i
ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಗಾಯಿತ್ರಿ ಕಲ್ಯಾಣ ಮಂಟಪ ಆವರಣದಲ್ಲಿ ಇದೇ ಮೊದಲ ಬಾರಿಗೆ ನಿರ್ಮಿಸಿದ ಶ್ರೀಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಪೂಜಾ ಕಾರ್ಯಕ್ರಮಗಳು ಆರಂಭವಾಗಿದ್ದು, ನಗರದ ಸಾವಿರಾರು ಅಯ್ಯಪ್ಪಸ್ವಾಮಿ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ವಿಶೇಷವೆಂದರೆ ಮಹಿಳೆಯರೂ ಸೇರಿದಂತೆ ವೃದ್ದರು ಹಾಗೂ ಮಕ್ಕಳು ಶಬರಿಮಲೆಗೆ ಹೋಗಿ ಶ್ರೀಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಸಾಧ್ಯವಾಗದ ಉದಾಹರಣೆಗಳಿದ್ದು ಇಂತಹ ಭಕ್ತರಿಗೆ ಶ್ರೀಸ್ವಾಮಿಯ ದರ್ಶನವನ್ನು ಇಲ್ಲಿಯೇ ಮಾಡಿಸಲು ಶ್ರೀಸ್ವಾಮಿಯ ಪರಮಭಕ್ತರಾದ ಖಾಸಗಿ ಬಸ್ ಏಜೆಂಟ್ ಗುರುಜಗ್ಗುಸ್ವಾಮಿ, ಬಾಸ್ ರೇಣುಕಾಸ್ವಾಮಿ ಶಿಷ್ಯವೃಂದ ಹರಿಹರಸುತ ಸೇವಾ ಸಮಿತಿ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಗರದ ನೂರಾರು ಜನರು ಆಗಮಿಸಿ ಭಕ್ತಿಯಿಂದ ಶ್ರೀಸ್ವಾಮಿಯ ದರ್ಶನ ಪಡೆದರು.
ಶ್ರೀಅಯ್ಯಪ್ಪಸ್ವಾಮಿಯ ದಿವ್ಯಮಂಟಪದ ಮುಂಭಾಗದಲ್ಲಿಯೇ ಶ್ರೀಗಣಹೋಮದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಅಯ್ಯಪ್ಪಸ್ವಾಮಿ ವಿಗ್ರಹವನ್ನು ನೂತನವಾಗಿ ನಿರ್ಮಿಸಿದ ಸೆಟ್ನಲ್ಲಿ ಪ್ರತಿಷ್ಠಾಪಿಸಿ ಉಷಾಪೂಜೆ, ತುಪ್ಪಾಭಿಷೇಕ, ಅಷ್ಟಾಭಿಷೇಕ, ಉದಯಅಸ್ತಮಾನ ಪೂಜೆ, ಗೋಪೂಜೆ, ಉಚ್ಚಪೂಜೆ, ಪಡಿಪ್ರತಿಷ್ಠಾಪನಾ ಪೂಜೆ, ಪಟ್ಟಾಭಿಷೇಕ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಸಲಾಯಿತು.
ಶಬರಿಮಲೆಯ ಮಣಿಮಂಟಪದ ಆರ್ಚಕರಾದ ಅಜಿತ್ಜನಾರ್ಥನಕುರೂಫ್, ಶಿಲ್ಪಿ ಸ್ತಪತಿ ಎನ್.ದೊರೆಬಾಬು, ಶಬರಿಮಲೆಯ ಆರ್ಚಕ ಆನಂದನಂಬೂಧರಿ ಇವರ ಮಾರ್ಗದರ್ಶನದಲ್ಲಿ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಡಿ.೨೫ರ ಸೋಮವಾರದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಶಬರಿಮಲೆ ಅಯ್ಯಪ್ಪಸ್ವಾಮಿ ಸೇವಾ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್, ರಾಜ್ಯಾಧ್ಯಕ್ಷ ಜಯರಾಮ್ ಮುಂತಾದವರು ಭಾಗವಹಿಸುವರು ಎಂದು ವ್ಯವಸ್ಥಾಪಕರ ಪರವಾಗಿ ಕೀರ್ತಿಪ್ರಸಾದ್ ತಿಳಿಸಿದ್ದಾರೆ.