i
ರೈತರು ಬರಗಾಲದಲ್ಲೂ ಪರ್ಯಾಯ ಬೆಳೆಯಾಗಿ ಸಿರಿಧಾನ್ಯ ಬೆಳೆಯಬಹುದು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿರಿಧಾನ್ಯವನ್ನು ರೈತರು ಬರಗಾಲದಲ್ಲೂ ಪರ್ಯಾಯ ಬೆಳೆಯಾಗಿ ಬೆಳೆಯಬಹುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ತಿಳಿಸಿದರು.
ಇಂದು ಅರಮನೆ ಮೈದಾನದ ತ್ರಿಪುರಸುಂದರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಸಿರಿಧಾನ್ಯವನ್ನು ಕಡಿಮೆ ನೀರು, ವೆಚ್ಚ, ಹಾಗೂ ಕಡಿಮೆ ದಿನಗಳಲ್ಲಿ ಕೀಟನಾಶಕವನ್ನು ಬಳಸದೇ ಬೆಳೆಯಬಹುದಾಗಿದ್ದು, ಬರಗಾಲದಲ್ಲಿ ರೈತರು ಪರ್ಯಾಯ ಬೆಳೆಯಾಗಿ ಸಹ ಬೆಳೆಯಬಹುದು ಎಂದರು.
ಸಿರಿಧಾನ್ಯವನ್ನು ಹೆಚ್ಚು ರಫ್ತು ಮಾಡಿದಾಗ ರೈತರ ಆದಾಯ ದ್ವಿಗುಣಗೊಳ್ಳುತ್ತದೆ. ಇಂದಿರಾ ಕ್ಯಾಂಟಿನ್, ಮಧ್ಯಾಹ್ನದ ಶಾಲಾ ಊಟ, ಅಂಗನವಾಡಿಯಲ್ಲಿ ಸಿರಿಧಾನ್ಯವನ್ನು ಬಳಕೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.
ವಸ್ತು ಪ್ರದರ್ಶನದಲ್ಲಿ ಒಟ್ಟು 310 ಮಳಿಗೆಗಳಿದ್ದು, 190 ಮಳಿಗೆಗಳು ಸಾವಯವ ಮತ್ತು ಸಿರಿಧಾನ್ಯಗಳ ಸಂಸ್ಥೆಗಳು, ಮಾರುಕಟ್ಟೆದಾರರು, ರಫ್ತುದಾರರು, ಚಿಲ್ಲರೆ ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರಗಳ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಇತರೆ ಸಂಸ್ಥೆಗಳ ಪ್ರದರ್ಶನ ಮಳಿಗೆಗಳಿವೆ ಎಂದರು.
100 ಕರ್ನಾಟಕ ಪೆವಿಲಿಯನ್ ಮಳಿಗೆಗಳು, 20 ಆಹಾರ ಮಳಿಗೆಗಳು, ಇದಲ್ಲದೇ, ಮೇಳದ ಹೊರಾಂಗಣದಲ್ಲಿ ಸಿರಿಧಾನ್ಯ ಯಂತ್ರೋಪಕರಣಗಳು, ಹಾಗೆಯೇ ದೇಸಿ ಜಾನುವಾರುಗಳ ಪ್ರದರ್ಶನ ಏರ್ಪಡಿಸಲಾಗಿರುತ್ತದೆ. ಸಾರ್ವಜನಿಕರು ಮೇಳವನ್ನು ಸಮಾಧಾನಚಿತ್ತವಾಗಿ ವೀಕ್ಷಿಸಲು ಸಾಕಷ್ಟು ಸ್ಥಳಾವಕಾಶ ಕಲ್ಪಿಸಲಾಗಿದ್ದು, ವಿಶ್ರಮಿಸಲು ಸ್ಥಳಾವಕಾಶದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಮೇಳದಲ್ಲಿ ಉತ್ತರ ಪ್ರದೇಶ, ಪಂಜಾಬ್, ಆಂಧ್ರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ್, ಒರಿಸ್ಸಾ, ಮಧ್ಯಪ್ರದೇಶ, ಮಣಿಪುರ, ಮಿಜೋರಾಂ, ಛತ್ತೀಸ್ಗಡ, ಅಸ್ಸಾಂ, ಜಾರ್ಖಂಡ್, ತ್ರಿಪುರ, ಸಿಕ್ಕಿಂ ತಮಿಳುನಾಡು ಮತ್ತು ಮೇಘಾಲಯ ಒಟ್ಟು 16 ರಾಜ್ಯಗಳು ವಸ್ತು ಪುದರ್ಶನದಲ್ಲಿ ಹಾಗೂ ತಂಡದೊಂದಿಗೆ ಭಾಗವಹಿಸಿರುತ್ತವೆ ಎಂದರು.
ನವಣೆ, ಮಸಾಲೆ ಬ್ರೆಡ್. ರಾಗಿ ಬ್ರೆಡ್, ಪಿಜ್ಜಾ ಬರ್ಗರ್, ನೂಡಲ್ಸ್ ಪಾಸ್ತಾ ವಿವಿಧ ರೀತಿಯ ಬಿಸ್ಕತ್ತುಗಳು, ಚಕ್ಕುಲಿ, ಖಾರ ಸೇವ್, ಸೂಪ್, ಸಿರಿಧಾನ್ಯ ಚಿಕ್ಕಿ ಜೊತೆಗೆ ವಿಶೇಷವಾಗಿ ಯುವ ಪೀಳಿಗೆಯು ಇಷ್ಟ ಪಡುವಂತಹ ಆಧುನಿಕ ಸಿರಿಧಾನ್ಯ, ಬ್ರೌನಿ, ಮಫಿನ್ಸ್, ಸಿರಿಧಾನ್ಯ ಐಸ್ಕ್ರೀಮ್, ರಾಗಿ ಚಾಕೋಲೇಟ್, ಜಾಮೂನು ಮುಂತಾದ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ ಎಂದರು.
ರಾಜ್ಯದಲ್ಲಿ ಬೆಳೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ದೇಶಿಯ ಮತ್ತು ರಫ್ತು, ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ವಾಣಿಜ್ಯ ಮೇಳದಲ್ಲಿ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಬಿ2ಬಿ ಸಭೆಗಳನ್ನು ಆಯೋಜಿಸಲಾಗಿರುತ್ತದೆ ಎಂದು ತಿಳಿಸಿದರು.
97 ಮಾರುಕಟ್ಟೆದಾರರು / ರಫ್ತುದಾರರು ಮತ್ತು 154 ಉತ್ಪಾದಕರು ಬಿ2ಬಿ ಸಭೆಗಳಲ್ಲಿ ಭಾಗವಹಿಸಿರುತ್ತಾರೆ. 07 ಅಂತರರಾಷ್ಟ್ರೀಯ ಮಾರುಕಟ್ಟೆದಾರರು, 40 ಹೊರ ರಾಜ್ಯಗಳ ಮಾರುಕಟ್ಟೆದಾರರು ಮತ್ತು 50 ರಾಜ್ಯದ ಮಾರುಕಟ್ಟೆದಾರರು ಸಭೆಗಳಲ್ಲಿ ಭಾಗವಹಿಸಿರುತ್ತಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆದಾರರ ಪೈಕಿ ಕೀನ್ಯಾ ಕುವೇತ್, ಯುಎಇ, ಆಸ್ಟ್ರೇಲಿಯಾ, ಯುರೋಪಿಯನ್ ಯೂನಿಯನ್ ದೇಶಗಳ ಮಾರುಕಟ್ಟೆದಾರರು ಭಾಗವಹಿಸಿದ್ದು, 61 ಸಭೆಗಳಲ್ಲಿ ಅಂದಾಜು ಮಾರುಕಟ್ಟೆ ಮೌಲ್ಯವು ರೂ.23.14 ಕೋಟಿಯಾಗಿದ್ದು, ಈ ಪೈಕಿ 1361 ಮೆಟ್ರಿಕ್ ಟನ್ ಪ್ರಮಾಣದ ರೂ.5.10 ಕೋಟಿ ಮೌಲ್ಯದ 06 ಒಪ್ಪಂದಗಳು ಆಗಿರುತ್ತವೆ ಎಂದರು.
ಕೀನ್ಯಾ, ಕುವೈತ್, ಯುಎಇ, ಆಸ್ಟ್ರೇಲಿಯಾ, ಯುರೋಪಿಯನ್ ಯೂನಿಯನ್ ದೇಶಗಳು ಮೇಳದಲ್ಲಿ ಭಾಗವಹಿಸಿರುತ್ತವೆ. GIZ ಹಾಗೂ IIMR ಸಂಸ್ಥೆಗಳ “Transformation into organic and agroecology-based agriculture in Karnataka” ಎಂಬ ಶೀರ್ಷಿಕೆಯಡಿ ಆಯೋಜಿಸಿರುತ್ತದೆ. ಸುಮಾರು 51 ಪ್ರಖ್ಯಾತ ವಿಷಯ ತಜ್ಞರು ಎಂಟು ಅಧಿವೇಶನಗಳಲ್ಲಿ ಉಪನ್ಯಾಸ ನೀಡಲಿದ್ದಾರೆ. ಪ್ರಗತಿಪರ ರೈತರು, ವಿಶ್ವ ವಿದ್ಯಾನಿಲಯಗಳ ಪ್ರಾಧ್ಯಾಪಕರು / ವಿದ್ಯಾರ್ಥಿಗಳು ಹಾಗೂ ಇತರ ಪಾಲುದಾರರು ಸೇರಿದಂತೆ 255 ಪ್ರತಿನಿಧಿಗಳು ಭಾಗವಹಿಸಿರುತ್ತಾರೆ ಎಂದರು.
ಜರ್ಮನಿ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳಾದ German consulate, FIBL Switzerland, German International Cooperation (GIZ), German Development Bank (KFW), University of Hohenheim, International Management Water Institute, World Vegetable Center, Demeter International ಗಳಿಂದ ಅಂತರರಾಷ್ಟ್ರೀಯ ತಜ್ಞರು ಭಾಗವಹಿಸಿರುತ್ತಾರೆ ಎಂದು ತಿಳಿಸಿದರು.
ರಾಜ್ಯದ ಸಾವಯವ ಮತ್ತು ಸಿರಿಧಾನ್ಯ ಬೆಳೆಯುವ ರೈತರಿಗಾಗಿ ಕನ್ನಡ ಭಾಷೆಯಲ್ಲಿ ಮೂರು ದಿನಗಳ ಕಾರ್ಯಗಾರವನ್ನು ಕೃಷಿ ವಿಶ್ವವಿದ್ಯಾನಿಲಯಗಳ ಸಂಶೋಧನಾ ವಿಭಾಗದಿಂದ ಆಯೋಜಿಸಲಾಗುತ್ತದೆ. ಕಾರ್ಯಾಗಾರದಲ್ಲಿ ಸಾವಯವ ಮತ್ತು ಸಿರಿಧಾನ್ಯ ಪರಿಣಿತರು/ ತಜ್ಞರು ಸಾವಯವ ಪದ್ಧತಿ, ಸಾವಯವ ಮಾರುಕಟ್ಟೆ ಪ್ರವೃತ್ತಿ, ಬೇಡಿಕೆ, ಸಾವಯವ ಪ್ರಮಾಣೀಕರಣ ಪ್ರಕ್ರಿಯೆ, ನೈಸರ್ಗಿಕ ಕೃಷಿ, ಸಿರಿಧಾನ್ಯಗಳ ಬಗ್ಗೆ, ವಿಷಯ ತಜ್ಞರು ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿ ಅಧಿವೇಶನಗಳ ಮಧ್ಯದಲ್ಲಿ ಮನರಂಜನೆಗಾಗಿ ದೇಶದ ವಿವಿಧ ವೈವಿಧ್ಯತೆಯನ್ನು ಬಿಂಬಿಸುವಂತಹ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿರುತ್ತದೆ ಎಂದರು.
20 ವಿವಿಧ ಸಿರಿಧಾನ್ಯ ಹೋಟೆಲ್/ ರೆಸ್ಟೋರೆಂಟ್ಗಳ ಮಳಿಗೆಗಳಲ್ಲಿ ವೈವಿಧ್ಯಮಯ ಮತ್ತು ರುಚಿಕರವಾದ ಸಿರಿಧಾನ್ಯಗಳ ಊಟ ಮತ್ತು ಉಪಹಾರಗಳನ್ನು ಸವಿಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಸಿರಿಧಾನ್ಯಗಳ ವಿವಿಧ ಸಸ್ಯಹಾರಿ ಹಾಗೂ ಮಾಂಸಹಾರಿ ಆಹಾರ ಖಾದ್ಯಗಳನ್ನು ಸಹ ಸಾರ್ವಜನಿಕರಿಗೆ ಸವಿಯಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಮೇಳವನ್ನು ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಸಿರಿಧಾನ್ಯಗಳಲ್ಲಿ ತಯಾರಿಸಬಹುದಾದ ಖಾದ್ಯಗಳ ಪಾಕವಿಧಾನ ಪ್ರಾತ್ಯಕ್ಷಿಕೆ ‘ನೋಡಿ ಕಲಿ; ಮಾಡಿ ತಿಳಿ: ತಿಂದು ಸವಿ’ ಶೀರ್ಷಿಕೆಯಡಿ ಏರ್ಪಡಿಸಲಾಗಿರುತ್ತದೆ. ಮೇಳದ ಮೊದಲನೇ ದಿನ 5000 ರೈತರಿಗೆ ವ್ಯವಸ್ಥಿತ ರೀತಿಯಲ್ಲಿ ಉಚಿತವಾಗಿ ಊಟವನ್ನು ಒದಗಿಸಲಾಗಿರುತ್ತದೆ ಎಂದರು.
ಮೇಳವು ಸಾವಯವ ಮತ್ತು ಸಿರಿಧಾನ್ಯ ಕ್ಷೇತ್ರದ ಎಲ್ಲಾ ಪಾಲುದಾರರಿಗೂ ಪರಿಣಿತಿ ಜ್ಞಾನ ಮತ್ತು ವ್ಯಾಪಾರ ಪದ್ಧತಿಗಳನ್ನು ಹಂಚಿಕೊಳ್ಳುವ ವೇದಿಕೆಯನ್ನು ಕಲ್ಪಿಸುತ್ತಿದೆ. ಮೇಳದ ಮೊದಲನೇ ದಿನ 60000 ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿರುತ್ತಾರೆ. ರಾಜ್ಯದ ರೈತ ಗುಂಪುಗಳು ಯಾವುದೇ ಖಾಸಗಿ ಸಂಸ್ಥೆಗಳ ಉತ್ಪನ್ನಗಳಿಗೆ ಕಡಿಮೆ ಇಲ್ಲದಂತೆ ಸರಿಸಮನಾಗಿ ವಿಧಾನ, ಪ್ಯಾಕಿಂಗ್ ವಿನ್ಯಾಸ ಹಾಗೂ ಮಾರಾಟ ಮಾದರಿಯಲ್ಲಿ ವಿವಿಧತೆಯೊಂದಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಮೇಳದಲ್ಲಿ ಭಾಗವಹಿಸಿದ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ ಎಂದು ತಿಳಿಸಿದರು.