i
ಗ್ರಾಮದ ಅಚ್ಚು ಮೆಚ್ಚಿನ ಮುಖ್ಯ ಶಿಕ್ಷಕಿ ವರ್ಗಾವಣೆ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಗ್ರಾಮೀಣ ಭಾಗದ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಹೆಚ್ಚು ಗೌರವ ಮತ್ತು ಅಭಿಮಾನ ವ್ಯಕ್ತವಾಗುವುದು ಅವರು ಮಾಡುವ ಉತ್ತಮ ಕಾರ್ಯಗಳಿಂದ ಮಾತ್ರ. ಹಲವಾರು ಶಾಲೆಗಳಿಗೆ ಶಿಕ್ಷಕರು ವರ್ಗಾವಣೆಯಾದ ಸಂದರ್ಭದಲ್ಲಿ ಕೇವಲ ವಿದ್ಯಾರ್ಥಿಗಳು, ಪೋಷಕರಷ್ಟೇಯಲ್ಲದೆ ಗ್ರಾಮದ ಜನರೂ ಸಹ ಶಿಕ್ಷಕರ ಕಾರ್ಯದ ಬಗ್ಗೆ ಪ್ರಶಂಸಿಸುತ್ತಾರೆ ಎಂದರೆ ಶಿಕ್ಷಕ ಕಾರ್ಯಕ್ಕೆ ಎಷ್ಟು ಪವಿತ್ರತೆ ಇದೆ ಎಂಬುವುದನ್ನು ತಿಳಿಯಬಹುದು ಎಂದು ಇಸಿಒ ಮಾರುತಿ ಭಂಡಾರಿ ತಿಳಿಸಿದರು. ಅವರು, ತಾಲ್ಲೂಕಿನ ಕಾಟಂದೇವರಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಗಾವಣೆಗೊಂಡ ಪ್ರಭಾರ ಮುಖ್ಯ ಶಿಕ್ಷಕಿ ಕೆ.ಆರ್.ಮಲ್ಲಮ್ಮ ಬೀಳ್ಕೊಡಿಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ತಾಲ್ಲೂಕಿನಾದ್ಯಂತ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಶಿಕ್ಷಕರು ತಮ್ಮ ವೃತ್ತಿಯಲ್ಲಿ ತೊಡಗಿದ್ದು, ಉತ್ತಮ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಶಿಕ್ಷಕರು ಬೆಳಕಾಗಿದ್ಧಾರೆ. ಪ್ರಭಾರ ಮುಖ್ಯ ಶಿಕ್ಷಕಿ ಕೆ.ಆರ್.ಮಲ್ಲಮ್ಮ ಸಹ ತಮ್ಮ ಉತ್ತಮ ಬೋಧನೆ ಮತ್ತು ಕೆಲಸ ಕಾರ್ಯಗಳಿಂದ ಈ ಭಾಗದ ಜನರ ಮನಗೆದ್ದಿದ್ಧಾರೆಂದರು. ನಿರ್ಗಮನ ಪ್ರಭಾರ ಮುಖ್ಯ ಶಿಕ್ಷಕಿ ಕೆ.ಆರ್.ಮಲ್ಲಮ್ಮ ಸನ್ಮಾನ ಸ್ವೀಕರಿಸಿ ಮಾತನಾಡಿ, ಐದು ವರ್ಷಗಳಿಂದ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕೇವಲ ನಾನಷ್ಟೇಯಲ್ಲ ನನ್ನೊಂದಿಗೆ ಕಾರ್ಯನಿರ್ವಹಿಸುವ ಎಲ್ಲಾ ಶಿಕ್ಷಕರು ನಮಗೆ ನಿರ್ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಆತ್ಮೀಯ ಸಂಬಂಧದ ಬಗ್ಗೆ ವರ್ಣಿಸಲು ಪದಗಳಿಲ್ಲ. ನನ್ನ ಕಾರ್ಯವನ್ನು ಮೆಚ್ಚಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವೆ ಎಂದರು. ಕಾರ್ಯಕ್ರಮದಲ್ಲಿ ಸಿಆರ್ಪಿ ದಾದಾಪೀರ್, ಮಾರಣ್ಣ, ಸೂರಮ್ಮ, ಮಂಜಣ್ಣ, ಪುಪ್ಪಲತಾ, ಶೃತಿ, ತಿಪ್ಪೇಸ್ವಾಮಿ, ಚೈತ್ರ, ಆಶಾ, ಬಸವರಾಜು, ಮಂಜುಳಾ, ಜಯಮ್ಮ, ರೇಷ್ಮ, ದೀಪಾ ಮುಂತಾದವರು ಉಪಸ್ಥಿತರಿದ್ದರು.