i
ಹೆಚ್ಚಿನ ಇಳುವರಿಗೆ ಮಣ್ಣಿನ ಪೋಷಕಾಂಶಗಳ ನಿರ್ವಹಣೆ ಕೈಗೊಳ್ಳಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಹಿಂಗಾರಿ ಜೋಳ, ಕಡಲೆ, ಕುಸುಬೆ, ಹುರುಳಿ, ಮುಸುಕಿನಜೋಳ, ಗೋಧಿ ಮತ್ತು ಸೂರ್ಯಕಾಂತಿ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಪಡೆಯಲು ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ನಿರ್ವಹಣೆ ಮತ್ತು ಸಮಗ್ರ ಪೀಡೆ ನಿರ್ವಹಣೆ ಕೈಗೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ರೈತರಿಗೆ ಮನವಿ ಮಾಡಿದರು.
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ರೈತರಿಗೆ ಹಿಂಗಾರು ಹಂಗಾಮಿನ ಪ್ರಮುಖ ಕೃಷಿ ಬೆಳೆಗಳಲ್ಲಿ ಅನುಸರಿಸಬೇಕಾದ ಸುಧಾರಿತ ಆಧುನಿಕ ಬೇಸಾಯ ಪದ್ದತಿಗಳ ತಾಂತ್ರಿಕತೆಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಓ.ಕುಮಾರ್ ಅವರು, ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಪದ್ದತಿಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಲ್ಲಿ ಬರುವ ಪ್ರಮುಖ ರೋಗ ಮತ್ತು ಕೀಟಗಳ ನಿರ್ವಹಣೆಯ ಕುರಿತು ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞ ಡಾ. ರುದ್ರಮುನಿ, ಕಡಲೆ ಬೆಳೆಯಲ್ಲಿ ಆರು ಸಾಲಿಗೆ ಎರಡು ಸಾಲು ಕೊತ್ತಂಬರಿ ಬೆಳೆ ಬೆಳೆಯುವುದರಿಂದ ಹಸಿರು ಕಾಯಿ ಕೊರಕ ಕೊತ್ತಂಬರಿ ಬೆಳೆಯ ಹೂವಿನ ಮೇಲೆ ಮೊಟ್ಟೆಯನ್ನು ಇಟ್ಟು ಮೊಟ್ಟೆಯಿಂದ ಹೊರಬಂದ ಮರಿಗಳು ಕೊತ್ತಂಬರಿ ಬೆಳೆಯನ್ನು ತಿನ್ನುತ್ತವೆ. ಆದ ಪ್ರಯುಕ್ತ ಕೊತ್ತಂಬರಿ ಬೆಳೆಯು ಕೀಟವನ್ನು ಆಕರ್ಷಣೆ ಮಾಡುವುದರಿಂದ ಬೆಳೆಯ ಮೇಲೆ ಕೀಟನಾಶಕ ಸಿಂಪರಣೆ ಮಾಡುವುದರಿಂದ ಹಸಿರು ಕಾಯಿ ಕೊರಕದ ಬಾದೆ ಕಡಿಮೆ ಮಾಡಬಹುದು. ಕಡಲೆ ಬೆಳೆಯಲ್ಲಿ ಅಲ್ಲಲ್ಲಿ ಕವಲೊಡೆದ ಮರದ ಟೊಂಗೆಗಳನ್ನು ನಿಲ್ಲಿಸುವುದರಿಂದ ಪಕ್ಷಿಗಳು ಕುಳಿತು ಕೀಟಗಳನ್ನು ಆಯ್ದು ತಿನ್ನುತ್ತವೆ. ರೈತ ಭಾಂದವರು ತಮ್ಮ ಜಮೀನಿನಲ್ಲಿ ಸಿಗುವ ಬೇವಿನ ಬೀಜಗಳನ್ನು ಆಯ್ದು ಶೇ.5ರ ಬೇವಿನ ಬೀಜದ ಕಷಾಯವನ್ನು ತಯಾರಿಸಿಕೊಂಡು ಕಡಲೆ ಬೆಳೆಯ ಬೆಳವಣಿಗೆ ಹಂತದಲ್ಲಿ ಸಿಂಪರಣೆ ಮಾಡುವುದರಿಂದ ಕೀಟಗಳ ನಿರ್ವಹಣೆ ಸಾಧ್ಯವಾಗುತ್ತದೆ. ಕೀಟನಾಶಕಗಳಾದ ಪ್ರೋಪೆನೊಪಾಸ್ @ 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಅಥವಾ ಎಮಾಮೆಕ್ಟಿನ್ ಬೆಂಜೋಯೆಟ್ @ 0.3 ಗ್ರಾಂ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪರಣೆ ಮಾಡುವುದರಿಂದ ಕಾಯಿ ಕೊರಕ ಹುಳುವಿನ ಬಾದೆಯನ್ನು ಕಡಿಮೆ ಮಾಡಬಹುದೆಂದು ತಿಳಿಸಿದರು.
ತರಬೇತಿಯ ನಂತರ ಕೃಷಿ ವಿಜ್ಞಾನ ಕೇಂದ್ರದ ಕಡಲೆ ಬೆಳೆಯ ತಾಕಿಗೆ ರೈತರೊಂದಿಗೆ ಭೇಟಿ ನೀಡಿ ಕಾಯಿ ಕೊರಕ ಹುಳುವಿನ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಿಬ್ಬಂದಿಯವರು ಹಾಗೂ ಜಿಲ್ಲೆಯ ರೈತ ಇದ್ದರು.