i
ಕಾಡುಗೊಲ್ಲ ಸಮಾಜದಿಂದ ದೇವೇಗೌಡರಿಗೆ ಸನ್ಮಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರಿಗೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಕಾಡುಗೊಲ್ಲ ಮುಖಂಡರು ಬೆಂಗಳೂರಿನಲ್ಲಿ ಭೇಟಿ ಮಾಡಿ ಸನ್ಮಾನಿಸಿದರು.
ಕೆಲ ದಿನಗಳ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಕಾಡುಗೊಲ್ಲ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರ್ಪಡೆ ಮಾಡಲು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದರು.
ದೇವೇಗೌಡರ ಮನವಿಗೆ ಸ್ಪಂದಿಸಿದ ಪ್ರಧಾನಿ ಮೋದಿಯವರು ಕೂಡಲೇ ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರಿಗೆ ವರ್ಗಾವಣೆ ಮಾಡಿ ಸೂಚಿಸಲಾಗಿತ್ತು.
ಇದೀಗ ಕೇಂದ್ರ ಸಚಿವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಪತ್ರಕ್ಕೆ ಪ್ರತ್ಯುತ್ತರ ನೀಡಿ ನಿಮ್ಮ ಮನವಿ ಪತ್ರ ಸ್ವೀಕರಿಸಿದ್ದು ಕಾಡುಗೊಲ್ಲ ಸಮುದಾಯದವರಿಗೆ ಎಸ್.ಟಿ ಮೀಸಲಾತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮವಹಿಸುವುದಾಗಿ ಭರವಸೆ ನೀಡಿದ್ದಾರೆ.
ಹಾಗಾಗಿ ಇದಕ್ಕೆ ಕಾರಣರಾದ ದೇವೇಗೌಡರನ್ನು ಕಾಡುಗೊಲ್ಲ ಸಮಾಜದ ಮುಖಂಡ, ಮಾಜಿ ಉಪ ಮಹಾಪೌರ ನರಸಿಂಹ ಮೂರ್ತಿ ನೇತೃತ್ವದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಂಗಸ್ವಾಮಿ, ನಗರ ಸಭೆ ಸದಸ್ಯ ಚಿತ್ರಜಿತ್ ಯಾದವ್, ಸಂಗೇನಹಳ್ಳಿ ತಿಪ್ಪೇಸ್ವಾಮಿ, ನಾಗಣ್ಣ ಹಾಗೂ ಚಿತ್ರದುರ್ಗ ಜಿಲ್ಲೆ ತುಮಕೂರು ಜಿಲ್ಲೆಯ ಕಾಡು ಗೊಲ್ಲ ಮುಖಂಡರು ಯುವಕರು ಭೇಟಿ ಮಾಡಿ ದೇವೇಗೌಡರನ್ನು ಸನ್ಮಾನಿಸಿದ್ದಾರೆ.