i
ಪತ್ರಕರ್ತರು ವೃತ್ತಿ ಘನತೆ ಮತ್ತು ಮೌಲ್ಯ ಎತ್ತಿಹಿಡಿಯಬೇಕು: ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಡಾ.ಬಿ.ಆರ್.ಅಂಬೇಡ್ಕರ್ ಅವರು ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರಲ್ಲದೆ ಮೂರು ಪತ್ರಿಕೆಗಳನ್ನು ಸ್ಥಾಪಿಸಿ ಮುನ್ನಡೆಸಿದ್ದರು ಎನ್ನುವುದು ಪ್ರತಿಯೊಬ್ಬ ಪತ್ರಕರ್ತರಿಗೂ ಹೆಮ್ಮೆ ತರುವ ವಿಷಯವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು, ಭಾನುವಾರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಗಿಡಕ್ಕೆ ನೀರುಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಡಿ.ವಿ.ಗುಂಡಪ್ಪನವರ ಭಾವ ಚಿತ್ರದ ಪಕ್ಕದಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರ ಹಾಕಿಕೊಂಡು ಪತ್ರಕರ್ತರು ಸಭೆ, ಸಮಾರಂಭಗಳನ್ನು ಮಾಡುವುದು ಅತ್ಯಂತ ಪ್ರಮುಖವಾಗಿದೆ ಎಂದು ರಘುಮೂರ್ತಿ ತಿಳಿಸಿದರು.
ಪತ್ರಕರ್ತರು ಜನಪ್ರತಿನಿಧಿಗಳು, ಆಡಳಿತ ಮತ್ತು ಸಾರ್ವಜನಿಕರ ನಡುವೆ ಸ್ನೇಹ ಸೇತುವೆಯಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ತಮ್ಮ ಎಲ್ಲಾ ತೊಂದರೆಗಳನ್ನು ಬದಿಗೊತ್ತಿ ಸಮಾಜದ ಹಿತಕ್ಕಾಗಿ ನಿರಂತರ ಶ್ರಮಿಸುವ ಪತ್ರಿಕಾ ವೃತ್ತಿಯ ಗೌರವ, ಘನತೆಯನ್ನು ಗೌರವಿಸುವ ಕೆಲಸ ಎಲ್ಲರಿಂದ ಆಗಬೇಕೆಂದು ಅವರು ಕರೆ ನೀಡಿದರು.
ಕಳೆದ ಹಲವಾರು ವರ್ಷಗಳಿಂದ ಪತ್ರಕರ್ತರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಸಾಧ್ಯವಾದಷ್ಟು ಮಟ್ಟಿಗೆ ನಾನು ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಯಾವುದೇ ತಾರತಮ್ಯವಿಲ್ಲದೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಿಗೆ ಸರ್ಕಾರದ ಜಾಹೀರಾತು, ಸ್ಥಳೀಯ ಪತ್ರಕರ್ತರಿಗೆ ನಿವೇಶನ, ಮನೆ ಮುಂತಾದ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಲ್ಲದೆ, ಮುಖ್ಯಮಂತ್ರಿಗಳ ಮೇಲು ಒತ್ತಡ ಹೇರುವ ಭರವಸೆ ನೀಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ದಿನೇಶ್ಗೌಡಗೆರೆ ಮಾತನಾಡಿದ, ಪತ್ರಕರ್ತರು ಒಂದೇ ಕುಟುಂಬದ ಸದಸ್ಯರು ಅಲ್ಪಸ್ವಲ್ಪ ಭಿನ್ನಾಭಿಪ್ರಾಗಳಿದ್ದರೂ ವೃತ್ತಿ ನಿರ್ವಹಣೆ ವಿಚಾರದಲ್ಲಿ ಯಾರಲ್ಲೂ ತಾರತಮ್ಯವಿಲ್ಲ. ಡಿ.ವಿ.ಗುಂಡಪ್ಪನವರು ಸ್ಥಾಪಿಸಿದ ಕಾರ್ಯನಿರತರ ಪತ್ರಕರ್ತರ ಸಂಘ 92ವರ್ಷಕ್ಕೆ ಕಾಲಿಟ್ಟಿದೆ. ಆದರೂ ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ತೃಪ್ತಿಕಾರವಾದ ಕಾರ್ಯನಿರ್ವಹಿಸಿಲ್ಲ. ಶಾಸಕರು ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುವಂತೆ ಮನವಿ ಮಾಡಿದರು. ತಾಲ್ಲೂಕು ಪತ್ರಿಕಾ ಸಂಘದ ಉಪಾಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಎಲ್ಲರನ್ನೂ ಸ್ವಾಗತಿಸಿ, ಸ್ಥಳೀಯ ಪತ್ರಕರ್ತರ ಬಗ್ಗೆ ಹಾಗೂ ಅವರ ಕಾರ್ಯದ ಬಗ್ಗೆ ಶಾಸಕರಿಗೆ ಅಪಾರವಾದ ಗೌರವವಿದೆ. ಎಲ್ಲಾ ಪತ್ರಕರ್ತರನ್ನು ಗೌರವಿಸುವ ಗುಣ ಅವರಲ್ಲಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಎಲ್ಲಾ ಪತ್ರಕರ್ತರ ಪರವಾಗಿ ಮನವಿ ಮಾಡುವೆ ಎಂದರು. ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಪರಿಷತ್ ಸದಸ್ಯ, ಜಿಲ್ಲಾ ವಾಲ್ಮೀಕಿ ಪ್ರಶಸ್ತಿ ವಿಜೇತ ಎಂ.ಎನ್.ಅಹೋಬಲಪತಿ ಮಾತನಾಡಿ, ಪತ್ರಕರ್ತರ ಸಂಘವನ್ನು ಸಂಸ್ಥಾಪಿಸಿದ ಡಿ.ವಿ.ಗುಂಡಪ್ಪನವರ ಬಗ್ಗೆ ಎಲ್ಲರಿಗೂ ಅಪಾರ ಗೌರವವಿದೆ. ಆದರೆ, ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಹ ಬಹಿಷ್ಕಾರ ಭಾರತ, ಸತ್ಯಾನ್ವೇಷಣೆ, ಮೂಕನಾಯಕ ಎಂಬ ಮೂರು ಪತ್ರಿಕೆಗಳನ್ನು ಪ್ರಕಟಿಸಿ ಅವುಗಳ ಮೂಲಕ ಜನರ ಜಾಗೃತಿ ಮೂಡಿಸಿದ್ದು, ಅವರ ಭಾವಚಿತ್ರಕ್ಕೂ ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ಪತ್ರಕರ್ತರಿಗೆ ಸೌಲಭ್ಯ ನೀಡುವ ವಿಚಾರದಲ್ಲಿ ಕಡೆಪಕ್ಷ ಮಾಧ್ಯಮದಲ್ಲಿ ೧೦ ವರ್ಷ ಸೇವೆ ಮಾಡಿದವರಿಗೆ ಆದ್ಯತೆ ನೀಡಬೇಕು ಎಂದರು. ರಾಷ್ಟ್ರೀಯ ಮಂಡಳಿ ಸದಸ್ಯ ಸಿ.ಹೆಂಜಾರಪ್ಪ ಮಾತನಾಡಿ, ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪತ್ರಿಕೆಗಳಿಗೆ ಮಾತ್ರ ವಿಶೇಷ ಜಾಹೀರಾತು ನೀಡುವುದನ್ನು ತಡೆಯಲಾಗಿದೆ. ಯಾವುದೇ ತಾರತಮ್ಯವಿಲ್ಲದೆ ರಾಜ್ಯ, ಪ್ರಾದೇಶಿಕ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪತ್ರಿಕೆಗಳಿಗೆ ಸರ್ಕಾರ ಜಾಹೀರಾತು ನೀಡಬೇಕು. ರಾಜ್ಯ ಮಟ್ಟದ ಪತ್ರಿಕೆಗಳಿಗೆ ಪ್ರತಿದಿನ ಜಾಹೀರಾತು ನೀಡಲಾಗುತ್ತಿದೆ. ಸ್ಥಳೀಯ ಜಿಲ್ಲಾ ಮಟ್ಟದ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಕಡೆಪಕ್ಷ ತಿಂಗಳಿಗೆ ಎರಡ್ಮೂರಾದರೂ ನೀಡಬೇಕೆಂದು ಮನವಿ ಮಾಡಿದರು.
ಚಳ್ಳಕೆರೆ ಕ್ಷೇತ್ರದ ಶಾಸಕ ರಘುಮೂರ್ತಿ ಅವರು ಅತ್ಯಂತ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಬರ ಪೀಡಿತ ಚಿತ್ರದುರ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು, ಜಿಲ್ಲೆಯ ಶೇಂಗಾ ಬೆಳೆಗಾರ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ, ಪರಶುರಾಂಪುರ ತಾಲೂಕು ಕೇಂದ್ರಕ್ಕೆ ಆಗ್ರಹ, ಬೆಳೆ ವಿಮೆ ಬೆಳೆ ಪರಿಹಾರ ನೀಡಿಕೆಯಲ್ಲಿ ಆಗುತ್ತಿರುವ ತಾರತಮ್ಯ, ಅನ್ಯಾಯದ ವಿರುದ್ಧ ಸದನದಲ್ಲಿ ಗಮನ ಸೆಳೆಯುವ ಮೂಲಕ ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾಡಿದ್ದಾರೆಂದು ಅವರು ತಿಳಿಸಿದರು.ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಿ.ತಿಪ್ಪೇಸ್ವಾಮಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಪತ್ರಕರ್ತರು ಪ್ರಾಮಾಣಿಕರು ಮತ್ತು ಸತ್ಯವನ್ನು ಪ್ರತಿಪಾದಿಸುವ ಮುಂಚೂಣಿ ಶಿಸ್ತಿನ ಸಿಪಾಯಿಗಳು. ಪೊಲೀಸರಂತೆ ಅವರೂ ಸಹ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಸರ್ಕಾರ ಇವರ ಬಗ್ಗೆ ನಿರ್ಲಕ್ಷ್ಯೆ ವಹಿಸಿರುವುದು ಸರಿಯಲ್ಲವೆಂದರು. ಡಿವೈಎಸ್ಪಿ ಟಿ.ಬಿ.ರಾಜಣ್ಣ ಮಾತನಾಡಿ, ಪೊಲೀಸ್ ಮತ್ತು ಪತ್ರಕರ್ತರು ಸಮಾಜವನ್ನು ತಿದ್ದುವ, ಪರಿವರ್ತಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದಾರೆಂದರು. ಸಿದ್ದಯ್ಯನಕೋಟೆಯ ಬಸವ ಲಿಂಗಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ ಮಾತನಾಡಿ, ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕರು ಅಭಿವೃದ್ದಿ ಕಾರ್ಯಕ್ರಮದ ಮೂಲಕ ಖ್ಯಾತಿಯಾಗಿದ್ಧಾರೆ. ಅದೇ ರೀತಿ ಪತ್ರಕರ್ತರು ಕಳೆದ ಸುಮಾರು ೩೦ ವರ್ಷಗಳಿಂದ ಯಾವುದೇ ಸೌಲಭ್ಯವಿಲ್ಲದೆ ಸೇವೆ ಸಲ್ಲಿಸುತ್ತಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಶಾಸಕರು ರಾಜ್ಯಕ್ಕೆ ಮಾದರಿಯಾಗಬೇಕೆಂದರು. ಕಾರ್ಯಕ್ರಮದಲ್ಲಿ ಡಾ.ಬಿ.ಚಂದ್ರನಾಯ್ಕ, ಪಿ.ತಿಪ್ಪೇಸ್ವಾಮಿ, ಹೆಂಜಾರಪ್ಪ, ಅಹೋಬಲಪತಿ, ನಾವೆಲ್ಲಾ ಮಹೇಶ್, ಗೋಪನಹಳ್ಳಿ ಶಿವಣ್ಣ, ಅಪ್ಪುವೀರೇಶ್, ಲಕ್ಷ್ಮಣ್ಪಾಳೇಗಾರ, ಜಿಲ್ಲಾ ಖಜಾಂಚಿ ಡಿ.ಕುಮಾರಸ್ವಾಮಿ, ಜೆ.ಮಂಜುನಾಥ, ಎಚ್.ಟಿ.ಮಂಜುನಾಥ ಮುಂತಾದವರನ್ನು ಸನ್ಮಾನಿಸಲಾಯಿತು.
ರೈತ ಸಂಘದ ಹಿರಿಯ ಮುಖಂಡ ರೆಡ್ಡಿಹಳ್ಳಿವೀರಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದಕುಮಾರ್, ಪತ್ರಕರ್ತರಾದ ಬೊಮ್ಮಲಿಂಗಪ್ಪ, ರಾಮಾಂಜನೇಯ, ಬೆಳಗೆರೆ ಸುರೇಶ್, ಚಿದಾನಂದಮೂರ್ತಿ, ಗಂಗಾಧರ, ಜೆ.ತಿಮ್ಮಯ್ಯ, ಭಾರತಿ ಚಿತ್ತಯ್ಯ, ಎಸ್ಟಿಡಿ ರಾಜು, ಎಚ್.ಶಿವಮೂರ್ತಿ, ಕೆ.ಚಿತ್ತಯ್ಯ, ಬಿ.ಲೋಕೇಶ್ ಉಪಸ್ಥಿತರಿದ್ದರು.