![](https://www.chandravallinews.com/wp-content/uploads/2023/12/Krishna-Byre-Gowda-1024x1324.jpg)
i
ರೈತರ ಜಮೀನುಗಳ ಪೋಡಿ ಸಮಸ್ಯೆ ಇತ್ಯರ್ಥಕ್ಕೆ 2 ತಿಂಗಳಲ್ಲಿ ಯೋಜನೆ…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ ಸುವರ್ಣಸೌಧ:
ಪೋಡಿ ಎಂಬುದು ಕಂದಾಯ ಇಲಾಖೆಯ ಟಾಪ್ 3 ಸಮಸ್ಯೆಗಳಲ್ಲೊಂದಾಗಿದ್ದು, ಇದರಿಂದ ಜನರಿಗೆ ತೊಂದರೆ ಆಗ್ತಾ ಇರುವುದು ಗಮನಕ್ಕಿದೆ;ಇತ್ತೀಚೆಗೆ ಮುಖ್ಯಮಂತ್ರಿಗಳು ಜನತಾದರ್ಶನ ನಡೆಸಿದ ಸಂದರ್ಭದಲ್ಲಿಯೂ ಇದೇ ತರಹದ ದೂರುಗಳು ಬಂದಿದೆ. ಇದನ್ನು ವ್ಯವಸ್ಥಿತವಾಗಿ ಬಗೆಹರಿಸುವ ನಿಟ್ಟಿನಲ್ಲಿ 2 ತಿಂಗಳಲ್ಲಿ ಒಂದು ಯೋಜನೆ ರೂಪಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಹೇಳಿದರು.
ವಿಧಾನಸಭೆಯಲ್ಲಿ ಸದಸ್ಯ ಅಶ್ವತ್ನಾರಾಯಣ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದರು. ಪೋಡಿ ಸಮಸ್ಯೆಯನ್ನು ಅರ್ಥಮಾಡಿಕೊಂಡೇ ಈ ಹಿಂದಿನ ನಮ್ಮ ಸರಕಾರ 2015ರಲ್ಲಿ ಪೋಡಿ ಮುಕ್ತ ಯೋಜನೆ ಅನುಷ್ಠಾನಕ್ಕೆ ತಂದಿತ್ತು;ಅದರ ಮೂಲಕ ಆಯ್ದ ಗ್ರಾಮಗಳ ಬಹುಮಾಲೀಕತ್ವದ ಖಾಸಗಿ/ಹಿಡುವಳಿ ಜಮೀನುಗಳನ್ನು ಅಳತೆಗೆ ಒಳಪಡಿಸಿ ಏಕಮಾಲೀಕತ್ವಕ್ಕೆ ಪರಿವರ್ತಿಸುವ ಉದ್ದೇಶದಿಂದ ರಾಜ್ಯದ ನಗರ ಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 174 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾರಂಭಿಸಲಾಗಿದೆ. ಪೋಡಿ ಮುಕ್ತ ಅಭಿಯಾನದ ಅಡಿ 16630 ಗ್ರಾಮಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನೂ 14 ಸಾವಿರ ಗ್ರಾಮಗಳು ಉಳಿದಿವೆ ಎಂದರು. ಕಳೆದ 4 ವರ್ಷಗಳಿಂದ ಈ ಯೋಜನೆ ಅತ್ಯಂತ ಕುಂಠಿತವಾಗಿ ಸಾಗುತ್ತಿದೆ ಎಂದರು.
ಪೋಡಿ ಸಮಸ್ಯೆಗಳಲ್ಲಿ ಶೇ.70ರಷ್ಟು ಬಗೆಹರಿಸಬಹುದು;ಇನ್ನೂ 30ರಷ್ಟು ಆಮೇಲೆ ಮಾಡೋಣ ಅಂತ ನಿರ್ಧರಿಸಿದ್ದು 2 ತಿಂಗಳಲ್ಲಿ ಇದನ್ನು ಯಾವ ರೀತಿ ಮಾಡಬೇಕು ಎನ್ನುವುದಕ್ಕೆ ಸ್ಪಷ್ಟವಾಗಿ ಪ್ಲಾನ್ ಹಾಕಿಕೊಳ್ಳಲಾಗುವುದು. 3ರಿಂದ 4 ವರ್ಷಗಳ ಕಾಲಮಿತಿ ಹಾಕಿಕೊಂಡು ಈ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.