i
ನವಜಾತ ಶಿಶು ಹಾರೈಕೆ ಹಾಗೂ ಪೋಷಣೆಗೆ ಎಲ್ಲರ ಸಹಕಾರ ಅಗತ್ಯ-
ಡಾ.ರವೀಂದ್ರ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನವಜಾತ ಶಿಶು ಹಾರೈಕೆ ಹಾಗೂ ಪೋಷಣೆಗೆ ತಾಯಿ ಹಾಗೂ ಕುಟುಂಬ ಸೇರಿದಂತೆ ಸಮುದಾಯದ ಎಲ್ಲರ ಸಹಕಾರ ಅಗತ್ಯವಾಗಿದೆ. ಮಗುವಿನ ಪೋಷಣೆಗೆ ಸರ್ಕಾರದಿಂದ ಸಿಗುವ ಆರೋಗ್ಯ ಸೇವಾ ಸೌಲಭ್ಯಗಳನ್ನು ಎಲ್ಲರೂ ತಪ್ಪದೇ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರವೀಂದ್ರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಜಿಲ್ಲಾ ಆಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಈಚಗೆ ನಡೆದ ಎದೆ ಹಾಲುಣಿಸುವ ತಾಯಂದಿರುಗಳು ಮತ್ತು ಪೋಷಕರಿಗೆ ಮಾಹಿತಿ ನೀಡುವ ಹಾಗೂ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಿಯ ಗರ್ಭದಿಂದ ಜನಿಸಿದ ಮಗು ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಕಾಲಾವಕಾಶ ಬೇಕು. ಹೆರಿಗೆ ಆದ ಒಂದು ಗಂಟೆಯ ಒಳಗೆ ತಾಯಿಯ ಮುಗ್ಗುಲಲ್ಲಿ ಎದೆಗೆ ತಾಕುವಂತೆ ಮಗುವನ್ನು ಮಲಗಿಸಿ ಹಾಲನ್ನು ಮಗುವಿಗೆ ಕುಡಿಸುವುದರ ಮುಖಾಂತರ ಮಗುವನ್ನು ಪೋಷಣೆ ಆರಂಭಿಸಬೇಕು. ನಂತರ ಮಗು ಸಂಪೂರ್ಣ ಬೆಳವಣಿಗೆ ಹೊಂದುವರೆಗೆ ತಾಯಿ ಸೇರಿದಂತೆ ಕುಟುಂಬದ ಪ್ರತಿಯೊಬ್ಬರು ಹಾರೈಕೆ ಮಾಡಬೇಕು. ಮಗುವಿಗೆ ಕಾಲ ಕಾಲಕ್ಕೆ ನಿಗದಿ ಪಡಿಸಿದರು ಲಸಿಕೆಗಳನ್ನು ಕೊಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರೇಣುಪ್ರಸಾದ್ ಮಾತನಾಡಿ, ಎದೆಹಾಲು ಉಣಿಸುವ ತಾಯಂದಿರುಗಳಿಗೆ ಸೂಕ್ತ ಅರಿವು ಮೂಡಿಸುವುದರ ಮುಖಾಂತರ ಶಿಶುಮರಣ ತಗ್ಗಿಸುವ ಗುರಿ ಆರೋಗ್ಯ ಇಲಾಖೆಯದ್ದಾಗಿದೆ. ನವಜಾತ ಶಿಶುವಿನ ಮರಣದ ಪ್ರಮಾಣ 1000 ಜೀವಂತ ಜನನಗಳಿಗೆ 25 ರಿಂದ 14ಕ್ಕೆ ಇಳಿದಿದೆ. ಆದರೂ ಹುಟ್ಟಿದ ದಿನ ದಂದು ಕಡಿಮೆ ತೂಕ, ಹೆರಿಗೆಯಿಂದಾದ ಸಮಸ್ಯೆ, ಉಸಿರಾಟದ ತೊಂದರೆ, ಇನ್ನಿತರ ಕಾರಣಗಳಿಂದ ನವಜಾತ ಶಿಶುಗಳು ಸಾವುಪ್ಪುತ್ತಿವೆ. ಮೂಲ ಕಾರಣವನ್ನು ಹುಡುಕಿ ತಾಯಿ ಮತ್ತು ಮಗುವಿಗೆ ಉತ್ತಮ ಆರೋಗ್ಯ ಸೇವೆ ನೀಡುವುದರ ಮುಖಾಂತರ ನವಜಾತ ಶಶಿವಿನ ಮರಣವನ್ನು ತಪ್ಪಿಸಲು ಶ್ರಮಿಸಲಾಗುತ್ತಿದೆ ಎಂದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಅಭಿನವ ಮಾತನಾಡಿ, ಜನಿಸಿದ ಮಗುವಿಗೆ ಒಂದು ಗಂಟೆಯ ಒಳಗೆ ತಪ್ಪದೆ ಎದೆ ಹಾಲು ಕುಡಿಸಬೇಕು. ಯಾವುದೇ ಕಾರಣಕ್ಕೂ ಜೇನುತುಪ್ಪ, ಕತ್ತೆ ಹಾಲು ನೀಡಬಾರುದು. ಎದೆ ಹಾಲು ಕುಡಿಯಲು ಮಗು ಏಕೆ ಹಿಂದೇಟು ಹಾಕುತ್ತಿದ್ದರೆ ಅದರ ಕಾರಣ ಪತ್ತೆ ಹಚ್ಚಿಬೇಕು. ತಾಯಿಗೆ ಸೂಕ್ತ ಮಾರ್ಗದರ್ಶನ ನೀಡಿ, ಎದೆ ಹಾಲು ಉತ್ಪತ್ತಿಗೆ ಸೂಕ್ತ ಸಲಹೆ ಮಾಹಿತಿಯನ್ನು ಶುಶ್ರೂಷ ಅಧಿಕಾರಿಗಳು ನೀಡಬೇಕು. ಮಗು ಜನಿಸಿದ ಮೊದಲ ವಾರದಲ್ಲಿ ತೀವ್ರ ನಿಗಾ ವಹಿಸುವುದು ಮತ್ತು ಸಮುದಾಯ ಸಹಭಾಗಿತ್ವ ಕೂಡ ಬಹುಮುಖ್ಯ ಎಂದರು. ಆರು ತಿಂಗಳ ತನಕ ಮಗುವಿಗೆ ತಾಯಿಯ ಎದೆ ಹಾಲನ್ನು ಮಾತ್ರ ಕೊಡಬೇಕು. ಯಾವುದೇ ಕಾರಣಕ್ಕೂ ನೀರು ಸಹ ಕುಡಿಸಬಾರದು ಎಂದರು.
ಹಿರಿಯ ಮಕ್ಕಳ ತಜ್ಞ ಡಾ. ಶ್ರೀರಾಮ್ ಮಾತನಾಡಿ, ಆಸ್ಪತ್ರೆಯಲ್ಲಿ ಹೆರಿಗೆಯಾದ ತಾಯಿ ಮತ್ತು ಮಗುವನ್ನು 48 ಗಂಟೆಗಳ ತೀವ್ರ ನಿಗಾದಲ್ಲಿ ಇಡಲಾಗುವುದು. ಮಗುವಿನಲ್ಲಿ ಉಸಿರಾಟ ತೊಂದರೆ, ಎದೆಹಾಲು ಕುಡಿಯದಿರುವುದು, ಜ್ವರ, ಪಿಟ್ಸ್, ಇನ್ನಿತರ ಆರೋಗ್ಯ ಸಮಸ್ಯೆಗಳು ಕಂಡುಬAದಲ್ಲಿ ತಾಲ್ಲೂಕು ಮಟ್ಟದ ನವಜಾತ ಶಿಶು ಸ್ಥಿರೀಕರಣ ಘಟಕದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಮಗುವಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುವುದು. ಆಸ್ಪತ್ರೆಯಿಂದ ಮನೆಗೆ ತೆರಳಿದ ತಾಯಿ ಮಗುವನ್ನು ಆಶಾ ಕಾರ್ಯಕರ್ತೆಯರು ನಿಯಮಾನುಸಾರ ಅನುಸರಣ ಭೇಟಿ ಮಾಡಿ ಸೂಕ್ತ ಆರೋಗ್ಯ ಮಾರ್ಗದರ್ಶನ ನೀಡುತ್ತಾರೆ ಎಂದರು.
ಹಿರಿಯ ಮಕ್ಕಳ ತಜ್ಞೆ ಡಾ ಅನುರಾಧ ಮಾತನಾಡಿ, ನವಜಾತ ಶಿಶುವಿನಲ್ಲಿ ಕಂಡುಬರುವ ಅಪಾಯದ ಚಿಹ್ನೆಗಳ ಗುರುತಿಸುವುದು ಹೇಗೆ ಎಂಬುದನ್ನು ತಾಯಂದಿರುಗಳಿಗೆ ತಿಳಿಸಿದರು.
ನಿವಾಸಿ ವೈದ್ಯಾಧಿಕಾರಿ ಡಾ.ಆನಂದ್ ಪ್ರಕಾಶ್, ಎನ್ಆರ್ಸಿ ವೈದ್ಯಾಧಿಕಾರಿ ಡಾ.ನಾಗರಾಜ್ ನಾಯ್ಕ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಜಿಲ್ಲಾ ಆಶಾ ಬೋಧಕಿ ಪೂರ್ಣಿಮಾ, ಶುಶ್ರೂಷ ಅಧೀಕ್ಷಕಿ ಶಾಂತಮ್ಮ, ಆರ್.ಸಿ ಡಯಟಿಷಿಯನ್ ಎನ್.ಚಂದ್ರಕಲಾ, ಆರೋಗ್ಯ ನಿರೀಕ್ಷಣಾಧಿಕಾರಿ ಅಶೋಕ್, ಎಫ್ ಡಬ್ಲ್ಯೂ ಕೌನ್ಸಿಲರ್ ಕುಸುಮ, ಅರ್ಜುನ್, ಕರಕಪ್ಪ ಮೇಟಿ, ವ್ಯಾಕ್ಸೀನ್ ಕೋಲ್ಡ್ ಚೈನ್ ಮ್ಯಾನೇಜರ್ ವೀರೇಶ್ ಮಕ್ಕಳ ಆರೋಗ್ಯ ಕೌನ್ಸಿಲರ್ ಮಾರಕ್ಕ ಸೇರಿದಂತೆ ಎದೆಹಾಲು ಉಣಿಸುವ 25ಕ್ಕೂ ಹೆಚ್ಚು ತಾಯಂದಿರು ಮತ್ತು ಪೋಷಕರು ಮತ್ತಿತರರು ಇದ್ದರು.