i
ಲಿಂಗಾಯತ ಧರ್ಮ ತತ್ವದ ಮಹತ್ವ ಸಾರುವ ದಿನದರ್ಶಿಕೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವರ್ಷಕ್ಕೊಮ್ಮೆ ಬದಲಾಗುವ ದಿನದರ್ಶಿಕೆ (ಗೋಡೆ ಕ್ಯಾಲೆಂಡರ್) ನಾಡಿನಲ್ಲಿ ನಾನಾ ರೀತಿಯ ಹೆಸರಿನಲ್ಲಿ ಮುದ್ರಣಗೊಳ್ಳುತ್ತವೆ.ಅವೆಲ್ಲಕ್ಕಿಂತ ಭಿನ್ನವಾಗಿ, ಲಿಂಗಾಯತ ಜಾತಿ ಅಲ್ಲ ಅದೊಂದು ತತ್ವ ಎನ್ನುವುದನ್ನು ಮನನ ಮಾಡಿಕೊಡುವ ಸಲುವಾಗಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನೇಗಿನಾಳ ಗ್ರಾಮದ ವಾಸಿ, ವೃತ್ತಿಯಲ್ಲಿ ಪತ್ರಕರ್ತರಾಗಿರುವ ಶಿವಾನಂದ ಬಸವರಾಜ ಮೆಟ್ಯಾಲ ಅವರು ಕಳೆದ ನಾಲ್ಕೈದು ವರ್ಷಗಳಿಂದ “ಲಿಂಗಾಯತ ದಿನದರ್ಶಿಕೆ” ಎನ್ನುವ ವಿನೂತನವೂ, ಆಕರ್ಷಕವೂ ಆಗಿರುವ ಲಿಂಗಾಯತ ತತ್ವದಲ್ಲಿ ನಂಬಿಕೆಯಿರಿಸಿ, ಆಧರಿಸಿ ಆಚರಿಸುವ ಮನೆಂಗಳದಲ್ಲಿ ತೂಗು ಹಾಕಬಹುದಾದನ್ನೇ ಮಾಡಿಸಿದ್ದಾರೆ.
ಕಾಯಕದಲ್ಲಿ ಮೇಲು ಕೀಳು ಎಂಬ ಭೇದ ಭಾವವಿಲ್ಲದ ಸಮ ಸಮಾಜವನ್ನು ನಿರ್ಮಿಸಿ ಕೇವಲ ಪೂಜೆ, ಪ್ರಾರ್ಥನೆಯಿಂದ ಮಾತ್ರ ದೇವರನ್ನೊಲಿಸುವ ಸಾಧನ ಎಂದು ತಿಳಿದ ಸಮಾಜಕ್ಕೆ, ಕಾಯಕ ಮಾಡುತ್ತಾ ಕೂಡ ದೇವರನ್ನೊಲಿಸಬಹುದು ಎಂದು ತೋರಿಸಿಕೊಟ್ಟು, ಕಾಯಕಕ್ಕೆ ದೈವತ್ವದ ಸ್ಥಾನ ತಂದುಕೊಟ್ಟವರು ಬಸವಣ್ಣನವರು.
ಶರಣರ ಸೂಕ್ಷ್ಮ ವಿಚಾರಗಳನ್ನು ಗಮನಿಸಿದರೆ ಅವರು ತೋರಿಸಿದ ಕಾಯಕ ಸಿದ್ಧಾಂತದ ಮೇಲೆ ಆರ್ಥಿಕ ಜಗತ್ತನ್ನೇ ಕಟ್ಟುವ ಶಕ್ತಿ, ಹುಮ್ಮಸ್ಸು ದೊರೆಯುತ್ತದೆ. ಅಂದಿನ ಅವರ ಕಲ್ಯಾಣ ಸಮೃದ್ಧಿ ನಾಡನ್ನು ನೋಡಿದರೆ, ಬೇಡುವವರೇ ಇಲ್ಲದೇ ಎಲ್ಲರೂ ನೀಡುವ, ದುಡಿಯುವ ವರ್ಗದ ಸಾಮ್ರಾಜ್ಯ ಕಟ್ಟಿದ ಜಗತ್ತಿನ ಮೊಟ್ಟ ಮೊದಲ ಸಂಘಟಕರೆನಿಸಿದರು. ಇಂತಹ ಸಮಾಜದಲ್ಲಿ ಕ್ಷೌರಿಕ, ಮಡಿವಾಳ, ಹೂಗಾರ, ಗಾಣಿಗ, ಕುಂಬಾರ ,ಚಮ್ಮಾರ ,ಅಂಬಿಗ ಹೀಗೆ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಕೊಂಡು ಸಮಾಜದಲ್ಲಿ ದಾಸೋಹ ಮಾಡುವ ಕಾರ್ಯದಲ್ಲಿ ಭೇದ- ಭಾವವಿಲ್ಲದೆ ಸಮನಾಗಿ ಭಾಗಿಯಾಗುತ್ತಿದ್ದರು. ಇಲ್ಲಿ ಯಾವುದೇ ತಾರತಮ್ಯ ವಿರಲಿಲ್ಲ.
ಅರಸನಿರಲಿ ಅಗಸನಿರಲಿ ಒಂದೇ ಪಂಕ್ತಿಯಲ್ಲಿ ಕುಳಿತು ಪ್ರಸಾದ ಸ್ವೀಕರಿಸಬೇಕು ಸಮಾನ ವೃತ್ತಿ ಗೌರವ, ಸಾಮಾಜಿಕ ಸ್ಥಾನಮಾನ ವ್ಯಕ್ತಿಯ ಕಸುಬಿನಿಂದ ಬಂದದ್ದಲ್ಲ. ಆತನ ಲಿಂಗನಷ್ಠೆ, ಕಾಯಕ,
ದಾಸೋಹ ಮನೋಭಾವದಿಂದ ಬಂದದ್ದು. ಇಂತಹ ಸಮಾನತೆ ಯಾವುದೇ ಕಮ್ಯುನಿಸ್ಟ್ ಸೋಷಿಯಲಿಸ್ಟ್ ರಾಷ್ಟ್ರಗಳಲ್ಲಿ ಇಲ್ಲಿಯವರೆಗೂ ಕಂಡು ಬಂದಿಲ್ಲ.ಇಂತಹ ಅನೇಕ ವಿಚಾರಗಳು ದಿನ ದರ್ಶಿಕೆಯಲ್ಲಿ ಸೇರಿವೆ.
ದಿನದರ್ಶಿಕೆಯ ವಿಶೇಷ:
ಲಿಂಗಾಯತ ಧರ್ಮದ ಸೂತ್ರಗಳು, ಅಷ್ಟಾವರಣಗಳು, ಪಂಚಾಚಾರಗಳು, ಷಟಸ್ಥಲಗಳು. ನಾಡಿನ ಸಮಾಜ ಸುಧಾರಕರ, ಸ್ವಾತಂತ್ರ್ಯ ಸೇನಾನಿಗಳ, ಕವಿ, ಸಾಹಿತಿಗಳ ಜಯಂತಿ ಮಹೋತ್ಸವಗಳ ದಿನ. ಬಸವಾದಿ ಶಿವಶರಣರಲ್ಲಿ ಕೆಲವರ ಸಂಕ್ಷಿಪ್ತ ಪರಿಚಯ.ಲಿಂಗಾಯತರಾದವರು ಯಾವ ಆಚರಣೆಯನ್ನು ಮಾಡಬೇಕು, ಯಾವುದು ಬೇಡ ಎಂಬ ಸ್ಪಷ್ಟ ಕಲ್ಪನೆ. ಯಾವುದು ಶುಭ -ಅಶುಭ, ನಂಬಿಕೆಗೆ ಯಾವುದು ಅರ್ಹ ? ಯಾವುದನ್ನು ನಂಬಬೇಕು ಎನ್ನುವ ಮಾಹಿತಿ, ಲಿಂಗವಂತರು ತಮ್ಮ ಮಕ್ಕಳಿಗೆ ಇಡಬಹುದಾದ ಹೆಸರುಗಳ ಪಟ್ಟಿ, ಲಿಂಗಾಯತ ತತ್ವದ ಮಾದರಿಯಲ್ಲಿ ನಾವು ಆಚರಿಸಬಹುದಾದ ಉದಾಹರಣೆಗೆ ಮಗುವಿನ ನಾಮಕರಣ, ಕಲ್ಯಾಣ ಮಹೋತ್ಸವ, ಗೃಹಪ್ರವೇಶ, ಇತ್ಯಾದಿಗಳ ಆಚರಣೆ ಮಾಡುವ ಕುರಿತಾಗಿ, ಲಿಂಗಾಯತ ಧರ್ಮೀಯರ ಪವಿತ್ರ ಹಬ್ಬ ಎಂದರೆ ಬಸವ ಜಯಂತಿ, ಅದನ್ನು ಆಚರಿಸಲು ಪ್ರೇರಣೆ, ತತ್ವ್ತ ಪ್ರತಿಪಾದನೆಯ ಮಠಗಳು ಮಾಡುವ ಸಾಮಾಜಿಕ ಕಾರ್ಯಗಳು, ಲಿಂಗಾಯತ ಸ್ವತಂತ್ರ ಧರ್ಮವಾದರೆ ಸಮಾಜಕ್ಕೆ ಸಿಗುವ ಸೌಲತ್ತುಗಳ ಬಗ್ಗೆ, ಲಿಂಗಾಯತ ಧರ್ಮದಲ್ಲಿ ಜಾತಿಗಳಿಲ್ಲ,(ವೃತ್ತಿ) ಕಾಯಕಗಳಿವೆ.ಹೀಗೆ ಲಿಂಗಾಯತರಲ್ಲಿ ಬರುವ ಜಾತಿ ಉಪಜಾತಿಗಳ ಸುಮಾರು ೧೦೨ ಕಾಯಕ ಮೂಲದ ಪಂಗಡಗಳ ಹೆಸರುಗಳ ಉಲ್ಲೇಖ ಸೇರಿದಂತೆ ಅನುಭವಪೂರ್ಣ ಎನ್ನುವ ಅತ್ಯಮೂಲ್ಯ ಮಾಹಿತಿಯೇ ಅಡಕವಾಗಿದೆ. ದಿನ ದರ್ಶಿಕೆ ಬೇಕಾದ ಆಸಕ್ತರು 8884000008 ಸಂಪರ್ಕಿಸಬಹುದು ಎಂದು ಚಿತ್ರದುರ್ಗದ ರುದ್ರಮೂರ್ತಿ ಎಂ. ಜೆ. ತಿಳಿಸಿದ್ದಾರೆ.