i
ಅನಕ್ಷರಸ್ಥ ಮುಕ್ತ ಕ್ಷೇತ್ರ ಮಾಡುವ ಗುರಿ ಹೊಂದಿರುವೆ-ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶಿಕ್ಷಣ ಎಂಬುದು ಮೂಲಭೂತ ಹಕ್ಕು ಆ ಶಿಕ್ಷಣ ಪ್ರತಿಯೊಬ್ಬರಿಗೂ ಸಾರ್ವತ್ರಿಕವಾಗಿ ಒದಗಿಸುವುದು ನನ್ನ ಜೀವನದ ಗುರಿಯಾಗಿದೆ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ಕುವೆಂಪು ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವಮಾನವ ದಿನಾಚರಣೆ ಹಾಗೂ ಕುವೆಂಪು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಅನಕ್ಷರಸ್ಥ ಮುಕ್ತ ಕ್ಷೇತ್ರ ಮಾಡುವ ಮೂಲಕ ವಿದ್ಯಾವಂತರ ಸಮಾಜವಾಗಿ ನಿರ್ಮಾಣ ಮಾಡುತ್ತೇನೆ ಎಂದು ತಿಳಿಸಿದರು.
ಶ್ರೀಚುಂಚನಗಿರಿಎಜುಕೇಷನ್ ಟ್ರಸ್ಟ್ ನಿರ್ದೇಶಕ ಡಾ.ಸಿ.ಶಿವಲಿಂಗಪ್ಪ ಪ್ರಸ್ತಾವಿಕವಾಗಿ ಮಾತನಾಡಿ ಕುವೆಂಪುರವರು ಜಗದಕವಿ, ಯುಗದಕವಿ, ರಸಋಷಿ, ನವೋದಯ ಸಾಹಿತಿಯಾದ ಕುವೆಂಪುರವರ ಚಿಂತನೆಗಳನ್ನು ನಾವು ರೂಢಿಸಿಕೊಳ್ಳಬೇಕು. ಕುವೆಂಪು ಅವರ ಓ ನನ್ನ ಚೇತನ ಎಂಬ ಭಾವಗೀತೆ ನೆನೆಯುತ್ತಾ ಪ್ರಸ್ತಾವಿಕ ನುಡಿಯನ್ನು ಪ್ರಾರಂಭಿಸಿದ ಅವರು ಕುವೆಂಪು ಮಲೆನಾಡಿನ ಪರಿಸರ ಸೌಂದರ್ಯದ ಬಗ್ಗೆ ಹಾಗೂ ವಿಶ್ವಮಾನವ ಸಂದೇಶಗಳಾದ ಮುನುಜಮತ ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಪಂಚಸೂತ್ರಗಳ ಮೂಲಕ ಪ್ರತಿಯೊಬ್ಬ ಪ್ರಜೆಯಲ್ಲಿ ಜಾತ್ಯಾತೀತತೆ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು. ಮಲೆನಾಡಿನ ಕೋಗಿಲೆ ನಮ್ಮ ವಿಶ್ವಕವಿ ಕುವೆಂಪುರವರಿಗೆ ನಾವೆಲ್ಲರೂ ಋಣಿಯಾಗಿರಬೇಕು ಹಾಗೆಯೇ ನಾವೆಲ್ಲರೂ ನಮ್ಮ ಸಾಹಿತ್ಯವನ್ನು ಪೋಷಿಸಬೇಕು ಪರಿಸರದ ಬಗ್ಗೆ ಮೋಹವನ್ನು ಬೆಳೆಸಿಕೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಶ್ರೀಚುಂಚನಗಿರಿಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎನ್. ಎಂ. ಕೃಷ್ಣಮೂರ್ತಿ ಮಾತನಾಡಿ, ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಈ ಸಂಸ್ಥೆಯು ೧೯೯೯–೨೦೦೦ ನೇ ಸಾಲಿನಲ್ಲಿ ಪ್ರಾರಂಭವಾಯಿತು ಹಾಗೆಯೇ ಘನ ಸರ್ಕಾರವು ರೂಪಿಸಿರುವ ೨೦ ಅಂಶಗಳನ್ನು ಶಾಲೆ ರೂಢಿಸಿಕೊಂಡಿದೆ ಮತ್ತು 40 ಜನ ಸಿಬ್ಬಂದಿ ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ಶಾಲಾ ಗ್ರಂಥಲಾಯದ ಬಗ್ಗೆ ಮಾಹಿತಿ ನೀಡಿದರು. ಶಾಲೆಯಲ್ಲಿ ಪ್ರತಿಭಾಕಾರಂಜಿ ಹಾಗೂ ಕ್ರೀಡೆ, ರಾಷ್ಟ್ರೀಯ ಹಬ್ಬಗಳ ಆಚರಣೆ ಸರ್ಕಾರದ ನಿಯಮದಂತೆ ಪಾಲಿಸಲಾಗುತ್ತಿದೆ. ಪ್ರತ್ಯೇಕ ವಿಜ್ಞಾನ ಪ್ರಯೋಗಾಲಯ ಮತ್ತು ಪ್ರೊಜೆಕ್ಟರ್ಗಳ ಬಳಕೆಯಿಂದ ಶಿಕ್ಷಣವನ್ನು ನೀಡಲಾಗುತ್ತಿದೆ. ಶಾಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅವರ ಸಾಧನೆಗೆ ಸೂಕ್ತ ಬಹುಮಾನ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಎಸ್. ಸುರೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯ ರುಚಿಯನ್ನು ಕನ್ನಡಿಗರಿಗೆ ಮೊದಲು ತೋರಿಸಿದ ಸಾಹಿತಿ ಕುವೆಂಪು ನಮ್ಮ ಸಾಹಿತ್ಯವನ್ನು ಮೇರು ಪರ್ವತಕ್ಕೆ ಕೊಂಡಯ್ಯದ ವ್ಯಕ್ತಿ ನಮ್ಮ ಭಾಷೆ, ನುಡಿ ಮತ್ತು ಸಾಹಿತ್ಯವನ್ನು ಇಡೀ ನಾಡಿಗೆ ಪರಿಚಯಿಸಿದ ರಸಋಷಿ ಕುವೆಂಪು ಅವರ ಚಿಂತನಾ ಶೀಲತೆಯನ್ನು ಎಲ್ಲರೂ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ನುಡಿದರು.
ಸಾಹಿತಿ ಹಾಗೂ ಜಾನಪದ ವಿದ್ವಾಂಸ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಇವರು ಕುವೆಂಪುರವರ ವೈಚಾರಿಕ ಚಿಂತನೆ ಬಗ್ಗೆ ಮಾತನಾಡಿ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪುರವರ ನುಡಿಯನ್ನು ಹೇಳುತ್ತಾ ಕುವೆಂಪುರವರ ಆದರ್ಶಗಳು, ಆದರ್ಶಜೀವನ, ಅವರ ಸಿದ್ಧಾಂತಗಳು ಹಾಗೂ ಅವರ ಸಾಹಿತ್ಯವು ಅವರನ್ನು ಮೇರುಮಟ್ಟಕ್ಕೆ ಕೊಂಡೊಯ್ಯದಿದ್ದವು ಹಾಗೆಯೇ ನಾವು ಸಹ ಅವರ ದಾರಿಯಲ್ಲಿಯೆ ಸಾಗಬೇಕೆಂದು ತಿಳಿಸಿದರು.
ಕುವೆಂಪು ಆಂಗ್ಲ ಮಾಧ್ಯಮ ಶಾಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ರಾಂತ ಮುಖ್ಯ ಇಂಜಿನಿಯರ್ ಎಂ. ರವೀಂದ್ರಪ್ಪ, ಪೋಷಕರು ತಮ್ಮ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸಿ ಸಮಾಜಕ್ಕೆ ಒಳ್ಳೆಯ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿಯು ಸಹ ಪೋಷಕರದ್ದೇ ಆಗಿರುತ್ತದೆ. ಹಾಗೆಯೇ ಪ್ರತಿಯೊಬ್ಬ ನಾಗರಿಕರು ವಿಶ್ವಮಾನವ ಸಂದೇಶವನ್ನು ಪಾಲಿಸಬೇಕು ಎಂದು ತಿಳಿಸಿದರು.
ಶ್ರೀ ಚುಂಚನಗಿರಿ ಎಜುಕೇಷನ್ ಟ್ರಸ್ಟ್ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಇದ್ದರು.