i
ಬೆಚ್ಚಿ ಬಿದ್ದ ಕೋಟೆ ನಾಡು, ಐದು ಅಸ್ಥಿಪಂಜರಗಳು ಪತ್ತೆ, ಅಸ್ಥಿ ಪಂಜರಗಳ ನಿಗೂಢತೆ ಪತ್ತೆಗೆ ಮುಂದಾದ ಪೊಲೀಸರು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆ ನಾಡು ಚಿತ್ರದುರ್ಗ ಬೆಚ್ಚಿ ಬಿದ್ದಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಐದು ಅಸ್ಥಿ ಪಂಜರಗಳು ಪತ್ತೆಯಾಗಿದ್ದು ಅಸ್ಥಿ ಪಂಜರಗಳ ನಿಗೂಢತೆ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಐಜಿಪಿ, ಎಸ್ಪಿ ಸೇರಿದಂತೆ ಸ್ಥಳಕ್ಕೆ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್ ಗೇಟ್ ಬಳಿಯ ಜೈಲ್ ರಸ್ತೆಯ ಜಗನ್ನಾಥ ರೆಡ್ಡಿ ಸಾಮೀಲ್ ಬಳಿ ಇಂಜಿನಿಯರ್ ದೊಡ್ಡ ಸಿದ್ದವ್ವನಹಳ್ಳಿ ಎಂಬ ನಾಮಫಲಕ ಹೊಂದಿರುವ ಮನೆಯಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಜಗನ್ನಾಥರೆಡ್ಡಿ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ ಪ್ರಕರಣದಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿವೆ. ಸಾವಿಗೆ ನಿಖರವಾದ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಕುಟುಂಬದ ಐದು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಲಭ್ಯವಾಗಿರುವ ಅಸ್ಥಿಪಂಜರಗಳು ಮನೆ ಮಾಲೀಕ ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಾ, ಪುತ್ರ ನರೇಂದ್ರರೆಡ್ಡಿ, ಮಗಳು ಮೃತಪಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಜಗನ್ನಾಥ ರೆಡ್ಡಿಗೆ 3 ಜನ ಗಂಡು ಮಕ್ಕಳು ಹಾಗೂ ಒಬ್ಬರು ಹೆಣ್ಣು ಮಗಳು ಎಂದು ಹೇಳಲಾಗಿದೆ.
ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು ಕೋಟಿಗಟ್ಟಲೆ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಆರೋಗ್ಯ ಮತ್ತೊಷ್ಟು ಹದಗೆಟ್ಟಿತ್ತು. ಮನೆಗೆ ಯಾರೇ ಬಂದರೂ ಬಾಗಿಲು ತೆಗೆಯದೆ ಬಾಗಿಲಲ್ಲೆ ಮಾತಾಡಿಸಿ ಕಳುಹಿಸಿತ್ತಿದ್ದರು ಎನ್ನುವ ಮಾಹಿತಿ ಸಾರ್ವಜನಿಕರು, ಅಕ್ಕಪಕ್ಕದವರಿಂದ ಕೇಳಿ ಬರುತ್ತಿದೆ.
ಪಾಳು ಬಿದ್ದಿರುವ ಮನೆಯಲ್ಲಿ ಲಭ್ಯವಾಗಿರುವ ಐದು ಅಸ್ಥಿಪಂಜರಗಳ ಬಳಿ ಆಕ್ಸಿಜನ್ ಸಿಲಿಂಡರ್ ಕಂಡು ಬಂದಿದೆ. ಜಗನ್ನಾಥ ರೆಡ್ಡಿ, ಕೃಷ್ಣಾರೆಡ್ಡಿ, ಜಗನ್ನಾಥ ರೆಡ್ಡಿ ಪತ್ನಿ ಸೇರಿದಂತೆ ಕುಟುಂಬ ಸದಸ್ಯರುಗಳ ಅಸ್ಥಿಪಂಜರಗಳು ಇರಬಹುದು ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ.
ಸ್ಥಳೀಯರ ಪ್ರಕಾರ ಮನೆಯ ನಿವಾಸಿಗಳು 2019ರ ಸೆಪ್ಟಂಬರ್ ನಿಂದ ಯಾರಿಗೂ ಸಹ ಕಾಣದೆ ಇರುವುದು ಕಂಡು ಬಂದಿದೆ. ಆ ನಂತರದ ದಿನಗಳಲ್ಲಿ ಮನೆಯ ಸುತ್ತಮುತ್ತ ಸ್ವಲ್ಪ ದುರ್ವಾಸನೆ ಬಂದಂತಹ ಸ್ಥಿತಿಯಿತ್ತು. ಯಾವುದೋ ಪ್ರಾಣಿ ಸತ್ತಿರುವ ವಾಸನೆ ಬರುತ್ತದೆ ಎಂದು ತಿಳಿದುಕೊಂಡಿದ್ದೆವು ಎಂದು ಸ್ಥಳೀಯರಿಂದ ಮಾಹಿತಿ ನೀಡುತ್ತಿದ್ದಾರೆ.
ಇದರ ಮಧ್ಯ ಡೆತ್ ನೋಟ್ ಪೊಲೀಸರ ಕೈಗೆ ಸಿಕ್ಕಿದ್ದು ಆ ಡೆತ್ ನೋಟ್ ನಲ್ಲಿ ಏನಿದೆ ಎನ್ನುವುದು ಬಹಿರಂಗವಾಗಬೇಕಿದೆ. ಊಟದಲ್ಲಿ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಐವರು ತಿಂದ ತಟ್ಟೆಗಳಲ್ಲಿನ ಊಟವನ್ನು ತಿಂದು ಮನೆಯಲ್ಲಿನ ನಾಯಿ ಕೂಡ ಮೃತಪಟ್ಟ ಹಿನ್ನೆಲೆಯಲ್ಲಿ ಐದು ಮಂದಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಲಭ್ಯವಾಗಿರುವ ಡೆತ್ ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. 2019ರಲ್ಲಿ ಡೆತ್ ನೋಟ್ ಬರೆದಿಟ್ಟು ಐವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ದಡೋಡೆ ಕೇಸ್ ಮುಳುವಾಯಿತೆ?ಜಗನ್ನಾಥರೆಡ್ಡಿ ಪುತ್ರ 2013ರಲ್ಲಿ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ನರೇಂದ್ರರೆಡ್ಡಿ ವಿರುದ್ಧ ದರೋಡೆ(ರಾಬರಿ) ಪ್ರಕರಣ ಇತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. 2013ರಲ್ಲಿ ಬಿಡದಿ ಬಳಿ ವಾಹನ ತಡೆದು ದರೋಡೆ ಮಾಡಿದ ಆರೋಪದಲ್ಲಿ ನರೇಂದ್ರರೆಡ್ಡಿ ಮತ್ತು ಗೆಳೆಯರ ವಿರುದ್ಧ ಪ್ರಕರಣ ದಾಖಲಾಗಿತ್ತು ಎನ್ನುವ ಮಾಹಿತಿ ಹೊರ ಬೀಳುತ್ತಿದೆ. ದರೋಡೆ ಪ್ರಕರಣದಲ್ಲಿ ನರೇಂದ್ರರೆಡ್ಡಿ ಕೆಲ ದಿನ ಜೈಲು ಸೇರಿದ್ದರು ಎನ್ನಲಾಗಿದೆ. ನರೇಂದ್ರರೆಡ್ಡಿ ಮೇಲೆ ಇದ್ದ ದರೋಡೆ ಪ್ರಕರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ನಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದ್ದು ಪೊಲೀಸರು ಈ ವಿಷಯವನ್ನು ಖಚಿತ ಪಡಿಸಬೇಕಿದೆ.ಮನೆ ಯಾರಿಗೆ ಸೇರಿದ್ದು-
ಚಿತ್ರದುರ್ಗದ ಚಳ್ಳಕೆರೆ ಗೇಟ್ನ ಮನೆಯಲ್ಲಿ ಪತ್ತೆಯಾಗಿರುವ 5 ಅಸ್ಥಿಪಂಜರ ಮನೆ ಚಿತ್ರದುರ್ಗದ ದೊಡ್ಡ ಸಿದ್ದವ್ವನಹಳ್ಳಿಯ ಜಗನ್ನಾಥ್ ರೆಡ್ಡಿ ಎಂಬವರಿಗೆ ಸೇರಿದ ಎನ್ನಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರರಾಗಿದ್ದ ಜನನ್ನಾಥ್ ರೆಡ್ಡಿ ಅವರು ನಿವೃತ್ತರಾಗಿದ್ದರು.
ನಿಗೂಢತೆ-
ಚಿತ್ರದುರ್ಗ ನಗರದ ಜನನಿಬೀಡು ರಸ್ತೆಯಲ್ಲೇ ಪಾಳು ಬಿದ್ದಿರುವ ಮನೆಯಲ್ಲಿ ಐದು ಅಸ್ಥಿಪಂಜರಗಳು ಲಭ್ಯವಾಗಿದ್ದರೂ ನಾಲ್ಕೈದು ವರ್ಷಗಳಿಂದ ಯಾರ ಗಮನಕ್ಕೂ ಬಾರದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಇದರ ಜೊತೆಯಲ್ಲಿ ಬಂಧು ಬಳಗದವರು ಯಾರು ಈ ಕುಟುಂಬದ ಬಗ್ಗೆ ಸುಳುವು ನೀಡಿದಿರುವುದು ಕೂಡ ಮತ್ತೊಷ್ಟು ನಿಗೂಢವಾಗಿದೆ.ಈ ಪ್ರಕರಣದಲ್ಲಿ ಸಾಕಷ್ಟು ಕುತೂಹಲಗಳಿದ್ದು ಪತ್ತೆಯಾಗಿರುವ ಐದು ಅಸ್ಥಿಪಂಜರಗಳು ಯಾರು ಯಾರದು? ಸಾವಿಗೆ ಆತ್ಮಹತ್ಯೆ ಕಾರಣವೇ? ಸಾವಿಗೆ ಕಾಯಿಲೆ ಅಥವಾ ಅನ್ಯ ಕಾರಣಗಳಿದ್ದಿರಬಹುದೇ? ನಾಲ್ಕಾರು ವರ್ಷಗಳೇ ಆದರೂ ಈ ಸಾವುಗಳು ಯಾರ ಗಮನಕ್ಕೂ ಬರದೇ ಇದ್ದುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೂ ಪೊಲೀಸ್ತನಿಖೆ ಉತ್ತರಿಸಬೇಕಿದೆ. ಸ್ಥಳಕ್ಕೆ ಚಿತ್ರದುರ್ಗ ಬಡಾವಣೆ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಎಎಸ್ಪಿ ಎಸ್.ಜೆ. ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಂಡ ಹಾಗೂ ವಿಧಿ ವಿಜ್ಞಾನ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.