರವಳ್ಳಿ ಕನ್ನಡ ದಿನ ಪತ್ರಿಕೆಯು ಶ್ರೀಗಂಧ ಮರಗಳ ಕಳವು ಪ್ರಕರಣದ ವಿಸ್ತೃತ ವರದಿಯನ್ನು ಮುಕ್ಕಾಲು ಪುಟದಷ್ಟು ಪ್ರಕಟಿಸುವ ಮೂಲಕ ಜನೋಪಯೋಗಿ, ರೈತರ ಸಮಸ್ಯೆ, ನೋವುಗಳಿಗೆ ಸ್ಪಂಧಿಸಿರುವುದಕ್ಕೆ ಅಭಿನಂದನೆಗಳು. ಪೊಲೀಸ್ ಇಲಾಖೆ ಮತ್ತು ಪತ್ರಿಕೆಗಳು ಸಮಾಜಮುಖಿಯಾಗಿ ಕೆಲಸ ಮಾಡಿದರೆ ಎಲ್ಲ ರೀತಿಯ ಸಮಾಜಘಾತುಕ ಕೃತ್ಯಗಳನ್ನು ತಡೆಯಲು ಸಾಧ್ಯವಿದೆ”.
ಕೆ.ಅಮರನಾರಾಯಣ, ಗೌರವಾಧ್ಯಕ್ಷರು, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ನವಕೃಷಿ ಬೆಳೆಗಾರರ ಸಂಘ, ಬೆಂಗಳೂರು ಹಾಗೂ ವಿಶ್ರಾಂತ ಐಎಎಸ್ ಅಧಿಕಾರಿಗಳು. ಎಸ್ಪಿ ಶ್ಲಾಘನೆ-
ಆರೋಪಿತರು ಮತ್ತು ಶ್ರೀಗಂಧ, ರಕ್ತ ಚಂದನ ಮರಗಳ ಮಾಲಿನ ಪತ್ತೆ ಕಾರ್ಯದಲ್ಲಿ ಹೊಳಲ್ಕೆರೆ ವೃತ್ತ ನಿರೀಕ್ಷಕ ಎಂ.ಬಿ ಚಿಕ್ಕಣ್ಣನವರ್, ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯ ಪಿ.ಎಸ್.ಐ. ಕಾಂತರಾಜು, ಹೊಳಲ್ಕೆರೆ ಪೊಲೀಸ್ ಠಾಣೆಯ ಪಿ.ಎಸ್.ಐ ಸುರೇಶ್ ಮತ್ತು ಸಿಬ್ಬಂದಿಯವರಾದ ರುದ್ರೇಶ್, ರಾಜಶೇಖರ್, ಆರ್.ಡಿ.ರಮೇಶ್ಕುಮಾರ, ರಮೇಶ, ನಿರಂಜನ, ಅವಿನಾಶ, ಮಂಜುನಾಥ, ಶ್ರೀಧರ, ಶೌರ್ಯ, ಯಶೋಧರ, ಶಿವಮೂರ್ತಿ, ಶಿವಣ್ಣ, ಈ.ತಿಮ್ಮಣ್ಣ, ಸನಾವುಲ್ಲಾ, ಲೋಕೇಶ, ಶಿವರಾಜ, ಪ್ರದೀಪ್ಕುಮಾರ, ಸಂತೋಷ್, ನೂರ್ ಅಹಮ್ಮದ್ ನದಾಫ್, ಹಾಗೂ ಶೋಭಾ, ಸುಲೋಚನ ಇವರುಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಧರ್ಮೇಂದ್ರ ಕುಮಾರ್ ಮೀನಾ ಅವರು ಶ್ಲಾಘಿಸಿ ನಗದು ಬಹುಮಾನದೊಂದಿಗೆ ಪ್ರಶಂಸನಾ ಪತ್ರವನ್ನು ನೀಡಿರುವುದಾಗಿ ಅವರು ತಿಳಿಸಿದರು.