i
ಮಠ ಮಾನ್ಯಗಳತ್ತ ದೌಡಾಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: BJP State President Vijayendra rushed to Matha Manyas…
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚಿತ್ರದುರ್ಗ ಜಿಲ್ಲೆಗೆ ಗುರುವಾರ ಆಗಮಿಸಿ ಅಹಿಂದ ಒಕ್ಕೂಟದ ಸ್ವಾಮೀಜಿಗಳು ಸೇರಿದಂತೆ ವೀರಶೈವ ಲಿಂಗಾಯಿತ ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಚಿತ್ರದುರ್ಗಕ್ಕೆ ಬೆಳಿಗ್ಗೆ ಆಗಮಿಸುತ್ತಿದ್ದಂತೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಮನೆಗೆ ಭೇಟಿ ನೀಡಿ ಕೆಲ ಸಮಯ ಜಿಲ್ಲೆಯ ರಾಜಕೀಯ ಚಿತ್ರಣವನ್ನು ಪಡೆದರು.
ಮುರುಘಾ ಮಠಕ್ಕೆ ಭೇಟಿ ನೀಡಿ ಅಲ್ಲಿಯ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ನಂತರ ಯಾದವ ಗುರುಪೀಠಕ್ಕೆ ಭೇಟಿ ನೀಡಿ ಕೃಷ್ಣ ಯಾದವಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಜಿಲ್ಲೆಯ ಕೇಂದ್ರ ಬಿಂದು ಮಾದಾರ ಚನ್ನಯ್ಯ ಗುರು ಪೀಠಕ್ಕೆ ಭೇಟಿ ನೀಡಿದರು. ಅಲ್ಲಿ ಸಾಕಷ್ಟು ಭಕ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಅಭಿಮಾನಿಗಳು ಮತ್ತು ಭಕ್ತರ ಹರ್ಷದ್ಘೋಷ ಮುಗಿಲು ಮುಟ್ಟಿತ್ತು. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳೊಂದಿಗೆ ಸಾಕಷ್ಟು ಚರ್ಚಿಸಿದ ನಂತರ ಭೋವಿ ಗುರುಪೀಠಾಧ್ಯಕ್ಷರಾದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಮಡಿವಾಳ ಮಾಚಿದೇವ ಗುರುಪೀಠಕ್ಕೆ ಭೇಟಿ ನೀಡಿ ಮಾಚಿದೇವ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಚಿತ್ರದುರ್ಗ ನಗರದ ಪ್ರಮುಖ ಮಠಗಳಿಗೆ ಭೇಟಿ ನೀಡಿದ ನಂತರ ಸಿರಿಗೆರೆ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದು ಕೆಲ ಸಮಯ ಚರ್ಚಿಸಿದರು. ಅಲ್ಲಿಂದ ಹೊಳಲ್ಕೆರೆ ಮಾರ್ಗವಾಗಿ ಹೊಸದುರ್ಗದ ಭಗೀರಥ(ಉಪ್ಪಾರ) ಗುರುಪೀಠ ಶ್ರೀ ಪುರಷೋತ್ತಮಾನಂದಪುರಿ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಅಲ್ಲಿಂದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಹೊಸದುರ್ಗದಲ್ಲಿರುವ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿಗಳ ಭೇಟಿ ಮಾಡಿದರು. ಮುಂದೆ
ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠ ಕನಕ ಗುರುಪೀಠದ ಈಶ್ವರಾನಂದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬೆಂಗಳೂರಿನತ್ತ ತೆರಳಿದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಹಲವು ಮಹಿಳೆಯರೊಂದಿಗೆ ಭೇಟಿ ಮಾಡಿ ಮಾಡಿದರು. ಅಲ್ಲದೆ ಪುಷ್ಪಮಾಲೆ ಅರ್ಪಿಸಿ ಸ್ವಾಗತಿಸಿದರು.
ಇದಕ್ಕೂ ಮೊದಲು ಚಿತ್ರದುರ್ಗದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಮನೆಯ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪತ್ರಿಕೆಗಳಿಗೆ ಹೇಳಿಕೆ ನೀಡಿ, ಅಧಿಕೃತವಾಗಿ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಚಿತ್ರದುರ್ಗ ಜಿಲ್ಲೆಯ ಮಠಗಳಿಗೆ ಭೇಟಿ ನೀಡಲು ಆಗಮಿಸಿದ್ದೇನೆ. ಮುಂದಿನ ಲೋಕೋಸಭಾ ಚುನಾವಣೆಯಲ್ಲಿ 28 ಕ್ಷೇತ್ರಕ್ಕೆ 28 ಗೆಲ್ಲಬೇಕೆಂಬ ಬಯಕೆ ಇದೆ. 28 ಕ್ಷೇತ್ರಗಳನ್ನು ಗೆದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸಿ ಹೊಸ ಇತಿಹಾಸ ಸೃಷ್ಠಿಸಬೇಕಾಗಿದೆ. ಹಿಂದೆ ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ 20 ಕ್ಷೇತ್ರ ಗೆದ್ದಿದ್ದೇವೆ. ನಾನು ಎಲ್ಲಾ ಕ್ಷೇತ್ರ ಗೆಲ್ಲಲು ಕಾರ್ಯೋನ್ಮುಖ ಆಗುತ್ತೇನೆ. ಒಂದು ದಿನ ಕೂಡಾ ಬಿಡುವು ನೀಡದೆ ಸಂಚಾರ ಮಾಡುವೆ ಎಂದು ವಿಜಯೇಂದ್ರ ತಿಳಿಸಿದರು.
ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಗೆಲ್ಲಬೇಕಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶೇ 40 ಸರ್ಕಾರ ಎಂದು ಕಾಂಗ್ರೆಸ್ ನಾಯಕರು ಟೀಕೆ(ಪೂಜೆ) ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಶೇ.40 ಅನುಷ್ಠಾನ ಈ ಸರ್ಕಾರ ಮಾಡುತ್ತಿದ್ದೆ ಎಂದು ಗಂಭೀರ ಆರೋಪ ಮಾಡಿದರು.
ಇದರ ಜೊತೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಐಟಿ ದಾಳಿ ಕುರಿತು ಕಾಂಗ್ರೆಸ್ ನಾಯಕರು ಸ್ವಾಗತ ಮಾಡಿಲ್ಲ. ಐಟಿರೈಡ್ ಸೀಜ್ ಆದ ಹಣ ಕಾಂಗ್ರೆಸ್ ಪಕ್ಷದ್ದು ಎಂದು ರಾಜ್ಯದ ಜನ ಚರ್ಚೆ ಮಾಡುತ್ತಿದ್ದಾರೆ. ಸರ್ಕಾರ ಬಂದ ಬಳಿಕ ಒಂದು ಯೋಜನೆ ಜಾರಿಯಾಗಿಲ್ಲ.
ಅರೆಬರೆ ಬೆಂದ ಗ್ಯಾರಂಟಿ ಸ್ಕೀಮ್ ತುಪ್ಪ ಹಚ್ಚಿದ್ದಾರೆ. ರಾಜ್ಯದ ಜನ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ತಕ್ಕ ಪಾಠ ಕಲಿಸಲಿದ್ದಾರೆ. ಅಷ್ಟೇ ನಾವು ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಮಾತನಾಡಿರುವ ವಿಡಿಯೋವನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಐಟಿ ರೈಡ್ ಬಳಿಕ ಮತ್ತೊಂದು ದಾಖಲೆ ಸಿಕ್ಕಿದ್ದೆ. ಇದಕ್ಕೆಲ್ಲ ರಾಜ್ಯದ ಜನ ಉತ್ತರ ನೀಡುತ್ತಾರೆ ಎಂದು ವಿಜಯೇಂದ್ರ ಎಚ್ಚರಿಸಿದರು.
ಈಗಾಗಲೇ ಪಕ್ಷದ ಅನೇಕ ಹಿರಿಯ ನಾಯಕರು ಆಶಿರ್ವಾದ ಮಾಡಿದ್ದಾರೆ.
ಯತ್ನಾಳ್ ಜೀ , ಸೋಮಣ್ಣ ಅವರ ಬಗ್ಗೆ ಗೌರವ ಇದೆ. ಬರುವ ದಿನಗಳಲ್ಲಿ ಎಲ್ಲರೂ ಕೂಡಾ ನಮ್ಮ ಕೈಜೋಡಿಸುತ್ತಾರೆ ಎಂದು ಹೇಳಿದರು.
ಕಾಂತರಾಜ್ ಆಯೋಗವನ್ನು 2013-2018ರಲ್ಲಿ ಸಿದ್ದರಾಮಯ್ಯ ಸಿಎಂ ಇದ್ದಾಗ ಮಾಡಿದ್ದು. ಆಯೋಗದ ಅಧ್ಯಕ್ಷರಾಗಿದ್ದ ಹೆಚ್.ಕಾಂತರಾಜ್ ಅವರು ಅರೆಬೆಂದ ವರದಿ ಮಾಡಿದ್ದಾರೆ. ಹವಾನಿಯಂತ್ರಿತ ರೂಂ ನಲ್ಲಿ ಕೂತು ವರದಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾಗ ಯಾಕೆ ಕಾಂತರಾಜ್ ವರದಿಯನ್ನು ಜಾರಿ ಮಾಡಲಿಲ್ಲ ಎಂದು ವಿಜಯೇಂದ್ರ ಪ್ರಶ್ನಿಸಿದರಲ್ಲದೆ ವೀರಶೈವ ಲಿಂಗಾಯತ ಬೆಂಕಿ ಹಚ್ಚಿದ್ದರು. ಬರುವ ದಿನಗಳಲ್ಲಿ ರಾಜ್ಯದ ಜನತೆ ಎಲ್ಲದಕ್ಕೂ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ವೈ.ಎನ್.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್, ಮಾಜಿ ಸಚಿವ ರೇಣುಕಾಚಾರ್ಯ, ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಮಾಜಿ ಶಾಸಕ ತಿಪ್ಪೇಸ್ವಾಮಿ, ಮಾಜಿ ಶಾಸಕ ಮೈಸೂರು ಶಿವಣ್ಣ, ಬಿಜೆಪಿ ಮುಖಂಡರಾದ ಎಸ್.ಲಿಂಗಮೂರ್ತಿ, ಬಿ.ಸಿ.ಹನುಮಂತೇಗೌಡ, ಸಿದ್ದಾಪುರ ಜಿ.ಟಿ.ಸುರೇಶ್, ಸಂಪತ್ ಕುಮಾರ್, ಮಾಧುರಿ ಗಿರೀಶ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ, ದಗ್ಗೆ ಶಿವ ಪ್ರಕಾಶ್, ರೇಖಾ, ಶ್ಯಾಮಲ, ಕವನ ಮತ್ತಿತರ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.