i
ಸಿದ್ದರಾಮಯ್ಯನವರು ಜಾತಿ ಗಣತಿ ಜಾರಿಗೆ ತಂದು ಅಹಿಂದ ವರ್ಗದ ನಂಬಿಕೆ ಉಳಿಸಿಕೊಳ್ಳಲಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಾತಿ ಗಣತಿ ಜಾರಿಗೆ ತಂದು ಅಹಿಂದ ವರ್ಗದ ಜನ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕೆಂದು ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದರು.ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೀಸಲಾತಿ ಎನ್ನುವುದು ಕೇವಲ ಭಾರತದಲ್ಲಿ ಅಲ್ಲ ಇಡಿ ಜಗತ್ತಿನಲ್ಲಿದೆ. ಜಾತಿ ಗಣತಿ ಎಂದರೆ ಮೀಸಲಾತಿ ವಿಸ್ತರಣೆಯಲ್ಲ. ಡಿ.ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಎಲ್.ಜಿ.ಹಾವನೂರು ಆಯೋಗ ರಚಿಸಿ ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯ ನೀಡಿದಂತ ಧೀಮಂತ. ಅದೇ ರೀತಿ ರಾಜ್ಯದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೈಜ್ಞಾನಿಕವಾಗಿರುವ ಕಾಂತರಾಜ್ ವರದಿಯನ್ವಯ ಜಾತಿ ಗಣತಿ ಬಹಿರಂಗಪಡಿಸಬೇಕು. ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ, ನಂಜುಂಡಪ್ಪ ಆಯೋಗದ ವರದಿಯನ್ನು ಜಾರಿಗೊಳಿಸಬೇಕು. ಆಗ ಮಾತ್ರ ಅಹಿಂದ ಜನಾಂಗಕ್ಕೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸರ್ಕಾರದಿಂದ ಸೌಲತ್ತುಗಳನ್ನು ನೀಡಲು ಸಾಧ್ಯ ಎಂದು ಹೇಳಿದರು.ಕಾಂತರಾಜ್ ಆಯೋಗದ ವರದಿಯನ್ವಯ ಆಳವಾಗಿ ಅಧ್ಯಯನ ನಡೆಸಿದರೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸ್ಥಿತಿಗತಿಗಳನ್ನು ತಿಳಿಯಬಹುದು. ಮೀಸಲಾತಿಯಲ್ಲಿ ದುರುಪಯೋಗವಾಗಬಾರದೆಂದರೆ ಎಲ್ಲಾ ಜಾತಿಗಳಲ್ಲಿನ ಒಳ ಜಾತಿಗಳಿಗೆ ಸೌಲಭ್ಯಗಳನ್ನು ಒದಗಿಸಲು ಆಳುವ ಸರ್ಕಾರಕ್ಕೆ ಕಾಂತರಾಜ್ ಆಯೋಗದ ವರದಿ ಸಹಾಯವಾಗಲಿದೆ. ಆಯೋಗದ ವರದಿಯನ್ನು ಯಾರು ವಿರೋಧಿಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಟ್ಟ ಹೆಜ್ಜೆಯಿಂದ ಹಿಂದಕ್ಕೆ ಸರಿಯಬಾರದು ಎಂದು ಜೆ.ಯಾದವರೆಡ್ಡಿ ಒತ್ತಾಯಿಸಿದರು.ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ ಮಾತನಾಡಿ ಕಾಂತರಾಜು ಆಯೋಗದ ವರದಿ ಜಾತಿ ಜನಗಣತಿಗೆ ಕೆಲವರು ವಿರೋಧ ಮಾಡುತ್ತಿರುವುದು ಏತಕ್ಕೆ ಎನ್ನುವುದೇ ಅರ್ಥವಾಗುತ್ತಿಲ್ಲ. ೧೯೧೩ ರಲ್ಲಿ ಜಾತಿ ಜನಗಣತಿ ಆಗಿತ್ತು. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಯಾರು ಅಡ್ಡಿಪಡಿಸಬಾರದು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇವಲ ಒಕ್ಕಲಿಗ ಜನಾಂಗಕ್ಕೆ ಸೀಮಿತವಲ್ಲ. ಇಡಿ ರಾಜ್ಯಕ್ಕೆ ಎನ್ನುವುದನ್ನು ಮರೆಯಬಾರದು. ಕಾಂತರಾಜ್ ಆಯೋಗದ ವರದಿಯನ್ವಯ ಜಾತಿ ಜನಗಣತಿ ವರದಿ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಶಿವಕುಮಾರ್ ಮಾತನಾಡಿ ಮೀಸಲಾತಿ ಸರಿಯಾಗಿ ಹಂಚಿಕೆಯಾಗಬೇಕಾದರೆ ಕಾಂತರಾಜ್ ಆಯೋಗದ ವರದಿ ಜಾರಿಯಾಗಬೇಕು. ಒಕ್ಕಲಿಗ, ಲಿಂಗಾಯಿತ ಜನಾಂಗ ವರದಿ ಜಾರಿಗೆ ವಿರೋಧಿಸುತ್ತಿರುವುದು ಸರಿಯಲ್ಲ. ವರದಿ ಜಾರಿಗೆ ಬರದಂತೆ ತಡೆಯುವುದು ಅಹಿಂದ ಜನಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ ಎಂದರು. ಸೊಲೋಮನ್ ರಾಜ್ಕುಮಾರ್, ಮಹಮದ್ ಸಿರಾಜ್ ಪತ್ರಿಕಾಗೋಷ್ಟಿಯಲ್ಲಿದ್ದರು.