i
ವ್ಯಕ್ತಿ ಘನತೆ, ಗೌರವ ಹಾಗೂ ಸಮಾನತೆಯಿಂದ ಬದುಕಲು ಮಾನವ ಹಕ್ಕು ಸಹಕಾರಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಘನತೆ, ಗೌರವ ಹಾಗೂ ಸಮಾನತೆಯಿಂದ ಬದುಕಲು ಮಾನವ ಹಕ್ಕುಗಳು ತುಂಬಾ ಸಹಕಾರಿಯಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಕೆಂಪರಾಜು ಹೇಳಿದರು.
ನಗರದ ಧವಳಗಿರಿ ಬಡಾವಣೆಯ ಸರ್ಕಾರಿ ಮೆಟ್ರಿಕ್ ನಂತರ ಕಾನೂನು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ಬಗ್ಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಸಂಘ ಜೀವಿ. ಅವನು ಸಮಾಜ ಹಾಗೂ ಸಮುದಾಯ ಬಿಟ್ಟು ಬದುಕಲಾರ. ಸಮಾಜದಲ್ಲಿ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಅಥವಾ ಜೀವಿಗೆ ಆಗಲಿ ತಾರತಮ್ಯ ಮಾಡದೆ ಪರಸ್ಪರ ಗೌರವ ನೀಡಬೇಕು. ಸಂವಿಧಾನಾತ್ಮಕವಾಗಿರುವ ಮೂಲಭೂತ ಹಕ್ಕುಗಳ ರಕ್ಷಣೆ ಜೊತೆಗೆ ಮೂಲಭೂತ ಕರ್ತವ್ಯಗಳನ್ನೂ ಪಾಲಿಸಬೇಕು. ವಿಶ್ವಸಂಸ್ಥೆ ಜಾರಿಯಾದ ದಿನದಿಂದಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನನ ಹಕ್ಕುಗಳ ಬಗ್ಗೆ ಅರಿವು ಮೂಡಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಗಂಗಾಧರ್ ಸೇರಿದಂತೆ ಪದವಿ, ಕಾನೂನು ಹಾಗೂ ಬಿ.ಇಡಿ ವಿದ್ಯಾರ್ಥಿಗಳು ಇದ್ದರು.